Showing posts with label ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ purandara vittala CHINTYAKA MAADUTIDDI CHINMAYANIDDANE. Show all posts
Showing posts with label ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ purandara vittala CHINTYAKA MAADUTIDDI CHINMAYANIDDANE. Show all posts

Monday 30 December 2019

ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ purandara vittala CHINTYAKA MAADUTIDDI CHINMAYANIDDANE


 








ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ || ಪ ||
ಚಿಂತಾರತ್ನವೆಂಬೋ ಅನಂತನಿದ್ದಾನೆ ಪ್ರಾಣಿ || ಅ.ಪ ||

ಎಳ್ಳು ಮೊನೆಯ ಮುಳ್ಳುಕೊನೆಯ ಪೊಳ್ಳು ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕುಮಿ ನಲ್ಲನಿದ್ದಾನೆ ಪ್ರಾಣಿ || ೧ ||

ಗೋಪ್ತಾ ತ್ರಿಜಗದ್ವ್ಯಾಪ್ತಾ ಭಜಕರ ಆಪ್ತನೆನಿಸಿ ಸ್ತಂಭದಲ್ಲಿ
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ ಪ್ರಾಣಿ || ೨ ||

ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ ನಿನ್ನ ಕೊಲ್ಲುವರ‍್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ಪ್ರಾಣಿ || ೩ ||

ಮುಕ್ಕಣದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಪರಿದು
ಚಿಕ್ಕವಂಗೆ ಅಚಲಪದವಿಯ ದಕ್ಕಿಸಿದ್ದಾನೆ ಪ್ರಾಣಿ || ೪ ||

ನಾನು ನನ್ನದು ಎಂಬುದು ಬಿಟ್ಟು ಹೀನವಿಷಯಂಗಳನ್ನು ಜರಿದು
ಜ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ ಪ್ರಾಣಿ || ೫ ||

ಸುತ್ತಲು ಬಂದು ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ
ಹೆತ್ತ ತಾಯಿತಂದೆ ತವರು ಹತ್ತಿರ ಇದ್ದಾನೆ ಪ್ರಾಣಿ || ೬ ||

ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಶ್ರೀಪುರಂದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತ್ತಿದ್ದಾನೆ ಪ್ರಾಣಿ || ೭ ||
****

ರಾಗ: ಮಿಶ್ರಪೀಲು    ತಾಳ: ತ್ರಿತಾಲ್ (raga, taala may differ in audio)

