Showing posts with label ಪೋಷಿಸೆನ್ನನು ನಿರುತ ಶೇಷ ದೇವ ದೋಷ ನಾಶ shyamasundara POSHISENNANU NIRUTA SHESHA DEVA DOSHA NAASHA. Show all posts
Showing posts with label ಪೋಷಿಸೆನ್ನನು ನಿರುತ ಶೇಷ ದೇವ ದೋಷ ನಾಶ shyamasundara POSHISENNANU NIRUTA SHESHA DEVA DOSHA NAASHA. Show all posts

Wednesday 10 November 2021

ಪೋಷಿಸೆನ್ನನು ನಿರುತ ಶೇಷ ದೇವ ದೋಷ ನಾಶ ankita shyamasundara POSHISENNANU NIRUTA SHESHA DEVA DOSHA NAASHA


 

" ಶ್ರೀ ಶೇಷದೇವರ ಸ್ತುತಿ "


ಪೋಷಿಸೆನ್ನನು ನಿರುತ ಶೇಷದೇವ ।

ದೋಷ ನಾಶನಗೊಳಿಸಿ ಲೇಸಾಗಿ ಪಿಡಿ ಕರವ ।। ಪಲ್ಲವಿ ।।


ವನಧಿಶಯನಿಗೆ ತಲ್ಪ ಅನುಜ ಪೂರ್ವಜನಾ ।

ಘನ ಸೇವೆಯನು ಗೈದ ಫಣಿರಾಜನೇ ।

ವಿನಯದಲಿ ಬಿನ್ನೈಪೆ ನಿನಗ ಶನವಾದಾತ ।

ಎನಗೊಲಿದು ಪೊರೆವಂತೆ ಅನುಗ್ರಹಿಸಿ ಅನುದಿನ ।। ಚರಣ ।।


ಭೂ ಗಗನ ಪಾತಾಳ ಸಾಗರವ ವ್ಯಾಪಿಸಿದ ।

ಯೋಗ ಸಾಧನ ಶೂರ ನಾಗನಾಥ ।

ಬಾಗಿ ಬೇಡುವೆ ಭವದ ರೋಗಕೌಷಧವಾದ ।

ಭಾಗವತ ಶ್ರವಣ ಸುಖರಾಗದಲಿ ನೇ ಕೊಟ್ಟು ।। ಚರಣ ।।


ಸಾಸಿರಾಂಬಕ ನಮಿತ ಸಾಸಿರಾನನನಾದ ।

ವಾಸುಕೀಪರ ವಾರುಣೀಶ ನಿನ್ನ ।

ಹಾಸಿಗೆಯಗೈದಂಥ ಶ್ರೀ ಶ್ಯಾಮಸುಂದರನ ।

ದಾಸರಾದವರ ಸಹವಾಸ ಪಾಲಿಸಿ ನಿತ್ಯ ।। ಚರಣ ।।

***

ರಾಗ : ಕಾಂಬೋಧಿ    ತಾಳ : ಝ೦ಪೆ (raga, taala may differ in audio)


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ವನಧಿಶಯನಗೆ = ಕ್ಷೀರ ಸಮುದ್ರ ಶಯನನಾದ ಶ್ರೀ ಹರಿಗೆ 

ತಲ್ಪ = ಹಾಸಿಗೆ 

ಅನುಜ = ಶ್ರೀ ಲಕ್ಷ್ಮಣದೇವರು  

ಪೂರ್ವಜನಾ = ಶ್ರೀ ಬಲರಾಮ ದೇವರು   

" ನಿನಗಶನವಾದಾತ ಎನಗೊಲಿದು ಪೊರೆವಂತೆ ಅನುಗ್ರಹಿಸಿ ಅನುದಿನದಿ " 

ಸರ್ಪಕ್ಕೆ ಆಹಾರವಾದ ಶ್ರೀ ವಾಯುದೇವರು. ಅಂದರೆ,

ಶ್ರೀ ವಾಯುದೇವರು ಎನಗೆ ಅನುಗ್ರಹಿಸಿ ರಕ್ಷಿಸುವಂತೆ ಮಾಡುಯೆಂದು ಶ್ರೀ ದಾಸಾರ್ಯರ ವಚನ. 

" ಭವದ ರೋಗಕೌಷಧವಾದ ಭಾಗವತ ಶ್ರವಣ ಸುಖರಾಗದಲಿ ನೇ ಕೊಟ್ಟು "

ಪ್ರಸಕ್ತ ಬ್ರಹ್ಮ ಕಲ್ಪದಲ್ಲಿರುವ ಶ್ರೀ ರುದ್ರದೇವರೇ ಶ್ರೀ ಭಾವಿ ಶೇಷದೇವರು. 

ಅಂತಹ ಶ್ರೀ ಶೇಷದೇವರು ಹಿಂದಿನ ಕಲ್ಪದಲ್ಲಿ ಶ್ರೀ ಮಹಾರುದ್ರದೇವರಾಗಿದ್ದಾಗ ಶ್ರೀ ಶುಕ ಮುನಿಗಳಾಗಿ ಪ್ರಯೋಪವೇಶ ದೀಕ್ಷಾಪರನಾಗಿದ್ದ ಶ್ರೀ ಪರೀಕ್ಷಿತ ಮಹಾರಾಜನಿಗೆ ಶ್ರೀಮದ್ಭಾಗವತ ಶಾಸ್ತ್ರವನು ಶ್ರವಣ ಮಾಡಿಸಿದವರು. 

ಸಾಸಿರಾಂಬಕ ನಮಿತ = ಸಹಸ್ರಾಕ್ಷರಾದ ಶ್ರೀ ಇಂದ್ರದೇವರಿಂದ ವಂದಿತರು 

ವಾರುಣೀಶ   ವಾರುಣೀದೇವಿಯರ ಪತಿ 

" ಹಾಸಿಗೆಯಗೈದಂಥ ಶ್ರೀ ಶ್ಯಾಮಸುಂದರನ 

ದಾಸರಾದವರ ಸಹವಾಸ ಪಾಲಿಸಿ ನಿತ್ಯ "

ನಿನ್ನನ್ನೇ ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡ ಯೆನ್ನ ಬಿಂಬ ರೂಪಿಯಾದ ಶ್ರೀ ಶ್ಯಾಮಸುಂದರೋsಭಿನ್ನ ಶ್ರೀ ಹರಿಯ ದಾಸರ ಸಹವಾಸವನ್ನು ಎನಗಿತ್ತು ನನ್ನನ್ನು ನಿತ್ಯದಲಿ ಪರಿಪಾಲಿಸು ಎಂದು ಶ್ರೀ ಶ್ಯಾಮಸುಂದರ ದಾಸರು ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ.

****