Showing posts with label ಶ್ರೀಗುರುವಿನಂಘ್ರಿಯ ಯೋಗದಿಂದಲಿ vijaya vittala ankita suladi ಮಧ್ವವತಾರ ಸುಳಾದಿ SRI GURUVINANGHRIYA MADHWA AVATARA SULADI. Show all posts
Showing posts with label ಶ್ರೀಗುರುವಿನಂಘ್ರಿಯ ಯೋಗದಿಂದಲಿ vijaya vittala ankita suladi ಮಧ್ವವತಾರ ಸುಳಾದಿ SRI GURUVINANGHRIYA MADHWA AVATARA SULADI. Show all posts

Sunday 8 December 2019

ಶ್ರೀಗುರುವಿನಂಘ್ರಿಯ ಯೋಗದಿಂದಲಿ vijaya vittala ankita suladi ಮಧ್ವವತಾರ ಸುಳಾದಿ SRI GURUVINANGHRIYA MADHWA AVATARA SULADI

Audio by Vidwan Sumukh Moudgalya

ಶ್ರೀಗುರುವಿನಂಘ್ರಿಯಯೋಗದಿಂದಲಿ..
 ಮಧ್ವವತಾರ ಸುಳಾದಿ  ಶ್ರೀ ವಿಜಯದಾಸರ ರಚನೆ 
ರಾಗ: ಕಾಂಬೋಧಿ
SRI GURUVINANGHRIYA
ಶ್ರೀವಿಜಯದಾಸಾರ್ಯ ವಿರಚಿತ 

 ಶ್ರೀಮಧ್ವಾವತಾರ ಸ್ತೋತ್ರ ಸುಳಾದಿ 

 ರಾಗ ಕಾಂಬೋಧಿ 

 ಧ್ರುವತಾಳ 

ಶ್ರೀಗುರುವಿನಂಘ್ರಿಯ ಯೋಗದಿಂದಲಿ ತಿಳಿದು
ಬಾಗಿ ನಮೋ ಎಂದು ಬಾಗಿಸುವೆ
ಭಾಗವತರ ಮಣಿ ಆಗಮ ವಿಖ್ಯಾತ
ನಾಗಾರಿ ನಾಗ ಪನ್ನಗಾಭರಣಾದಿಗಳಿಗೆ ಜ್ಞಾನ -
ವಾಗಲಿಸಿದ ತತ್ವಸಾಗರ ಶುಭಚಂದ್ರ
ಯೋಗಿಗಳರಸ ರಾಗದ್ವೇಷದೂರ
ರಾಘವನ ಕಿಂಕರ, ಮಾಗಧನ ಸಂಹಾರ ಭಾಗಿರಥಿ ಪಾರ ಸಾಗರಶಯನ ಮಹಾಭಾಗ ವಿಜಯವಿಟ್ಠಲನ್ನ 
ಭೋಗದಲ್ಲಿಟ್ಟ ಭಾವಿ ವಾಗೀಶನು ಪವನ ॥ 1 ॥ 

 ಮಟ್ಟತಾಳ 

ಕುಸುಮವ ತರಪೋಗಿ ಅಸಮ ಸಹಸ ಭೀಮ
ಅಸುರ ಮಣಿಮಾನನ ಮರ್ಧಿಸಲಾ ಹಗೆಯಲ್ಲಿ
ವಸುಧೆಯೊಳಗೆ ಜನಿಸಿ ಸಂಕರನೆಂದು
ಪೆಸರಾದ ದುರುಳನು ಕುಶಲಮತಿಗಳೆಲ್ಲ
ಹಸಗೆಡಿಸಿದನಂದು ವಸುಧೆಯೊಳಗೆ ಬಂದು
ವೃಷಾಹೀ ನಾಮ ವಿಜಯವಿಟ್ಠಲನ್ನ 
ಬಿಸಜಪದಕೆ ಬಲು ದ್ವಿಷಗನು ತಾನಾಗಿ ॥ 2 ॥ 

 ರೂಪಕತಾಳ 

ಮಿಥ್ಯಾಮಾಯಿ ದುರಮಿಥ್ಯಾ ಶಾಸ್ತ್ರವ ಮಾಡಿ
ಸತ್ಯಾಚಾರವ ಕಳೆದಸತ್ಯದಲ್ಲೀ
ನಿತ್ಯ ಪರಮಾತ್ಮಗೆ ನಿತ್ಯ ದುಃಖವನೆ
ಅತ್ಯಂತ ಅಭೇದಾರ್ಥ ಪೇಳಲು
ಭೃತ್ಯ ತನ್ನೊಡಿಯನ ಹತ್ಯ ಮಾಡಿದಂತೆ
ಮೃತ್ಯುವಿಗೆ ಎಡೆಯಾಗಿ ನಿತ್ಯ ಬಾಳುವನು
ಸತ್ಯಧರ್ಮ ನಾಮ ವಿಜಯವಿಟ್ಠಲನ್ನ 
ಸ್ತೌತ್ಯ ಮಾಡದಲೆ ಅಕೃತ್ಯನಾಗುವನು ॥ 2 ॥ 

