Showing posts with label ಶ್ರವಣದಿಂದಲಿ ಪಾಪಹರಣವಾಗುವುದೆಂದು kamalanabha vittala. Show all posts
Showing posts with label ಶ್ರವಣದಿಂದಲಿ ಪಾಪಹರಣವಾಗುವುದೆಂದು kamalanabha vittala. Show all posts

Thursday 5 August 2021

ಶ್ರವಣದಿಂದಲಿ ಪಾಪಹರಣವಾಗುವುದೆಂದು ankita kamalanabha vittala

 ..

ನವವಿಧ ಭಕುತಿ

kruti by Nidaguruki Jeevubai


ಶ್ರವಣದಿಂದಲಿ ಪಾಪಹರಣವಾಗುವುದೆಂದು

ಕವಿಗಳೆಲ್ಲರು ಕೂಗಿ ಒದರುತಿಹರು

ಕಿವಿಗಳಿಗಾನಂದದಾಭರಣದಂತಿಹುದು ಶ್ರೀ-

ಹರಿಯ ದಿವ್ಯನಾಮಾಮೃತದರಸವು

ಮಾಧವನ ಮೂರ್ತಿಯನು ನೋಡದಿಹ ಕಂಗಳು

ನವಿಲು ಕಣ್ಣುಗಳೆಂದು ಪೇಳುತಿಹರು

ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ

ಫಣಿರಾಜನಿಗೆ ವಶವಲ್ಲ ದೇವಾ 1


ಕೀರ್ತನವು ಮಾಡಲು ಪಾತಕವು ಪರಿಹರವು

ಮಾತುಳಾಂತಕನ ಮಹಿಮೆ ಘನವು

ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು

ನಾಶಗೈವನು ದುರಿತರಾಶಿಗಳನು

ಮಾಡಿದಪರಾಧಗಳ ಮಾಧವನು ಮನ್ನಿಸುವ

ಶ್ರೀಧರನ ಸ್ತುತಿಸಿ ಕೊಂಡಾಡುತಿಹರ

ಕರುಣಾಕರ ಕಮಲನಾಭವಿಠ್ಠಲ

ದುರಿತದೂರನು ಕಾಯ್ವ ಶರಣಜನರ 2


ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ

ಪರಮ ಮಂಗಳನೀವ ಪರಮಾತ್ಮನು

ದುರಿತ ದೂರನ ಪಾದಸ್ಮರಣೆ ಮಾಡುವರಿಗೆ

ಪರಿಪರಿಯ ಸೌಖ್ಯಗಳ ಕೊಡುವ ದೇವ

ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ

ದಧಿ ವಾಮನ ಮೂರ್ತಿ ಶ್ರೀಮಾಧವ

ಕನಕಗರ್ಭನ ಪಿತನು ಕರುಣಾನಿಧಿಯು

ಕಮಲನಾಭ ವಿಠ್ಠಲ ಕಾಯ್ವ ಸುಜನರ3


ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ

ಧರಣಿ ಈರಡಿಗೈದ ದಿವ್ಯಪಾದ

ಶರಧಿಯೊಳು ಧುಮುಕಿ ಫಣಿ ಹೆಡೆಯ ತುಳಿದ ಪಾದ

ವರ ಋಷಿಗಳೆಲ್ಲ ವಂದಿಸುವ ಪಾದ

ಇಂದಿರಾದೇವಿ ಬಹುಚಂದದಿಂದೊತ್ತುತ

ಕಂದರ್ಪನಯ್ಯನಿಗೆ ಪಾದಸೇವ

ಚಂದದಿಂದಲಿ ಮಾಡಿ ಮಾಧವನಿಗೆ

ನಂದಗೋಪಿಯ ಕಂದ ಸಲಹುಎನಲು

ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4


ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು

ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ

ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ

ಭಕ್ತರ ಹೃದಯದಲಿ ಪೊಳೆವ ದೇವ

ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು

ಮತ್ತೆ ಪಾವಡಿ ಥಳಥಳನೆ ಹೊಳೆಯೆ

ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ

ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ

ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5


ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ

ಕಂದರ್ಪನಯ್ಯ ಕಮಲಾಕ್ಷ ಹರಿಯೂ

ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ

ಇಂದೀವರಾಕ್ಷಿ ನಸುನಗುತ ಬೇಗ

ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ

ವಂದಿಸುತ ಸಿರಬಾಗಿ ಚಂದದಿಂದ

ಮಂದಾರ ಪಾರಿಜಾತಗಳ ತಂದು

ತಂದೆ ಕಮಲನಾಭ ವಿಠ್ಠಲನ ಮುಡಿಗೆ

ಸಂಭ್ರಮದಿ ಮಳೆಗರೆಯೆ ಚಂದದಿಂದ 6


ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ

ಮೀಸಲಾಗಿಹನು ಹರಿದಾಸ ಜನಕೆ

ಪೋಷಿಸೆಂದೆನುವವರ ದೋಷಗಳನೀಡಾಡಿ

ದೋಷರಹಿತನು ಪೊರೆವ ಸರ್ವಜನರ

ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ

ವಾಸುಕೀಶಯನ ಸಜ್ಜನರ ಪೊರೆವ

ಮುರಳೀಧರ ಮಾಧವನು ಕರುಣದಿಂದ

ಶರಣ ಜನರನು ಪೊರೆವ ಮರೆಯದೀಗ

ಕಮಲನಾಭವಿಠ್ಠಲನು ಕಾಯ್ವದೇವ 7


ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು

ಕೃಷ್ಣನ ಕೊರಳಿಗ್ಹಾಕುತಲಿಬೇಗ

ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ

ವಿಚಿತ್ರದಿಂದಾಡುತಿರೆ ನೋಡಿ ಸುರರು

ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ

ಅರ್ಥಿಯಿಂದ ಸುರಿಸುತಿರೆ ಹರುಷದಿಂದ

ಅಪ್ರಮೇಯನು ಶ್ರೀಶ ಶ್ರೀನಿವಾಸ

ಸರ್ಪಶಯನನು ಕಮಲನಾಭ ವಿಠ್ಠಲ

ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8


ಆತ್ಮನಿವೇದನವ ನಿತ್ಯ ತೃಪ್ತಗೆ ಮಾಡಿ

ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ

ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ

ಅಚ್ಚುತಾನಂತನಿಗೆ ಅರ್ಪಿಸುತಲಿ

ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ

ನಿತ್ಯ ಮುಕ್ತಳು ಮಾಡಿ ಹರುಷದಿಂದ

ಸತ್ಯ ಸಂಕಲ್ಪ ಶ್ರೀ ಮಾಧವನಿಗೆ

ಮುತ್ತಿನಾರತಿ ಬೆಳಗಿ ಅರ್ಥಿಯಿಂದ

ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9

***