Showing posts with label ಮಂದಮತಿ ಮನಸು vijaya vittala ankita suladi ಉಪಾಸನಾ ಸುಳಾದಿ MANDAMATI MANASU UPASANA SULADI. Show all posts
Showing posts with label ಮಂದಮತಿ ಮನಸು vijaya vittala ankita suladi ಉಪಾಸನಾ ಸುಳಾದಿ MANDAMATI MANASU UPASANA SULADI. Show all posts

Saturday 5 December 2020

ಮಂದಮತಿ ಮನಸು vijaya vittala ankita suladi ಉಪಾಸನಾ ಸುಳಾದಿ MANDAMATI MANASU UPASANA SULADI


Audio by Mrs. Nandini Sripad


ಶ್ರೀ ವಿಜಯದಾಸಾರ್ಯ ವಿರಚಿತ  ಉಪಾಸನಾ ಸುಳಾದಿ 

( ಬಾಹಿರದಲ್ಲಿ ಪ್ರತಿಮಾರ್ಚನೆ ಅಮುಖ್ಯ . ಧ್ಯಾನವೇ ಮುಖ್ಯವೆಂದು ಬಿಂಬಪ್ರಾರ್ಥನೆ ) 


 ರಾಗ ತೋಡಿ 


 ಧ್ರುವತಾಳ 


ಮಂದಮತಿ ಮನಸು ಮಂಗನಂತೆಯಾಗಿ

ಸಂದೇಹ ಬಿಡದಲೆ ಸಂಶಯದಲ್ಲೀ

ಮುಂದೆ ಉಳ್ಳಾ ವಸ್ತಾ ಎಡಹಿ ಮುಂಗಾಣದಂತೆ

ಅಂಧಕ ನಾನಾದೆ ಅಕಟಕಟಾ

ಹಿಂದಣ ಸಂಚಿತವೊ ಮುಂದೆ ಯಾಗುವಾಗಮವೊ

ಇಂದನುಭವಿಸುವ ಪ್ರಾರಬ್ಧವೊ

ಒಂದೆ ಒಂದೆ ದೈವಯಂದಾ ಬಿಂಬಮೂರುತಿ

ಇಂದು ಹೃದಯಾರವಿಂದದೊಳು

ಅಂದವಾಗಿರೆ ಮನ ಪೊಂದದಲೆ ಬರಿದೆ

ಸಂದರುಶನವಿಲ್ಲಾ ಇಲ್ಲಾವೆಂದೂ

ಕುಂದಿ ಬೆಂಡಾಗುವದು ಏನೆಂಬೆ ಎಲೊ ಜೀಯ

ಬಂದ ವ್ಯಾಕುಲ ಇನ್ನು ತೊಲಗದಲ್ಲಾ

ಪೊಂದಿದೆನು ಶಶಿಬಿಂದು ವಿಜಯವಿಟ್ಠಲ 

ವಂದಿಸುವೆನು ನಿನ್ನ ದ್ವಂದ್ವಾಬ್ಜಪದಕೆ ॥ 1 ॥ 


 ಮಟ್ಟತಾಳ 


ಅಂತರಂಗದಲ್ಲಿ ಅಂತರಾತ್ಮಕ ನೀನು

ಸಂತತ ಪೊಳೆವುತ್ತ ನಿಂತು ಸೊಬಗಿನಿಂದ

ಸಂತೋಷದ ಮೂರ್ತಿವಂತನಾಗಿ ಇರಲೇ -

ಕಾಂತ ವಿಜಯವಿಟ್ಠಲ ಚಿಂತೆ ಪೋಗದಲ್ಲೊ ॥ 2 ॥ 


 ರೂಪಕತಾಳ 


ಒಳಗೊಂದು ಮೂರುತಿ ನೆಲೆಯಾಗಿ ಇರಲಾಗಿ

ನೆಲೆಯನ್ನು ತಿಳಿಯದೆ ಕಲಿಮತ ಬಿಡದಲೆ

ಕೆಲಸಾರಿ ಬಲುಹಾರಾ ಬಳಿಯಲ್ಲಿ ಇಪ್ಪವಾ -

ಚಲ ಮೂರ್ತಿಗಳಿಗಾಗಿ ಬಳಲಿ ಬಳಲಿ ನಾನು

