Showing posts with label ದುರಿತ ವನಕುಠಾರಿ jagannatha vittala ankita suladi ಲಕ್ಷ್ಮೀ ನೃಸಿಂಹ ಸುಳಾದಿ DURITAVANA KUTHAARI LAKSHMI NRUSIMHA SULADI. Show all posts
Showing posts with label ದುರಿತ ವನಕುಠಾರಿ jagannatha vittala ankita suladi ಲಕ್ಷ್ಮೀ ನೃಸಿಂಹ ಸುಳಾದಿ DURITAVANA KUTHAARI LAKSHMI NRUSIMHA SULADI. Show all posts

Monday 9 December 2019

ದುರಿತ ವನಕುಠಾರಿ jagannatha vittala ankita suladi ಲಕ್ಷ್ಮೀ ನೃಸಿಂಹ ಸುಳಾದಿ DURITAVANA KUTHAARI LAKSHMI NRUSIMHA SULADI

Audio by Mrs. Nandini Sripad

ಶ್ರೀ ಜಗನ್ನಾಥದಾಸರ ವಿರಚಿತ  ಶ್ರೀ ಲಕ್ಷ್ಮೀ ನೃಸಿಂಹ ಸುಳಾದಿ 
ರಾಗ ರೇವತಿ 

ಧ್ರುವತಾಳ 

ದುರಿತವನಕುಠಾರಿ ದುರ್ಜನ ಕುಲವೈರಿ
ಶರಣಾಗತವಜ್ರಪಂಜರ ಕುಂಜರ -
ವರಸಂರಕ್ಷಕ ಜನ್ಮಮರಣರಹಿತ ಮಹಿತ
ಪರಮಕರುಣಾ ಸಿಂಧು ಭಕುತಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರಪುರುಷೋತ್ತಮ
ಉರುಗಾಯ ವೈಕುಂಠವರಮಂದಿರ , ಚಂದಿರ -
ತರಣಿಕೋಟಿಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗನಡೆಸಿದ ಸಂ - 
ಗರ ಭಯಂಕರ ಲೋಕೈಕವೀರ 
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ 
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ 
ಸರ್ವರಂತರ್ಯಾಮಿ ಲೋಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವಕಾಮದ ಜಗನ್ನಾಥವಿಠ್ಠಲ ಭಕ್ತ -
ಪರಿಪಾಲಕನೆಂಬ ಬಿರುದು ನಿನ್ನದಲ್ಲವೇ || 1 ||

ಮಟ್ಟತಾಳ 

ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ 
ನಿಧನನೆನಿಸಿಕೊಂಡೆ ನಿನ್ನ ದ್ವೇಷಿಗಳಿಗೆ || 2 ||

ರೂಪಕತಾಳ 

ಮೂರುಲೋಕಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣಸಾಕ್ಷಿ ಕಾರಣಕಾರ್ಯ ದೋಷವಿ-
ದೂರ ಸದ್ಗುಣಸಾಂದ್ರ ಸಜ್ಜನಾಂಬುಧಿಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೊ ನಿನಗೆ;
ಕ್ರೂರಮಾನವರ ಸಂಹಾರ ಮಾಡಿಸು ಗುರು -
ಮಾರುತನಿಂದತಿ ಶೀಘ್ರವಾಗಿ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರ ಕಾವ ಕರುಣಿಗಳು ಜಗದೀ || 3 ||

