Showing posts with label ಸರ್ವಸಮರ್ಪಣೆ ಮಾಡು vijaya vittala ankita suladi ಸರ್ವಸಮರ್ಪಣೆ ಸುಳಾದಿ SARVA SAMARPANE MAADU SARVA SAMARPANE SULADI. Show all posts
Showing posts with label ಸರ್ವಸಮರ್ಪಣೆ ಮಾಡು vijaya vittala ankita suladi ಸರ್ವಸಮರ್ಪಣೆ ಸುಳಾದಿ SARVA SAMARPANE MAADU SARVA SAMARPANE SULADI. Show all posts

Sunday 8 December 2019

ಸರ್ವಸಮರ್ಪಣೆ ಮಾಡು vijaya vittala ankita suladi ಸರ್ವಸಮರ್ಪಣೆ ಸುಳಾದಿ SARVA SAMARPANE MAADU SARVA SAMARPANE SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಸರ್ವಸಮರ್ಪಣೆ ಸುಳಾದಿ 

 ರಾಗ ಅಠಾಣ 

 ಧ್ರುವತಾಳ 

ಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡು
ಶರ್ವಾದಿಷ್ಠಾನಾ ತ್ರಿವಿಧಾ ತಿಳಿದು
ಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದು
ಗೀರ್ವಣರೊಡತಿ ಶ್ರೀ ಲಕುಮಿ ವಿಡಿದೂ
ಈರ್ವಾಗೆ ಜನರನ್ನು ತಾರತಮ್ಯಾದಿ ಗುಣಿಸಿ
ಊರ್ವಿಯೊಳಗೆ ನಿಃಸಂಗನಾಗೋ
ಸರ್ವದಾ ಮುಖ್ಯ ಭಕ್ತಿಯಲ್ಲಿ ದೃಢನಾಗು
ಸರ್ವಜ್ಞರಾಯರ ಮತದಲ್ಲಿದ್ದೂ
ದರ್ವಿಯಂದದಿ ಸರ್ವ ವಿಷಯಂಗಳೊಳಗಿರು
ನಿರ್ವಾಹ ಕರ್ತನಿಗೆ ಮನವೊಪ್ಪಿಸೀ
ಗರ್ವಾ ರಹಿತವಾದ ಸಾಧನದಲ್ಲಿ ನಡೆದು
ಪೂರ್ವೋತ್ತರ ಜ್ಞಾನ ವಿಚಾರಿಸಿ
ಓರ್ವನಿಂದಲೆ ಎಲ್ಲಾ ಸುಖದುಃಖ ಬಪ್ಪೊದೆಂದು
ನಿರ್ವ್ಯಾಜ ಗುಣದಲಿ ತಿರಗುವದೂ
ನಿರ್ವಾಣ ಬೇಡ ಸಲ್ಲ ಈ ಪರಿ ಇಪ್ಪವಂಗೆ
ದೂರ್ವಿ ಏರಿಸೇ ಹರಿ ಒಡನಾಡುವಾ
ಪರ್ವತ ಮೊದಲಾದ ತತ್ಪದಾರ್ಥದಲ್ಲೀ
ಸರ್ವೇಶ ಅದರಂತೆ ಇಪ್ಪಾನೆಂದೂ
ಸರ್ವೋತ್ಕೃಷ್ಟ ಮೂರುತಿ ವಿಜಯವಿಠ್ಠಲರೇಯಾ 
ದುರ್ವಾದಿಗಳ ಗಂಡಾ ಸತತೋದ್ದಂಡಾ ॥ 1 ॥

 ಮಟ್ಟತಾಳ 

ನಾನೆ ಸರ್ವಕರ್ತಾನೆಂದೆಂಬುವ ತಮಸಿ
ನಾನೆ ಹರಿ ಒಡನೇ ಮಾಳ್ಪನೆಂಬುವ ಬದ್ದಾ
ನಾನು ಪಾಪ ಕರ್ತಾ ಪುಣ್ಯಕ್ಕೆ ಹರಿಯೆಂದು
ಈ ನುಡಿ ನುಡಿವವನು ಸತ್ವಗುಣದವನು
ನಾನ್ಯಾತಕೆ ಸಲ್ಲಾ ಹರಿ ಎನ್ನಿಂದಲೀ
ನಾನಾತ್ಮಗಳಿಂದ ಬಗೆ ಬಗೆ ವೈಷಮ್ಯ
ಏನೇನು ಮಾಡಿಸುವ ಮಾಡುವೆನದರಂತೆ
ಹೀನ ಲೇಸುಗಳಲ್ಲಿ ಹಿತಾಹಿತದಲ್ಲಿ
ಮಾಣದೆ ಮರಿಯದಲೆ ಎಂದವ ನಿರ್ಗುಣನು
ಜ್ಞಾನವಂತನಾಗಿ ಸರ್ವ ಸಮರ್ಪಣೆ
ಸ್ವಾನುಭವಕೆ ನಿತ್ಯಾ ತಂದುಕೊಂಬುವ ಮನಕೆ
ಅನಂತ ರವಿತೇಜಾ ವಿಜಯವಿಠ್ಠಲನ್ನಾ 
ಕಾಣುತ ತಿರುಗೂವಾ ನಿರ್ದೋಷ ಎನುತಾ ॥ 2 ॥

