Showing posts with label ಕೇಳಮ್ಮಾ ತಂಗಿ ಕೇಳಮ್ಮಾ ಕೇಳಿ ಪುರಾಣದಿ shyamasundara KELAMMA TANGI KELAMMA KELI PURAANADI. Show all posts
Showing posts with label ಕೇಳಮ್ಮಾ ತಂಗಿ ಕೇಳಮ್ಮಾ ಕೇಳಿ ಪುರಾಣದಿ shyamasundara KELAMMA TANGI KELAMMA KELI PURAANADI. Show all posts

Tuesday 5 October 2021

ಕೇಳಮ್ಮಾ ತಂಗಿ ಕೇಳಮ್ಮಾ ಕೇಳಿ ಪುರಾಣದಿ ankita shyamasundara KELAMMA TANGI KELAMMA KELI PURAANADI



ಕೇಳಮ್ಮಾ ತಂಗಿ ಕೇಳಮ್ಮಾ ।। ಪಲ್ಲವಿ ।।


ಕೇಳಿ ಪುರಾಣದಿ ಪೇಳಿದ ಕೃಷ್ಣನ ।

ಲೀಲೆಯ ಪಾಡುತ " ಬಾಳಮ್ಮ " ।। ಚರಣ ।।

ನಿಷ್ಟಿಲಿಂದ ಬಲು ಶಿಷ್ಯಳಾಗುತಾ ।

ದುಷ್ಟರಿಂದ " ದೂರಾಗಮ್ಮ  ।। ಚರಣ ।।


ಹರಿದಾಸರ ಪದ ಹರುಷದಿ ಪಾಡುತ ।

ಗುರು ಹಿರಿಯರ ಮನ " ಕೊಪ್ಪಮ್ಮ " ।। ಚರಣ ।।


ಹಾಳು ಹರಟೆಯಲ್ಲಿ ಕಾಲ ಕಳೆಯದೆ ।

ಶೀಲವಂತಿ " ನೀ ನಾಗಮ್ಮ " ।। ಚರಣ ।।


ವಿದ್ಯಯ ಕಲಿತು ಬುದ್ದಿ ವಂತಳಾ -

ಗಿದ್ದರೆ ಸುಖಶತ " ಸಿದ್ಧಮ್ಮಾ " ।। ಚರಣ ।।


ವಂದಿಸಿ ತುಲಸಿ ವೃಂದಾವನ ಪೂಜಿಸಿ ।

ಮುಂದೆ ನಿನಗೆ " ಆನಂದಮ್ಮ " ।। ಚರಣ ।।


ಹೀನರ ಬೆರೆಯದೆ ಮೌನ ವ್ರತದಲಿ ।

ಜ್ಞಾನಿ ಜನರ " ನೀನರಸಮ್ಮ " ।। ಚರಣ ।।


ಮೂಢ ಜನರ ಒಡನಾಡದೆ ಭಕ್ತಿಲಿ ।

ಮಾಡು ಸಜ್ಜನರ " ಸಂಗಮ್ಮ " ।। ಚರಣ ।।

ಧರ್ಮದಿಂದ ಸತ್ಕರ್ಮ ಮಾಡುತ ।

ನಿರ್ಮಲಗೊಳಿಸಂತ " ರಂಗಮ್ಮ " ।। ಚರಣ ।।


ಪವನ ಪಿತನ ಕಥಾ ಶ್ರವಣವೆ ಪುಣ್ಯವು ।

ಭವವಿದು ಕತ್ತಲು " ಕಾಳಮ್ಮ " ।। ಚರಣ ।।


ಸದನಕೆ ಬಂದಿಹ ಬುಧರಾದರಿಸಲು ।

ಮುದ ಬಲು ನಿನಗಿದ " ರಿಂದಮ್ಮ " ।। ಚರಣ ।।


ಎಂದೆಂದಿಗು ಪರನಿಂದೆಯ ಮಾಡದೆ ।

