Showing posts with label ಬೆಳಗಾಗಲು ಅರಘಳಿಗೆಯು ಇರುತಿರೆ kamalanabha vittala. Show all posts
Showing posts with label ಬೆಳಗಾಗಲು ಅರಘಳಿಗೆಯು ಇರುತಿರೆ kamalanabha vittala. Show all posts

Thursday 5 August 2021

ಬೆಳಗಾಗಲು ಅರಘಳಿಗೆಯು ಇರುತಿರೆ ankita kamalanabha vittala

..

kruti by Nidaguruki Jeevubai


ಬೆಳಗಾಗಲು ಅರಘಳಿಗೆಯು ಇರುತಿರೆ

ಸ್ಮರಿಸುವೆ ವಿಶ್ವಮೂರುತಿಯನ್ನು

ಬೆಳಗಾಗಲು ಹರಿಧ್ಯಾನವ ಮಾಡುತ

ಬಹಿರ ಭೂಮಿಗ್ಹೋಗುತ ಮುನ್ನು 1

ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ-

ಸರ್ಜನೆ ಮಾಡುತ ಮತ್ತಿನ್ನೂ

ದಂತ ಧಾವನೆಯ ಮಾಡುತ ಶ್ರೀ ಮಾ-

ಧವನನು ಸ್ಮರಿಸುವೆ ನಾನಿನ್ನೂ 2

ಮುಖವನು ತೊಳೆಯುತ ಮುರಹರಿ ಧ್ಯಾನದಿ

ಶ್ರೀತುಳಸಿಯ ನಮಿಸುತಲಿನ್ನೂ

ಮೀಸಲ ನೀರನು ಎರೆಯುತ ಬೇಗದಿ

ಮೃತ್ತಿಕಿ ಫಣಿಗಿಡುತಲಿ ಇನ್ನು 3

ಮೂರು ಪ್ರದಕ್ಷಿಣಿ ಮಾಡುತ ಬೇಗದಿ

ಮುದದಿ ನಮಸ್ಕರಿಸುತಲಿನ್ನೂ

ದೇವರ ಮನೆಕಡೆ ಪೋಗುತ ನಿಂದಿಹ

ಜಯವಿಜಯರಿಗೊಂದಿಸಿ ಮುನ್ನು 4

ದೇವರ ದರ್ಶನಕಾಜ್ಞೆಯ ಕೇಳುತ

ದೇವರ ಗೃಹದೊಳು ಪೋಗುತಲಿ

ಮಾಯಾ ಪತಿಯನು ಮನದೊಳು ಧ್ಯಾನಿಸಿ

ವಂದನೆ ಮಾಡುತ ಬೇಗದಲಿ 5

ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ

ಪದುಮನ್ಹಾಕುತಲಿ

ಗಜವರದನ ಕೊಂಡಾಡುತ ಮುದದಿ

ಗಜೇಂದ್ರ ಮೋಕ್ಷನ ಸ್ಮರಿಸುತಲಿ 6


ಗೋವೃಂದದ ಕಡೆ ಪೋಗುತ ಶ್ರೀ-

ಗೋವಿಂದನ ಸ್ಮರಿಸುತ ನಿತ್ಯದಲಿ

ಗೋಪೀ ಬಾಲನ ಗೋಕುಲವಾಸನ

ಗೋವ್ಗಳ ಮಧ್ಯದಿ ಸ್ಮರಿಸುತಲಿ 7


ಬಾಲಕೃಷ್ಣನ ಲೀಲೆಯ ಪೊಗಳುತ

ಬಾಲಲೀಲೆಗಳ ಕೇಳುತಲಿ

ಪುರಾಣವ ಪೇಳುವ ದ್ವಿಜರಿಗೆ

ವೃದ್ಧರಿಗೆರಗುತ ಪ್ರತಿನಿತ್ಯದಲಿ 8

ಮುರಳಿಯನೂದುತ ಮೆರೆಯುವ ಕೃಷ್ಣನ

ಸ್ಮರಣೆಯ ಅನುದಿನ ಮಾಡುತಲಿ

ಸರಸಿಜನಾಭನ ಸ್ಮರಿಸುತ ಮನದಲಿ

ಸ್ನಾನಕೆ ತೆರಳುತ ಶೀಘ್ರದಲಿ 9


ನದಿಯ ಸ್ನಾನಕೆ ಪೋಗುವ ಸಮಯದಿ

ನಾರದವಂದ್ಯನ ಸ್ಮರಿಸುತಲಿ

ಭಾಗೀರಥಿಯಲಿ ಸ್ನಾನವು ಮಾಡುತ

ಬಾಗುತ ಸಿರವನು ಬೇಗದಲಿ10


ಫಣಿರಾಜನ ಶಯನದಿ ಮಲಗಿಹ ಶ್ರೀ-

ಪರಮಾತ್ಮನ ನೋಡುತ ಬೇಗ

ಪಾದಗಳ ಸೇವಿಪ ಶ್ರೀ ಭೂದೇವಿಯ-

ರೇನುಧನ್ಯರೆಂದೆನುತಾಗ11

ಪೊಕ್ಕಳ ಮಧ್ಯದಿ ಪೊರಟಿಹ ನಾಳದ

ತುದಿಯಲಿ ರಂಜಿಪ ಕಮಲದಲಿ

ಉದ್ಭವಿಸಿದ ನಾಲ್ಮೊಗನನು ನೋಡುತ

ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12


