Showing posts with label ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ helavana katte. Show all posts
Showing posts with label ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ helavana katte. Show all posts

Tuesday 1 June 2021

ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ankita helavana katte

 ಸೀತಾ ಕಲ್ಯಾಣ

ಪಾಕ ಶೇಷಾದ್ರಿ ಬ್ರಹ್ಮಕೆ ಶರಣು

ಲೋಕನಾಯಕ ಹೆಳವನಕಟ್ಟೆ ವೆಂಕಟ

ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ.


ಮದುವೆಯ ನಾಲ್ಕು ದಿವಸದಲ್ಲಿ

ಮದುವಣಿಗನು ರಾಮ ಜಾನಕಿಗೆ

ಮುದದಿಂದ ಅರಿಷಿಣೆಣ್ಣೆಯ ಮಾಡೊ ಸಂಭ್ರಮ[ದ]

ಪದನ ಹೇಳುವೆ ಸುಜನರು ಕೇಳಿ ಜಯ ಜಯ 1

ಚಿತ್ತಜಪಿತ ಶ್ರೀರಾಮರಿಗೆ

ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ

ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ

ಮುತ್ತೈದೇರನು ಕರೆಸಿದಳು ಜಯ ಜಯ 2

ಪೀತಾಂಬರದುಡುಗೆಯನುಟ್ಟು

ಜ್ಯೋತಿಯಂದದಿ ಥಳಥಳಿಸುತಲಿ

ಜಾತಿಮಾಣಿಕದಾಭರಣವಿಟ್ಟು ರಾಮರ

ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3

ಚೀಣ ಚೀಣಾಂಬರಗಳನುಟ್ಟು

ವೇಣಿ ಕಸ್ತೂರಿಯ ಪಣೆಗಿಟ್ಟು

ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ

ಬಾಣನ ಪಟ್ಟದಾನೆಗಳಂತೆ ಜಯ ಜಯ 4

ಪೊಂಬಣ್ಣದ ಹಳದಿಯ ಕಲೆಸಿ

ತುಂಬಿದ ಹರಿವಾಣದೊಳಗೆ

ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ

ಸಂಭ್ರಮಕೆ ನಡೆತಂದರಾಗ ಜಯ ಜಯ 5

ಗರುಡನ್ವಲ್ಲಭ ಸೌಂದರದೇವಿ

ವರುಣನ್ವಲ್ಲಭೆ ಕಾಳಕದೇವಿ

ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ

ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6

ಬ್ರಹ್ಮವಲ್ಲಭೆ ಶಾರದಾದೇವಿ ವಾ-

ಯುರಮಣಿ ಅಂಜನಾದೇವಿ

ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು

ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7

ಅಲ್ಲಲ್ಲಿ ನಡೆವ ನಾಟಕಶಾಲೆ

ಬಿಲ್ಲಾಳು ಬೆತ್ತ ಕಾಟನವರು

ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ

ಚೆಲ್ಲುತ ದಶರಥ ನಡೆದನಾಗ ಜಯ ಜಯ 8

ಹೊಡೆವ ತಂಬಟೆ ಭೇರಿ ನಿಸ್ಸಾಳೆ

ಬಿಡದೆ ಚೀರುವ ಹೆಗ್ಗಾಳೆಗಳು

ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ

ನಡೆದರು ಜನಕರಾಯನ ಮನೆಗೆ ಜಯ ಜಯ 9

ಕುಸುಮಬಾಣನ ಮಾರ್ಬಲದಂತೆ

ಹಸುರು ಪಚ್ಚೆಯ ಪಲ್ಲಕ್ಕಿಗಳು

ಮುಸುಕಿದ ಪರಿಮಳದೊಳಪ[ಸಾ]ತಕೆ

ದಶರಥ ಬಂದನೆಂದರೆ ಜನರು ಜಯ ಜಯ 10

ಭರದಿಂದಲೆದ್ದು ಜನಕರಾಯ

ತರಿಸಿ ನಿವಾಳಿಗಳನು ಹಾಕಿ

ಹರುಷದಿ ಕೈಲಾಗವ ಕೊಟ್ಟಯೋಧ್ಯದ

ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11

ಬೇಗದಿ ಗದ್ದುಗೆಯನು ಹಾಸಿ

ಬೀಗನ ಉಪಚರಿಸಿದ ಜನಕ

ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ

ನಾಗಭೂಷಣನು ಕುಳಿತನಾಗ ಜಯ ಜಯ 12

ಸುತ್ತಣ ರಾಯರಾಯರಿಗೆಲ್ಲ

ರತ್ನಗಂಬಳಿಗಳ ಹರಹಿದರು

ಅರ್ತಿಯಿಂದಲಿ ಸುರರೆಲ್ಲರು ಕುಳಿತರು

ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13

ಮಣಿಮಂಟಪದೊಳು ಹಸೆಹಾಸಿ ಕನಕ

ಮಣಿಯ ತಂದಿಳುಹಿದರು

ದಿನಕರಕುಲರಾಮ ಹಸೆಗೇಳೆನುತಲಿ

ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14

ಪೊಕ್ಕಳೊಳಜನ ಪೆತ್ತವನೇಳು

ಅಕ್ರೂರಜನ ಪೆತ್ತವನೇಳು

ಮುಕ್ಕಣ್ಣನ ರಿಪುಬಲವ ಸಂಹರಿಸಿದ

ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15

ದಶರಥರಾಜನಂದನನೇಳು

ಅಸುರಸಂಹಾರ ಕಾರಣನೇಳು

ವಸುಧೆಗೊಡೆಯ ರಾಮ ಹಸೆಗೇಳೆನುತಲಿ

ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16

ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ

ಕುಶಲದ ಬಾಸಿಂಗವ ಪಿಡಿದು

ಅಸುರಾರಿಯ ಮಸ್ತಕಕಳವಡಿಸೋರು

ವಸುದೇವನಾಗೆಂದು ಹರಸುತಲಿ ಜಯ ಜಯ 17

ತಂಡತಂಡದ ರತ್ನ ಅಡಸಿದಾಗ

ದುಂಡುಮುತ್ತಿನ ಮಣಿ ಬಿಗಿದಿದಾಗ

ತೊಂಡಿಲ ಮುತ್ತೈದೇರಳವಡಿಸೋರು ಕೋ-

ದಂಡ ಪಾಣಿಸತಿಜಾನಕಿಗೆ ಜಯ ಜಯ 18

ಅರಳುಗಂಗಳಿಗೆ ಅಂಜನ ಹಚ್ಚಿ

ಬೆರಳಿಗೆ ಮುದ್ರೆ ಉಂಗುರವಿಟ್ಟು

ಕೊರಳಿಗೆ ಏಕಾವಳಿಯನೆ ಹಾಕೋರು

ತರಳಾಕ್ಷಿಯರಾ ಜಾನಕಿಗೆ ಜಯ ಜಯ 19

ಬೊಂಬೆಯ ತೊಂಡಿಲ ಮುಡಿದಿರ್ದು

ಕುಂಭಿಣಿಸುತೆ ಕುಳ್ಳಿರಲಾಗಿ

ಅಂಬುಜಾಂಬಕ ರಘುರಾಮನ ಹರುಷದಿ

ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20

ಬಂದನೆ ಭಾಗ್ಯಲಕ್ಷ್ಮೀರಮಣ

ಬಂದನೆ ಭಕ್ತವತ್ಸಲ ಸ್ವಾಮಿ

ಬಂದನೆ ಜಾನಕಿಯಡೆ ರಾಮನು ತಾ

ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21

ನಿರ್ಜರನರನಾಗಸ್ತೋತ್ರ ಬಂದ

ಸಜ್ಜನಸಂತಾಪದೂರ ಬಂದ

ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ

ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22

ಕೌಸಲ್ಯಸುತ ಕುಮಾರ ಬಂದ

ಹಂಸವಾಹನಪಿತ ರಾಮ ಬಂದ

ಕಂಸಾರಿ ದುಃಖವಿ [ನಾಶ] ರವಿಕುಲ

ವಂಶೋದ್ಧಾರಕ ಬಂದನಾಗ [ಜಯ ಜಯ] 23

ಭಕ್ತವತ್ಸಲ ರಾಘವ ಬಂದ

ಮುಕ್ತಿದಾಯಕ ಶ್ರೀರಾಮ ಬಂದ

ಅರ್ಕನು ಶತಕೋಟಿತೇಜನು ಜಗಕತಿ-

ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24

ಸಿಂಧುಬಂಧನ ರಾಘವ ಬಂದ ಪು-

ರಂದರವರದ ಶ್ರೀರಾಮ ಬಂದ

ಇಂದುವದನೆಪತಿ ರಾಮ ಬಂದನು ರಾಮ-

ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25

ಯಜ್ಞರಕ್ಷಕ ರಾಘವ ಬಂದ

ಯಜ್ಞಶಿಕ್ಷಾಮಿತ್ರ ರಾಮ ಬಂದ

ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ-

ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26

ಯಂತ್ರವಾಹಕ ರಾಘವ ಬಂದ

ಮಂತ್ರಮೂರುತಿ ರಾಮ ಬಂದ

ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ

ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27

ದೂಷಕಹರಣ ಶ್ರೀರಾಮ ಬಂದ ವಿ-

ಭೀಷಣವರದ ರಾಘವ ಬಂದ

ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ-

ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28

ತಾಟಕಪ್ರಾಣಾಪಹಾರ ಬಂದ

ಜಟÁಯುಮುಕ್ತಿಕಾರಣ ಬಂದ

[ತಾಟಂಕ] ಧರ ನಾರಾಯಣ ರವಿಕುಲ

ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29

ವೀರ ವಿಕ್ರಮ ರಾಘವ ಬಂದ

ಮಾರೀಚಮರ್ದನ ರಾಮ ಬಂದ

ನಾರಿ ಶ್ರೀ ಜಾನಕಿರಮಣ ಬಂದನು

ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30

ದೇವಕುಮಾರ ರಾಘವ ಬಂದ

ದೇವರ ದೇವನು ರಾಮ ಬಂದ

ಭಾವೆ ಶ್ರೀ ಜಾನಕಿರಮಣ ಬಂದನು

ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31

ನಿರುಪಮಚರಿತ ರಾಘವ ಬಂದ

ದುರಿತದಲ್ಲಣ ರಾಮದೇವ ಬಂದ

ಭರತಶತ್ರುಘ್ನರ ಸಹೋದರಯೋಧ್ಯದ

ಸುರಪತಿ ಬಂದನೆಂದವೆ ಕಹಳೆ ಜಯ ಜಯ 32

ಹೇಮಖಚಿತ ರತ್ನ ಪೀಠದಲಿ

ಭೂಮಿಜೆ ಸಹಿತ ಕುಳಿತ ರಾಮ

ವಾಮ ಭಾಗದಿ ಒಪ್ಪಿರ್ದಳು ಜಾನಕಿ

ಆ ಮಹಾಸಭೆಯನು ಬೆಳಗುತಲಿ ಜಯ ಜಯ 33

ಕುಂದಣ ರತ್ನದಡ್ಡಿಕೆಯೊಳಗೆ

ಹೊಂದಿಸಿ ನವರತ್ನ ಇರುವಂತೆ

ಇಂದುವದನೆ ಜಾನಕಿ ಹರುಷದಿ ರಾಮ

ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34

ಹೇಮದ್ಹರಿವಾಣದೊಳಗ್ನಿಯನು

ಕಾಮಿನಿಯರು ತಂದಿಳುಹಿದರು

ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ

ಹೇಮಾರ್ಚನೆಗಳ ತೊಡಗಿದನು ಜಯ ಜಯ 35

ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು

ಪೂಜಿಸಿದನೆ ವಿಘ್ನೇಶ್ವರನ

ರಾಜವದನೆಯ ಒಡಗೊಂಡು ರಾಘವ

ಪೂಜಿಸಿದನೆ ಋಷಿಮುನಿವರರ ಜಯ ಜಯ 36

ಇಂದ್ರಾದಿ ಮುನಿಗಳು ಕೈಹೊಡೆದು

ಚಂದ್ರ ಸೂರ್ಯರು ಉಘೇಉಘೇಯೆನಲು

ಮಂದಾರ ಮಲ್ಲಿಗೆ ಮಳೆಗಳ ಕರೆದರು

ಅಂದದಿ ಸುರಜನರೆಲ್ಲರಾಗ ಜಯ ಜಯ 37

ಅರಳುವ ಕೆಂದಾವರೆ ಕುಸುಮ

ಪರಿಮಳ ಸುರಮ್ಯ ಕಣ್ಗೆಸೆಯೆ

ಎರಗುವ ಮರಿದುಂಬಿಗಳಂತೆ ರಾಘವ

ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38

ಇಳೆಯ ಜಗಂಗಳನುದರದಲಿ

ಅಳವಡಿಸಿದ ಮಹಾತ್ಮಕನು

ಇಳೆಯ ಮಗಳನು ಎತ್ತಲಾರದೆ ರಾಮ

ಬಳಲಿದನೆಂದು ನಕ್ಕರು ಜನರು ಜಯ ಜಯ 39

ಪಾದ ಎಚ್ಚರಿಕೆ ಪರಾಕು ಸ್ವಾಮಿ

ಪಾದ ಎಚ್ಚರಿಕೆ ಪರಾಕು ದೇವ

ಪಾದ ಎಚ್ಚರಿಕೆ ಸೀತಾಪತಿ ರಾಮನೆ<

(one or two lines incomplete?)

*****