Showing posts with label ಗುರುರಾಘವೇಂದ್ರತವ ಚರಣಾರವಿಂದದ ಭ್ರಮರ ನೆನಿಸುವ ಮನುಜಗೇ pandu vittala ಸಾಂಗತ್ಯ sangatya. Show all posts
Showing posts with label ಗುರುರಾಘವೇಂದ್ರತವ ಚರಣಾರವಿಂದದ ಭ್ರಮರ ನೆನಿಸುವ ಮನುಜಗೇ pandu vittala ಸಾಂಗತ್ಯ sangatya. Show all posts

Monday 6 September 2021

ಗುರುರಾಘವೇಂದ್ರತವ ಚರಣಾರವಿಂದದ ಭ್ರಮರ ನೆನಿಸುವ ಮನುಜಗೇ ankita pandu vittala ಸಾಂಗತ್ಯ sangatya

ankita ಪಾಂಡುವಿಠಲ 

||ಆಶ್ವಧಾಟಿ - ಸಾಂಗತ್ಯ||

ಗುರುರಾಘವೇಂದ್ರತವ | ಚರಣಾರವಿಂದದ ಭ್ರ- |

ಮರ ನೆನಿಸುವ ಮನುಜಗೇ | 

ಪರಿಮಳವು ಷಟ್ಟದಕೆ | ವರಕಮಲ ಪ್ರತತಿಯಿಂ |

ಭರದಿಂದ ದೊರೆವಂದದೀ |

ಸ್ಥಿರ ಭಕ್ತಿಜ್ಞಾನ ವಿ | ಸ್ಪುರಿಸುವುದು ನಿತ್ಯಸುಖ |

ಖರೆಯಿಂದೂ ಸಟೆಯೆಲ್ಲವೋ |

ಕರೆದು ಕಾಮಿತವೀವ | ಸುರಧೇನು ವಿರಲನ್ಯ-|

ನರರ ತುತಿಸುವದ್ಯಾತಕೆ 1

ಪ್ರಹ್ಲಾದನಾಗಿ ಶ್ರೀ | ನಲ್ಲನ್ನ ಭಕ್ತ ಜನ- |

ರೆಲ್ಲಾರಿಗಿವ ತೋರಿದಾ |

ಉಲ್ಲಾಸದಲಿ ಮುನಿಗ | ಳಲ್ಲುತ್ತಮ ಹರಿಯು |

ಎಲ್ಲರೊಳಗಧಿಕನೆಂದಾ |

ಸಲ್ಲಾದನಣ್ಣ ಯತಿ | ಮಲ್ಲನಿವನೀ ಜಗದೋ- |

ಳೆಲ್ಲಾ ದ್ವಿಜರ ಸಲುಹಿದಾ |

ಒಳ್ಳೆಮನದಿ ಭಕ್ತ | ರೆಲ್ಲಾರು ಇವರಸ್ತುತಿ |

ಉಲ್ಲಾಸದಿಂ ಕೇಳ್ವುದೂ 2

ಇಂದ್ರಾದ್ಯಮರರು ಈ | ವೃಂದಾವನದಲಿ ಗೋ- |

ವಿಂದನ ಕೂಡಿರುವರೂ |

ಪೊಂದಿರ್ಪುವಿಲ್ಲಿ ಮುನಿ | ವೃಂದಾದಿ ದಾಸಕುಲ |

ವೀಂದ್ರಧ್ವಜನ ದೂತನ |

ಸುಂದರನು ಇಲ್ಲಿರಲು | ಚಂದವಿರುವೀ ಸ್ಥಾನ |

ಕೇಂದ್ರವೆನಿಪುದು ಬುಧರಿಗೆ |

ಸಂದೇಹವಿಲ್ಲವೋ ಯ | ತೀಂದ್ರರ ರೂಪದಿಂ- |

ದಿಂದ್ರಾವರಜ ನಿಂತಿಹ 3

ಶ್ರೇಷ್ಠವಾದ ಭಕ್ತಿಲು | ಚ್ಛೇಷ್ಟದಲಿ ಬರಲು ಸಕ- |

ಲೇಷ್ಟಪ್ರದಾತನಡಿಗೆ |

ಕಾಷ್ಟಾಲಯದಲಿ ಕಡು | ಶೇಷ್ಠಾನಲಿಟ್ಟಂತೆ |

