Showing posts with label ಏಕದಂತ ಪಿನಾಕಿ ಸುತ ಜಗದೇಕನಾಥನ krishnavittala. Show all posts
Showing posts with label ಏಕದಂತ ಪಿನಾಕಿ ಸುತ ಜಗದೇಕನಾಥನ krishnavittala. Show all posts

Monday 2 August 2021

ಏಕದಂತ ಪಿನಾಕಿ ಸುತ ಜಗದೇಕನಾಥನ ankita krishnavittala

ಏಕದಂತ ಪಿನಾಕಿ ಸುತ ಜಗ

ದೇಕನಾಥನ ನಾಭಿಮಂದಿರ

ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ

ಜೋಕೆ ಯಿಂದ ಪರಾಕು ನುಡಿಯುವೆ

ನೂಕಿ ವಿಘ್ನವ ಸಾಕು ನಮ್ಮನು

ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1

ಕಾಣೆ ನಿನಗೆಣೆ ಮೂರುಲೋಕದಿ

ಮಾನ್ಯನಾಗಿಹೆ ಸರ್ವರಿಂದಲು

ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ

ಧ್ಯಾನ ಮಾಡುವೆ ವಿಶ್ವತೈಜಸ

ನನ್ನು ಮಹದಾಕಾಶಮಾನಿಯೆ

ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2

ದೈತ್ಯಗಣಗಳಿಗಿತ್ತು ವರವು

ನ್ಮತ್ತರನು ಮಾಡುತಲಿ ಶ್ರೀಪುರು

ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ

ಮಾತರಿಶ್ವನ ದಾಸರಿಗೆ ಹರಿ

ಭಕ್ತಿ ವಿಷಯ ವಿರಕ್ತಿ ನೀಡುವೆ

ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3

ವಕ್ರ ತುಂಡನೆ ನೀಗಿಸೆನ್ನಯ

ವಕ್ರಬುದ್ಧಿ ವಿವೇಕನೀಡುತ

ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ

ರಕ್ತಗಂಧಪ್ರೀಯ ಸೋಮನ

ಸೊಕ್ಕು ಮುರಿದೆಯೊ ಭೂಪ ಭಕ್ತಿಯ

ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4

ರಂಗ ಮಂದಿರ ದಕ್ಷಿಣಸ್ಥವಿ

ಹಂಗಗಮನನ ರಾಣಿ ರುಕ್ಮಿಣಿ

ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು

ಗಂಗೆಪಿತನನು ಸೇವಿಸಿದೆ ಮಾ

ತಂಗಮುಖ ಮಹಕಾಯ ನಾರೀ

ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5

ಮೊದಲು ಪೊಜೆಯ ನಿನಗೆ ವಿಹಿತವು

ವಿಧಿ ಭವಾದ್ಯರ ಪೊರೆವ ವಿಶ್ವನು

ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ

ಮದದಿ ಬಿಡುವರಿಗೆಲ್ಲ ಖೇದವೆ

ಒದಗಿ ಬರ್ಪುದು ಬಾಗಿ ಭಜಿಸುವೆ

ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6

ವ್ಯಾಪ್ತ ದರ್ಶಿಯೆ ವಂದಿಸುವೆ ಪರ

ಮಾಪ್ತ ಹರಿ ಭಕ್ತರಿಗೆ ನೀನಿಹೆ

ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ

ಆರ್ತನಿಹೆ ಬಹುಮೂಢ ಖರೆವೇ

ದೋಕ್ತಮರ್ಮವ ಭಾಸಗೈಸಿ ಕೃ

ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7

ಬರೆದೆ ಭಾರತ ವೇದವ್ಯಾಸರ

ಕರುಣದಿಂದಲಿ ಭಕ್ತಿಯೋಗಿಯೆ

ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ

ದುರಳ ಗಣಗಳ ಕಾಟತಪ್ಪಿಸಿ

ಹರಿಗೆ ಸಮ್ಮತವಿಲ್ಲ ದೆಡೆಯಲಿ

ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8

ಜಯಜಯತು ವಿಶ್ವಂಭರ ಪ್ರೀಯ

ಜಯಜಯವು ಮೈನಾಕಿತನಯಗೆ

ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ

ಜಯಜಯವು ಸದ್ವಿದ್ಯೆಕೋಶಗೆ

ಜಯಜಯವು ಮೀನಾಂಕ ಭ್ರಾತೃವೆ

ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9

***