Showing posts with label ಪಂಚಭೇದ ತಿಳಿವದು ಪ್ರತಿದಿನದಲೀ pranesha vittala. Show all posts
Showing posts with label ಪಂಚಭೇದ ತಿಳಿವದು ಪ್ರತಿದಿನದಲೀ pranesha vittala. Show all posts

Monday 4 November 2019

ಪಂಚಭೇದ ತಿಳಿವದು ಪ್ರತಿದಿನದಲೀ ankita pranesha vittala

ಪಂಚಭೇದ ತಿಳಿವದು ಪ್ರತಿದಿನದಲೀ |
ಮುಂಚಿನಜ ಮಧ್ವಮುನಿ ಮತವನುಸರಿಸಿದವರು || ಪ ||

ಜೀವೇಶರಿಗೆ ಭೇದ ಜೀವ ಜೀವಕೆ ಭೇದ |
ದೇವರಿಗು ಜಡಕು, ಜಡಕೆ ಜಡ ಭೇದಾ ||
ಆವಾಗ ಜೀವರಿಗೆ ಜಡಗಳಿಗೆ ಭೇದುಂಟು |
ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ || 1 ||

ಈಶ ನಿತ್ಯ ಅನಾದಿ ಸ್ವರತ ಸರ್ವಗ ಸ್ವಪ್ರ- |
ಕಾಶ ಸರ್ವಜ್ಞ ವಿಶ್ವ ವಿಲಕ್ಷಣಾ ||
ಮೇಶ ಅಪರಿಚ್ಛಿನ್ನ ಮೂರ್ತಿ ಪ್ರಾಣಿಗಳಿಂದ |
ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ || 2 ||

ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |
ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||
ಆಮಯ ವಿದೂರ ಜ್ಞಾನಾನಂದ ಬಲ ಪೂರ್ಣ |
ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ || 3 ||

ಸುಖ ದುಃಖ ಭೋಗಿ ಜೀವನು ಅಸ್ವತಂತ್ರ ಬಹು |
ಕಕುಲಾತಿ ಉಳ್ಳವನು ದುರ್ವಿಷಯದೀ ||
ಲಕುಮೀಶನಲ್ಲಿ ಭಕ್ತಿ ವಿವರ್ಜಿತನು ಪ್ರತಿ ಕ್ಷ- |
ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು || 4 ||

ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |
ಮಾಧವನ ಬಂಧಕ ಶಕುತಿಯೊಳಗಿಹ್ಯಾ ||
ತಾ ಧರಿಸಿಹನು ಪ್ರಾಕೃತ ಪ್ರಾಕೃತಾವರಣ |
ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ || 5 ||

ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |
ಯಂದು ಭೇದಗಳುಂಟವರ ಲಕ್ಷಣಾ ||
ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |
ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು || 6 ||

ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |
ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||
ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |
ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ || 7 ||

ವಿಧಿ ಮೊದಲು ತೃಣ ಜೀವ ಪರಿಯಂತ ಸಾತ್ವಿಕರು |
ಇದರೊಳಗೆ ದೇವ, ಋಷಿ, ಪಿತೃಪ, ನರರೂ ||
ಸುಧಿಗೆ ಯೋಗ್ಯ ರಜಾದಿ ಗೀರ್ವಾಣ ಗಂಧರ್ವ |
ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ || 8 ||

ಇವರಿಂದ ಭಿನ್ನ ರಾಜಸರು ಗೋ ಭೂ ನರಕ |
ತ್ರಿವಿಧ ಗತಿ ಉಳ್ಳವರು ಪಂಚಭೇದಾ ||
ವಿವರ ತರತಮ ದೇವರ ಮಹತ್ಮಿಯನು ಅರಿಯ |
ದವರು ಲಿಂಗಕಳಿಯರು ಧಾಮತ್ರಯ ಪೊಗದವರೂ || 9 ||

ಸಂಸಾರಿಗಳಿಗೆ ಭಿನ್ನರು ತಮೋಗುಣದವರು |
ಕಂಸಾರಿಯಲಿ ದ್ವೇಷವರ ಸ್ವಭಾವಾ ||
ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |
ಕ್ಷಸರು, ಪಿಶಾಚರವರನುಗರು, ನರಾಧಮರು || 10 ||

ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |
ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||
ಜ್ಞಾನಿ ಭೇದವನರಿಯ ಪಂಚ ಮಹಾಪಾತಕಿ ಪು- |
ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ || 11 ||

ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |
ಕುಜನರಿಗನೇಕ ಬಗೆ ಸಹಯವಹನೂ ||
ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |
ವೃಜನವನ ವಪು ತಾಯಿ ತಂಗಿಯಂಬರನರಿಯ || 12 ||

ಬವರ ಬಂಗಾರ ದ್ಯೂತಾ ಪೇಯ ಅನೃತ ನಟ |
ಯುವತಿಯೀಯಾರು ಸ್ಥಳ ನಿಲಯವವರಿಗೆ ||
ನವವಿಧ ದ್ವೇಷಿಗಳಿಗಾಕಾರನೆನಿಸುವನು |
ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ || 13 ||

ಆ ನೀಚನ ಮಲಮೂತ್ರ ವಿಸರ್ಜನದಿ ಘೋರ |
ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||
ಕ್ಷೊಣಿಯೊಳವನ ನಿಂದೆ ನಿರುತದಲಿ ಮಾಡುವದೆ |
ಶ್ರೀನಾಥನರ್ಚನೆ ಮಹಾಯಜ್ಞವೆನಿಸುವದು || 14 ||

ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |
ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||
ಮೂವರಿಗೆ ಪಾಪಮಿಶ್ರಿತ ಕರ್ಮ ಪುಣ್ಯ ಬಹು |
ನೋವು ಸ್ವರ್ಗ ನರಕ ಸುಮೋಕ್ಷಾದಿ ಗತಿ ಉಂಟು || 15 ||

ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |
ನೈಜವಾಯಿತು ಭೇದ ಜೀವ ಜಡಕೇ ||
ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ, ನಿತ್ಯ |
ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ || 16 ||

ಪ್ರಾಕೃತ ವಿಕೃತ ವೈಕೃತತ್ರಯ ಅಸ್ಥಿರ ಜಡವು |
ಪ್ರಾಕೃತವಜಾಂಡ ಧೊರ ಆವರಣವೂ ||
ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |
ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು || 17 ||

ಸರಸಿಜ ಭವಾಂಡದೊಳಿಹ ನೆಲ ಜಲಧಿ ಗಿರಿಗಳು |
ಎರಡೇಳು ಭುವನ ವೈಕೃತ ಜಡವಿದೂ ||
ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |
ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ || 18 ||

ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |
ಜಾಲ ಕಾರಣತ ಸುಸ್ಥಿರವೆನಿಪವೂ ||
ಮ್ಯಾಲೆ ಅದರಿಂದಾದ ತತ್ವಗಳ ನಿತ್ಯ ಮಹ |
ಕಾಲವೆಂದಿಗ್ಯು ನಿತ್ಯ ಅಣುಕಾಲಗಳ ನಿತ್ಯಾ || 19 ||

ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |
ರಾಗಿರಲು ಜಡ ಜಡಕೆ ಭೇದ ಸಿದ್ಧಾ ||
ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |
ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ || 20 ||

ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |
ದೂ ಕೆಡದೆ ಸುಖಕಾಂತಿ ಯುಕ್ತವಾದಾ ||
ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |
ಶೋಕಪೂರಿತವಾದ ನಿತ್ಯ ನರಕಗಳಿಹವು || 21 ||

ಈ ಪಂಚಭೇದ ಜ್ಞಾನಿಲ್ಲದವ ಶ್ರೀ ಮುದ್ರಿ |
ಗೋಪಿಚಂದನ ಧರಿಸಿದರು ಫಲವೇನೂ ||
ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |
ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ || 22 ||

ಹರಿಗುರುಗಳ ದಯ ಪಡೆವರಿಗೆ ರುಚಿ ತೋರ್ವದಿತ |
ರರಿಗೆ ಈ ಕೃತಿಯು ಕರ್ಣ ಕಠೋರವೂ ||
ತರಣಿ ಬರೆ ಸರ್ವರಿಗೆ ಘೂಕಗಾದಂತೆ ಇದು |
ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು || 23 ||

ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |
ಸಾನುರಾಗದಲಿ ಹರಿ ಸರ್ವೋತ್ತುಮಾ ||
ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |
ಕಾಣರು ಕು ಸಂಸಾರ ಧಾಮತ್ರ ವೈದುವರು || 24 ||

ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |
ಒಪ್ಪುತಿಹ ಈ ಪಂಚಭೇದವನ್ನೂ ||
ತಪ್ಪದಲೆ ನಿತ್ಯ ಪಠಿಸುವರ ಪೊರವವನು ಬೊಮ್ಮ- |
ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ || 25 ||
******