Showing posts with label ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ balakrishna. Show all posts
Showing posts with label ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ balakrishna. Show all posts

Friday 27 December 2019

ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ ankita balakrishna


ಮಾತೋಶ್ರೀ ರಂಗಮ್ಮನವರ ರಚನೆ  ( ಬಾಲಕೃಷ್ಣ  ಅಂಕಿತ)
ರಾಗ ಮಧ್ಯಮಾವತಿ       ಖಂಡಛಾಪುತಾಳ 

ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ । ಸರಿಸುಗುಣ
ಪೃಥುವಿಯೊಳಿಲ್ಲ ಪೇಳುವುದಕಾಶ್ಚರ್ಯ
ಅಗಣಿತ ಮಹಿಮೆಲ್ಲ । ಜಗದೊಳಗಿಲ್ಲ ॥ ಪ ॥
ಸುಗುಣರನು ರಕ್ಷಿಸುವೆನೆನುತಲಿ ।
ನಗಪತಿಸುತೆ ಸಹಿತಬಂದೀ ।
ಮಿಗಿಲು ಕಪಿಲ ಕೌಂಡಿನ್ಯಕ್ಷೇತ್ರದಿ ।
ಬಗೆಬಗೆಯ ವರ ಕೊಡುತ ಮೆರೆವನ ॥ ಅ ಪ ॥

ಅಂಧಕಾಸುರ ಮಥನಾ । ವಿಶ್ವೇಶ ಶಂಕರ ।
ನಂದಿವಾಹನ ಸುಗುಣಾ । ಪಾರ್ವತೀರಮಣ ದಶ - ।
ಕಂಧರನ ಮದಹರಣಾ । ಭಕ್ತರಾಭರಣ ॥
ಚಂದ್ರಶೇಖರ ತ್ರಿಜಟ ಸನಕ ಸ - ।
ನಂದನಾದಿ ಮುನಿವಿನುತ ಪದ ।
ಇಂದಿರೇಶನ ಪದಕಮಲ ಮಕ - ।
ರಂಧ ಕಳಿಯಂದದಲಿ ರಮಿಪನ ॥ 1 ॥

ಮಾರಹರ ತ್ರಿಪುರಾರಿ । ನಿಟಿಲಾಕ್ಷ ಭುವನಾ - ।
ಧಾರಿ ನಿಗಮವಿಹಾರಿ । ನೆರೆನಂಬಿದವರಿಗೆ ।
ತೋರುವನು ಶುಭದಾರಿ । ಪರಮ ಉದಾರಿ ॥
ಚಾರುಕ್ಷೇತ್ರವಿದೆನುತ ನಿಜ ಪರಿ - ।
ವಾರದಿಂದಲಿ ಬಂದು ತನ್ನಯ ।
ಸಾರಸಾಂಬಕಿ ಕೂಡಿ ಮೋದದಿ ।
ತೇರನೇರಿ ಮೆರೆದು ಬರುವನ ॥ 2 ॥

ಜಾಹ್ನವಿಯ ಧರಿಸ್ಯಾನು । ಶೋಭಿಸುವ ರುಂಡ - ।
ಮಾಲೆ ಮಣಿಭೂಷಿತನು । ದಾನವರ ವಂಚಿಸಿ ।
ಹಾನಿಗೈಸುವ ತಾನು । ಪೇಳಲಿನ್ನೇನು ॥
ನಾನಾಪರಿ ಕುಷ್ಠಾದಿ ರೋಗವ ।
ಹಾನಿಗೈಸುವ ಸ್ಮರಣೆ ಮಾತ್ರದಿ ।
ದೀನರಕ್ಷಕ ಬಾಲಕೃಷ್ಣನ ।
ಸಾನುರಾಗದಿ ಭಜಿಸಿ ಮೆರೆವನ ॥ 3 ॥
********