ಸಜ್ಜನರ ಸಂಗದೊಳಗಿರಿಸೆನ್ನ ರಂಗ ll ಪ ll
ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ll ಅ ಪ ll
ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗ
ನಾಡಿನೊಳಗನ್ಯಾಯ ಮಾಡುವವನ ಸಂಗ
ಬೇಡಿದರು ಕೊಡದಿಹ ಕಡುಲೋಭಿಯ ಸಂಗ
ಮೂಢ - ಮೂರ್ಖರ ಸಂಗಬಲು ಭಂಗ ಎಲೊ ರಂಗ ll 1 ll
ಗುರುಸತಿಗೆ ಪರಸತಿಗೆ ಎರಡು ಬಗೆವರ ಸಂಗ
ಗುರುನಿಂದೆ ಪರನಿಂದೆ ಮಾಡುವವರ ಸಂಗ
ಪರ ಹಿತಾರ್ಥದ ಧರ್ಮವರಿಯದವರ ಸಂಗ
ಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ll 2 ll
ಆಗಮದ ಅನನ್ಯವನರಿಯದವರವ ಸಂಗ
ರೋಗದಲ್ಲಿ ಆವಾಗ ಮಲಗುವನ ಸಂಗ
ಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹ
ಭಾಗವತರ ಸಂಗ ಬಲು ಭಂಗ ಎಲೊ ರಂಗ ll 3 ll - ಶ್ರೀಕನಕದಾಸರು
***
ಭಾಗವತರ ಸಂಗವಿರಲಿ
ಮಾನವ ಸಂಘ ಜೀವಿ, ನಿಜ. ಆದರೆ ಎಂತಹವರ ಸಂಗ ಬೇಕು, ಬೇಡ ಎಂಬುವ ಪರಿಜ್ಞಾನ ಮುಖ್ಯ. ಈ ನಿರ್ಧಾರವು ಅವನದ್ದೆ. ಎಲ್ಲ ಒಳಿತು ಕೆಡಕುಗಳಿಗೆ ಈ ಸಂಗದಿಂದಾಗುವ ಪರಿಣಾಮವೇ ಹೆಚ್ಚು. ಮತ್ತೊಂದು ರೀತಿಯ ಸಂಗ, ಭಗವಂತನ ಮಾತಿನಂತೆ, 'ಸಂಗಾತ್ ಸಂಜಾಯತೇ ಕಾಮಃ - -' ಹೀಗಾಗಿ ಜೀವನದ ವಿನಾಶಕ್ಕೆ ಕೊಂಡೊಯ್ಯಬಹುದು. ಸಂಗ ಬಯಸುವ ಮುನ್ನ ಯೋಗ್ಯ ಅಯೋಗ್ಯಗಳ ಪರಾಮರ್ಶೆ ಬೇಕು. ಅದಕ್ಕೆಂದೆ ಶ್ರೀಕನಕದಾಸರು ವಿವೇಚಿಸಿ ನೀಡಿದ ಮಾತುಗಳು ಇಲ್ಲಿದೆ.
ಶ್ರೀ ಕನಕದಾಸರು ನೀಡಿರುವ ಈ ದೀರ್ಘ ಪಟ್ಟಿಯಲ್ಲಿ ಒಳಪಡದ ವ್ಯಕ್ತಿ ಇಲ್ಲವೆಂದರೆ ಆಶ್ಚರ್ಯವಿಲ್ಲ. ಜೀವನದ ಆಗುಹೋಗುಗಳು ಅವರು ಮಾಡಿರುವ ಸಂಗವನ್ನವಲಂಬಿಸಿರುತ್ತದೆ. ಪುರಾಣೇತಿಹಾಸಗಳಲ್ಲಿ ಅನೇಕ ಉದಾಹರಣೆಗಳನ್ನು ಕಾಣುತ್ತೇವೆ. ಲೌಕಿಕ ಜೀವನದಲ್ಲೂ ಇದರ ಅನುಭವ ಸಾಮಾನ್ಯವಾಗಿದ್ದೇ ಇರುತ್ತದೆ. ಎಲ್ಲ ಹರಿದಾಸರ ಕೂಗೂ ಇದೇಯಾಗಿದೆ. 'ಸಂಗವಾಗಲಿ - ಸಾಧು ಸಂಗವಾಗಲಿ' ಎಂದು. ಭಾಗವತರ ಸಂಗದಿಂದ ಮಾತ್ರ ಜೀವನದಲ್ಲಿ ನೆಮ್ಮದಿ. ದುರ್ಜನರು ತಾವೂ ಸುಖಿಸದೆ ಪರರನ್ನೂ ಸುಖಿಗಳನ್ನಾಗಿಸದೆ ಸಮಾಜದ ಪಿಡುಗಾಗಿ ಬೆಳೆದು ಅಶಾಂತಿಯನ್ನುಂಟು ಮಾಡಿ ಕಡೆಗೆ ನಾಶವನ್ನಪ್ಪುವರು. ಇದು ಸತ್ಯ. ದುಷ್ಟಜನರು ಎಲ್ಲೆಲ್ಲೂ ಇರಬಹುದು. ಅದಕ್ಕೆ ದಾಸರು ಸಹವಾಸ ಮಾಡುವ ಮುನ್ನ ಎಚ್ಚರಿಕೆ ವಹಿಸಿರೆಂದು, ದುಷ್ಟರ - ದುರಾತ್ಮರ ಗುಣಗಳನ್ನೂ ಉಲ್ಲೇಖಿಸಿ ಸಂಗ್ರಹಿಸಿ ಪಟ್ಟಿಕೊಟ್ಟರು.
***
ಸಜ್ಜನರ ಸಂಗದೊಳಗಿರಿಸೆನ್ನ ರಂಗ ಪ
ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ಅ
ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗನಾಡಿನೊಳಗನ್ಯಾಯವ ಮಾಡುವನ ಸಂಗಬೇಡಿದರು ಕೊಡದಿರುವ ಕಡುಲೋಭಿಯ ಸಂಗಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ1
ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗಗುರು ನಿಂದೆ ಪರನಿಂದೆ ಮಾಡುವರ ಸಂಗಪರಹಿತಾರ್ಥದ ಧರ್ಮವರಿಯದವರ ಸಂಗಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ 2
ಆಗಮದ ಅನ್ವಯವನರಿಯದವನ ಸಂಗರೋಗದಲಿ ಆವಾಗಲು ಮುಲುಗುವನ ಸಂಗಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹಭಾಗವತರ ಸಂಗ ಬಲು ಭಂಗ ಎಲೊ ರಂಗ 3
***