ಮಂದಿರದಿರುವುದೆ " ಚಂದಮ್ಮ " ।। ಚರಣ ।।


ಸಾರಿದ ಜನರಘ ದೂರಗೈದು ಹರಿ ।

ತೋರುವ ನಿಜ ಗುರು " ಈರಮ್ಮ " ।। ಚರಣ ।।


ಅತ್ತಿಯ ಮನೆಗೆ ಹೆತ್ತವರಿಗೆ ।

ಉತ್ತಮ ಕೀರುತಿ " ತಾರಮ್ಮ " ।। ಚರಣ ।।


ಗೋ ವಿಪ್ರಾವಳಿ ಸೇವಿಸುತ್ತಿರುವುದೆ ।

ಕೋವಿದರಿಗೆ ಬಲು " ಜೀವಮ್ಮ " ।। ಚರಣ ।।


ಭವದೊಳಗೆ ಪರದೇವನೆ ಪತಿಯಂದು ।

ಭಾವಿಸುತಲಿ ಪಡಿ " ಭೋಗಮ್ಮ " ।। ಚರಣ ।।


ಭೇದ ಜ್ಞಾನ ಸಂಪಾದಿಸು ಕ್ಷಮಿಸುವ ।

ಶ್ರೀಧರ ನಿನ್ನಪ " ರಾಧಮ್ಮ " ।। ಚರಣ ।।


ಕೋಪದಿ ಪರರಿಗೆ ತಾಪವ ಬಡಿಸಲು ।

ಲೇಪವಾಗುವದು " ಪಾಪಮ್ಮ " ।। ಚರಣ ।।


ಇಂಗಡಲಾತ್ಮಜೆಯಂಘ್ರಿ ಸರೋಜಕೆ ।

ಭೃಂಗಳೆಣಿಸು ಸತಿ " ತುಂಗಮ್ಮ " ।। ಚರಣ ।।


ದಾಸ ಜನರ ಸಹವಾಸದೊಳಗಿರುವುದೆ ।

ಕಾಶಿಗಿಂತ ವಿ " ಶೇಷಮ್ಮ " ।। ಚರಣ ।।


ಕಲಿಯುಗದಲಿ ಸಿರಿ ನಿಲಯನ ನೆನೆದರೆ ।

ಸುಲಭ ಮುಕ್ತಿ ತಿಳಿ " ಕಂದಮ್ಮ " ।। ಚರಣ ।।


ಪತಿಯ ಸದ್ಗತಿಗೆ ಗತಿಯಂದರಿತಿಹ ।

ಮತಿಯುತ ಸತಿಯೆ " ಯಮನಮ್ಮ " ।। ಚರಣ ।।


ಮಧ್ವ ಸಿದ್ಧಾಂತದ ಪದ್ಧತಿ ತಪ್ಪದೆ ।

ಇದ್ದರೆ ಹರಿ ಗತಿ " ಮುದ್ದಮ್ಮ " ।। ಚರಣ ।।


ಸೋಗಿಗೆ ನೀ ಮರುಳಾಗಿ ನಡೆದರೆ ।

ಯೋಗಿ ಜನರ ಮನ " ಕಲ್ಲಮ್ಮ " ।। ಚರಣ ।।

ಶೀಲ ಗುಣದಿ ಪಾಂಚಾಲಿಯು ಎಲ್ಲ ।

ಬಾಲೆಯರೊಳು ತಾ " ಮೇಲಮ್ಮ " ।। ಚರಣ ।।


ನೆಮಾಡಿ ನಡೆದರೆ ಪ್ರೇಮದಿ ಸಲಹುವ ।

ಶ್ಯಾಮಸುಂದರನು " ಸತ್ಯಮ್ಮ " ।। ಚರಣ ।।

***


ಭಗವಂತನ ಪ್ರಸಾದಕ್ಕೆ ಸಜ್ಜನರು ಮಾಡಬೇಕಾದ ಸಾಧನೆಯನ್ನು ಅಚ್ಛ ಕನ್ನಡದಲ್ಲಿ ಸರಳ ಸುಂದರವಾಗಿ ಜನಪದ ಶೈಲಿಯಲ್ಲಿ ಶ್ರೀ ಶ್ಯಾಮಸುಂದರದಾಸರು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾರೆ. 

***