ಝಂಪೆತಾಳ 

ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ , ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ, ದಯದಿ ದ್ರೌ-
ಪತಿಯ ಮೊರೆಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ; ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರ ಬಿಡಿಸಿ ಪಾಲಿಸಿದೆ ಕರುಣದಲಿ ; ಕುರು-
ಪೃತನೆಯೊಳು ಪಾಂಡವರ ಗೆಲಿಸಿ ಕೀರ್ತಿಯನಿತ್ತೆ
ಶತಮೋದನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶುಪರೀಕ್ಷಿತನ ಸಂತೈಸಿದೆ
ಶಿತಿಕಂಠಗೊಲಿದು ಸಾಯಕನಾಗಿ ಮುಪ್ಪುರದ
ಸತಿಯರನು ಒಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪಕೇಳಜಸ್ರ ಸಂ-
ಸ್ತುತಿಪ ಭಕುತರ ಮನೋರಥವ ಪೂರೈಸು ಸು-
ವ್ರತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನಪ್ರೀಯ ನೀನೆ ಗತಿ ಎಮಗೆ ಇಹಪರದಿ || 4 ||

ತ್ರಿವಿಡಿತಾಳ 

ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರ-
ಗೀ ಸಮಸ್ತ ದಿವೌಕಸರು ನಿನ -
ಗೆ ಸಮರ್ಪಕವಾದ ಕಾರ್ಯ ಮ-
ಹಾಸುಖದಿ ನಡೆಸುವರು ನಿರುತ ಲಕ್ಷ್ಮೀ
ದಾಸಿ ಎಂದೆನಿಪಳು ನಿನ್ನರಮನೆಯಲ್ಲಿ
ದೇಶಕಾಲಗುಣಕರ್ಮಾದಿಗಳು ನಿನಗಾ-
ವಾಸಯೋಗ್ಯಸ್ಥಾನವೆಂದೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನೋ ; ವೇದ-
ವ್ಯಾಸ ಕೀಟಗೆ ನೀನೇ ಒಲಿದು ಕೊಟ್ಟೆ ಮ -
ಹಾಸಿಂಹಾಸನವನೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ -
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ 
ಈಸು ಮಾತುಗಳ್ಯಾಕೆ ಮನ್ಮನ -
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು || 5 ||

ಅಟ್ಟತಾಳ 

ನಿಗಮತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿಬೊಮ್ಮಭವಾ -
ದಿಗಳು ತಾವರಿಯರು ಸಾಕಲ್ಯದಿ ಮಂದಜೀ -
ವಿಗಳಿಗೆ ಗೋಚರಿಸುವುದೆ ನಿನ್ನ ರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯದಿರೆನ್ನಪರಾಧಕೋಟಿಗಳ
ಜಗತ್ಪತಿ ತನ್ನ ಮಗುವಿನ ತೊದಲು ಮಾ - 
ತುಗಳನೆ ಕೇಳಿ ತಾ ನಗುತಲಿ ಕಾಮಿತ
ಬಗೆಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ - 
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ - 
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ - 
ಲ್ಮೊಗನಯ್ಯ ಅರ್ಥಕಾಮಗಳೊಳಗಿಪ್ಪ ಈ -
ರ್ವಗೆರೂಪ ಒಂದಾಗೆ ಆವುದಸಾಧ್ಯವೊ
ಗಗನಭೂಪಾತಾಳವ್ಯಾಪ್ತರೂಪನೆ ಕರ
ಮುಗಿವೆ ಗೋಚರಿಸೆನ್ನ ದೃಗುಯುಗಗಳಿಗಿಂದು 
ಯುಗಕರ್ತ ಶ್ರೀಜಗನ್ನಾಥವಿಠಲ ನರ -
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ || 6 ||

ಏಕತಾಳ 

ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹಪರದಲ್ಲಿ
ಆ ನಳಿನಭವಾದ್ಯನಿಮಿಷ - 
ರಾ ನಿಜಾನಂದವರಿತು ಫಲಗಳ ಕೊಡುವಿ ಮ -
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ -
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ -
ದಾನಂದಮಯನೆ ಪ್ರಣತರ ಅಧಿಕಾ -
ರಾನುಸಾರ ಸುಖವನಧಿಯೊಳೋಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಗಭಿ -
ಮಾನಿಗಳಿಗೊಡೆಯನೆನಿಸುವ ಮುಖ್ಯ -
ಪ್ರಾಣಪತಿಗೆ ನೂತನ ವಿಜ್ಞಾಪನ -
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು -
ಣಾನಿಧಿ ಸರ್ವದಾ ಸುಲಭ ನೀನಲ್ಲವೆ || 7 ||

