Showing posts with label ಶ್ರೀಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪರೀ ಪೃಥುವಿಯೊಳು ಧನ್ಯರು lakshmikanta. Show all posts
Showing posts with label ಶ್ರೀಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪರೀ ಪೃಥುವಿಯೊಳು ಧನ್ಯರು lakshmikanta. Show all posts

Sunday 1 August 2021

ಶ್ರೀಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪರೀ ಪೃಥುವಿಯೊಳು ಧನ್ಯರು ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಶ್ರೀಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ-

ರೀ ಪೃಥುವಿಯೊಳು ಧನ್ಯರು ಪ


ಗೋಪಿನಾಥ ಪದಾಬ್ಜ ಮಧುಪ ದ-

ಯಾ ಪಯೋನಿಧಿ ಸುಜನರಂತಃ-

ಸ್ತಾಪಹಾರಕ ಗೋಪ ಸಕಲ ಕ-

ಲಾಪವಿದ ತಾಪತ್ರಯಾಪಹ ಅ.ಪ.


ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು

ಹೀರ ವರ್ಣರು ಬಂದು ಕೇಳಲು

ತೋರಿ ತುರುಗಳ ಗತಿಯ ಸೂರ್ಯನ

ತೋರಿ ತಮ್ಮಯ ಪೋರ ವಯಸನು

ಸೂರಿಗಳೇ ನೀವರಿಯರೆನ್ನುತ

ಚಾರು ಉತ್ತರವಿತ್ತ ಧೀರರ 1

ಭೂದೇವನನು ಕೊಂದು ಬಾಧೆಗಾರದೆ ನೃಪ

ತಾ ದೈನ್ಯದಲಿ ನಿಂದು ಬೇಡಲು

ಮಾಧವನ ಶ್ರೀ ಪಾದ ಪದ್ಮಾ-

ರಾಧನೆಯ ತೀರ್ಥವನು ಪ್ರೋಕ್ಷಿಸಿ

ಆದರದಲೀಕ್ಷಿಸುತ ಭೂಪನ

ಕಾದ ಕಾಂಚನದಂತೆ ಮಾಡಿದ 2

ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ

ಮಂಕುಗಳಾ ಡೊಂಕು ತಿದ್ದಲು

ಬಿಂಕದಲಿ ತರಿಸಿ ಗೇರೆಣ್ಣೆ

ಪಂಕದೊಳಗದ್ದಿರುವ ವಸ್ತ್ರಕೆ

ಶಂಖೋದದಿಂ ಕಲುಷ ಹಾರಿಸಿ

ಕಿಂಕರ ಮನಶಂಕೆ ಬಿಡಿಸಿದ 3

ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ

ನರರು ತಾವರಿಯದೆ ಜರಿಯುತ್ತಿರೆ

ಹರುಷದಿಂದಲಿ ಹಸಿಯ ವಸ್ತುಗ-

ಳಿರವ ತೋರಿಸಿ ಮರುಳ ನೀಗಿಸಿ

ಶರಣು ಶರಣೆನಲವರ ಪಾಲಿಸಿ

ಮೆರೆದ ಬಹು ಗಂಭೀರ ಗುರುವರ 4

ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ

ನಾರಸಿಂಹನ ನೆಲಸಿ

ಊರು ಮಂದಿಯು ನೋಡುತಿರಲಾ-

ವಾರಿ ಮಧ್ಯದಿ ಬಂದ ಗಂಗೆಗೆ

ಸೀರೆ ಕುಪ್ಪಸ ಬಾಗಿನಂಗಳ

ಧಾರೆಯೆರೆದಪಾರ ಮಹಿಮರ 5

ವ್ಯಾಸರಾಜರ ಫಣಿ ಬಂಧ ನಿವಾರಿಸಿ

ಭಾಷಿಸಿ ಫಣಿಪನ್ನ ತೋಷಿಸಿ

ಕಾಶಿ ಗಯಾ ಶ್ರೀ ಮುಷ್ಣದ್ವಾರಕ

ಶೇಷಗಿರಿ ಮೊದಲಾದ ಪುಣ್ಯ ಪ್ರ-

ದೇಶಗಳ ಸಂಚರಿಸಿ ಭಕ್ತರ

ದೋಷರಾಶಿಯ ನಾಶಗೈಸಿದ 6

ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ

ನಿತ್ಯ ಮಹೋತ್ಸವಗೊಳುತ

ಮುತ್ತಿನಂಗಿಯ ಮೇಲ್ಕುಲಾವಿಯು

ರತ್ನ ಕೆತ್ತಿದ ಕರ್ಣಕುಂಡಲ

ಬಿತ್ತರದಿ ಧರಿಸುತ್ತ ರಥವನು

ಹತ್ತಿ ಬರುತಿಹ ಸ್ತುತ್ಯ ಬಿರುದಿನ 7

ಆರ ಬೃಂದಾವನ ಸೇವೆಯ ಮಾಡಲು

ಕ್ರೂರ ಭೂತಗಳೆಲ್ಲ ದೂರವು

ಆರ ಬೃಂದಾವನದ ಮೃತ್ತಿಕೆ

ನೀರು ಕುಡಿಯಲು ಘೋರಕ್ಷಯ ಅಪ-

ಸ್ಮಾರ ಗುಲ್ಮಾದಿಗಳ ಉಪಟಳ

ಹಾರಿ ಪೋಪುದು ಆ ಮುನೀಶ್ವರ 8

ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ

ಶರಣ ರಕ್ಷಾ ಮಣಿಯೆ

ದುರಿತ ತಿಮಿರಕೆ ಮೆರೆವ ದಿನಮಣಿ

ಎನಿಸಿ ಪೂರ್ವ ಕವಾಟ ನಾಮಕ

ಪುರದ ನರಕೇಸರಿ ಕ್ಷೇತ್ರದಿ

ಸ್ಥಿರದಿ ಶ್ರೀ ಕಾಂತನನು ಭಜಿಸುವ 9

***