ಚಿಂತ್ಯಾಕೆ ಮಾಡುತಿದ್ದಿ? ಚಿನ್ಮಯನಿದ್ದಾನೆ ‼️
ಕಷ್ಟ ಬಂದಾಗ ನಾವು ಸಂಭವಿಸಬಹುದಾದ ಎಲ್ಲ ಸಂಭವನೀಯತೆಯನ್ನು ಯೋಚಿಸಿ ದಿಕ್ಕು ತಪ್ಪುತ್ತೇವೆ, ಹೆದರುತ್ತೇವೆ. ಮಾಡುವ ಕರ್ತವ್ಯದಿಂದ, ನಮ್ಮ ಧರ್ಮದಿಂದ ವಿಮುಖರಾಗುತ್ತೇವೆ. ಭಗವಂತನನ್ನು ನೆನೆದು, ನಮ್ಮ ಕರ್ತವ್ಯವನ್ನು ಮಾಡೋಣ, ಧರ್ಮ-ಕರ್ಮ ಗಳ ಫಲ ಎಲ್ಲ ಪರಮಾತ್ಮನ ಭಾರ !!!....
ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ ತೊಡಗಿತು.
ನಡೆಯುತ್ತಾ ನಡೆಯುತ್ತಾ ತಾನು ಹುಡುಕಿ ಕೊಂಡ ಸ್ಥಳಕ್ಕೆ ತಲುಪಿದ ಜಿಂಕೆಗೆ ಪ್ರಸವ ವೇದನೆ ತಾಳದಾಯಿತು. ಆ ಕ್ಷಣಕ್ಕೆ ಆಕಾಶದಲ್ಲಿ ಕಾರ್ಮೋಡಗಳು ದಟ್ಟವಾಯಿತು, ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಹತ್ತಿತು. ಇದನ್ನು ಕಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಲು ತಿರುಗಿತು. ತಿರುಗಿದ ಜಿಂಕೆಗೆ ಆಗ ಕಂಡದ್ದು ಏನೆಂದರೆ ಅದರ ಎಡಕ್ಕೆ ಒಬ್ಬ ಬೇಟೆಗಾರ ಜಿಂಕೆಗೆ ಗುರಿ ಮಾಡಿ ಬಾಣ ಹೂಡಿದ್ದಾನೆ. ಇದನ್ನು ಕಂಡು ಆಘಾತದಿಂದ ಜಿಂಕೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಹಸಿದ ಸಿಂಹ ಇದರೆಡೆಗೆ ಬರುತ್ತಿದೆ.
ಜಿಂಕೆ ತನ್ನ ಎಡಕ್ಕೆ ಹೋದರೆ ಅಲ್ಲಿ ಬೇಟೆಗಾರ ಇದ್ದಾನೆ. ಜಿಂಕೆ ತನ್ನ ಬಲಕ್ಕೆ ಹೋದರೆ ಅಲ್ಲಿ ಹಸಿದ ಸಿಂಹ ಇದೆ. ತನ್ನ ಸ್ಥಳದಿಂದ ಮುಂದಕ್ಕೆ ಹೋದರೆ ಕಾಡಿಗೆ ಬೆಂಕಿ ಬಿದ್ದಿದೆ. ತನ್ನ ಸ್ಥಳದಿಂದ ಹಿಂದಕ್ಕೆ ಸರಿದರೆ ಅಲ್ಲಿ ನದಿ ಇದೆ. ಹಾಗಾದರೆ ಈ ಕ್ಷಣಕ್ಕೆ ಗರ್ಭಿಣಿ ಜಿಂಕೆ ಏನು ಮಾಡೀತು ?...
ಈ ಕ್ಷಣಕ್ಕೆ ಜಿಂಕೆ ತನ್ನ ಗಮನವೆಲ್ಲ ತನ್ನ ಮಗುವಿಗೆ ಜನ್ಮ ನೀಡುವುದರಲ್ಲಿ ಮಾತ್ರ ಕೇಂದ್ರೀಕರಿಸಿತು. ತನ್ನ ಆತಂಕ, ಚಿಂತೆ, ದುಗುಡವನ್ನೆಲ್ಲಾ ಬದಿಗಿಟ್ಟು ಪರಮಾತ್ಮನಲ್ಲಿ ನಂಬಿಕೆ ಇಟ್ಟು ತನ್ನ ಕರ್ತವ್ಯ, ತನ್ನ ತಾಯಿ ಧರ್ಮವನ್ನು ಪಾಲಿಸುವ ಕಾರ್ಯದಲ್ಲಿ ಮಗ್ನವಾಯಿತು.
ಚಿಂತೆಯನ್ನೆಲ್ಲಾ ಚಿನ್ಮಯನಿಗೆ ಕೊಟ್ಟ ಮೇಲೆ, ಜಗದೊಡೆಯ ಜಗನ್ನಾಥನ ನಂಬಿದ ಮೇಲೆ ಎಲ್ಲವೂ ಅವನ ಭಾರ ತಾನೇ ...!!
ಕೆಲವೇ ಕ್ಷಣದಲ್ಲಿ, ದಟ್ಟವಾದ ಕಾರ್ಮೋಡಗಳಿಂದ ಕಣ್ಣು ಕೋರೈಸುವ ಮಿಂಚು ಹೊಡೆಯಿತು,  ಬೇಟೆಗಾರನ ಕಣ್ಣಿಗೆ ಕತ್ತಲು ಆವರಿಸಿತು, ಆತ ಹೂಡಿದ ಬಾಣ ಗುರಿ ತಪ್ಪಿ ಹಸಿದ ಸಿಂಹಕ್ಕೆ ತಗುಲಿತು, ದಟ್ಟವಾದ ಕರಿ ಮೋಡಗಳಿಂದ ಬಿರುಸಾಗಿ ಮಳೆ ಸುರಿಯ ತೊಡಗಿತು, ಮಳೆಯ ಆರ್ಭಟಕ್ಕೆ ಕಾಡಿಗೆ ಹತ್ತಿದ ಬೆಂಕಿ ಪ್ರಶಾಂತ ವಾಯಿತು,  ಆ ಕ್ಷಣಕ್ಕೆ ತಾಯಿ ಜೀವ ತನ್ನ ಮುದ್ದಾದ ಮಗುವಿಗೆ ಜನ್ಮ ನೀಡಿತು.ಯಾವ ಪರಿಣಾಮದ ಬಗ್ಗೆಯೂ ಯೋಚಿಸದೆ ತನ್ನ ತಾಯಿ ಧರ್ಮ ಪಾಲಿಸಿತು, ಗೆದ್ದಿತು.
ಎಳ್ಳು ಮೊನೆಯಾ ಮುಳ್ಳು ಕೊನೆಯಾ, ಹೊಳ್ಳು ಬಿಡದೆ ಒಳಗೆ ಹೊರಗೆ, ಎಲ್ಲ ಠಾವಿನಲ್ಲಿಲಕುಮಿನಲ್ಲನಿದ್ದಾನೇ. ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ, ಚಿಂತಾರತ್ನವೆಂಬೊ ಅನಂತನಿದ್ದಾನೇ.
 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)
**************