 ಜತೆ 
ಚಟುಲಕಾರ್ಯಗಳ ಸಂಘಟನೆ ಮಾಡಿಸುವಿ ನಿ -
ಷ್ಕುಟಿಲ ಶ್ರೀಜಗನ್ನಾಥವಿಠ್ಠಲ ದೇವೋತ್ತಮ ||
***********



ದಾರಿದ್ರ್ಯಾದಿಸಕಲಾನಿಷ್ಟನಿವೃತ್ತಿಪೂರ್ವಕಜ್ಞಾನಾದಿ
ಸಕಲೈಶ್ವರ್ಯಪ್ರದ 

ಶ್ರೀಲಕ್ಷ್ಮೀನೃಸಿಂಹಸುಳಾದಿ 

ಈ ಸುಳಾದಿಯ ರಚನೆಗೆ ಹಿನ್ನೆಲೆ ಹೀಗಿದೆ :

ಶ್ರೀ ಜಗನ್ನಾಥದಾಸರಾಯರು ತೀರ್ಥಯಾತ್ರಾನಿಮಿತ್ತ ಸಂಚಾರ ಮಾಡುತ್ತಾ ಒಮ್ಮೆ ಸುರಪುರಕ್ಕೆ ದಯಮಾಡಿಸಿದರು. ಆಗಿನ ಸುರಪುರದ ಅರಸನಾದ ವೆಂಕಪ್ಪನಾಯಕ ಶ್ರೀದಾಸರ ಮಹಿಮಾಶ್ರವಣ ಮಾಡಿದ್ದರಿಂದ ಅವರನ್ನು ಸತ್ಕರಿಸಿ , ಪೂಜಿಸಿ ಕೃತಕೃತ್ಯನಾದನು. ಶ್ರೀದಾಸರು ರಾತ್ರಿ ಭೋಜನಕಾಲದಲ್ಲಿ ಸುಜನರಿಗೆ ನೀಡುತ್ತಿದ್ದ ಹಿತೋಪದೇಶದಿಂದ ಅತ್ಯಂತ ಪ್ರಭಾವಿತನಾದ ಆ ಊರಿನ ಕಡುಬಡವನಾದ ವೈಷ್ಣವನೊಬ್ಬನು ಅವರ ಸನಿಹವನ್ನು ಬಿಡಲಾರದೆ , ಹೆಂಡತಿ ಮಕ್ಕಳನ್ನು ಬಿಟ್ಟು ಶ್ರೀದಾಸರನ್ನೇ ಸುರಪುರದಿಂದ ಹಿಂಬಾಲಿಸಿದನು. ಶ್ರೀದಾಸರು ಹತ್ತಾರು ದಿವಸಗಳಿಂದಲೂ ತಮ್ಮ ಪರಿವಾರದೊಂದಿಗೇ ಬರುತ್ತಿದ್ದು , ತಮ್ಮ ಹಿತೋಪದೇಶದಿಂದ ಪರಿಪಕ್ವಮನಸ್ಕನಾದ ಆತನನ್ನು ಊರು-ಮನೆ ಬಿಟ್ಟು ತಮ್ಮನ್ನೇ ಅನುಸರಿಸಲು ಕಾರಣವೇನೆಂದು ಮೃದುವಚನಗಳಿಂದ ಕೇಳಿದರು. ಕರುಣಾರ್ದ್ರಹೃದಯರೂ , ದೀನರ ಪಾಲಿನ ಚಿಂತಾಮಣಿ - ಕಲ್ಪವೃಕ್ಷರೂ, ಕಾಮಧೇನುಗಳೂ ಆದ ಶ್ರೀದಾಸರ ಪ್ರಶ್ನೆಗೆ ಆ ಬ್ರಾಹ್ಮಣ ತನ್ನ ತೀವ್ರಬಡತನದ ಬೇಗೆಯನ್ನೂ , ತನ್ನ ಸಾಧನದ ಮಾರ್ಗದಲ್ಲಿನ ಅಡೆತಡೆಗಳನ್ನೂ ಕಣ್ಣೀರಿಡುತ್ತಾ ಬಿನ್ನವಿಸಿದಾಗ , ಶ್ರೀದಾಸರು - ಆತನಿಗೆ ಹಿಂದಿನ ಜನ್ಮದಲ್ಲಿ ಸತ್ಪಾತ್ರರಿಗೆ ದಾನಮಾಡದ ಲೋಭಿತನವೇ ಈಗಿನ ಬಡತನಕ್ಕೆ ಕಾರಣವೆಂದು ತಿಳಿದು - ಆತನಲ್ಲಿದ್ದ ಒಡಕು ತಂಬಿಗೆಯೊಂದನ್ನು ತಾವೇ ದಾನವಾಗಿ ಪಡೆದು - ಅದನ್ನು ಮಾರಿಸಿ ಬಂದ ಹಣದಿಂದ ಕಲ್ಲುಸಕ್ಕರೆಯನ್ನು ತರಿಸಿ , ಪಾನಕ ಮಾಡಿಸಿ ಶ್ರೀನೃಸಿಂಹನಿಗೆ ನಿವೇದಿಸಿ ಅದನ್ನು ತಾವೂ ಸವಿದು -ಇತರರಿಗೂ ವಿತರಿಸಿದರು. ಆನಂತರ ಈ ' ಶ್ರೀಲಕ್ಷ್ಮೀನೃಸಿಂಹಸುಳಾದಿ 'ಯನ್ನು ರಚಿಸಿ ಆ ಬಡವೈಷ್ಣವನಿಗೆ ಉಪದೇಶನೀಡಿ ಅದನ್ನು ಸುರಪುರದ ಗುಡ್ಡದಲ್ಲಿನ ಶ್ರೀವ್ಯಾಸರಾಯರಿಂದ ಪ್ರತಿಷ್ಠಿತ ಪ್ರಾಣದೇವನ ಸನ್ನಿಧಿಯಲ್ಲಿ ಒಂದು ಮಂಡಲ ಪಠಿಸುವಂತೆ ಸೂಚಿಸಿದರು.
ಶ್ರೀದಾಸರ ಅಣತಿ - ಅನುಗ್ರಹದಿಂದ ಆತ ಮಾಡಿದ ಸೇವೆಯ ಫಲವಾಗಿ ಆಗಿನ ಸುರಪುರದ ರಾಜನಾಗಿದ್ದ ವೆಂಕಪ್ಪನಾಯಕನ ಭೇಟಿಯಾಗಿ ಶ್ರೀದಾಸರ ಶಿಷ್ಯನೆಂಬ ಕಾರಣದಿಂದ ಆತನಿಗೆ ಅರಮನೆಯಲ್ಲಿ ಕೆಲಸಕೊಟ್ಟು ಕ್ರಮೇಣ ತನ್ನ ದಿವಾನನನ್ನಾಗಿಯೂ ನೇಮಿಸಿ ಪುರಸ್ಕರಿಸಿದ. ಇಷ್ಟಾದರೂ ಆ ವೈಷ್ಣವ ಪ್ರತಿನಿತ್ಯ ಈ ಸುಳಾದಿಯ ಪಠನ ಹಾಗೂ ಶ್ರೀದಾಸರ ಉಪಕಾರಸ್ಮರಣೆ ಮಾಡುವುದನ್ಧು ಬಿಡಲಿಲ್ಲ! ಈಗಲೂ ಭಕ್ತಿಯಿಂದ ಈ ಸುಳಾದಿಯನ್ನು ಪಾರಾಯಣಮಾಡಿದರೆ ತಕ್ಷಣ ಅನಿಷ್ಟನಿವೃತ್ತಿಯಾಗಿ ಇಷ್ಟಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.

