Showing posts with label ಕರುಣಿಸೈ ಗುರುರಾಯ ಚರಣತೀರ್ಥವನು varaha timmappa. Show all posts
Showing posts with label ಕರುಣಿಸೈ ಗುರುರಾಯ ಚರಣತೀರ್ಥವನು varaha timmappa. Show all posts

Friday 27 December 2019

ಕರುಣಿಸೈ ಗುರುರಾಯ ಚರಣತೀರ್ಥವನು ankita varaha timmappa

by ನೆಕ್ಕರ ಕೃಷ್ಣದಾಸ
ರಾಗ ಮುಖಾರಿ ತ್ರಿವಿಡೆ ತಾಳ

ಕರುಣಿಸೈ ಗುರುರಾಯ ಚರಣತೀರ್ಥವನು
ಹರಣ ಭಯದೊಳು ಲಕುಮೀರಮಣನೊಲಿವಂದದಲಿ ||ಪ||

ದೇಶ ದೇಶವ ತಿರುಗಿ ಬೇಸರದು ಈ ಚರಣ
ಭೂಸುರವ ಪೂಜಿಸುವದು ಈ ದಿವ್ಯ ಚರಣ
ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ
ಕಾಶಿ ರಾಮೇಶ್ವರಕೆ ನಡೆದ ಚರಣ ||೧||

ಹಾವಿಗೆಯನೊಲ್ಲದೆ ಹಾದಿ ನಡೆದ ಈ ಚರಣ
ದೇವಿ ಭಾಗೀರಥಿಗೆ ಇಳಿದ ಚರಣ
ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ
ಕೋವಿದರು ವಂದಿಸುವ ದಿವ್ಯ ಚರಣ ||೨||

ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ
ಸೃಷ್ಟಿಗುತ್ತಮ ನದಿಯ ಮಿಂದ ಚರಣ
ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ
ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ ||೩||

ಶುದ್ಧ ವೈಷ್ಣವರೆಲ್ಲ ಉಜ್ಜಿತೊಳೆವ ಚರಣ
ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ
ಮಧ್ವರಾಯನ ಮತದಿ ಎದ್ದು ತಿರುಗುವ ಚರಣ
ವಿದ್ಯೆ ನಿಧಿ ಗುರುರಾಯ ಬಾಳ್ದ ಚರಣ ||೪||

ಧರಣಿಯನು ಬಲವಂದು ದಣಿದು ಬಂದಿಹ ಚರಣ
ಉರುತರದ ಕೈವಲ್ಯ ಪಡೆದ ಚರಣ
ವರಾಹ ತಿಮ್ಮಪ್ಪನಿಹ ಗಿರಿಯನೇರಿದ ಚರಣ
ಸ್ಥಿರವಾಗಿ ಉಡುಪಿಯೊಳು ನಿಂದ ಚರಣ ||೫||
*******