Showing posts with label ವಲಯಾಕಾರಾದ್ರಿ ಸುತ್ತ vijaya vittala ankita suladi ತಿರುಪತಿ ಸುಳಾದಿ VALAYAAKAARAADRI SUTTA TIRUPATI SULADI. Show all posts
Showing posts with label ವಲಯಾಕಾರಾದ್ರಿ ಸುತ್ತ vijaya vittala ankita suladi ತಿರುಪತಿ ಸುಳಾದಿ VALAYAAKAARAADRI SUTTA TIRUPATI SULADI. Show all posts

Monday 9 December 2019

ವಲಯಾಕಾರಾದ್ರಿ ಸುತ್ತ vijaya vittala ankita suladi ತಿರುಪತಿ ಸುಳಾದಿ VALAYAAKAARAADRI SUTTA TIRUPATI SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ತಿರುಪತಿ ಸುಳಾದಿ 

 ರಾಗ ಸಿಂಹೇಂದ್ರಮಧ್ಯಮ 

 ಧ್ರುವತಾಳ 

ವಲಯಾಕಾರಾದ್ರಿ ಸುತ್ತ ಒಪ್ಪುತಿರಲು ಎತ್ತ 
ತಿಳಿದರೆ ಸ್ವರ್ನ ವರ್ನಮಯವಾಗಿದೆ 
ಪೊಳೆವ ಚತುರ ಬೀದಿ ಜ್ಞಾನಾ ಭಕುತಿ ವೈರಾಗ್ಯ 
ಸಲೆ ಧರ್ಮ ಪೆಸರಿನಲ್ಲಿ ಕರೆಸುತಿವಕೊ 
ಥಳಥಳಿಸುವ ಉನ್ನತ ಪ್ರಾಕಾರ ಗೋಪುರ 
ಸುಲಭವಲ್ಲಯ್ಯಾ ಕೊಂಡಾಡುವ ಜನಕೆ 
ಶಿಲೆ ಎನ್ನದಿರಿ ಎಲ್ಲ ಮಣಿಮಯದಿಂದ ವೆ -
ಗ್ಗಳವಾಗಿ ಬಿಗಿದ ಸೊಬಗು ನೋಡಿರೊ 
ತಳಿಗೆ ತೋರಣ ಕಟ್ಟಿ ಪರಮ ಮಂಗಳವಾಗಿ 
ಸುಳಿದಿದೆ ಬಲುಕಾಂತಿ ಗಗನ ಮುಟ್ಟಿ 
ಚಲುವ ಮಹದ್ವಾರ ಪರಿ ಪರಿ ಮಾಟದಾ ಬಾ -
ಗಿಲು ಅಲ್ಲಿ ಕುಳಿತಿದ್ದ ದ್ವಾರದವರು 
ಒಳಗೆ ಗರುಡಗಂಭ ಮತ್ತೆ ಪ್ರಾಕಾರ ಮಧ್ಯ 
ಪೊಳಲು ಭೋಗ ಮಂಟಪ ಸುತ್ತ ಪೌಳಿ
ಕಳಸದಿಂದೊಪ್ಪುವ ವೈಚಿತ್ರವಾದಾನಂದಾ 
ನಿಲಯ ವಿಮಾನ ಮ್ಯಾಲೆ ಗೋಚರಿಪ 
ಬಲು ಮೂರ್ತಿಗಳು ಉಂಟು ವೇದ ಪ್ರಮಾಣವೆನ್ನಿ 
ಸುಳಿವವು ಒಂದೊಂದನಂತವಾಗಿ 
ಬಲಭಾಗದಲ್ಲಿ ಉತ್ತುಮತೀರ್ಥವೊಂದು ವಿ -
ಮಲವಾಗಿದ್ದ ವಾರಿಯಿಂದ ಶೋಭಿಸುತಿದೆ 
ಇಳಿಗಿದೆ ವೈಕುಂಠ ನಿಜವೆಂದು ಸತ್ಯವಾಗಿ 
ತಲೆಬಾಗಿ ಮುನಿಜನ ತುತಿಪದದಕೊ 
ಜಲಜ ಸಂಭವ ಶಿವ ಸುರಪತಿ ಮುಂತಾಗಿ 
ಜಲಚರಾದಿಯ ಜನ್ಮ ಬಯಸಿಪ್ಪರು 
ಒಲಿಸುವರಿತ್ತವೊಂದು ರೂಪದಿಂದಲಿ ತೊಂ -
ಬಲು ಅಪೇಕ್ಷಿಸುತ್ತ ಸಮ್ಮೊಗವಾಗೆಲ್ಲ 
ಬೆಲೆ ಇಲ್ಲದಿಪ್ಪ ವಾದ್ಯಂಗಳ ಘೋಷ ಪರಿಜನದ 
ಗಲಭೆ ನೋಡಿದರಷ್ಟದಿಕ್ಕು ತುಂಬೆ 
ಮಲ ವಿರಹಿತರಾಗಿ ಮುಕ್ತಾಮುಕ್ತರು ತಮ್ಮ 
ಬಳಗದೊಡನೆ ಕ್ರೀಡೆಯಾಡುವರೂ 
ಚಲುವ ತಿರುವೆಂಗಳ ವಿಜಯವಿಠ್ಠಲ ವೆಂಕಟ 
ನೆಲೆಯಾಗಿ ಇಪ್ಪ ಶುದ್ಧ ಭಕ್ತರ ವಶನಾಗಿ ॥ 1 ॥

