Showing posts with label ನಿನಗೇನು ಘನವೇನು ವನಜಾಕ್ಷ ವೇಂಕಟೇಶ varaha timmappa. Show all posts
Showing posts with label ನಿನಗೇನು ಘನವೇನು ವನಜಾಕ್ಷ ವೇಂಕಟೇಶ varaha timmappa. Show all posts

Friday 27 December 2019

ನಿನಗೇನು ಘನವೇನು ವನಜಾಕ್ಷ ವೇಂಕಟೇಶ ankita varaha timmappa

by ನೆಕ್ಕರ ಕೃಷ್ಣದಾಸ
ಸಾರಂಗ ರಾಗ , ಆದಿತಾಳ

ನಿನಗೇನು ಘನವೇನು ವನಜಾಕ್ಷ ವೇಂಕಟೇಶ
ಮನಕೆ ಬೇಕಾದುದ ಇತ್ತು ರಕ್ಷಿಸುವರೆ ||ಪ||

ದೇಶ ನಿನ್ನದು ಬಹುಕೋಶ ನಿನ್ನದು ಜಗ-
ದೀಶ ನಿನ್ನನು ಭಾಗ್ಯ ಲಕುಮಿ ಸೇವಿಸುವಳು
ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ
ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ ||೧||

ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ
ಅಣುಮಹತ್ತಿನೊಳಗೆ ಗುಣವ ತೋರಲೂ ಬಲ್ಲೆ
ಕ್ಷಣಕೆ ಮುನಿಯಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ
ಗುಣಗಳವಂಗುಣವ ನೋಡದೆ ಸಲಹಯ್ಯ್ ||೨||

ಹುಟ್ಟಿದೆ ನರಜನ್ಮದಿ ಬಹಳ ಬಳಲಿಯೆ ಕಷ್ಟ-
ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ
ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು
ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ ||೩||

ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಕುಂದು ಹೆಚ್ಚಿಯೆ ನಿರ್ಬಂಧಬಡಿಸುತಿದೆ
ಮಂದರಾದ್ರಿಯ ಗೋವಿಂದ ನಿನ್ನಯ ಪಾದ-
ದ್ವಂದವ ತೋರಿಸಿ ಚಂದದಿ ಸಲಹಯ್ಯ ||೪||

ಮನದ ಸಂಕಲ್ಪಕೆ ಅನುಗುಣವಾಗಿಯೆ
ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ
ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ
ತನುಮನದೊಳಗನು ದಿನದಿನ ಸಲಹಯ್ಯ ||೫||
********