 ಸಿದ್ಧಿಪ್ರದಸ್ತ್ವಂ ಕಿಲದೇವವರ್ಯ ತ್ವತ್ಪ್ರೇರಿತೋऽಹಂ ತವಪಾದಮಾಪ್ತಃ । 
 ತ್ವತ್ಪಾದಭಕ್ತೋ ಬಹಿರಂತರಾತ್ಮನ್ ಕಿಮಸ್ತಿ ವಿಜ್ಞಾಪ್ಯಮಶೇಷಸಾಕ್ಷಿಣಃ ॥ (೪-೮)

ಆದಿತ್ಯಪುರಾಣಾಂತರ್ಗತ ಶ್ರೀವೇಂಕಟೇಶಮಹಾತ್ಮ್ಯೆಯಲ್ಲಿ ದೇವಶರ್ಮನ ಪ್ರಾರ್ಥನೆಯ ಭಾವ ಈ ಸುಳಾದಿಯ ಮಾತುಗಳಲ್ಲಿದೆ.

 ಸಂಗ್ರಹ : 
 ಹರಿದಾಸರತ್ನಂ ಶ್ರೀಗೋಪಾಲದಾಸರು
**********************


ಶ್ರೀಲಕ್ಷ್ಮೀನೃಸಿಂಹಸುಳಾದಿ 

 ಧ್ರುವತಾಳ 

 ದುರಿತವನಕುಠಾರಿ ದುರ್ಜನಕುಲವೈರಿ 
 ಶರಣಾಗತ ವಜ್ರಪಂಜರ ಕುಂಜರ- 
 ವರ ಸಂರಕ್ಷಕ ಜನ್ಮಮರಣರಹಿತ ಮಹಿತ 
 ಪರಮಕರುಣಾಸಿಂಧು ಭಕ್ತಬಂಧು 
 ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ 
 ಹರಿಯೆ ಕ್ಷರಾಕ್ಷರಪುರುಷೋತ್ತಮ 
 ಉರುಗಾಯ ವೈಕುಂಠವರಮಂದಿರ ಚಂದಿರ- 
 ತರಣಿಕೋಟಿಸಂಕಾಶ ವಿಮಲಕೇಶ 
 ಧುರದೊಳಗರ್ಜುನನ ತುರಗ ನಡೆಸಿದ ಸಂ- 
 ಗರಭಯಂಕರ ಲೋಕೈಕವೀರ 
 ನರಸಿಂಹ ನಿನ್ನ ಪಾದಕ್ಕೆರಗಿ ಭಿನ್ನೈಸುವೆ 
 ಮೊರೆಹೊಕ್ಕ ದಾಸಗೆ ಬಂದ ಭಯವ 
 ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ ಸರುವರಂತರ್ಯಾಮಿ ಲೋಕಸ್ವಾಮಿ 
 ಸ್ಮರಣೆಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ 
 ಅರಿದೆನೊ ನೀ ಎಮ್ಮ ಪೊರೆವುದೀಗ 
 ಸರುವಕಾಮದ ಜಗನ್ನಾಥವಿಠ್ಠಲ ಭಕ್ತ- 
 ಪರಿಪಾಲಕನೆಂಬ ಬಿರುದು ನಿನ್ನದಲ್ಲವೇ ॥ 1 ॥ 