 ಮಟ್ಟತಾಳ 

ದರ ಸುದರುಶನ ಕಟಿ ಅಭಯಾಹಸ್ತ 
ವರ ಮಣಿ ಮಕುಟ ಕುಂಡಲಕರ್ನನಾಸಾ 
ಸರಸಿಜನಯನ ನೊಸಲ ಕಸ್ತೂರಿ ತಿಲಕ 
ಸಿರಿ ಉರ ಸಿರಿಗಂಧಾ ಕೌಸ್ತುಭ ಮಣಿಪೊನ್ನಾ 
ಸರಿಗೆ ಮುತ್ತಿನ ಹಾರಾವಳಿ ಪದಕ 
ಮಿರಗುವ ಪೊಂಬಟ್ಟೆ ಕಿಂಕಿಣಿ ಉಡಧಾರ
ಬಿರಿದಾವಳಿ ತೊಡರು ಚರಣದಂದಿಗೆ ಗೆಜ್ಜೆ 
ಸರಪಳಿ ಘನ್ನ ಮೆರೆವ ದೇವಾದಿ ಮೂರುತಿ ಚಲುವ 
ಶರಣರ ಪರಿಪಾಲ ವಿಜಯವಿಠ್ಠಲರೇಯ 
ನಿರುತ ಸ್ವಾಮಿ ಸರೋವರ ವಾಸ ತಿರ್ಮಲಾ ॥ 2 ॥

 ತ್ರಿವಿಡಿತಾಳ 

ನೀನೆ ಜಗತ್ತಿನಲ್ಲಿ ಸಾಂಗೋಪಾಂಗನಾಗಿ 
ನಾನಾ ರೂಪನಾಗಿ ತುಂಬಿರಲೂ 
ನಾನೆ ಬಂದವನೆಂದು ಮನಸಿನಲ್ಲಿ ತಿಳಕೊಂಡು 
ಕಾಣಲಿಲ್ಲಾವೆಂದು ಚಿಂತಿಸುವೆ 
ಏನೆಂಬೆನಯ್ಯಾ ನಿನ್ನಾ ಮಾಯತನವನ್ನು 
ಮಾನವನಿಗೆ ಸುತ್ತೆ ಅಡಿಗಡಿಗೆ 
ಜ್ಞಾನಶೂನ್ಯನಾಗಿ ಯೋಚಿಸುವೆನು ನಿನ್ನ 
ಕಾಣಿಸೊ ಎಂದು ಪೇಳಿಕೊಂಡೆನೊ 
ಜ್ಞಾನವಂತನಾದಡೆ ಇನಿತು ಸೊಲ್ಲುಗಳುಂಟೆ 
ನಾನಾ ಪ್ರಕಾರದಲ್ಲಿ ಎನ್ನನು ಪೊರೆವವನೆ 
ಅನಾಥಮಿತ್ರ ವಿಜಯವಿಠ್ಠಲ ವೆಂಕಟ 
ನೀನೆಂದು ನುಡಿದವವಗೆ ನಿಜ ಭಕ್ತರ ಕೂಡಿಪ್ಪೆ ॥ 3 ॥

 ಅಟ್ಟತಾಳ 

ಈತನ ನಾಮವು ಪಾಪವಿಮೋಚನ 
ಈತನ ನಾಮವು ನರಕಭಂಜನ 
ಈತನ ನಾಮವು ಗತಿಗೆ ಸಾಧನವು 
ಈತನ ನಾಮವು ಸುಖಕೆ ಪೊಂದಿಸುವದು 
ಭೂತಳದೊಳಗೆಲ್ಲಿ ಈತನ ನಾಮಕ್ಕೆ ಸರಿವೊಂದಾದರೆ ಇಲ್ಲ 
ಯಾತಕ್ಕೆ ಸಂಶಯ ಪದತಿಳಿದವರಿಗೆ 
ಪಾತಕಿ ನಾನಾಗಿ ನೋಡಲಿಲ್ಲವೆಂದು 
ಈ ತೆರದಲಿ ನಿತ್ಯ ಮರಗುವೆನೋ 
ಈತನು ನಿನ್ನಾಧೀನವಾದ ಮೇಲೆ 
ಗಾತುರ ನೋಯಿಪೆ ವಂದಲ್ಲದೆ 
ಧಾತ ಜನಕ ನಮ್ಮ ವಿಜಯವಿಠ್ಠಲ ಪ್ರ -
ಖ್ಯಾತ ಮೂರುತಿ ತಿರುವೆಂಗಳೇಶರಂಗ ॥ 4 ॥

 ಆದಿತಾಳ 

ಅಮೃತ ಬೇಕಾದರೆ ನಿನ್ನಂಘ್ರಿ 
ನಮ್ಮದೆ ದೊರಿಯದು ಎಂದಿಗೂ 
ಒಮ್ಮನದಲಿ ನಿನ್ನ ಪೂಜಿಪೆನೆಂದಡೆ 
ಅಮ್ಮಹ ಭಕುತಿ ಪುಟ್ಟದು 
ಹೆಮ್ಮೆಯಿಂದಲಿ ದಿವಸ ಪೋಗಾಡಿದೆ 
ಈ ಮಹಿಯೊಳು ಚರಿಸುತ್ತಾ 
ನಮ್ಮಯ್ಯಾ ನೀನು ಸಲಹಬೇಕು 
ದುಮ್ಮಾನಂಗಳು ಕಳವುತ್ತ 
ತಿಮ್ಮಯ್ಯ ಸಿರಿ  ವಿಜಯವಿಠ್ಠಲ 
ಬೊಮ್ಮಾದಿಗಳು ನಿನ್ನ ಅರಿಯರು ॥ 5 ॥

 ಜತೆ 

ಧರಿಗಿದೆ ವೈಕುಂಠವಾಗಿ ಮೆರೆವ ಚನ್ನ 
ತಿರುಮಲೇಶ ಸಿರಿ ವಿಜಯವಿಠ್ಠಲನಿಪ್ಪಾ ॥
*********