ಗಂಗಾದೇವಿಯ ಸ್ತುತಿ ganga stutih
ಶ್ರೀಮದ್ವಾಸರಾಜ ಸಂಸ್ಥಾನಾಧೀಶ್ವರರಾದ ಶ್ರೀಮದ್ವಿದ್ಯಾಪ್ರಸನ್ನತೀರ್ಥರು ಸ್ತುತಿಸಿದ ಗಂಗಾದೇವಿಯ ಸ್ತುತಿಪದದ ಸಾಹಿತ್ಯ
ಗಂಗೇ ಜನನೀ ಮಂಗಳರೂಪಿಣಿ
ತುಂಗ ಮಹಿಮನ ಪಾದಾಂಗುಳಿಜಾತೆ
ಸಂಗತಿಯರು ಹಲು ಬಂದಿರುವೆವು ಕೃಪಾ-
ಪಾಂಗವನು ತೋರೆಲೆ ಇಂಗಿತವರಿತು ॥ ಅನುಪಲ್ಲವಿ॥
ನಾಲುಮೊಗನು ಹರಿ ಕಾಲಿಗೆ ಕೆಡುಹಲು
ಶೂಲಧರನ ಶಿರವಾಲಯ ಮಾಡಿದೆ
ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ
ಪೇಳಲಳವೆ ನಿನ್ನ ಶೀಲವ ಸುಲಭದಿ ॥
ಚಾರು ನದಿಗಳು ಹೇರಳವಿದ್ದರು
ಭಾರತದೇಶದಿ ಭಾಗ್ಯದೇವತೆ ನೀ
ದೂರ ದೂರ ದೇಶಗಳಲಿ ನೆಲೆಸಿಹ
ಧೀರರು ನಿನ್ನಯ ತೋರುತಲಿರುವರು ॥
ಅಂಗಳದಲಿ ಬಿದ್ದು ಹರಿವ ಜಲವು ನಿನ್ನ
ಸಂಗದಿ ಪರಮಮಾಂಗಲ್ಯವ ಪಡೆವುದು
ಶೃಂಗಾರದ ನಿಧಿ ರಂಗನ ಸೇವೆಗೆ
ಗಂಗೇ ಎನ್ನಂತರಂಗವ ಶೋಧಿಸೆ ॥
ಭೂಮಿಯ ಭೇದಿಸಿ ಸುಂದರ ರೂಪದಿ
ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ
ಆ ಮಹಾತ್ಮರ ದರುಶನದಿ ಪ್ರಸನ್ನಳೇ
ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ ॥
***
ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಾಂಗಲ್ಯವ ಪಡೆವುದು. ಎಷ್ಟು ಅದ್ಭುತವಾಗಿ ತಿಳಿಸಿದ್ದಾರೆ ನೋಡಿ. ಅದಕ್ಕಾಗಿಯೇ ನಾವೂ ಸಹ ಸ್ನಾನ ಮಾಡುವ ನೀರಿನಲ್ಲಿಯೂ ಗಂಗಾದೇವಿಯರ ಸನ್ನಿಧಾನವನ್ನು ಅನುಸಂಧಾನ ಮಾಡಿಕೊಂಡು ಮಾಡುತ್ತೇವೆ. ಹಾಗೆಯೇ ಕುಡಿಯುವ ನೀರಿನಲ್ಲಿಯೂ, ತುಳಸೀದೇವಿಗೆ ಎರೆಯುವ ನೀರಿನಲ್ಲಿಯೂ ಗಂಗಾದೇವಿಯರ ಸನ್ನಿಧಾನದ ಚಿಂತನೆ ಮಾಡಬೇಕು. ಸದಾ ಪರಮಾತ್ಮನ ಪಾದವನ್ನು ತೊಳೆಯುವ ಸೇವೆಯನ್ನು ಮಾಡುವ ಆ ತಾಯಿಯು ನಮ್ಮ ಮನಸಿನ ಕೊಳೆಯನ್ನೂ ತೊಳೆದು, ಮನಸ್ಸನ್ನು ತಿಳಿಯಾಗಿ ಮಾಡಿ ಪರಮಾತ್ಮನ ರೂಪ ಕಾಣುವಂತೆ ಮಾಡಲಿ ಎಂದು ಭಕ್ತಿಯಿಂದ ಬೇಡುತ್ತಾ...
ಜೈ ವಿಜಯರಾಯ
ಪದ್ಮ ಸಿರೀಶ್
ನಾದನೀರಾಜನದಿಂ ದಾಸಸುರಭಿ 🙏🏽
***