ಅಲಸೀದೆ ಅನುಗಾಲ ಬೆಳಗುವಿಡಿಯ ಪೋಗಿ

ತಳಕೆಳಗಾದಂತೆ ಅಳಲೀದೆನೊ ಅನು -

ಕುಲ ವಿಜಯವಿಟ್ಠಲನೆ ಗಳದ ಸತ್ವ ಮೀರಿ

ಸಿಲಚೆಯ ಪೊತ್ತಂತೆ 

ಇಳಿಯೊಳಗತಿ ಮೂರ್ಖ ಕುಲಶಿರೋಮಣಿಯಾದೆ ॥ 3 ॥ 


 ಝಂಪೆತಾಳ 


ಸಮೀಪದಲ್ಲಿದ್ದ ಸಡಗರದ ಚಲುವ

ಅಮೃತಾನ್ನದ ಯಡೆ ಆದರಣಿ ಇಲ್ಲದಲ್ಲಿ

ಸಮ್ಮತವಾಗಿರಲು ಕಾಲಕಾಲಕೆ ಸವಿದು

ಅಮೃತವ ಬೇಡದಲೆ ಬಲು ಅನಾದರದಲ್ಲಿ

ಹಮ್ಮು ತೊರಿಯದಲೇವೆ ದೂರಿದ್ದ ಯಂಜಲ

ವೊಮ್ಮುಸುರೆ ಎಡೆ ಬಯಿಸಿ ಬಯಿಸಿದಂತೆ

ಇಮ್ಮನ ನಾನಾಗಿ ಅಜ್ಞಾನದಲ್ಲಿನ್ನು

ಅಮೃತ ವಿಜಯವಿಟ್ಠಲ ವಿಶ್ವಮಾಯಕನೆ

ಹೆಮ್ಮೆಯಿಂದಲಿ ಬಾಳಿ ಗತಿರಹಿತನಾದೆ ॥ 4 ॥ 


 ತ್ರಿವಿಡಿತಾಳ 


ಆಕಾರವಾಗಿ ಅರ್ಚನೆಗೊಂಬ ದೈವವು

ಸಾಕಾರವಾಗಿ ಸಂಪತ್ತು ಪಾಲಿಸುತ ರವಿ -

ಯಾಕಾರದಂತೆ ರಂಜಿಸುತಾ ಮನಿಯೊಳಗಿರೆ

ಪ್ರಾಕಾರಾ ಶಿಲಿಗಳಿಗೆ ಕೈಯಾ ಮುಗಿದು ವರ -

ವಾ ಕರುಣಿಸು ಎಂದು ಮಡೆ ಹೊರಳಿ ಪೂಜಿಸುವ

ವೀಕಾರ ಮನುಜಗೆ ಸಂಪ್ರೀತಿಯಾಗುವದೇ

ಪ್ರಾಕಾರ ಕಲ್ಲುಗಳು ವರ ಕೊಡಬಲ್ಲವೆ

ಏಕಪಾದ ನಾಮ ವಿಜಯವಿಟ್ಠಲ ನಿನ್ನ

ವಾಕರಿಸೀ ಅನ್ಯರನು ಹಂಬಲಿಸುವೆನೋ ॥ 5 ॥ 


 ಅಟ್ಟತಾಳ 


ಬಿಂಬ ಮೂರುತಿಯ ಅಪರೋಕ್ಷವಾಗದೆ ಗತಿ -

ಯೆಂಬದು ಸಲ್ಲಾದು ಎಲ್ಲರಿಗೇ

ಬಿಂಬನೆಂಬ ಪ್ರಾಜ್ಞನನುಭವ ತಿಳಿದು

ನಂಬುವಂತೆ ಮಾಡು ವಿಜಯವಿಟ್ಠಲರೇಯಾ ॥ 6 ॥ 


 ಆದಿತಾಳ 


ನಿತ್ಯನೈಮಿತ್ಯಗಳು ಆವಾವ ಕರ್ಮಗಳು

ಕೃತಾರ್ಥನಾಗಿ ಸಂಚರಿಸಿದರು

ನಿತ್ಯ ತನ್ನೊಳಗಿದ್ದ ಬಿಂಬಗೆ ಆವಾಹನಿಸಿ

ಭೃತ್ಯನು ನಾನು ಎಂದು ಪೂಜಿಸಿದಲೆ

ನಿತ್ಯ ಪದವಿ ಇಲ್ಲಾ ಶ್ರುತ್ಯರ್ಥದಲ್ಲಿ ಪೇಳೆ

ಅತ್ಯಂತದಲ್ಲಿ ಕೇಳಿ ಮೊರೆ ಬಿದ್ದೆನೊ

ಸತ್ಯಧರ್ಮ ಪರಾಕ್ರಮ ವಿಜಯವಿಟ್ಠಲರೇಯಾ 

ಮಿಥ್ಯ ಸಂಗವನೀಯದೆ ಕೃತ ಕೃತ್ಯನ್ನ ಮಾಡೊ ॥ 7 ॥ 


 ಜತೆ 


ಅಂಗುಟ ಪರಿಮಿತಿವಾಗಿ ಎನ್ನೊಳು ನಿಂದೂ

ಶ್ರಿಂಗಿಣಿ ವಿಜಯವಿಟ್ಠಲ ಎನ್ನ ಕರುಣಿಸೊ ॥

******