ಕುಷ್ಟಾದಿಗಳ ಸುಡುವನು |

ಎಷ್ಟೇಳಲವನು ಬಲು | ಸಾಷ್ಟಾಂಗವೆರಗೆ ಸಂ- |

ತುಷ್ಟಾಗಿ ತಾನೊಲಿವನೂ |

ಕಷ್ಟಂಗಳಂ ಬಿಡಿಸಿ | ಇಷ್ಟಾರ್ಥಕೊಟ್ಟು ಯತಿ- |

ಶ್ರೇಷ್ಠ ಪ್ರಭು ಪೊರೆವನೂ 4

ಬಿನೈಪೆನೋ ಯತಿವ | ರೇಣ್ಯ ಪ್ರಭೋ ಎನಲು |

ಚಿನ್ನಾ ನೀ ಬಾ ಎಂಬನೂ |

ಕಣ್ಣಿಗೆ ಎವೆಯಂತೆ | ಚನ್ನಾಗಿ ಪೋಷಿಸುವ- |

ನೆನ್ನಾಣೆ ಸುಳ್ಳಲ್ಲವೋ |

ಇನ್ನೇನು ಈ ಶ್ರೇಷ್ಠ | ಸನ್ಯಾಸಿ ಭಕ್ತರನು |

ಸನ್ಮಾನದಿಂದ ಪೋಷಿಪಾ |

ಪುಣ್ಯಾಸೆ ಜನಕೆ ಸ್ವ | ಪುಣ್ಯ ಪ್ರಧಾನದಿಂ |

ಚಿನ್ನಾಂಗನಿವ ತೋರುತ 5

ರೋಗಾದನೇಕ ವಿಧ | ಭೋಗೋಪ ಭೋಗದಲಿ |

ಸಾಗಿರ್ದು ಕಂಗೆಡದಲೇ |

ಯೋಗೇಶನಡಿಗಳನು | ರಾಗಾದಿ ಭಜಿಸೆ ಬಲು |

ಬೇಗಾದಿ ಬಂದು ಪೊರೆವಾ |

ಬಾಗೀದೊಡಿವಗೆ ಶಿರ | ವಾಗಾಗ್ಗೆ ಫಲ ಬಹುದು |

ಭಾಗೀರಥೀ ಸ್ನಾನದಾ |

ಯಾಗಾದಿಗಳ ಪುಣ್ಯ | ಭೋಗಂಗಳುಂಬುವರು |

ನಾಗಾರಿ ಧ್ವಜನ ಪುರದೀ 6

ಮುದ್ದಾದ ರಾಯ ಪ್ರ | ಸಿದ್ಧಾದ ವಾರಾಹಿ |

ಶುದ್ಧವಿಹ ದಂಡೆ ಮೇಲೆ |

ಸಿದ್ಧಸ್ತದಿಂದ ಪರಿ | ಶುದ್ಧಾತ್ಮ ಕುಳಿತಿಹನು |

ಸದ್ವೈಷ್ಣವಾಬ್ಧಿ ಚಂದ್ರ |

ಉದ್ಧಾರಗೈವ ಭವ | ಬದ್ಧರನು ಪೊರೆವ ಬಲು- |

ಶ್ರದ್ಧೆಯಿಂ ಭಜಿಸಿದೊಡನೆ |

ಮಧ್ವಾರ್ಯಮತ ದೀಕ್ಷೆ | ಯದೃಚ್ಛ ಲಾಭವಿ- |

ತ್ತುದ್ದೇಶ ಪೂರೈಪನೋ 7

ತುಂಗಾನಿವಾಸ ದಿ | ವ್ಯಾಂಗ ಪ್ರಭೂ ಜನರ | 

ಭಂಗಕ್ಕೆ ಗುರಿ ಮಾಡನೂ |

ಶೃಂಗಾರವದನ ನರ | ಸಿಂಗಾಂಗ ಶರಧಿ ಶಶಿ |

ಯಂಗೇನು ಭಜಿಸದಿಹೂದೂ |

ಗಂಗಾದಿಗಳಲ್ಲಿ ಮಲ | ಹಿಂಗೂವುದೇ ಪಾಂಡು- |

ರಂಗನ್ನ ಪದಕಮಲಕೇ |

ಭೃಂಗಾನೆನಿಪ ಬುಧೋ | ತುಂಗನ್ನ ಭಾಗವತ |

ಜಂಗುಳಿಯಾ ನಮಿಸದೇ 8

ಉತ್ಕೃಷ್ಟ ರಥದಿ ಮುನಿ | ಯೊತ್ತಾಯದಲಿ ಕುಳಿತು |

ರತ್ನಾದಿ ಮಾಲೆ ಧರಿಸಿ |

ಕಸ್ತೂರಿ ತಿಲಕ ಮೇಣ್ | ಕೆತ್ತಿರ್ದಪದಕ ಪೊಳೆ- |

ಯುತ್ತಿರ್ಪವೋ ಕಣ್ಣಿಗೇ |

