Showing posts with label ಸ್ವರ್ಗತಿ ನಿರ್ಗತಿ ಸಕಲ vijaya vittala ankita suladi ಕೃಷ್ಣಾವತಾರ ಸುಳಾದಿ SWARGATI NIRGATI SAKALA KRISHNAVATARA SULADI. Show all posts
Showing posts with label ಸ್ವರ್ಗತಿ ನಿರ್ಗತಿ ಸಕಲ vijaya vittala ankita suladi ಕೃಷ್ಣಾವತಾರ ಸುಳಾದಿ SWARGATI NIRGATI SAKALA KRISHNAVATARA SULADI. Show all posts

Friday 27 August 2021

ಸ್ವರ್ಗತಿ ನಿರ್ಗತಿ ಸಕಲ vijaya vittala ankita suladi ಕೃಷ್ಣಾವತಾರ ಸುಳಾದಿ SWARGATI NIRGATI SAKALA KRISHNAVATARA SULADI

 

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ 

 ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ 

 ರಾಗ ನಾಟಿ 

 ಧ್ರುವತಾಳ 

ಸ್ವರ್ಗತಿ ನಿರ್ಗತಿ ಸಕಲ ನಿಗಮ ಮಸ್ತಕ ರನ್ನನೇ
ಅಗಣಿತ ಬಲನೇ ಜಗದಾ ಮೋಹನನೇ
ಸಗುಣ ನಿರ್ಗುಣದವನೇ ಸ್ವಗುರು ಸ್ವವಶನೇ
ಸ್ವಗಮನಾನೇ ಸ್ವಾಂಗ ಝಗಿಪ ಮುಕುಟನೇ
ಮಗುವಾಗಿ ನಗುತ ಮಲಗಿದ ಮಹಿಮನೇ
ಯುಗ ಯುಗದವತಾರ ಅನಾದಿಗನೇ ಜಗಕೆ ಸೋ -
ಜಿಗ ತೋರಿದ ಮಗುವಾದವನೇ
ಹಗಲಿರುಳು ಗೋಪಿಗೆ ಬಗೆ ತೋರಿದವನೇ
ಭೊಗರಿ ಚಂಡು ಚಿಣಿ ಕೋಲಾಡಿದವನೇ
ಚಿಗಿದು ಅಡವಿ ತಿರುಗಿ ವಗರು ಮೆದ್ದವನೇ
ಹಗಲಿರುಳು ಪರರ ವಗತನ ನಳಿದವನೇ
ಬಗೆಬಗೆಯಿಂದಲಿ ಹಗರಣದವನೇ
ಜಗಕೆ ಚನ್ನಿಗ ಗುಪ್ತ ವಿಜಯವಿಟ್ಠಲನೇ 
ವಿಗಡತನದ ವಿನೋದಿಗನೆ ಪಳ್ಳಿಗನೇ ॥ 1 ॥ 

 ಮಟ್ಟತಾಳ 

ಸಾಗರವೆಲ್ಲಾಪೋಷಣೆಗೊಂಬಾ -
ದಾಗಿದೆ ನಿನ್ನ ಕರತಳವಯ್ಯಾ
ವಾಗರ ಗಂಜಿ ಅಂಬಲಿ ಜೋರು
ನೀಗುಡುವೆ ಭೊಗಸಿಯನು ವಡ್ಡಿ
ದಾಗಡಿ ಬಳ್ಳಿ ತಲೆಗೆ ಸುತ್ತಿ 
ಆಗರದೊಳಗೆ ಆಡುವದೇನೋ
ಸೋಗು ತೋರಿದ ವಿಚಿತ್ರ ಚರಿತಾ ಪ್ರ -
ಜಾಗರ ಮೂರುತಿ ವಿಜಯವಿಟ್ಠಲ 
ಹೀಗಲ್ಲದೆ ಮತ್ತಾರರ್ಚಿಸಾರೇ ॥ 2 ॥ 