 ಅರ್ಥ :- ದುರಿತವನಕುಠಾರಿ = ಪಾಪಗಳೆಂಬ ಅರಣ್ಯಕ್ಕೆ ಕೊಡಲಿಯ ಸದೃಶವಾಗಿದೆ ಶ್ರೀನರಸಿಂಹನ ಸ್ಮರಣೆ , ದುರ್ಜನಕುಲವೈರಿ = ದುಷ್ಟಜನರೆಂಬ ದೈತ್ಯರ ವಂಶಕ್ಕೆ ಶತ್ರು ರೂಪವಾಗಿದೆ , ಶರಣಾಗತವಜ್ರಪಂಜರ = ಮೊರೆಹೊಕ್ಕ ಜನರಿಗೆ ವಜ್ರಕವಚದಂತೆ ರಕ್ಷಕನು , ಕುಂಜರವರಸಂರಕ್ಷಕ = ಗಜೇಂದ್ರಪಾಲಕನು (ಕುಂಜರ - ಗಜ) , ಜನ್ಮಮರಣರಹಿತ = ಆದ್ಯಂತ ವಿದೂರ (ನಿತ್ಯ ಶಾಶ್ವತ ಸ್ವರೂಪನು), ಮಹಿತ = ಅಪಾರ ಮಹಿಮಾ ಸಂಪನ್ನನು , ಪರಮಕರುಣಾಸಿಂಧು = ಅತ್ಯಂತ ಶ್ರೇಷ್ಠನಾದ ದಯಾಸಾಗರನು , ಭಕ್ತಬಂಧು = ಭಕ್ತರಿಗೆ ಆಪ್ತಬಾಂಧವನು (ಬಿಂಬಗಲದ ಬಿಂಬರೂಪಿಯು) , ಸ್ವರತ = ತನ್ನ ಭಗವದ್ರೂಪಗಳಲ್ಲಿಯೇ ಕ್ರೀಡಿಸುವವನು (ಸ್ವರಮಣನು), ಸ್ವತಂತ್ರ = ಯಾರಿಂದಲೂ ಪರಾಧೀನನಲ್ಲ (ಸ್ವಾತಂತ್ರ್ಯ ಎಂಬುದು ಶ್ರೀಪರಮಾತ್ಮನ ಸ್ವರೂಪಗತ ಧರ್ಮವು) , ಜಗದ್ಭರಿತ = ಜಗತ್ತಿನ ಎಲ್ಲೆಡೆಯಲ್ಲಿಯೂ ವ್ಯಾಪಕನು (ತುಂಬಿ ಹರಡಿರುವವನು) , ಚಿತ್ಸುಖಪೂರ್ಣ = ಅಪ್ರಾಕೃತ (ಜಗದ್ವಿಲಕ್ಷಣವಾದ) ಜ್ಞಾನಾನಂದಸ್ವರೂಪನು (ಚಿತ್ - ಜ್ಞಾನ , ಸುಖ - ಆನಂದ) , ಹರಿಯ = ಸಜ್ಜನರ ಸಕಲಪಾಪ ಪರಿಹಾರಕವಾದ ಬಿಂಬರೂಪವು (ಹರಿ ಎಂದರೆ ಸಿಂಹ - ನರಸಿಂಹನೆಂತಲೂ ಅರ್ಥ) , ಕ್ಷರಾಕ್ಷರಪುರುಷೋತ್ತಮ = ಕ್ಷರ ನಾಮಕರಾದ ಬ್ರಹ್ಮಾದಿ ಜೀವರು , ಅಕ್ಷರನಾಮಕಳಾದ ಶ್ರೀಲಕ್ಷ್ಮೀದೇವಿ ಇವರುಗಳಿಗಿಂತ ಅನಂತಾನಂತ ಕೋಟಿ ಗುಣಗಳಿಂದ ಉತ್ತಮೋತ್ತಮನು , ಉರಗಶಯನ = ಶೇಷಶಾಯಿ (ಉರಗ - ಹೊಟ್ಟೆಯಿಂದ ಚಲಿಸುವ ಸರ್ಪ) , ವೈಕುಂಠವರಮಂದಿರ = ಶ್ರೇಷ್ಠವಾದ (ಪರಮಪದ) ವೈಕುಂಠವೆಂಬ ಮುಕ್ತಿಧಾಮನಿವಾಸಿಯು , ಚಂದಿರ = ಲಾವಣ್ಯನಿಧಿಯು (ಸಾಕ್ಷಾತ್ ಮನ್ಮಥ ಮನ್ಮಥಃ) , ತರಣಿಕೋಟಿಸಂಕಾಶ = ಕೋಟಿಸೂರ್ಯರ ಕಾಂತಿಯುಳ್ಳವನು , ವಿಮಲಕೇಶ = ಕೃಷ್ಣ ಕೇಶದಿಂದ ಅವತರಿಸಿದ ಶ್ರೀಕೃಷ್ಣ (ಸರ್ವ ಅವಯವ ಅಂಗಾಂಗ ಪರಿಪೂರ್ಣನೆಂದರ್ಥ) , ಧುರದೊಳಗೆ = ಕುರುಕ್ಷೇತ್ರ ಮಹಾಸಂಗ್ರಾಮದಲ್ಲಿ , ಅರ್ಜುನನ ತುರಗ = ಪಾರ್ಥನ ರಥವನ್ನು (ತುರಗ - ಕುದುರೆ , ಇಲ್ಲಿ ವಾಹನವಾದ ರಥವು) , ನಡೆಸಿದ = ಪಾರ್ಥಸಾರಥಿ ಶ್ರೀಕೃಷ್ಣ , ಸಂಗರಭಯಂಕರ = ರಣರಂಗದಲ್ಲಿ ಯಾರಿಂದಲೂ ಅಜೇಯನು (ಶತ್ರುಗಳಿಗೆ ಭೀಕರಸ್ವರೂಪನು) , ಲೋಕೈಕವೀರ = ಜಗತ್ತಿನಲ್ಲಿ ಏಕೈಕ ಅಸಮಪರಾಕ್ರಮಿ , ಸ್ಮರಣೆ ಮಾತ್ರದಿ = ಅಂತ್ಯಕಾಲದಲ್ಲಿ ಮಗನನ್ನು ಕರೆಯುವ ನೆಪದಲ್ಲಿ ' ನಾರಾಯಣ ' ಎಂದು ಕೂಗಿದ , ಅಜಾಮಿಳಗೆ = ಅಜಾಮಿಳನು ಸುಸಂಸ್ಕೃತ , ಜ್ಞಾನಿ . ಪ್ರಾರಬ್ಧಕರ್ಮವಶದಿಂದ ಕರ್ಮಭ್ರಷ್ಟನಾಗಿದ್ದ . ಅಂತ್ಯಕಾಲದಲ್ಲಿ ಶ್ರೀಮನ್ನಾರಾಯಣನ ಸ್ಮರಣೆಯಿಂದಲೇ ಸದ್ಗತಿ ಪಡೆದನು. ಅರಿದೇನೋ = ನೀನು ನಮ್ಮೆಲ್ಲರ ಸಂರಕ್ಷಕನೆಂದು ತಿಳಿದಿರುವೆ , ಸರುವ ಕಾಮದ = ಭಕ್ತಜನರ ಸಕಲ ಮನೋಭೀಷ್ಟಗಳನ್ನು ಸಲ್ಲಿಸುವ (ಕಾಮ - ಇಷ್ಟಾರ್ಥ , ದ - ಕೊಡುವವನು) , ಭಕ್ತಪರಿಪಾಲಕನೆಂಬ = ನಿನ್ನ ಬಿರುದೇ ಭಕ್ತವತ್ಸಲ - ಭಕ್ತ ಸಂರಕ್ಷಕನೆಂದಲ್ಲವೇ?

 ಸಂಗ್ರಹ : ಭಜನಕೌಸ್ತುಭ 
 ಹೆಚ್ . ಎಸ್ . ಶ್ರೀನಿವಾಸಮೂರ್ತಿ
**************