Showing posts with label ಗುರುರಾಜರನು ಭಜಿಸೋ ಮಾನವ ನೀನು pandarinatha vittala. Show all posts
Showing posts with label ಗುರುರಾಜರನು ಭಜಿಸೋ ಮಾನವ ನೀನು pandarinatha vittala. Show all posts

Monday 6 September 2021

ಗುರುರಾಜರನು ಭಜಿಸೋ ಮಾನವ ನೀನು ankita pandarinatha vittala

  ankita ಪಂಡರೀನಾಥವಿಠಲ

ರಾಗ: ಮೋಹನ   ತಾಳ: ಆದಿ


ಗುರುರಾಜರನು ಭಜಿಸೋ ಮಾನವ ನೀನು 


ವರಜ್ಞಾನಗಮ್ಯರ ಕರುಣಾಪೂರ್ಣರ ಚರಣ

ನಿರುತ ನೆನೆದು ಭವ ದಾಟೋ ನೀ ಬೇಗನೇ   ಅ ಪ


ತುಂಗಾತೀರದಿ ನಿಂತಿಹ ಶ್ರೀ ಗುರುವರ 

ಭಂಗವಿಲ್ಲದೆ ಪೊರೆವ

ಗಂಗಾಜನಕ ಶ್ರೀರಂಗ ರಘುರಾಮನ

ಅಂಘ್ರಿ ಭಜಕ ಕಾರುಣ್ಯಾಂತರಂಗರ

ಧೃತ

ಹಿಂಗದೆ ಭಜಿಸುವ ಭಾಗ್ಯವ ಬೇಡುತ

ಮಂಗಳವಾದ ಬೃಂದಾವನ ನೋಡುತ

ಕಂಗಳಿಗಾನಂದವ ಪೊಂದೋ ಸ-

ತ್ಸಂಗದಿ ಸೇರುತ ಮಂತ್ರಾಲಯದೊಳು  1

ಕೋರಿದಿಷ್ಟಾರ್ಥವನೂ ಕಾರುಣ್ಯದಿ

ಧೀರರಿವರು ಕೊಡುವರೂ

ಆರ್ನೂರು ಮೇಲೆ ನೂರು ವರುಷವಿರುತವಿಲ್ಲಿ

ಮಾರಪಿತನ ದಣಿವಿಲ್ಲದೆ ಭಜಿಪರು

ಧೃತ

ಶ್ರೀನಾರಸಿಂಹನ ಭಕ್ತಾಗ್ರಣಿಗಳ

ಚಾರಿತ್ರವ ನೀ ಪೊಗಳುತ ಅನುದಿನ

ದೂರೀಕರಿಸೆಲೊ ದುಷ್ಕೃತ್ಯಗಳನು

ಸೇರಲು ಮುಕ್ತಿಯ ಮಂಟಪ ದೃಢದಲಿ   2

ಅವತಾರ ಮೂರರಲೀ ಗುರುರಾಜರು

ನವವಿಧ ಭಕ್ತಿಯಲೀ

ಭವಬ್ರಹ್ಮನೊಡೆಯನ ತವಕಾದಿಂದಲಿ ಭಜಿಸಿ

ಸವಿಯುತ್ತಲಿರುವರು ದಿವಿಜೇಶನ ಸೇವಾಸುಖ

ಧೃತ

ನವಚೈತನ್ಯವ ತುಂಬಿಸಿ ಜನರೊಳು

ಕವಿದಿಹ ಅಜ್ಞಾನವ ತಾ ಕಳೆವರು

ಬವರದಿ ಪಾರ್ಥನ ಕರಪಿಡಿದವ ಶ್ರೀ-

ಧವ ಪಂಢರಿನಾಥವಿಠಲನ ತೋರ್ವರು   3

***