Showing posts with label ಇಂದು ಎನ್ನ ಮನೆಗೆ vijaya vittala suladi ಹರಿ ಪ್ರಾರ್ಥನಾ ಸುಳಾದಿ INDU ENNA MANEGE HARI PRAARTHANA SULADI. Show all posts
Showing posts with label ಇಂದು ಎನ್ನ ಮನೆಗೆ vijaya vittala suladi ಹರಿ ಪ್ರಾರ್ಥನಾ ಸುಳಾದಿ INDU ENNA MANEGE HARI PRAARTHANA SULADI. Show all posts

Sunday 8 December 2019

ಇಂದು ಎನ್ನ ಮನೆಗೆ vijaya vittala ankita suladi ಹರಿ ಪ್ರಾರ್ಥನಾ ಸುಳಾದಿ INDU ENNA MANEGE HARI PRAARTHANA SULADI

Audio by Mrs. Nandini Sripad


Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀಹರಿಯ ಪ್ರಾರ್ಥನಾ ಸುಳಾದಿ 

( ಐತಿಹಾಸಿಕ - ಮಾಳಿಗಿ ಶ್ರೀನಿವಾಸಾಚಾರ್ಯರ ಮನೆಯ ವಿಜಯವಿಠ್ಠಲ ದೇವರು ಒಲಿದು ಬಂದಾಗ ಶ್ರೀಹರಿಯ ಪ್ರಸಾದ ವಿಷಯ ಪ್ರಾರ್ಥನೆ )

 ರಾಗ ಶಂಕರಾಭರಣ 

 ಧ್ರುವತಾಳ 

ಇಂದು ಎನ್ನ ಮನೆಗೆ ಬಂದ ಕಾರಣವೇನು
ಇಂದಿರಾರಮಣ ಗೋವಿಂದ ಕೃಷ್ಣ
ಸುಂದರವಿಗ್ರಹ ಮಂದರಧರ ಸುಖ -
ಸಾಂದ್ರ ಗುಣಾರವಿಂದ ಚರಣ ಉ -
ಪೇಂದ್ರ ಇಂದ್ರಾನುಜ ಕಂದರ್ಪಪಿತ ದಯ -
ಸಿಂಧುವೆ ಎನಗೆ ನೀನಿಂದೊಲಿದದು
ಎಂದಿಗೆಂದಿಗೆ ಇನಿತೆಂದು ತಿಳಿದುದಿಲ್ಲ
ಹಿಂದರುಹಲಿಲ್ಲೆನಗೆ ಒಂದರ ಅರಿವಿಲ್ಲ
ಒಂದು ಪರಮ ಎಳೆಗಂದಿ ಗೋವು ತನ್ನ
ಕಂದನ್ನ ನೋಡಿ ಆನಂದ ಬಡುವಂತೆ
ಇಂದು ದಾಸಗೆ ಬೇಕೆಂದು ಈ ಪರಿಯಲ್ಲಿ
ಸಂದರುಶನವಿತ್ತ ವೃಂದಾವನಪ್ರಿಯ
ಒಂದೆ ದೈವವೆ ನಮ್ಮ ವಿಜಯವಿಠ್ಠಲರೇಯ ಪು -
ರಂದರಗೊಲಿದಂಥ ನಂದನಂದನ ರಂಗ ॥ 1 ॥

 ಮಟ್ಟತಾಳ 

ಧ್ಯಾನ ಪೂರ್ವಕದಿಂದ ಜ್ಞಾನವಧಿಕರಾದ
ನೀನೆ ನೀನೆ ಎಂಬ ಶ್ರೀನಿವಾಸಾಚಾರ್ಯರ
ಮಾನಸದಲಿ ಪೊಳೆವ ಮಾನಿಸ ರೂಪನೇ
ಏನೆಂಬೆನೂ ನಿನ್ನ ನಾನಾ ವಿಗಡಕ್ಕೆ
ದಾನವಾಂತಕ ರಂಗ ವಿಜಯವಿಠ್ಠಲರೇಯ 
ಜ್ಞಾನ ಪುಂಜರಿಂದ ಹೀನಗೊಲಿದದೇನೋ ॥ 2 ॥

