ಬಿಟ್ಟು ಬನ್ನಿರೊ ಸಂಸಾರದ್ಹಂಬಲ ll ಪ ll
ಸೃಷ್ಟಿ ಪತಿಯ ಸೇರಿ ನೀವು ಸುಖಿಸಬನ್ನಿರೊ ll ಅ ಪ ll
ಹೆಂಡರು ಮಕ್ಕಳು ಎಂಬೋ ಹಂಬಲ ಬೇಡಿರೊ
ಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯ ll 1 ll
ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊ
ನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು ll 2 ll
ನಡು ಬೀದಿಯಲಿ ಇವನ ಎಳೆದು ಸೆಳೆವರೊ
ಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ ll 3 ll
ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊ
ಚಂಡ ಯಮನ ದೂತರು ಬಂದು ಎಳೆದು ಒಯ್ವರೊ ll 4 ll
ಮುಟ್ಟಿ ಭಜಿಸಿರೊ ಹಯವದನನಂಘ್ರಿಯ
ನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವನೊ ll 5 ll
***
- ಶ್ರೀವಾದಿರಾಜರು
ರಾಮಾಯಣದಲ್ಲಿ ಶ್ರೀರಾಮಚಂದ್ರ ಪರಂಧಾಮಕ್ಕೆ ತೆರಳುವ ಮುನ್ನ ಮುಕ್ತಿ ಯೋಗ್ಯರನ್ನು 'ಸಮಾಯಾತ ಸಮಾಯಾತ....' ಎಂದು ಕರೆದ. ಅದರಂತೆ ಇಲ್ಲಿ ಶ್ರೀವಾದಿರಾಜರು 'ಬನ್ನಿರೊ - ಬನ್ನಿರೊ' ಎಂದು ಕರೆದಂತಿದೆ. ನಶ್ವರವಾದ ಸುಖ ದುಃಖ ಮಿಶ್ರಿತವಾದ, ಹುಟ್ಟು ಸಾವುಗಳ ಪ್ರವಾಹದಲ್ಲಿ ಮುಳುಗಿಸುವ ಈ ಸಂಸಾರದಿಂದ ನಿತ್ಯ ಸುಖದ ತಾಣಕ್ಕೆ ಬನ್ನಿರಿ ಎಂದು ಕರೆದದ್ದು ಎಲ್ಲರಿಗೂ ನವಚೇತನವನ್ನು ತುಂಬಿಸಿದಂತಿದೆ.
ಇಲ್ಲಿ ರಾಜರು ಬಹು ಸುಂದರವಾಗಿ ಈ ಸಂಸಾರ ಜಂಜಾಟದ, ಸುಖಾಭಾಸಗಳ, ನೋವು ನಲಿವುಗಳ ಚಿತ್ರಣವನ್ನು ಕೊಡುವರು. ಇದು ಎಲ್ಲರ ಅನುಭವವಾದರೂ ಸಂಸಾರದಲ್ಲಿ ಮುಳುಗಿದ್ದರಿಂದ ಇದರ ಪರಿವು ಆಗದಾಗಿದೆ. ಪುರಂದರರು ಒಂದು ಕಡೆ ಸಂಸಾರವನ್ನು 'ಸುಳ್ಳು ಸಂಸಾರ ಸುಳಿಗೆ ಸಿಲುಕಬೇಡಿ' ಎಂದು ಎಚ್ಚರಿಸಿದರು.
ಈ ಸಂಸಾರದ ಸುಳಿಯಿಂದ ಹೊರಬರಲು ರಾಜರು ಒಂದು ಉಪಾಯವನ್ನೂ ಹೇಳಿದರು. 'ಮುಟ್ಟಿ ಭಜಿಸಿರೊ ಹಯವದನಂಘ್ರಿಯ' l ಏಕೆಂದರೆ ಅವನೇ ಅನಿಮಿತ್ತ ಬಂಧುವಾಗಿ ಮುಕ್ತಿಮಾರ್ಗವನ್ನು ತೋರಿಸಿ ಮುಕ್ತಿಯನ್ನು ಕೊಡುವವನಾಗಿದ್ದಾನೆ. ವಿಜಯದಾಸರೂ ಅವರ ಕೃತಿಯಲ್ಲಿ 'ಸಂಸಾರಾಂಬುಧಿಗೆ ನಿನ್ನ ನಾಮವೆ ನಾವೆ' ಎಂದಿರುವರು.
ಜೀವನದುದ್ದಕ್ಕೂ ಏನು ಮಾಡಿದರೂ , ಎಂತು ಗಳಿಸಿದರೂ, ಏನೇ ಪ್ರಶಸ್ತಿಗಳ ಪಡೆದರೂ ಯಾವದೂ ಹಿಂದೆ ಬಾರವು. ಚಂಡಯಮ ಎಳೆಯದೆ ಬಿಡನು. 'ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು' ಎಂದಂತೆ ಅವನ ಒಲಿಮೆಗೆ ಒದ್ದಾಡುವದು ಅನಿವಾರ್ಯ.
* * *
ಹರಿದಾಸ ಹೃದಯ ಗ್ರಂಥದಿಂದ