Showing posts with label ಯಾಕಿಲ್ಲಿ ಪವಡಿಸಿದ್ಯೊ ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ gopalakrishna vittala. Show all posts
Showing posts with label ಯಾಕಿಲ್ಲಿ ಪವಡಿಸಿದ್ಯೊ ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ gopalakrishna vittala. Show all posts

Monday 2 August 2021

ಯಾಕಿಲ್ಲಿ ಪವಡಿಸಿದ್ಯೊ ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ankita gopalakrishna vittala

ಯಾಕಿಲ್ಲಿ ಪವಡಿಸಿದ್ಯೊ

ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ.

ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ

ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ.

ಅಂದು ಪ್ರಳಯೋದಕದಿ ಸಿರಿ ಆಲದೆಲೆಯ ಮೇ-

ಲೊಂದು ಬೆರಳನೆ ಚೀಪುತ

ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು

ಮಂದಹಾಸದಿ ನಲಿಯುತ

ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ

ನೋಡಲಿಲ್ಲೆಂದೆನುತ

ಇಂದು ಈ ನಾಗರಾಜನ ಮಂಚವನೆ ಏರಿ

ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1

ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ

ಭುಜಗಶಯನನೆ ಮಲಗಿದ್ಯಾ

ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ

ಆಯಾಸದಿಂ ಮಲಗಿದ್ಯಾ

ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು

ಸಾಕಾಗಿಲ್ಲಿ ಶಯನಿಸಿದೆಯಾ

ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ

ಬಳಲಿ ನೀ ಪವಡಿಸಿದೆಯಾ ಸ್ವಾಮಿ 2

ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ

ಬಂದಿಲ್ಲಿ ಮಲಗಿಪ್ಪೆಯಾ

ಕೊಂದು ಜನನಿಯ ಚಿಂತೆಯಿಂದ ಮನದಿನೊಂದು

ಬಂದಿಲ್ಲಿ ಮಲಗಿಪ್ಪೆಯಾ

ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು

ಬಂದಿಲ್ಲಿ ಮಲಗಿಪ್ಪೆಯಾ

ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ

ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3

ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು

ಏರಿ ಮಂಚವÀ ಮಲಗಿದ್ಯಾ

ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ

ಸೇರಿ ಶೇಷನ ಮಲಗಿದ್ಯಾ

ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ

ಬಳಲಿಲ್ಲಿ ಮಲಗಿಪ್ಪೆಯಾ

ನಾರದಾದ್ಯರ ಗಾನ ಕೇಳುತಾನಂದದಿಂ

ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4

ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು

ಯುಕ್ತಿಯಿಂ ಪವಡಿಸಿದೆಯಾ

ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು

ಮುಕ್ತೇಶ ಇಲ್ಲಿ ಮಲಗಿದೆಯಾ

ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು

ಸೋತಿಲ್ಲಿ ಮಲಗಿಪ್ಪೆಯಾ

ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು

ಚಿತ್ತದಲಿ ಇಪ್ಪದೇನೋ ದೇವ 5

ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ

ಅಡಗಿ ನೀ ಮಲಗಿಪ್ಪೆಯಾ

ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ

ಬಲವಂತರನ್ಯಾರೆಲೊ

ಶಶಿವದನ ಭಕ್ತರನುದ್ಧರಿಸಲೋಸುಗದಿ

ಬಂದಿಲ್ಲಿ ಮಲಗಿಪ್ಪೆಯಾ

ಅಸುರಾರಿ ಎನ್ನ ಭವ ಬಂಧನವ ಪರಿಹರಿಸಿ

ಘಸನಗೊಳಿಸದಲೆ ಕಾಯೊ ಜೀಯ 6

ಏಳು ಫಣೆಯ ಸರ್ಪನ ಮೇಲೆ ಮಲಗಿ

ಏಳು ಕಣ್ದೆರದು ನೋಡೋ

ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ

ಏಳು ಮನ್ನಿಸಿ ಪಾಲಿಸೊ

ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ

ಲೀಲೆಯಿಂ ಸ್ವೀಕರಿಸೆಲೊ

ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ

ವ್ಯಾಳೆ ಎನ್ನ ಸಲಹೊ ಸ್ವಾಮಿ 7

****