 ಝಂಪೆತಾಳ 

ಪಾಖಂಡಿ ಸಂಕರನು ಏಕಮೇವನು ತಾನೇ
ಲೋಕಕ್ಕೆ ಸೋऽಹಂ ಎಂದು ಸಂಚರಿಸೆ
ಪಾಕಶಾಸನಾದಿಗೆ ಕೊಡುವ ಆಹುತಿ
ಹಾಕಿ ತಾನೆ ಮರಳಿ ಭುಂಜಿಸಲು
ನಾಕಾದಿ ಜನರು ಬಲು ವ್ಯಾಕುಲದಲಿ ಪೋಗಿ
ಆ ಕಮಲಾಸನಗೆ ಬಿನ್ನೈಸಲು
ವಾಕು ಕೇಳುತಲೆ ಶ್ರೀವೈಕುಂಠವಾಸಗೆ
ಲೋಕೇಶ ವಿವರಿಸಲು ಕರುಣದಿಂದಾ -.
ನೇಕ ನಾಮ ನಮ್ಮ ವಿಜಯವಿಟ್ಠಲನು ಕೃ -
ಪಾಕರನಾಗಿ ಪವನಗೆ ನಿರೂಪಿಸಿದಾ ॥ 4 ॥ 

 ತ್ರಿವಿಡಿತಾಳ 

ವಸುಧಿಯೊಳಗೆ ಜನಿಸಿ ವಾಸುದೇವನೆಂಬ
ಪೆಸರಲಿ ಮೆರೆದು ರಕ್ಕಸ ಸಂಕರನ ಮುರಿದು
ದಶ ಪ್ರಕರಣ ಸೂತ್ರ ವ್ಯಾಖ್ಯಾನ ದಶ ಉಪ -
ನಿಷದ್ಭಾಷ್ಯ ಗೀತಾತ್ರಯತಾತ್ಪರ್ಯ
ಎಸೆವ ಯಮಕಭಾರತ ಸದಾಚಾರ ಸ್ಮೃತಿ ದ್ವಾ -
ದಶಸ್ತೋತ್ರ ಕೃಷ್ಣಾಮೃತಮಹಾರ್ಣವ ಮೇಣು
ಅಸಮ ತಂತ್ರಸಾರ ಜಯಂತಿನಿರ್ಣಯ
ಹಸನಾಗಿ ಯತಿಚಲ್ಪ ನರಸಿಂಹ ಸ್ತುತಿ ಇನಿತು
ರಸಪೂರಿತವಾಗಿ ಪಸರಿಸಿದವು ತ್ರಿ -
ದಶ ಮೇಲೆ ಏಳು ರಂಜಿಸುವ ಸುಧಾಕಥಾ
ಪ್ರಸರವಾಗರದು ತಾಮಸಜ್ಞಾನ ಪರಿದು ಕಿ -
ಮಸನೆ ನಾಮ ವಿಜಯವಿಟ್ಠಲನ್ನ ನೆನೆದು ॥ 5 ॥ 

 ಅಟ್ಟತಾಳ 

ದುರುಳ ಸಂಕರನ ಉತ್ತರವನ್ನು ಖಂಡಿಸಿ
ಪರಮಾತ್ಮ ಅಖಿಳ ಜೀವರಿಗೆ ಭಿನ್ನನೆಂದು
ಬಿರಿದು ಡಂಗುರ ಹೊಯಿಸಿ ಧರೆಯೊಳು ಮೆರದು ಶ್ರೀ -
ಹರಿಯಲ್ಲದನ್ಯತ್ರ ಪರದೈವವಿಲ್ಲೆಂದು
ದರುಶನ ಗ್ರಂಥ ಶಿಷ್ಯರಿಗೆ ಬೋಧಿಸಿ ವೀರ -
ವರ ವೈಷ್ಣವರನ ಉದ್ಧರಿಸಿದ ಭಾರತಿ -
ಯರಸ ಜಗದ್ಗುರು ಧರೆಯರಸ ಗದಾ -
ಧರ ವಿಜಯವಿಟ್ಠಲನ್ನ ಚರಣ ವಿನುತನೆ ॥ 6 ॥ 

 ಆದಿತಾಳ 

ಗುರುಮುಖವಿಲ್ಲದಲೆ ದೊರಿಯದು ಜ್ಞಾನಮಾರ್ಗ
ಅರಿದು ಸುಜನರೆಲ್ಲ ಮರುದಂಶ ಯತಿವರನ
ಮರಿಯದಲನುಸರಿಸಿ ದುರುಳ ಮಾರ್ಗವ ತೊರೆದು
ಸುರಳಿತರಾದ ವೈಷ್ಣವರ ಚರಣ ಮೊರೆ ಹೋಗೆ
ಕರುಣಿಸುವ ಮಹಧನ ವಿಜಯವಿಟ್ಠಲ ಬಿಡದೆ
ಸರಿಯಿಲ್ಲ ಮಧ್ವಮತ ಶರಧಿಯಲ್ಲಿದ್ದವನಿಗೆ ॥ 7 ॥ 

