Showing posts with label ಶ್ರೀದ ಹರಿ ಸರ್ವೋತ್ತಮತ್ವವ ವಾದಿಸುತ ramakanta vittala ರಾಯರ ಸ್ತೋತ್ರ rayara stotra. Show all posts
Showing posts with label ಶ್ರೀದ ಹರಿ ಸರ್ವೋತ್ತಮತ್ವವ ವಾದಿಸುತ ramakanta vittala ರಾಯರ ಸ್ತೋತ್ರ rayara stotra. Show all posts

Monday 6 September 2021

ಶ್ರೀದ ಹರಿ ಸರ್ವೋತ್ತಮತ್ವವ ವಾದಿಸುತ ankita ramakanta vittala ರಾಯರ ಸ್ತೋತ್ರ rayara stotra

  ankita ರಮಾಕಾಂತವಿಠಲ  

ಶ್ರೀ ರಾಯರ ಸ್ತೋತ್ರ (ಭಾಮಿನಿ ಷಟ್ಪದಿ)


ಶ್ರೀದ ಹರಿ ಸರ್ವೋತ್ತಮತ್ವವ

ವಾದಿಸುತ ಪಿತ ಕನಲಿ ಬಾಧಿಸಿ

ಕ್ರೋಧದಿಂದಲಿ ಸರ್ವವ್ಯಾಪ್ತನ ತೋರು ಎನಲಾಗ

ಛೇದಿಸುತ ಕಂಭವನು ನರಹರಿ

ಆದರದಿ ರಕ್ಷಿಸಿದ ವರ ಪ್ರ-

ಹ್ಲಾದರಾಜರು ಪೊರೆಯಲೆಮ್ಮನು ಸತತ ಕರುಣದಲಿ 1

ಶಿಶುತನದಿ ಬ್ರಹ್ಮಣ್ಯತೀರ್ಥರ

ವಶದಿ ಬೆಳೆಯುತ ಬ್ರಹ್ಮ ವಿದ್ಯೆಗೆ

ಅಸಮ ಯತಿ ಶ್ರೀಪಾದರಾಜರ ಶಿಷ್ಯರೆಂದೆನಿಸಿ

ಎಸೆವ ಗ್ರಂಥತ್ರಯದಿ ಮಧ್ವರ

ಕುಶಲಮತ ಉದ್ಧರಿಸಿ ಮೆರೆದರು

ಬಿಸಲಜಸಖ ಪ್ರತಿವಾದಿ ತಿಮಿರಕೆ ವ್ಯಾಸಮುನಿವರ್ಯ 2

ಕ್ಷೋಣಿಯೊಳಗಪ್ರತಿಮ ಯತಿವರ

ಜ್ಞಾನಿಗಳ ಸನ್ಮಾನ್ಯ ಮುನಿಸುರ-

ಧೇನು ಸುಮನಸ ತರುವು ಚಿಂತಾಮಣಿಯು ದೀನರಿಗೆ

ಆನತರ ಸಂತೈಸಿ ಸಲಹುವ

ಗಾನ ಕೋವಿದ ಮಂತ್ರಮನೆಯಲಿ

ಸಾನುರಾಗದಿ ನೆಲೆಸಿರುವ ಗುರು ರಾಘವೇಂದ್ರಾರ್ಯ 3

ಪ್ರಥಮದಲಿ ಪ್ರಹ್ಲಾದರಾಜರೆ

ದ್ವಿತಿಯದಲಿ ಶ್ರೀ ವ್ಯಾಸತೀರ್ಥರು

ತೃತೀಯದಲಿ ಗುರು ರಾಘವೇಂದ್ರರ ನಾಮದಿಂ ಮೆರೆವ

ಸತತ ಹೃದಯಾವಾಸ ಸೀತಾ-

ಪತಿಯು ನರಹರಿ ಕೃಷ್ಣ ವ್ಯಾಸರ

ಅತಿಶಯಾನಂದದಲಿ ನೋಳ್ಪರ ಕೃಪೆಯು ನಮಗಿರಲಿ 4

ರಾಘವೇಂದ್ರರ ಖ್ಯಾತಿ ಅಗಣಿತ

ಬಾಗಿ ಭಕ್ತಿಲಿ ವಂದಿಪರ ತನು-

ರೋಗ ಬಾಧೆಯ ಬಿಡಿಸಿ ಕಾಮಿತವಿತ್ತು ಸಲಹುವರು

ಯೋಗಿ ತಾರಾಗಣಕೆ ಶಶಿಧರ-

ರಾಗಿ ಶ್ರೀ ರಮಾಕಾಂತವಿಠಲನ

ಸಾಗರೋಪಮ ಕೃಪೆಲಿ ವರ್ಧಿಪ ಯತಿಗೆ ಆನಮಿಪೆ 5

***