 ತ್ರಿವಿಡಿತಾಳ 

ಅಭಿಷೇಕವಾದ ಉತ್ತಮ ಮನ್ನಣೆಯಿಲ್ಲ
ಆಭರಣ ವಸನ ಗಂಧಾಕ್ಷತೆ ಮೊದಲಿಲ್ಲ
ಶೋಭನವಾದ ಕುಸುಮ ತುಲಸಿಗಳಿಲ್ಲ
ಸೌಭಾಗ್ಯವಾದ ಧೂಪಾದಿ ವೋದನವಿಲ್ಲ
ಆ ಭಕ್ಷ್ಯ ಪಾಯಸ ಪರಿಪಡಿಗಳಿಲ್ಲ
ಅಭಿವಂದನೆ ಸರ್ವ ಪೂಜಾಲಕ್ಷಣವಿಲ್ಲ
ಕುಭವದಲ್ಲಿನ ಲೋಭಿಯ ಸೇರಲು
ಲಾಭವೇನು ಪೇಳು ಜಯಜಯನೇ
ಶ್ರೀ ಭೂರಮಣ ನಮ್ಮ ವಿಜಯವಿಠ್ಠಲ ನಿನ್ನ
ಸ್ವಾಭಾವ ಈ ಪರಿ ನಿನಗೆ ಪೇಳುವರಾರೋ ॥ 3 ॥

 ಅಟ್ಟತಾಳ 

ಕಾಲಕಾಲಕೆ ಸ್ತೋತ್ರ ಕಾಲಕಾಲಕೆ ಧೂಪ
ಕಾಲಕಾಲಕೆ ದೀಪ ಕಾಲಕಾಲಕೆ ಎಡೆ
ಕಾಲಕಾಲಕೆ ಪ್ರೀತಿ ಕಾಲಕಾಲಕೆ ಇರಲು
ಹಾಲುಸಾಗರ ಬಿಟ್ಟು ಆ ಲವಣಾಬ್ಧಿಲಿ
ಆಲಯಬಿಗಿದವನೊಲು ಮಾಡಿದೆ ದೇವ
ವ್ಯಾಳಿವ್ಯಾಳಿಗೆ ಕೃಪಾಳಿನ ಕೈಯಿಂದ
ವಾಲಗವನು ಬಿಟ್ಟು ಕೀಳುಮಾನವಗೊಲಿದೆ
ಆಳು ಚನ್ನಾಗಿ ಇನ್ನಾಳು ವಿಜಯವಿಟ್ಠಲ 
ಲೋಕದೊಳಗೆ ನಿನ್ನಾಳಿನಾಳಿನ ತೊತ್ತು ॥ 4 ॥

 ಆದಿತಾಳ 

ಉದ್ಧರಿಸುವದು ಜೀಯ ಶುದ್ಧಮಂದಮತಿಯನು
ಪೊದ್ಧಿಕೊಂಡು ನಿರುತದಲ್ಲಿ ಒದ್ದು ಸಕಲದುರಿತವನ್ನು
ಇದ್ದು ಇಲ್ಲದಂತೆ ಮಾಡೊ ಸಿದ್ಧಾರ್ಥವ ನೀವುತ
ಮುದ್ದುಲಕುಮಿರಮಣನೆ ಮಿದ್ದು ಮನವ ಸರಳಮಾಡೊ
ಶುದ್ಧಕಾಯ ವಿಜಯವಿಠ್ಠಲ 
ಬುದ್ಧಿಪಲ್ಲಟಾಗದಂತೆ ತಿದ್ದಿ ಅಂತರಂಗದಲ್ಲಿ 
ಇದ್ದು ಸಂತೋಷವನೆ ಪಡಿಸೊ ॥ 5 ॥

 ಜತೆ 

ಮೆಚ್ಚಿ ನೆಚ್ಚಿಸಲಾರೆ ಅರ್ಚಿಸಿ ಒಲಿಸಲಾರೆ
ನಿಚ್ಚ ನೀನೆ ಪೊರಿಯೋ ವಿಜಯವಿಠ್ಠಲ ಹರಿಯೆ ॥
*********

