Showing posts with label ಧೇನಿಸೊ ಶ್ರೀಹರಿಯ ಮಹಿಮೆ ನೀ ಧೇನಿಸೊ uragadrivasa vittala DHENISO SRI HARIYA MAHIME NEE DHENISO. Show all posts
Showing posts with label ಧೇನಿಸೊ ಶ್ರೀಹರಿಯ ಮಹಿಮೆ ನೀ ಧೇನಿಸೊ uragadrivasa vittala DHENISO SRI HARIYA MAHIME NEE DHENISO. Show all posts

Tuesday 5 October 2021

ಧೇನಿಸೊ ಶ್ರೀಹರಿಯ ಮಹಿಮೆ ನೀ ಧೇನಿಸೊ ankita uragadrivasa vittala DHENISO SRI HARIYA MAHIME NEE DHENISO

Audio by Mrs. Nandini Sripad


ಧೇನಿಸೊ ಶ್ರೀಹರಿಯ ಮಹಿಮೆಯ ಪ


ಧೇನಿಸು ಲಯದ ವಿಸ್ತಾರ ಚತುರಾ

ನಾನಕಲ್ಪದ ವಿವರಾ ||ಆಹಾ||

ಧೇನಿಸು ಶತಾನಂದಗೆ ಶತ-

ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ಅ.ಪ


ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ

ಪದುಮನ ತೋರಿದ ಮಹಾಮಹಿಮ ಆಗ

ಅದೆ ಪ್ರಥಮ ಪರಾರ್ಧವು ನೇಮ ಮೇಲೆ

ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||

ಅದರೊಳು ತ್ರಿದಶ ಏಳರ್ಧ ವರ್ಷವು

ಪದುಮಜನಿಂದ ರಾಜ್ಯವನಾಳಿಸಿದ ಪರಿಯನು 1

ದ್ವಾದಶಾರ್ಧವರುಷ ತಾ ಉಳಿಯೆ ಆಗ

ತೋರ್ದ ಅದುಭೂತವಾದ ಮಹಾಪ್ರಳಯ ಸೂಚ-

ನಾದಿ ಕಾರ್ಯವು ತಾ ಮೆರೆಯೆ ಶತ

ಅಬ್ದ ಅನಾವೃಷ್ಟಿ ತೋರಿರೆ ಆಹಾ||

ಪದುಮಜಾಂಡದೊಳಿಹ ಪ್ರಜೆಗಳ ಸಂಹಾರ

ಉದಧಿ ಶೋಷಣೆಯಿಂದ ಸರ್ವಸಂಹಾರವು 2

ಮೇರುಪರ್ವತ ಸ್ಥಳದಲ್ಲಿ ಇದ್ದ ವಿ-

ಧಿರುದ್ರಾದಿಗಳೆಲ್ಲರಲ್ಲಿ ಮಹ

ನರಸಿಂಹ ಆನಂದದಿಂದಲಿ ಆನಂದ

ತೋರುತ್ತ ಕುಣಿದಾಡುತ್ತಲಿ ||ಆಹಾ||

ಹರುಷೋದ್ರೇಕದಿಂದ ಸಂಗಡ ಕುಣಿಯುವ

ಸುರರವಯವಗಳ ತಾನಲಂಕರಿಸಿದನ 3

ನರಹರಿ ನರ್ತನ ಮಾಡಿ ತನ್ನ

ಕರದಿ ತ್ರಿಶೂಲವನ್ನು ನೀಡಿ ದಿ-

ಕ್ಕರಿಗಳ ಪೋಣಿಸಿ ಆಡಿ ಸರ್ವರಉ-

ದರದೋಳಿಟ್ಟು ಕೂಡಿ ||ಆಹಾ||

ಪರಿಪರಿ ನಟಿಸುವ ನಿಟಿಲದೇವನ ಗ್ರಾಸ

ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ 4

ವಾಯುದೇವರ ಗದಾಪ್ರಹಾರದಿಂದ

ಭಯ ಹುಂಕಾರದಿಂದ ಜೀವರ ಲಿಂಗ

ಕಾಯ ಭಂಗಗೈದವರಾ ಅವರ

ಆಯತ ಸ್ಥಳದಲ್ಲಿಟ್ಟವರಾ ||ಆಹಾ||

ಲಯಕಾಲದಿ ಸಂಕರುಷಣ ಮುಖದಿಂದ

ಲಯವಾಗಲು ಅಗ್ನಿ ಪೊರಟು ದಹಿಪುದಾ 5

ಕರಿಯ ಸೊಂಡಿಲಿನಂತೆ ಮಳೆಯ ಧಾರೆ

ನಿರುತ ಶತವರ್ಷಗರೆಯೆ ನೋಡೆ

ಸರ್ವತ್ರ ಜಲಮಯವಾಗೆ ಆಗ

ನೀರಜಾಂಡವೆಲ್ಲ ಕರಗೆ ||ಆಹಾ||

ಗರುಡ ಶೇಷ ಮಾರ್ಗವರಿತು ಬರುತಿರ್ಪ

ಸರ್ವಜೀವರ ತನ್ನ ಉದರದೊಳಿಟ್ಟನ್ನಾ 6

ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ

ಸುರರು ಕುಬೇರನೊಳಿನ್ನು ಆತ

ವರುಣನಲ್ಲಿ ಲಯವನ್ನೂ ಚಂದ್ರ

ಹರಿಪಾರ್ಷಧರನಿರುದ್ಧನನ್ನು ಆಹಾ

ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ

ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವಾ 7

ಖಗಪನೊಳವಶಿಷ್ಟ ಸುರರು ಮೊದಲು