ನೆರೆದಿಹ ಸುರ ಪರಿವಾರವೆಲ್ಲ ಶ್ರೀ-

ಹರಿಯನು ವಾಲೈಸುತಲಿನ್ನೂ

ಪರಮವೈಭವದಿ ಮೆರೆಯುವ ದೇವನ

ಸ್ಮರಿಸುವೆ ಜಲಮಧ್ಯದೊಳಿನ್ನು 13


ದೇವರ ರಥವನು ತೊಳೆಯುವೆನೆಂಬ-

ನುಸಂಧಾನದಿ ಸ್ನಾನವು ಮಾಡಿ

ದೇವರ ರಥ ಶೃಂಗರಿಸುವೆನೆನ್ನುತ

ಶ್ರೀಮುದ್ರೆಗಳ್ಹಚ್ಚುತ ಪಾಡಿ 14

ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ-

ಹರಿಪೂಜೆಗೆ ಅಣಿಮಾಡುತಲಿ

ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ

ತಂದಿಡುವೆನು ಮೋದದಲಿ 15


ಪಂಚಭಕ್ಷ ಪಾಯಸಗಳ ಮಾಡುತ

ಪಂಚಾತ್ಮಕ ನ ಸ್ಮರಿಸುತಲಿ

ಮಿಂಚಿನಂತೆ ಹೊಳೆಯುವ ತಬಕಿಲಿ

ತಾಂಬೂಲವ ನಿರಿಸುತ ಬೇಗದಲಿ 16


ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ

ಬ್ರಹ್ಮನ ಪಿತಗರ್ಪಿಸುತಲಿರಲು

ಸುಮ್ಮಾನದಿ ಮಹಲಕುಮಿಯು ಇದ-

ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17

ಪರಮಾತ್ಮನು ಈ ವಿಧ ಸೇವೆಯ ಕೈ-

ಗೊಳುತಲಿ ಸಂತಸ ಪಡಲಿನ್ನು

ಅರಿತವರೆಲ್ಲರು ನಿರುತದಿ ಹರಿ ಧ್ಯಾ-

ನವ ಮಾಡುತಲಿರೆ ತಾವಿನ್ನು 18


ದೇವಪೂಜೆ ವೈಶ್ವದೇವವು ನಿತ್ಯದಿ

ಗೋಬ್ರಾಹ್ಮಣನರ್ಚಿಸಿ ಇನ್ನು

ಸಾಯಂ ಸಮಯದಿ ಸಾಧುಗಳೊಡನೆ

ದೇವರ ಕಥೆ ಕೇಳುತಲಿನ್ನೂ 19


ಝಾಮಝಾಮದಿ ಜಯಶಬ್ದಗಳಿಂ

ಜಯಾಪತಿಯನು ಪೊಗಳುತಲಿ

ಆರತಿ ಜೋಗುಳ ಹಾಡುತ ಮುದದಲಿ

ಮಧ್ವೇಶಾರ್ಪಣ ಪೇಳುತಲಿ 20


ಮಲುಗುವಾಗ ಮುಕುಂದನ ಸ್ಮರಿಸುತ

ಲಯ ಚಿಂತನೆಯನು ಮಾಡುತಲಿ

ಕರಮುಗಿಯುತ ಕಾಯೇನ ವಾಚಾ ಎಂ-

ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21

ಝಾಮಝಾಮದಿ ಶ್ರೀ ಹರಿ ಮಾಧವ

ಕೇಶವ ನಾರಾಯಣ ಎನುತ

ಆಗಲು ಬೆಳಗಿನ ಝಾವದಿ ಸೃಷ್ಟಿಯ

ಚಿಂತನೆ ಮಾಡಿ ಎಂದೆನುತ22


ಮಳಲಗೌರಿ ನೋಂತಿಹ ಸತಿಯರಿಗೆ

ಮುರಳೀಧರ ಒಲಿದಿಹನೆನ್ನುತ

ಉದಯವಾಗಲು ವಿಶ್ವನ ಸ್ಮರಿಸುತ

ವಿಧಿ ನೇಮಗಳನುಸರಿಸುತ್ತ 23

ನಿತ್ಯದಿ ಈ ತೆರವಾಚರಿಸುವ ನರ

ಮುಕ್ತನು ಧರೆಯೊಳಗೆಂದೆನುತ

ಅತ್ಯುತ್ಸಾಹದಿ ಬರೆದೋದುತಲಿ-

ದರರ್ಥವ ತಿಳಿದಾಚರಿಸುತ್ತ24


ಈ ವಿಧ ಚಿಂತನೆ ಮಾಡುವ ಮನುಜಗೆ

ದಾರಿದ್ರ್ಯವು ದೂರಾಗುವದು

ಮಾರಮಣನು ತನ್ನವರೊಡಗೂಡುತ

ವಾಸವಾಗುವನೆಂಬುವ ಬಿರುದು25


ಕರೆಕರೆಗೊಳ್ಳದೆ ಕೇಳಿರಿ ನಿತ್ಯವು

ಕನಕಗಿರಿವಾಸನ ಮಹಿಮೆ

ಕನಲಿಕೆ ಕಳೆವುದು ಕಮಲನಾಭ-

ವಿಠ್ಠಲನು ಕೊಂಡಾಡುತ ಮಹಿಮೆ 26

***