 ಜತೆ 

ಅದ್ವೈತವನದಾವ ಮಧ್ವರಾಯನ ಶ್ರೀಪಾ -
ದದ್ವಯ ನೆನೆದು ವಿಜಯವಿಟ್ಠಲನ್ನ ಸೇರೊ ॥
********
 

 ಲಘುಟಿಪ್ಪಣಿ : 
 ಹರಿದಾಸರತ್ನಂ ಶ್ರೀಗೋಪಾಲದಾಸರು 

 ಧ್ರುವತಾಳದ ನುಡಿ : 

 ಯೋಗದಿಂದಲಿ = ಧ್ಯಾನದಿಂದಲಿ ;
 ಬಾಗಿಸುವೆ = ಶರೀರ ಹಾಗೂ ಮನಸ್ಸನ್ನು ಒಪ್ಪಿಸುವೆ ;
 ಭೋಗ = ಶರೀರ ; 

 ಮಟ್ಟತಾಳದ ನುಡಿ : 

 ದ್ವಿಷಗನು = ದ್ವೇಷ ಮಾಡುವವ ;
 ಮಹಾಭಾಗ = (ವಿ ಸ ನಾ 371) ಮಹತ್ವ ಪೂರ್ಣಗಳಾದ ಸ್ವರೂಪಾಂಶ ಉಳ್ಳವನು ;
 ವೃಷಾಹೀ = ( ವಿ ಸ ನಾ 256) ಧರ್ಮದ ಜ್ಞಾನವನ್ನು ಅತಿಶಯವಾಗಿ ನಿತ್ಯವೂ ಹೊಂದಿರುವವನು ; 

 ರೂಪಕತಾಳದ ನುಡಿ : 

 ಎಡೆಯಾಗಿ = ಆಹಾರವಾಗಿ ;
 ಸ್ತೌತ್ಯ = ಸ್ತುತಿ ; 

 ಝಂಪೆತಾಳ ನುಡಿ : 

 ಪಾಖಂಡಿ = ವೇದೋಕ್ತ ಧರ್ಮಗಳನ್ನು ಖಂಡಿಸುವವನು ;
 ಸತ್ಯಧರ್ಮ = (ವಿ ಸ ನಾ 529) ಸತ್ಯವಾದ ಜಗತ್ತನ್ನು , ಶ್ರೀವಾಯುದೇವನನ್ನು ಧರಿಸಿರುವವನು ;
 ನೇಕ = (ವಿ ಸ ನಾ 725) ಸ್ವರೂಪಾತ್ಮಗಳಾದ ಅನಂತಗುಣ ರೂಪ - ಕ್ರಿಯೆ - ಅವಯವಗಳುಳ್ಳವನು ; 

 ಅಟ್ಟತಾಳದ ನುಡಿ : 

 ಉತ್ತರ = ಮತ, ಅಭಿಪ್ರಾಯ ; 

 ಆದಿತಾಳದ ನುಡಿ : 

 ಸುರಳಿತರಾದ = ವಿನಯಗುಣ ಸಂಪನ್ನರಾದ ಜ್ಞಾನಿಗಳು ; 

 ಜತೆ ನುಡಿ : 

 ಅದ್ವೈತವನದಾವ = ಜೀವೇಶ್ವರ ಐಕ್ಯವನ್ನು ಪ್ರತಿಪಾದಿಸುವ - ಅದ್ವೈತವೆಂಬ ಕಾಡಿಗೆ  ಕಾಡ್ಗಿಚ್ಚಿನಂತಿರುವ ;
 ಗದಾಧರಃ = (ವಿ ಸ ನಾ 997) ಕೌಮೋದಕೀ ಎಂಬ ಗದೆಯನ್ನು ಧರಿಸಿರುವವನು ;
 ಮಹಧನ = (ವಿ ಸ ನಾ 3, 434) ಉತ್ತಮವಾದ ಸಂಪತ್ತು ಉಳ್ಳವನು ;
 ಮಧ್ವ = 'ಮಧು' ಎಂದರೆ ಆನಂದಕರವೆಂದು ಅರ್ಥವು, 'ವ' ಎಂದರೆ ಜ್ಞಾನಕರವಾದ ಶಾಸ್ತ್ರವೆಂದು ಹೇಳಲ್ಪಟ್ಟಿದೆ. ಹೀಗಾಗಿ 'ಮಧ್ವ' ಎಂದರೆ ಆನಂದಕರವಾದ ಶಾಸ್ತ್ರ ಪ್ರಣೀತರೆಂದು ಅರ್ಥ.

🙏 ಶ್ರೀಕೃಷ್ಣಾರ್ಪಣಮಸ್ತು 🙏  


for sahitya 

***********