Showing posts with label ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ vaikunta vittala. Show all posts
Showing posts with label ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ vaikunta vittala. Show all posts

Sunday 1 August 2021

ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru

ಗಜೇಂದ್ರಮೋಕ್ಷ


ನಾರಾಯಣ ಎನ್ನಿರೊ ನಾರಾಯಣ ಎನ್ನಿ

ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ

ಕಾರುಣ್ಯಲೋಚನಾಯ ನಾಗೇಂದ್ರಶಯನಾಯ

ಘೋರ ಭವದುಃಖ ಸಂಹಾರಾಯ ಪ


ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ

ಮಂಡಲಾಧಿಪನು ವೈರಾಗ್ಯದಲಿ ಹರಿಪಾದ

ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ

ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ

ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ-

ದ್ದಂಡ ಶಾಪವನಿತ್ತು ಮುನಿ ಪೋಗಲಿತ್ತ

ತಾ ಶುಂಡಾಲನಾದನರಸ 1


ಕ್ಷೀರಸಾಗರ ತಡದೊಳೈವತ್ತು ಯೋಜನ ವಿ-

ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ

ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ

ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ

ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ

ಬೀರಾದಿ ತರುಗುಲ್ಮ ಖಗಮೃಗಗಳೆಸೆವಲ್ಲಿ

ವಾರಣೀಂದ್ರನು ಮೆರೆದನು 2


ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ

ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ

ತಾ ನೀರಡಿಸಿ ಬಂದೊಂದು ಸರೋವರವ

ಕಂಡಿತು ಪಾನಾಭಿಲಾಷೆಯಿಂದ

ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ

ಏನಿದೆತ್ತಣ ರಭಸವೆಂದುಗ್ರಕೋಪದಿಂ

ದಾ ನೆಗಳು ಬಾಯ್ತೆರೆದು ನುಂಗಿತೊಂದಘ್ರಿಯನು

ಏನೆಂಬೆನಾಕ್ಷಣದೊಳು 3


ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ

ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ

ದೊತ್ತಿ ತಂದನು ಕಡೆಗೆ ಮತ್ತೆ ನಡುಮಡುವಿನೊಳಗೆ

ಸೆಳೆದುದು ಬಿಡದೆ ನೆಗಳವು

ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ

ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ

ಶಕ್ತಿ ತಗ್ಗಿತು ತನ್ನ ಮನದೊಳಗೆ

ಚಿಂತಿಸುತ ಮತ್ತ್ಯಾರು ತನಗೆನುತಲಿ 4


ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ

ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು

ವಂದಿಸುತ ಮನದೊಳರವಿಂದನಾಭಾಚ್ಯುತ

ಮುಕುಂದ ಮುನಿವೃಂದವಂದ್ಯಾ

ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ

ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ

ನಿಂದು ಬಹುಸಿಲುಕಿದೆನು ದಂದುಗದ

ಮಾಯಾಪ್ರಬಂಧದಿ ನೆಗಳಿನಿಂ 5


ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ

ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ

ಪರತತ್ವ ಪರಬ್ರಹ್ಮ ಪರಮಾನಂದಾ

ಪರಮೇಷ್ಠಿ ಪರಮಪುರುಷಾ

ನಿರುಪಮ ನಿಜಾನಂದ ನಿರ್ಭಯ ನಿರಾವರಣ

ನಿರವಧಿಕ ನಿರ್ಗುಣ ನಿರಂಜನ ನಿರಾಧಾರ

ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6


ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊ

ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ

ನಂತ ಮಹಿಮನು ಕೇಳಿ

ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು

ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ

ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ

ಕಾಂತ ಭಕ್ತನ ಬಳಿಗೆ ಬಂದೆರಡುಗೈಯಿಂ

ದಂತಿವದನನ ನೆಗಹಿದಾ 7


ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ

ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ

ತೆಗೆದುದಾಕ್ಷಣವೆ ಮಣಿಮುಕುಟ

ಕುಂಡಲದಿಂದ ಮಿಗೆ ಶೋಭಿಸುತಲೆಸೆದನು

ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ

ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ

ನಘಹರನ ಕಂಡು ನಿಜಗತಿಗೈದು

ಅಮರರೊಲುಮೆಗೆ ನೆರೆದನೋಲೈಸುತ 8


ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ

ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ

ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು

[ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ

ಕ್ಷಣದ ಸಿರಿ ಮೊಗದ ಪೀತಾಂಬರದಾಲಂಕೃತದ

[ಗಣಿತನು] ಜಯ ಜಯವೆಂದು

ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9


ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ

ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ

ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು

ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು

ವಿಪ್ರಋಷಿದೇಶಿಗರನಾಚಂದ್ರಾರ್ಕ ವಾಗಿ

ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10


ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ

ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ

ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ-

ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ

ತಾ ವಿಹಂಗಾಧಿಪನನೇರಿ ಬಿಜಯಂಗೈದ

ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11

***