Showing posts with label ಗುರುವಿನ ಚರಣವ ನೆನೆವುತಲನುದಿನ varaha timmappa. Show all posts
Showing posts with label ಗುರುವಿನ ಚರಣವ ನೆನೆವುತಲನುದಿನ varaha timmappa. Show all posts

Friday 27 December 2019

ಗುರುವಿನ ಚರಣವ ನೆನೆವುತಲನುದಿನ ankita varaha timmappa

by ನೆಕ್ಕರ ಕೃಷ್ಣದಾಸ
ಶಂಕರಾಭರಣ ರಾಗ ತ್ರಿವಿಡೆ ತಾಳ

ಗುರುವಿನ ಚರಣವ ನೆನೆವುತಲನುದಿನ
ಪರದೊಳು ದೈವದ ನೆಲೆ ನೋಡು ||ಪ||

ಗುರುವಿನ ಕರುಣಕಟಾಕ್ಷವದಲ್ಲದೆ
ನರರಿಗೆ ದೊರಕದು ಪರಸುಖವು
ಹಿರಿಯರ ಅಭಿಮತವಿಲ್ಲದ ಗೃಹದೊಳು
ಕರೆಕರೆಯಾಗಿದೆ ಕೌತುಕವು ||೧||

ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು
ನೆರೆವುದು ತನ್ನೊಳು ಘಾತಕವು
ಸೆರೆವಿಡಿಯಲು ಹರಿವಿಡಿದಿಹನಾತನ
ತೊರೆವುದು ಭವಭಯ ಸೂತಕವು ||೨||

ಯೋಗಿಯ ಹೃದಯದಿ ಸಕಲಾಗಮ ಸಮ-
ನಾಗಿಯೆ ತೋರ್ಪುದು ದೃಢವಾಗಿ
ಸಾಗರ ಸುತ್ತಿದ ಭೂಭಾಗದ ಸರಿ
ಯೋಗಿಯ ದೃಷ್ಟಿಯೆ ಘನವಾಗಿ ||೩||

ಬಾಗಿದ ಕಬ್ಬಿನ ಕೋಲೊಳು ರುಚಿಕರ-
ವಾಗಿಯೆ ತೋರುವ ಪರಿಯಾಗಿ
ರಾಗಿಯ ಶಿಲೆ ತಾ ಬಳಲಿದೆನೆನುತಲೆ
ಭಾಗೆಯ ಕೊಂಬುದೆ ಸಮವಾಗಿ ||೪||

ನಂಬದಿರಂಬರ ವಾದಿಯ ಅಂಶಕ
ತುಂಬಿದ ಕುಂಭ ದೃಢದಿಂದ
ಅಂಬರದೊಳಗಣ ಮೇಘಕೆ ವಾಯುವು
ಬೆಂಬಲವಾಗಿಹ ದಯದಿಂದ ||೫||

ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ
ಅಂಬಿಸಿ ಪೋಗುವ ಪರಿಯಿಂದ
ಅಂಬುಜಭವ ಬರೆದಕ್ಷರ ಮಾಸಲು
ಅಂಬರ ಬಯಲಹ ತೆರದಿಂದ ||೬||

ಶುದ್ಧವಶುದ್ಧವು ಆಗಿಹ ಪೃಥ್ವಿಯ
ಬುದ್ಧವಾಗಿಯೆ ತೊಳೆದವರಾರು
ಅಬ್ಧಿಯೆ ಮಧ್ಯದಿ ಎದ್ದ ವಾರಿಗಳನು
ತಿದಿಯೆ (ತಿದ್ದಿಯೆ?) ಪಸರಿಸುವವರಾರು ||೭||

ಇದ್ದರೆ ಸರ್ವರ ಭವನದೊಳಗ್ನಿಯೆ
ಮೆದ್ದವ ಶುದ್ಧವೆಂಬವರಾರು
ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ
ಬದ್ಧವಾಗಿಯೆ ಕಟ್ಟಿಕೊಳಲ್ಯಾರು ||೮||