ನಿತ್ಯದಾ ಸುಖ ಬಯಿಪ | ರೊತ್ತಾಯದಲಿ ಬನ್ನಿ |

ಮತ್ತೇನು ಬೇಕೆನ್ನುತ್ತಲೀ |

ಭಕ್ತಿಗೊಲಿದತಿ ಜನರಿ | ಗತ್ಯಾದರಿಸುವದಕೆ |

ಚಿತ್ತಗುಹೆವಾಸ ಪೇಳ್ವ 9

ಸಿಕ್ಕಲ್ಲಿ ಐಹಿಕ ಸು | ಖಕ್ಕಾಗಿ ಪೋಗಿತ್ವರ |

ಪೊಕ್ಕಾಲಯದಲಿ ನರರ |

ರೊಕ್ಕಕೆ ಸೇವಿಸುತ | ದಿಕ್ಕಿಲ್ಲದವರಂತೆ |

ಧಿಕ್ಕಾರವೋ ಜನ್ಮಕೇ |

ಪಕ್ಕಂಗಳಂ ಕಳೆದ | ಪಕ್ಷಿಪ್ರತಿತಿಯಂತೆ |

ಈ ಕ್ಷೋಣಿಯಲಿ ಬಾಳದೇ |

ತಕ್ಕದ್ದಪೇಕ್ಷಿಸಿರ | ದಕ್ಕಾಗಿ ಇಲ್ಲಿಹನು |

ಆಕ್ಷೇಪಣವು ಇಲ್ಲವೋ 10

ವಾರಹಿವಾಸ ಭೂ | ಭಾರಾರಿ ದಿವ್ಯರಥ- | 

ವೇರುತ್ತಲಾ ಕ್ಷಣದಲೀ | 

ವಾರಾಂಗನೆಯರು ಬ್ರಹ್ಮ | ಚಾರ್ಯಾದ್ಯನೇಕ ಜನ |

ಸಾರಾದ ಸಂಗೀತದಿ |

ಬಾರೋ ನೀ ಭವರೋಗ | ದೂರಾ ಯತಿಯೆ ಎಂದು |

ಸಾರುತ್ತ ಡಂಗುರಗಳ |

ಕಾರುಣ್ಯನಿಧಿ ಯತಿಯು | ನಾರಾಯಣನ ತೋರ್ಪ- | 

ನಾರಾಧಿಪರ್ಗೆ ಬಿಡದೆ 11

ನಾನಾಬಗೆಯ ಈ | ಕ್ಷೋಣಿಯ ಜೀವರಿಗೆ |

ನಾನಾ ವಿಧದಿ ಕಾಣುವಾ |

ಆನೆಗೊಲಿದನ ಪ್ರಿಯನು | ದಾನಗಳಿತ್ತು ಸುಖ |

ಜ್ಞಾನಾದಿ ಭಕ್ತಿ ಈವ |

ನಾನಾರ್ಥವೀವ ಯತಿ | ಮಾನೋತ್ತಮರಿಗೆ ಈ- |

ಕ್ಷೋಣಿಯೊಳಗಾಗಿರುವರೊ |

ನಾನಾ ವಿಮೋಹಕನು | ಮಾನಿಲ್ಲ ಪೊರೆವ ಪ್ರ- | 

ಮಾಣವೇ ಭೋಗವಿರಲೂ 12

ಗುಂಪಾಗಿ ಭಾಗವತ | ರಿಂಪಾದ ಗಾಯನದಿ |

ಮಾಂಪಾಹಿ ಗುರುವೆಂಬರೂ |

ಕೆಂಪಾದ ಕಮಲಾಕ್ಷ | ಕಂಪಿಸುವೆವು ಭವದಿ |

ನೀಂಪಾಲಿಸೆಂದೆನುತಲೀ |

ನೀಂಪಾಲಿಸದಿರೆ ಈ | ಗುಂಪುಗಳ ಗತಿಯೇನು |

ನಾಂ ಪೇಳಲಾರೆನುತಲೀ |

ಚಂಪಕಾ ನಾಶಿಕನೆ | ಪೆಂಪೊಡೆದ ಪದಜ್ಯೋತಿ |

ತಂಪಾಗಿ ಪಸರಿಸಿಹುದೂ 13

ಶಾಂತತೆಯಲಿ ಚಂದ್ರ | ಸಂತೋಷದಲಿ ಕಡಲ |

ಕಾಂತಿಯೊಳಗಿವ ಭಾಸ್ಕರ |

ಅಂತೇನು ಇವನ ಕರು | ಣೆಂಥಾದು ಬಲುಜ್ಞಾನ- |

ವಂತೆನಿಪನೆ ಪೊಗಳನು |

ಚಿಂತಿಸುವದೇಕೆ ಜನ | ಭ್ರಾಂತಿಯಲಿ ಬರಿದೆ ಶ್ರೀ- |

ಮಂತಿಗೆಯಲಿ ದನುಜತನಯಾ |