ಈ ಸುಳಾದಿಯ ರಚನೆಯ ಸಂದರ್ಭ - 

ಒಮ್ಮೆ ಶ್ರೀ ವಿಜಯದಾಸರು ತೀರ್ಥಕ್ಷೇತ್ರ ಸಂಚಾರ ಮಾಡುವ ಉದ್ದೇಶದಿಂದ ಚೀಕಲಪರವಿಯಿಂದ ಹೊರಟು ರಾಯಚೂರನ್ನು ತಲುಪುತ್ತಾರೆ. ಆ ಕಾಲದಲ್ಲಿ ಮಾಳಿಗಿ ಶ್ರೀನಿವಾಸಾಚಾರ್ಯ ರೆಂಬ ಜ್ಞಾನಿಗಳು ರಾಯಚೂರಿನಲ್ಲಿ ಇದ್ದವರು. ಅವರು ಪ್ರತಿನಿತ್ಯ ತಮ್ಮ ಪರಂಪರಾಗತ ವಿಜಯವಿಟ್ಠಲ ಪ್ರತಿಮೆಯನ್ನು ಬಹುವೈಭವದಿಂದ ಅರ್ಚಿಸುತ್ತಾ ಇದ್ದರು. ಈ ವಿಜಯವಿಟ್ಠಲ ಸ್ವಾಮಿಯು ತಾನು ಇನ್ನು ಮುಂದೆ ಶ್ರೀವಿಜಯದಾಸಾರ್ಯರಲ್ಲಿದ್ದು ಪೂಜೆಕೈಗೊಳ್ಳುವ ಸಂಕಲ್ಪವನ್ನು ಅಭಿವ್ಯಕ್ತಿ ಮಾಡಿ , ಶ್ರೀನಿವಾಸಾಚಾರ್ಯರಿಗೆ ತನ್ನನ್ನು ಶ್ರೀವಿಜಯದಾಸಾರ್ಯರಿಗೆ ಒಪ್ಪಿಸುವಂತೆ ಸ್ವಪ್ನದಲ್ಲಿ ಆಜ್ಞೆಮಾಡಿದ. ಮರುದಿನವೇ ಶ್ರೀದಾಸಾರ್ಯರು ಶ್ರೀಆಚಾರ್ಯರನ್ನು ಭೋಜನಕ್ಕೆ ಆಹ್ವಾನಿಸಲು , ಆಚಾರ್ಯರ ಮನೆಗೇ ಗೋಪಾಳಕ್ಕೆ ದಯಮಾಡಿದರು. ಶ್ರೀಆಚಾರ್ಯರು ನಮ್ಮ ವಿಜಯವಿಟ್ಠಲನು ಮುಂದೆ ತಮ್ಮಿಂದ ಪೂಜೆಗೊಳ್ಳಲು ಇಚ್ಛಿಸಿದ್ದಾನೆಂದು ತಮಗೆ ಸ್ವಪ್ನವಾದ ವಿಷಯವನ್ನು ಶ್ರೀದಾಸರಿಗೆ ತಿಳಿಸಿ , ಮಾರನೆಯ ದಿವಸ ವಿಟ್ಠಲನ ಪ್ರಸಾದ ನಮ್ಮಲ್ಲಿಯೇ ಸ್ವೀಕರಿಸಿ ಶ್ರೀವಿಜಯವಿಟ್ಠಲನನ್ನು ಕರೆದೊಯ್ಯಲು ವಿಜ್ಞಾಪಿಸಿಕೊಂಡರು. ಮರುದಿವಸ ಶ್ರೀದಾಸರು ಶ್ರೀಆಚಾರ್ಯರ ಮನೆಗೆ ದಯಮಾಡಿ , ಪೂಜೆಯನ್ನು ಸಂಪೂರ್ಣನೋಡಿ , ಪ್ರತಿಮಾಂತರ್ಗತ ಶ್ರೀವಾಯುದೇವರ ಅಂತರ್ಯಾಮಿ ಸಚ್ಚಿದಾನಂದ ಶ್ರೀವಿಜಯವಿಟ್ಠಲ ಸ್ವಾಮಿಯನ್ನು ಸಂದರ್ಶಿಸಿದರು. ಆ ಸಂದರ್ಭದಲ್ಲಿ ಶ್ರೀದಾಸರು ಶ್ರೀವಿಜಯವಿಟ್ಠಲನ ಸನ್ನಿಧಿಯಲ್ಲಿ ಹಾಡಿ , ನರ್ತಿಸಿದ ಪದ " ಈತನೀಗ ವಿಜಯವಿಠ್ಠಲ " . 
ಶ್ರೀಆಚಾರ್ಯರು ಅದುವರೆಗೂ ತಮ್ಮಲ್ಲಿದ್ದ ಶ್ರೀಸ್ವಾಮಿಯ ಅಲಂಕಾರದ ಒಡವೆಗಳೊಂದಿಗೆ ಶ್ರೀವಿಜಯದಾಸಾರ್ಯರಿಗೆ ಒಪ್ಪಿಸಿ , ಶ್ರೀವಿಜಯವಿಟ್ಠಲನ ಅಪ್ಪಣೆಯನ್ನು ನೆರವೇರಿಸಿದರು. 

ಶ್ರೀವಿಜಯದಾಸಾರ್ಯರು ಆ ವಿಟ್ಠಲಸ್ವಾಮಿಯನ್ನು ತಮ್ಮಲ್ಲಿಗೆ ಕರೆತಂದರು. ಮರುದಿವಸ ಅತ್ಯಂತ ವಿಜೃಂಭಣೆಯಿಂದ ನಡೆದ ಪೂಜಾ ನಂತರ ಶ್ರೀದೇವರನ್ನು ಭುಜಂಗಿಸುವ ಮುನ್ನ ತಮಗೆ ತೋರಿದ ಭಾವವನ್ನು ಶ್ರೀವಿಜಯವಿಟ್ಠಲನಲ್ಲಿ ನಿವೇದಿಸುತ್ತಿದ್ದಾರೆ ಶ್ರೀವಿಜಯದಾಸಾರ್ಯರು. ಅದೇ ಈ ಸುಳಾದಿ .
********