ಅಗ್ನಿಯೊಳ್ ಲಯವನ್ನೈದುವರು ಆ

ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ

ತಾ ಗುರುವನ್ನ ಸೇರುವನು ||ಆಹಾ||

ಆಗಲೇ ಸರ್ವಮನುಜರು ಪಿತೃಗಳು

ನಿರುಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ 8

ಯಮ ಪ್ರಿಯವ್ರತರಾಯರೆಲ್ಲ ಲಯ

ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ-

ಹಿಮ ಭೃಗುವು ದಕ್ಷನಲ್ಲಿ ಲಯವು

ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ

ಅಮರಪತಿಯು ತಾ ಸೌಪರಣಿಯನು ಪೊಂದಿ

ಈ ಮಾರ್ಗದಿ ತಾನು ಗರುಡನ್ನ ಸೇರುವುದು 9

ಶೇಷಗರುಡರೊಡಗೂಡಿ ಆಗ

ಸರಸ್ವತಿಯನ್ನೆ ಪೊಂದುವರು ಮತ್ತೆ

ಆಸುವಿರಂಚಿ ವಾಯುಗಳು ತಾವು

ಸರಸ್ವತಿಯನ್ನೆ ಪೊಂದುವರು ಆಹಾ

ಈ ಸರಸ್ವತಿ ಕಾಲಬ್ರಹ್ಮನ್ನ ಸೇರುವ

ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ 10

ಸೂತ್ರನಾಮಕ ವಾಯುದೇವ ರುದ್ರ

ಉಮೆಪ್ರದ್ಯುಮ್ನದ್ವಾರ ತ್ರಾತ

ಸಂಕುರುಷಣನಾ ದಯದಿ ಜಗ-

ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ||

ಚತುರಾಸ್ಯ ಜೀವರ ತನ್ನುದರದೊಳಿಟ್ಟು

ಅತಿಮೋದದಿಂದ ವಿರಾಟನ್ನೈದುವುದು11

ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ

ವರಣದಲ್ಲಿ ಇಪ್ಪಂಥ ತನ್ನ

ಧರೆಯಲ್ಲಿ ಲೀನವಾಗುವ ಆಗ

ಪರಿಪರಿಯಿಂದ ತನ್ಮಾತÀ್ರ ಆಹಾ

ಅರಿತು ಶಬ್ದಸ್ಪರ್ಶರೂಪರಸಗಂಧ

ಪರಿಪರಿಯಿಂದಲಿ ಲಯವನ್ನೈದುವುದಾ12

ಗಂಧದ್ವಾರ ಲಯತನ್ನ ಬಿಲದಿ ಜಾತ

ವೇದದಲ್ಲಿ ರಸ ಲಯವು ರೂಪ

ದದ್ವಾರ ಲಯ ವಾಯುವಿನೊಳು ಸ್ಪರ್ಶದ

ದ್ವಾರ ಲಯ ಆಕಾಶದೊಳು-ಆಹಾ-

ಶಬ್ದದ್ವಾರ ಲಯತಮ ಅಹಂಕಾರಾದಿ

ತದಾಂತರ್ಗತÀ ಭಗವದ್ರೂಪದಲ್ಲ್ಯೆಕ್ಯವಾ 13

ಅಹಂಕಾರತ್ರಯದಲಿ ಬಂದಾ ತತ್ತ ್ವ

ದೇಹಸೂರರೆಲ್ಲರ ಲಯವು ಇಹ

ತತ್ವಾಂತರ್ಗತ ಭಗವದ್ರೂಪಕೆ ||ಆಗ||

ಅಲ್ಲಲ್ಲಿ ತನ್ನೊಳೈಕ್ಯವೂ-ಆಹಾ

ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ

ಮಹತ್ತತ್ತ ್ವವು ಮೂಲಪ್ರಕೃತಿಯಲ್ಲಿ ಲಯವು 14

ವಾಸುದೇವಾದಿ ಚತುರ ರೂಪ ಮತ್ಸ್ಯ

ಕೇಶವ ವಿಶ್ವಾದಿ ರೂಪ ಅಜಿತ

ಶ್ರೀಶನನಂತಾದಿರೂಪ ಮತ್ತು

ಶ್ರೀಶನಷ್ಟೋತ್ತರ ರೂಪ ||ಆಹಾ||

ತಾ ಸಕಲರೂಪಗಳು ಮೂಲರೂಪದೊಳೈಕ್ಯ

ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ 15

ಗುಣಮಾನಿ ಶ್ರೀ ಭೂ ದುರ್ಗಾ ಅಂ-

ಭ್ರಣಿ ರೂಪವನ್ನೆ ತಾ ಧರಿಸೀ ಸಂ-

ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ

ಕಾಮನ್ನ ಎಡಬಿಡದೆ ನೋಡೀ ||ಆಹಾ||

ಕ್ಷಣ ಬಿಡದೊಡೆಯನ ಅಗಣಿತಗುಣಗಳ

ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ16


ಏಕೋ ನಾರಾಯಣ ಆಸೀತ ಅ-

ನೇಕ ಜನರ ಸಲಹಲಿನ್ನು ತಾನೆ

ಸಾಕಾರದಲಿ ನಿಂದಿಹನು ಇಂತು

ವೇಂಕಟಾಚಲದಿ ಇನ್ನು ಮುನ್ನು ||ಆಹಾ||

ಏಕಮನಸಿನಿಂದ ಭಜಿಪ ಭಕ್ತರನ ತಾ ನಿ-

ರಾಕರಿಸದೆ ಕಾಯ್ವ ಶ್ರೀ ವೇಂಕಟೇಶಾ ನಿತ್ಯ 17

****