Showing posts with label ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ kamalanabha vittala. Show all posts
Showing posts with label ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ kamalanabha vittala. Show all posts

Thursday 5 August 2021

ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ankita kamalanabha vittala

 ..

kruti by Nidaguruki Jeevubai

ಬಾಗಿಲು ತೆಗೆಯಲೆ ಭಾಮತಿ ರನ್ನಳೆ

ಈಗ ನಾ ಬಂದೆನು ಇಂದುಮುಖಿ ಪ


ನಾಗವೇಣಿಯೆ ನಿನ್ನೀಗಲೆ ನೋಡಲು

ಬೇಗನೆ ಬಂದೆನು ತೆಗಿ ಕದವಾ ಅ.ಪ


ಯಾರದು ಈ ಸಮರಾತ್ರಿಯ ವೇಳದಿ

ಬಾಗಿಲು ತೆಗೆ ಎಂದೆನುತಿಹರು

ತೋರದು ಎನಗೊಂದಾಲೋಚನೆ ನಿಮ್ಮ

ನಾಮವು ಪೇಳಲು ತೆಗೆಯುವೆನು 1


ನೀಲವೇಣಿಯೆ ಕೇಳೆನ್ನ ಮಾತನು

ಬಹಳ ಚಿಂತೆಯಾತಕೆ ಮನದಿ

ನೀಲಕಂಠನೆಂದೆನ್ನನು ಕರೆವರು

ಕೇಳು ಮನಸು ಚಂಚಲ ಬಿಟ್ಟು 2

ನೀಲಕಂಠನೆಂದರೆ ನೆನಪಾಯಿತು

ನವಿಲಿನ ಮರಿ ಬಂದಿಹುದೆಂದು

ನಾರಿಯರೆಲ್ಲರು ಹಾಸ್ಯವ ಮಾಳ್ಪರು

ಸಾರುತ ವನಗಳ ಚರಿಸೆಂದು 3


ಬೆದರದೆ ತೆರೆ ಕದ ಸುದತಿಮಣಿಯೆ ನಾ

ಬದಲೊಂದು ನಾಮವ ಪೇಳುವೆನು

ಬುಧ ಜನರೆಲ್ಲರು ಭಕುತಿಲಿ ಸ್ಥಾಣು-

ವೆನ್ನುತ ನಾಮವ ಕೊಂಡಾಡುವರು4


ಬೂಟಾಟಿಕೆ ಮಾತುಗಳನ್ನ ಏತಕೆ

ಸಾಟಿಯಾರು ಜಗದೊಳಗಿನ್ನು

ಮೋಟುಮರಕೆ ಸ್ಥಾಣುವೆನ್ನುತ ಕರೆವರು

ಈ ಪೃಥ್ವಿಯ ಮೇಲಿನ ಜನರು 5


ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ

ಪಶುಪತಿಯೆಂದು ಕರೆವರೆನ್ನ

ವಸುಧೆಯ ಮೇಲಿನ ಪೆಸರುಗಳಿಗೆ ನೀ

ಪ್ರತಿಯಾಗರ್ಥವ ಕಲ್ಪಿಸುವಿ 6


ವೃಷಭರಾಜ ನೀನಾದರೆ ಮುಂದಕೆ

ಪಶುಗಳ ಮಂದೆಗೆ ತೆರಳುವದು

ಕುಸುಮಗಂಧಿಯರ ಸದನದಿ ಕಾರ್ಯವು

ವೃಷಭರಾಜಗಿಲ್ಲವು ಕೇಳೌ 7


ಶೀಲವಾಣಿಯೆ ಸುಶೀಲೆಯೆ ಎನ್ನಯ

ವಾಣಿ ಕೇಳಿ ಕದವನು ತೆಗಿಯೆ

ಪೇಳುವೆ ಮತ್ತೊಂದು ನಾಮವ ಎನ್ನನು

ಶೂಲಿ ಎಂದು ಕರೆವರು ಜನರು 8

ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು

ಯಾರಿಗೆ ಸಾಧ್ಯವು ಜಗದೊಳಗೆ

ನಾರಿಯರಿಗೆ ಹೇಳದೆ ಮುಂದಕೆ ನಡೆ

ಶೂರರಾದ ವೈದ್ಯರ ಬಳಿಗೆ 9


ಕರಿಯ ಮುಖನ ಮಾತೆಯೆ ತಡಮಾಡದೆ

ಕನಕಮಯದ ಕದ ತೆರೆ ಬೇಗ

ಕಮಲನಾಭ ವಿಠ್ಠಲನನು ಪಾಡುತ

ಶಿವನ ನಮಿಸಿ ತೆಗೆದಳು ಕದವ 10

***