Showing posts with label ಬಿಟ್ಟು ಬನ್ನಿರೊ ಸಂಸಾರದ್ಹಂಬಲ hayavadana. Show all posts
Showing posts with label ಬಿಟ್ಟು ಬನ್ನಿರೊ ಸಂಸಾರದ್ಹಂಬಲ hayavadana. Show all posts

Saturday, 22 May 2021

ಬಿಟ್ಟು ಬನ್ನಿರೊ ಸಂಸಾರದ್ಹಂಬಲ ankita hayavadana

ಬಿಟ್ಟು ಬನ್ನಿರೊ ಸಂಸಾರದ್ಹಂಬಲ ll ಪ ll


ಸೃಷ್ಟಿ ಪತಿಯ ಸೇರಿ ನೀವು ಸುಖಿಸಬನ್ನಿರೊ ll ಅ ಪ ll


ಹೆಂಡರು ಮಕ್ಕಳು ಎಂಬೋ ಹಂಬಲ ಬೇಡಿರೊ

ಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯ ll 1 ll


ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊ

ನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು ll 2 ll


ನಡು ಬೀದಿಯಲಿ ಇವನ ಎಳೆದು ಸೆಳೆವರೊ

ಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ ll 3 ll


ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊ

ಚಂಡ ಯಮನ ದೂತರು ಬಂದು ಎಳೆದು ಒಯ್ವರೊ ll 4 ll


ಮುಟ್ಟಿ ಭಜಿಸಿರೊ ಹಯವದನನಂಘ್ರಿಯ

ನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವನೊ ll 5 ll 

***

- ಶ್ರೀವಾದಿರಾಜರು

ರಾಮಾಯಣದಲ್ಲಿ ಶ್ರೀರಾಮಚಂದ್ರ ಪರಂಧಾಮಕ್ಕೆ ತೆರಳುವ ಮುನ್ನ ಮುಕ್ತಿ ಯೋಗ್ಯರನ್ನು 'ಸಮಾಯಾತ ಸಮಾಯಾತ....' ಎಂದು ಕರೆದ.  ಅದರಂತೆ ಇಲ್ಲಿ ಶ್ರೀವಾದಿರಾಜರು 'ಬನ್ನಿರೊ - ಬನ್ನಿರೊ' ಎಂದು ಕರೆದಂತಿದೆ.  ನಶ್ವರವಾದ ಸುಖ ದುಃಖ ಮಿಶ್ರಿತವಾದ, ಹುಟ್ಟು ಸಾವುಗಳ ಪ್ರವಾಹದಲ್ಲಿ ಮುಳುಗಿಸುವ ಈ ಸಂಸಾರದಿಂದ ನಿತ್ಯ ಸುಖದ ತಾಣಕ್ಕೆ ಬನ್ನಿರಿ ಎಂದು ಕರೆದದ್ದು ಎಲ್ಲರಿಗೂ ನವಚೇತನವನ್ನು ತುಂಬಿಸಿದಂತಿದೆ.


ಇಲ್ಲಿ ರಾಜರು ಬಹು ಸುಂದರವಾಗಿ ಈ ಸಂಸಾರ ಜಂಜಾಟದ, ಸುಖಾಭಾಸಗಳ, ನೋವು ನಲಿವುಗಳ ಚಿತ್ರಣವನ್ನು ಕೊಡುವರು.  ಇದು ಎಲ್ಲರ ಅನುಭವವಾದರೂ ಸಂಸಾರದಲ್ಲಿ ಮುಳುಗಿದ್ದರಿಂದ ಇದರ ಪರಿವು ಆಗದಾಗಿದೆ.  ಪುರಂದರರು ಒಂದು ಕಡೆ ಸಂಸಾರವನ್ನು 'ಸುಳ್ಳು ಸಂಸಾರ ಸುಳಿಗೆ ಸಿಲುಕಬೇಡಿ' ಎಂದು ಎಚ್ಚರಿಸಿದರು.  


ಈ ಸಂಸಾರದ ಸುಳಿಯಿಂದ ಹೊರಬರಲು ರಾಜರು ಒಂದು ಉಪಾಯವನ್ನೂ ಹೇಳಿದರು.  'ಮುಟ್ಟಿ ಭಜಿಸಿರೊ ಹಯವದನಂಘ್ರಿಯ' l  ಏಕೆಂದರೆ ಅವನೇ ಅನಿಮಿತ್ತ ಬಂಧುವಾಗಿ ಮುಕ್ತಿಮಾರ್ಗವನ್ನು ತೋರಿಸಿ ಮುಕ್ತಿಯನ್ನು ಕೊಡುವವನಾಗಿದ್ದಾನೆ.  ವಿಜಯದಾಸರೂ ಅವರ ಕೃತಿಯಲ್ಲಿ 'ಸಂಸಾರಾಂಬುಧಿಗೆ ನಿನ್ನ ನಾಮವೆ ನಾವೆ' ಎಂದಿರುವರು.


ಜೀವನದುದ್ದಕ್ಕೂ ಏನು ಮಾಡಿದರೂ , ಎಂತು ಗಳಿಸಿದರೂ, ಏನೇ ಪ್ರಶಸ್ತಿಗಳ ಪಡೆದರೂ ಯಾವದೂ ಹಿಂದೆ ಬಾರವು.  ಚಂಡಯಮ ಎಳೆಯದೆ ಬಿಡನು.  'ಮೆಲ್ಲನೆ  ಮಾಧವನ ಮನವ ಮೆಚ್ಚಿಸಬೇಕು' ಎಂದಂತೆ ಅವನ ಒಲಿಮೆಗೆ ಒದ್ದಾಡುವದು ಅನಿವಾರ್ಯ. 

* * * 

ಹರಿದಾಸ ಹೃದಯ ಗ್ರಂಥದಿಂದ