ಪಂಥದಲಿ ಬಲಿತಾತ | ಸಂತೇಂದ್ರ ದಾನದಲಿ |

ಮಂತ್ರಾಲಯಾ ನಿವಸನು 14

ನೀಲಾಂಗ ಭಕ್ತ ಭವ | ಜಾಲಾವಿನಾಶ ಕುಲ- |

ಕೋಲಾಹಲ ವಿಧುರನೋ |

ಶೀಲೋತ್ತಮನು ತುಳಸೀ | ಮಾಲಾ ವಿಭೂಷಿತ ಸು- |

ಶೀಲೇಂದ್ರ ವಂದ್ಯನಿವನು |

ವ್ಯಾಲಾಲಯದಲಿಲಿಯುಂ | ಬಾಳಿರ್ಪತೆರ ಮೋಹ |

ಜಾಲಾಗಿಹಾ ಭವದಲಿ |

ಕಾಲೆಂತು ಕಳೆವುದೆನೆ | “ಬಾಲಾ ನೀ ಬಾ ಎಂಬ” |

ಪಾಲಾಬ್ಧಿಶಯನ ದಾಸ 15

ನಿಗಮದ ಧ್ವನಿಗಳೀ | ಜಗದೇವತೆಗಳೆಲ್ಲ |

ಸ್ಥಗಿತ ಭಕ್ತಿಲಿಗೈಯುತಾ |

ಮಿಗೆ ಧನ್ಯವಾದೆವೀ | ಜಗದೊಳಗೆನುತ ಗುರುಗ- |

ಳಘ ಕಳೆವ ಚರಣಕಂಡು |

ಪೊಗಳಲಳವೇ ಜಗ | ದ್ಗುರು ವಿರಲು ದೈವಕೆ |

ಮಿಗಿಲಾದ ಕನ್ನಡಿಗರಾ |

ಮಗುವೆಂದು ಪೊರೆದನುಜ | ಮಗನೆಂದು ದಾಸಕುಲ |

ಕರ ಮುಗಿದು ಕನ್ನಡಿಗಗೆ 16

ಶ್ರೀಶನಂಘ್ರಿಯ ದೂತ | ಪೋಷಿಸೆಲೊ ಭಕ್ತರನು |

ಘಾಸಿಗೊಳಿಸದಿರಲೆಂದಿಗೂ |

ನೀ ಸಲಹದಿರಲು ಈ | ಭೂಸುರರೆನಿಪರು ನರರ |

ದಾಸರಾಗುವರು ಬಿಡದೇ |

ಘಾಸಿಗೊಂಡವರು ಬಲ ದು | ರಾಶೆ ಹೆಚ್ಚಿತು ದ್ವಿಜರೂ |

ದಾಸಿಸಲ್ಪಡುವರಿಹದೀ |

ಈಸೋಕಾಯಿಯಂತೆ | ಭೂಸುರರ ಬಿಡದೆ ನೀ |

ಪೋಷಿಸೆನ್ನವರೆನುತಲೀ 17

ವ್ಯಾಕರಣ ಗಣ ಯತಿಗ | ಳಾ ಕಠಿಣ ಮಾತ್ರೆಗಳ |

ಸ್ವೀಕರಿಸಕೂಡದೆಂದೂ |

ಲೇಖಕನು ಬಿನ್ನೆಪ | ಪ್ರಾಕೃತವಿದೆಂದು ಜನ |

ಭೀಕರದ ಟೀಕೆ ಬಿಟ್ಟು |

ವ್ಯಾಕುಲದ ಭವರೋಗ | ಕೇಕ ಔಷಧ ಮಾತ್ರೆ |

ಪಾಕವಿದು ಜನರು ಬಿಡದೇ |

ಏಕ ಚಿತ್ತದಿ ಪಠಿಪು | ದೀ ಕೃತಿಯ ನಿತ್ಯದೈ- |

ಹಿಕದ ಸುಖಕೊಳಗಾಗದೇ 18

ಕಂಡಲ್ಲಿ ಬೇಡಿ ಬಲು | ಬೆಂಡಾದೆ ಗುರುವೆನಲು |

ಚಂಡಾಲನಿರೆ ಸಲಹುವಾ |

ದಂಡ ಪ್ರಣಾಮದಿಂ | ಕೊಂಡಾಡದವರ ಶಿರ |

ಚಂಡಾಗುವದು ಯಮನಿಗೆ |

ಕೊಂಡಾಡು ದುರಿತವನ | ಕೆಂಡಾದ ಯತಿಯ ಇ- |

ತ್ತಂಡವಾಗುವದು ಸಂಪದಾ |

ಕೊಂಡಾಡುವರ ಪೊರೆವ | ಖಂಡಾಗಿ ವಂದ್ಯಖಳ |

ಹಿಂಡಾರಿ ಪಾಂಡುವಿಠಲಾ 19

***