 ತ್ರಿವಿಡಿತಾಳ 

ಹಿಟ್ಟು ಘಾಳಿಗೆ ತೂರಿ ಮರಳೆ ಕೂಡಿಸಿಕೊಂಡು
ರೊಟ್ಟಿಯ ಸುಟ್ಟುಕೊಂಡು ಉಂಬೇನೆಂದು
ಅಟ್ಟಹಾಸವ ಮಾಡಿ ದಿನ ಪ್ರತಿದಿನದಲ್ಲಿ
ಕಷ್ಟವ ಬಟ್ಟದರಿಂದ ಫಲವಾಹದೇ
ಸೃಷ್ಟಿಯೊಳಗೆ ಮನುಜಾ ಸರ್ವ ಬಗೆಯಿಂದ
ಶಿಷ್ಟನಾಗಿ ಇದ್ದು ಆಚಾರವಾ
ಎಷ್ಟು ಮಾಡಿದರೇನು ನಿರ್ಗುಣನಾಗಿ ಮನ -
ಮುಟ್ಟಿ ಸರ್ವಾರ್ಪಿತವೆನ್ನದನಕಾ
ಕೃಷ್ಣಾ ಮೆಚ್ಚನು ಕಾಣೊ ಗತಿಗೆ ಸಾಧನವಲ್ಲಾ
ಇಷ್ಟರೊಳಗೆ ಅವಾ ಸುತ್ತುತಿಪ್ಪಾ
ಕಟ್ಟಕಡಿಗೆ ಇದೆ ಮುಕ್ತಿಯೋಗ್ಯಕೆ ಜ್ಞಾನಾ
ಪುಟ್ಟಾದಲೇ ಬಿಂಬಾದರ್ಶನವಾಗದೂ
ಎಟ್ಟಿ ಮಾನವರಿಗೆ ವರದೊರದು ಕೇವಲಾ
ಗುಟ್ಟು ಪೇಳಿದರಿಂದ ಏನಾಹುದೂ
ಧಿಟ್ಟಾ ದೈವಗಳರಸಾ ವಿಜಯವಿಠ್ಠಲ ಜಗ -
ಜಟ್ಟಿಗೆ ಪಾಪ ಪುಣ್ಯದ ಲೇಪನವೇನೊ ॥ 3 ॥

 ಅಟ್ಟತಾಳ 

ಮೂಜ್ಜಗದೊಳು ಹರಿ ನಿಬಿಡಿ ಕೃತನಾಗಿ
ತಜ್ಜೀವಿಗಳಂತೆ ವ್ಯಾಪಾರ ಮಾಡುವಾ
ನಿರ್ಜರರ್ವಿಡಿದು ತೃಣಾಂತ ನೋಡಲಾಗಿ
ಪೂಜ್ಯ ಭಾವವೆ ಪ್ರತ್ಯೇಕಾವಾಗಿಪ್ಪೋದು
ದುರ್ಜನಹರ ಹರಿಯಾ ಇನಿತು ಭಜನೆ ಕೆಲವು
ಸಜ್ಜನರಿಂದಲಿ ಕೈ ಕೊಳುತಾಲಿಪ್ಪಾ
ವಜ್ರಕ್ಕೆ ಹರಳಿನಾ ವ್ಯಥಿ ಆದುದೆಂದು ಮ -
ನುಜ್ಜರು ಪೇಳಿದಂತಾಗೋದು ಪುಸಿ ಎಲ್ಲ
ಎಜ್ಜಾ ಮಾಡಿದರಾಗೆ ಹರಳಿಗೆ ವೇದನೆಯುಂಟೆ
ಅಬ್ಜಾ ಪೋಣಿಪದಕ್ಕೆ ಗಾಢರ ತರಸಲ್ಲಾ
ಅಬ್ಜಾ ಭವನಯ್ಯಾ ವಿಜಯವಿಠ್ಠಲರೇಯಾ 
ಲಜ್ಜೆ ಬಿಡದವಗೆ ಲಂಪಟಾ ಕಟ್ಟುವಾ ॥ 4 ॥

 ಆದಿತಾಳ 

ಬಂದರೆ ಬರುವೆನೆಂದು ಇದೇ ಆರಂಭಿಸಿ
ಒಂದೊಂದು ಮಾತುಗಳು ಯಾವಜ್ಜೀವ ಪರಿಯಂತ
ತಂದುಕೊಳ್ಳಲಿ ಬೇಕು ತನ್ನ ಮನಸಿಗೆ ಬಿಡದಾನು -
ಸಂಧಾನ ಆವಲ್ಲಿ ಪೋದಲ್ಲಿ ಇದ್ದಲ್ಲಿ
ನಂದವಾಗಲಿ ಅತಿ ಕ್ಲೇಶವಾಗಲಿ ಆ -
ನಂದವಾಗಲಿ ಲಾಭ ನಷ್ಟವಾಗಲಿ ಗೋ -
ವಿಂದನೆ ನಿನ್ನ ಪ್ರೀತಿ ಎನಬೇಕು ನಗಬೇಕು
ಹಿಂದೆ ಮುಂದೆ ಸಂಸಾರವೆಂದೆಂಬ
ಸಂದಣಿಯೊಳಗಿರೆ ನಿರ್ಭಯಾದವನಿವಾ
ಸಂದೇಹ ಪೋಗಾಡುವ ವಿಜಯವಿಠ್ಠಲರೇಯಾ 
ಎಂದೆಂದಿಗೆ ತನ್ನ ಭಕ್ತಾರ ಪೊರೆವಾ ॥ 5 ॥

 ಜತೆ 

ಸಾಧಾರಣಾ ಸಾಧಾರಣ ಹರಿಗೆ ಒಪ್ಪಿಸಿ ಕೊಟ್ಟು
ಮೋದಾದಲ್ಲಿರು ವಿಜಯವಿಠ್ಠಲನ್ನ ನೆರೆನಂಬೀ ॥
********