Showing posts with label ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ gopalakrishna vittala. Show all posts
Showing posts with label ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ gopalakrishna vittala. Show all posts

Monday 2 August 2021

ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ankita gopalakrishna vittala

ಭಾರತೀಶ ಹರಿದಾಸನಾದನಿಲ್ಲೀ

ವೀಣೆಯ ಧರಿಸುತಲೀ ಪ.


ಭಾರಿಭಾರಿಗವತಾರ ಮಾಡಿ ಬಳಲೀ

ಆನಂದದಲ್ಲೀ ಅ.ಪ.


ತ್ರೇತೆಯಲ್ಲಿ ಶ್ರೀ ರಾಮದೂತನಾಗಿ

ತನುಸುಖವ ನೀಗಿ

ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ

ತನುವಪ್ಪಿಸಿ ಬಾಗಿ

ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ

ಸೀತೆಯ ಕಂಡೆರಗಿ

ವೀಹೋತ್ರಗೆ ಪುರವಪ್ಪಿಸಿ ತಿರುಗೀ

ರಾಮರ ಕಂಡೆರಗಿ 1

ಕುಂತಿಯ ಜಠರದಿ ಜನಿಸಿ ಭೀಮನೆನಿಸೀ

ಬಕಮುಖರನೆ ಜೈಸಿ

ಸಂತೋಷದಿ ಸೌಗಂಧ ಸತಿಗೆ ಸಲಿಸೀ

ಕೌರವರ ಸಂಹರಿಸೀ

ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ

ಪಾಂಡವರನೆ ಮೆರಸೀ

ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ

ಮೇಲ್ತೋರದೆ ಸ್ಮರಿಸೀ 2

ಮೂರನೆ ರೂಪದಿ ಮುನಿಯಾಗವತರಿಸೀ

ದುರ್ಮತಗಳ ಜೈಸೀ

ಸಾರತತ್ವಮತ ಸಜ್ಜನರಿಗೆ ತಿಳಿಸೀ

ಸರ್ವೋತ್ತಮ ಹರಿ ಎನಿಸೀ

ಆರು ಅರಿಯದಂತೆ ದಾಸತ್ವವಚರಿಸೀ

ದುರ್ಮತಗಳ ಜೈಸೀ

ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ

ಯತಿ ಕುಲಜರೋಳ್ ನಿಲಿಸೀ 3

ಮೀಸಲ ದಾಸ್ಯವ ಮೂರವತಾರದಲ್ಲಿ

ಚರಿಸಲು ಕಲಿಯಲ್ಲೀ

ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ

ನಾರದ ಮುನಿಯಲ್ಲೀ

ದಾಸರೆಂದರೆ ಪುರಂದರ ಗುರುವೆನಿಸುತಲೀ

ಮೆರೆಯಲು ಜಗದಲ್ಲೀ

ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ

ದಾಸ ತಾನಾಗುತಲೀ 4

ದಾಸತನದ ಆನಂದವನನುಭವಿಸೇ

ದೇವತೆಗಳು ಬಯಸೇ

ಭೂಸುರ ಜನ್ಮದಿ ಭೂಮಿಯಲವತರಿಸೇ

ಹರಿದಾಸರಾಗಿ ಸುಖಿಸೇ

ವಾಸುದೇವಗೆ ತಾ ನಿಜದಾಸನು ಎನಿಸೇ

ಮಾರುತಿ ಇದ ಬಯಸೇ

ಶ್ರೀಶ ಗೋಪಾಲಕೃಷ್ಣವಿಠಲದಾಸಾ

ಬೆಳಗಾವಿ ವಾಸಾ 5

****