Friday 1 October 2021

ಯಾಕೆ ಮುನಿಸು ಸರ್ವ vijaya vittala ankita suladi ಕೃಷ್ಣಾವತಾರ ಸುಳಾದಿ YAAKE MUNISU SARVA KRISHNAVATARA SULADI


Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಕೃಷ್ಣಾವತಾರ ಸುಳಾದಿ 

(ನೀರ ನೈವೇದ್ಯ - ಐತಿಹಾಸಿಕ) 


 ರಾಗ ಕಾಂಬೋಧಿ 


 ಧ್ರುವತಾಳ 


ಯಾಕೆ ಮುನಿಸು ಸರ್ವಲೋಕದ ಒಡಿಯನೆ

ಕಾಕನರನ ಕೂಡ ಈ ಕಪಟವೇ 

ಬಾಕುಳಿಗನು ನಿನ್ನ ಪಾಕಶಾಲೆಯಲ್ಲಿ ಬಿದ್ಧ

ಕಾಳ ರಾಶಿ ತಿಂಬ ಲೇಕಿಗನು

ವಾಕು ಪುಶಿಯಲ್ಲಾ ಲೇಖಿಗೆ ತಾನೇ ಬಲ್ಲಾ

ಲೋಕದೊಳಗೆ ನಾನು ಏಕನೇ ರಿಕ್ತಾ

ಗೋಕುಲಾಂಬುಧಿ ಚಂದ್ರ ನೀ ಕಂಡದಕ್ಕೆ ನೋಡು

ನಾ ಕೊಡುವೆನು ತುಲಸೀಕಬಂಧ ನೀ ಕರುಣದಲಿ

ಕೈಕೊಂಡು ಪುಷ್ಪದಲಿ ಸ್ವೀಕರಿಸಿ ವೇಗ ಸಾಕಬೇಕು

ಕೋಕನದ ನಯನ ವಿಜಯವಿಟ್ಠಲ ನೀನೆ

ಬೇಕೆಂದೊಲಿದು ಅವಲೋಕವೇ ತೃಣಮೇರು ॥ 1 ॥ 


 ಮಟ್ಟತಾಳ 


ನೀರನೆ ನೈವೇದ್ಯ ತಂದಿಟ್ಟರೆ ನೀನು

ಮೋರೆ ತಿರುಹಿಕೊಂಡು ನೋಡದ ಬಗೆ ಏನೋ

ಧಾರುಣಿಯೊಳು ನಿನ್ನ ತೃಪ್ತಿ ಮಾಡುವ ವಸ್ತು

ಆರೈದು ನೋಡಿದರು ಆವಲ್ಲಿ ಕಾಣೆನೋ

ಮೀರಿದ ಮಹಾ ಮಹಿಮ ವಿಜಯವಿಟ್ಠಲ ಎನ್ನ

ಗಾರು ಮಾಡುವದಲ್ಲದೇ ಮಿಗಿಲಿಲ್ಲಾ ॥ 2 ॥ 


 ತ್ರಿವಿಡಿತಾಳ 


ಪೇಳುವದು ನಿನ್ನ ತೃಪ್ತಿಯ ಪರಿಮಿತ

ಏಳಾರು ಖಂಡಗವೆ ಮತ್ತೆ ಅಧಿಕ ಬೇಕೇ

ಕೇಳುವೆ ಕಿವಿಯಲ್ಲಿ ಸುಮ್ಮನಿರದೆ ಪರರ

ಆಳಾಗಿ ದುಡಿದು ಅನುಗಾಲ ತಪ್ಪದೆ

ಕಾಲಕಾಲಕೆ ಬಿಡದೆ ಪಂಚಾವೃತವೇ ತಂದು

ವಾಲಯದಲ್ಲಿ ಸಮರ್ಪಿಸುವೆನು ರಾಶಿಗಳ

ಮೂಲೋಕದರಸ ನೀನೆ ವಿಜಯವಿಟ್ಠಲ ಪಾಂ -

ಚಾಲಿ ನಿನ್ನಯ ಕರದಲ್ಲಿ ಎರದದೇನೋ ॥ 3 ॥ 


 ಅಟ್ಟತಾಳ 


ಉದಕವಾದರೇನು ಉಚಿತ ಪದಾರ್ಥವು

ಅಧಿಕ ಅಧಿಕವಾಗಿ ಮೇರುಪರ್ವತದಷ್ಟು

ಪದೋಪದಿಗೆ ನಿನ್ನ ಮುಂದೆ ಸುರಿದರೇನು

ಇದರಿಂದ ನಿನಗಿಂದು ಕಾಲಕ್ರಮಣವೆಂದು

ಉದರ ಪೋಷಣನಾಗಿ ದಿನವ ಕಳೆವನಲ್ಲಾ

ಸದಾ ನಿತ್ಯತೃಪ್ತನೆ ವಿಜಯವಿಟ್ಠಲ ನಿನಗೆ

ಇದು ಅದು ಎಂಬೋದು ವೈಷಮ್ಯವಿಲ್ಲದ ದೈವಾ ॥ 4 ॥ 


 ಆದಿತಾಳ 


ನೀರೇವೆ ಪಾವನ ನೀರೇವೆ ಜೀವನ

ನೀರೇವೆ ಸಕಲ ಕುಟುಂಬಿಗೆ ಆಧಾರ

ನೀರೇವೆ ಕಟ್ಟಕಡಿಗೆ ಒಂದೇ ಇಪ್ಪದು

ನೀರೇವೆ ಇಲ್ಲದಿರೆ ನಿಲ್ಲಲಾರದು ಲೋಕಾ

ನೀರೇರುಹ ನಾಭಾ ವಿಜಯವಿಟ್ಠಲ ನೀನೇ

ನೀರೊಳು ವಟ ಪತ್ರದಲ್ಲಿ ಮಲಗಿಪ್ಪೆ ॥ 5 ॥ 


 ಜತೆ 


ನೀರೇವೆ ನೋಡಲು ನಾನಾಕ ಭೋಜನಾ

ಸಾರವಾಗುವದಯ್ಯಾ ವಿಜಯವಿಟ್ಠಲ ಪ್ರೀಯಾ ॥

***



No comments:

Post a Comment