ಬಯಲೊಳಗಿರುತಿಹ ಬಹು ಝೇಂಕಾರವ
ನಯದೊಳು ನೋಡಿದರೇನುಂಟು
ಬಯಲೊಳು ಮೂರಕ್ಷರವನೆ ಬಿತ್ತಲು
ಮೈಲಿಗೆ ತಳಿಸುವ ಬೆಳೆಯುಂಟು ||೯|

ಪಯಣದ ಮನೆಸಿರಿ ಸೊಬಗನು ಜಯಿಸುವ
ಹಯವನು ಏರುವ ಬಗೆಯುಂಟು
ದಯದೊಳು ಶ್ರೀಗುರು ವಿರಚಿಸಿಯಿತ್ತರೆ
ಕ್ರಮವಿಕ್ರಯದೊಳು ಫಲವುಂಟು ||೧೦||

ಬೇಡನು ಸಲಹಿದ ಆಡು ತಾ ಯಾಗಕೆ
ಬೇಡವೆಂಬರಾರು ಶಾಸ್ತ್ರದಲಿ
ಕಾಡಿನೊಳಿರುತಿಹ ಮೃಗವಾಲದ ಸಿರಿ
ನೋಡು ನೀ ನಿತ್ಯದಿರಾಸ್ತ್ರದಲಿ ||೧೧||

ಕೋಡಗನಾದರು ನೋಡಿಯೆ ಭಜಿಸಲು
ಕೂಡುಗು ಹರಿಯ ಪರತ್ರದಲಿ
ಕೂಡಿಕೊಂಡರೆ ಪರಬೊಮ್ಮನ ಮನದಲಿ
ಆಡದು ಮಾಯದ ಸೂತ್ರದಲಿ ||೧೨||

ಕಸ್ತೂರೀ ಮೃಗ ಗೋರೋಚನ ಸಹ
ಉತ್ತಮವಾಗಿಹ ಮುತ್ತುಗಳು
ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು
ಕಿತ್ತು ಮೆದ್ದಾಡುವ ಅವಸ್ಥೆಗಳು ||೧೩||

ಮೃತ್ಯುವ ಕಾಣದೆ ಬೊಮ್ಮವನಡಗಿಸಿ
ಎತ್ತಲಾದರೂ ಪೋದ ವಸ್ತುಗಳು
ಭಕ್ತರಿಗಲ್ಲದೆ ಮನವಪರೋಕ್ಷದ
ವಸ್ತುವ ಕಾಣದೆ ನಿತ್ಯದೊಳು ||೧೪||

ಜ್ಯೋತಿರ್ಮಯವಾಗಿಹ ವಸ್ತುವಿನೊಳು
ಸೂತಕ ಹೊದ್ದುವುದೇನುಂಟು
ಜಾತಿವಿಜಾತಿಯೊಳೊಲಿದಿಹ ಶಿವನವ
ದೂತರ ನಂಬದರಾರುಂಟು ||೧೫||

ಓತು ಅಶುದ್ಧವನುಂಡರು ಕವಿಲೆಯೊ-
ಳ್ಮಾತಿನ ವಾಸಿಯದೇನುಂಟು
ನೀತಿ ವಿಹೀನರೊಳುದಿಸಿದ ಲವಣದ
ಧಾತು ಕೂಡದೆ ಸವಿಯೇನುಂಟು ||೧೬||

ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ-
ಗೇರಿಸಿ ತೂಗಲು ಬಹುದೀಗ
ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ
ತೋರಿಸಲಪ್ಪುದು ಬಹುಬೇಗ ||೧೭||

ಧಾರುಣಿಯೊಳು ಗುರುಕರುಣದ ಅಳತೆ ಮು-
ರಾರಿಗು ಸಿಲುಕದು ಅದು ಈಗ
ತೋರಿತು ಅಲ್ಲಿ ವರಾಹತಿಮ್ಮಪ್ಪ ಕು-
ಮಾರರು ವಾಜಿಯ ತಡೆದಾಗ ||೧೮||
*******