 ತ್ರಿವಿಡಿತಾಳ 

ಸುತನ ಕನ್ನಿಕೆ ಮಾಡಿ ನೆರವ ಸ್ವರಮಣನೆ
ಕ್ಷಿತಿಯೊಳು ಗೊಲ್ಲರಂಗನಿಯರ ರಮಿಸುವರೆ
ಸತಿಯಾಗಿ ಸುರರಿಗೆ ಅಮೃತವನೆರೆದವನೇ
ಸತಿಯರು ಬೇಕೇನೊ ಮಾಯಾ ಲೀಲಾಗಾರನೇ
ಹಿತವಾಗಿ ಸುರರಿಗುಪದೇಶವಿತ್ತವನೇ
ಕ್ಷಿತಿಸುರ ಸಾಂದೀಪನಲ್ಲಿ ಓದೀಗನೇ
ಯತಿಗಳ ಮನಸಿಗೆ ದೂರತರವಾಗುವನೇ
ರಥವನ್ನು ನಡಿಸಿದ ಬಂಡಿ ಓವಿಗನೇ
ಚತುರ ಶ್ರೀವಿಜಯವಿಟ್ಠಲ ವಿಶ್ವ ನಾಟಕ
ಅತಿ ಆಶ್ಚರ್ಯವ ತೋರಿದ ಸತತ ಚತುರಿಗನೆ ॥ 3 ॥ 

 ಅಟ್ಟತಾಳ 

ಸ್ತಂಭ ಸಂಭವನಾಗಿ ಉದುಭವಿಸಿದ ಪರಿ
ಎಂಬಿನೆ ಶುಕ್ಲ ಶೋಣಿತ ವಿರಹಿತ ದೇವಾ
ಕುಂಭಿಣಿಯೊಳು ದೇವಕಿದೇವಿ ಗರ್ಭದ -
ಲಿಂಬಿಟ್ಟು ಜನನವಾದ ಪರಿ ಆವದು
ತುಂಬರ ನಾರದ ಜಂಭಾರಿ ಶಂಭು ಸ್ವ -
ಯಂಭು ಸುರಾದ್ಯರ ಕುಣಿಸುವ ದೇವ
ಕಂಬು ಕೊಳಲು ತುತ್ತೂರಿ ಮವುರಿ
ಭೊಂ ಭೊಂ ಭೊಂ ಎಂದು ಊದುವ ಜಾಣಾ
ಕುಂಭದೊಳಗೆ ಜಲ ತುಂಬಿ ಅನೇಕರು
ಸಂಭ್ರಮದಿಂದಲಿ ಸಾಲಾಗಿ ನೋಡೆ
ಅಂಬಕಗಳಿ ಗಿಳಿಯಂಬಕ ಪೊಳೆವಂತೆ
ತುಂಬಿದ್ದ ಪರಿಪೂರ್ಣ ವಿಜಯವಿಟ್ಠಲರೇಯಾ ॥ 4 ॥ 

 ಆದಿತಾಳ 

ಘನವಂಗುಟದಲಿನ್ನು ವನಜಜಾಂಡಗಳನ್ನು
ತೃಣದಂತೆ ವ್ಯಾಪಿಸಿ ದಿನವಾ ನಡಿಸುವ ದೈವಾ
ಮನುಜ ವೇಷವ ತಾಳಿ ಜನನಿಯ ಭೀತಿಗೆ ಬಾ -
ಯನು ಮುಚ್ಚಿ ಬಾಲನಾಗಿ ಮನಿಯೊಳಗಿಪ್ಪ ದೇವ
ಅಣು ಘನವೆರಡು ನಿನ್ನನಬಾರದು ನಿನ್ನ
ಗುಣಗಳ ಸರ್ವಲಕ್ಷಣಗಳು ನೂತನವೂ
ಅನಿಶನಾಮಕ ನಮ್ಮ ವಿಜಯವಿಟ್ಠಲರೇಯಾ 
ಅನುಪಮ ಚರಿತ ಚೇತನಾಚೇತನ ಪ್ರಾಣಾ ॥ 5 ॥ 

 ಜತೆ 

ಅಮರಾಸುರರಿಗೆ ಸೌಖ್ಯದುಃಖಕ್ಕೆ ಕಾರಣ
ನಮೋ ನಮೋ ಸೋಮ ವಿಜಯವಿಟ್ಠಲ ಗೋಪ॥
****