Showing posts with label ಗುರುಪುರಂದರರಾಯ ದುರಿತ ತಿಮಿರಕೆ ಸೂರ್ಯ lakshmikanta. Show all posts
Showing posts with label ಗುರುಪುರಂದರರಾಯ ದುರಿತ ತಿಮಿರಕೆ ಸೂರ್ಯ lakshmikanta. Show all posts

Sunday 1 August 2021

ಗುರುಪುರಂದರರಾಯ ದುರಿತ ತಿಮಿರಕೆ ಸೂರ್ಯ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಗುರು ಪುರಂದರರಾಯ ದುರಿತ ತಿಮಿರಕೆ ಸೂರ್ಯ

ಶರಣ ಜನ ಭಾಗ್ಯೋದಯ ಪ


ನರಹರಿಯ ದಾಸಾರ್ಯ ಮರುತಮತ ಪರಿಚರ್ಯ

ಶಿರಬಾಗಿ ಮುಗಿವೆ ಕೈಯ್ಯ ಅ.ಪ.


ಘೋರತರ ಸಂಸಾರ ಸಾರತರವೆಂದರಿದು

ಪಾರಮಾರ್ಥಿಕವ ತೊರೆದು

ಕ್ರೂರ ಕರ್ಮದಿ ನಿಂದು ಭೂರಿ ನರಕದಿ ಬೆಂದು

ಗಾರಾಗಿ ಪೋಪರಂದು

ನಾರದರೆ ನೀವ್ ಬಂದು ನಾರಾಯಣಾ ಎಂದು

ಚೀರಿದಾ ಧ್ವನಿಗೆ ಅಂದು

ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು

ಸೇರಿ ಸುಖಿಸಿದರು ಎಂದು 1

ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು

ಮೆರೆವ ಕನ್ನಡ ದೇಶದಿ

ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ

ಇರುವ ಭೂಸುರ ವಂಶದಿ

ಹಿರಿಯ ಸಾವ್ಕಾರ ವರದಪ್ಪನಾ ಸತಿಯ

ವರಗರ್ಭದಲಿ ಜನಿಸಿದಿ

ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ

ಸರ್ವಭಾಗ್ಯವ ಗಳಿಸಿದಿ 2

ಚಿನಿವಾರ ವ್ಯಾಪಾರದನುವರಿತು ನವಕೋಟಿ

ಧನಕಧಿಪನೆಂದೆನಿಸುತ

ಧನಕನಕ ವಸ್ತು ವಾಹನನಿಚಯ ಸಂಗ್ರಹದಿ

ತನುಮನಂಗಳ ಶ್ರಮಿಸುತ

ಕನಸಿಲಾದರು ದಾನಧರ್ಮಗಳ ನೆನೆಯದೆಲೆ

ದಿನಮಾನಗಳ ಕಳೆಯುತ

ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ

ಘನ ಮಹಿಮ ಬಂದ ನಗುತ 3

ಅಂದು ತಾನೊಲಿದಿತ್ತ ಚೆಂದದಾ ವರಗಳನು

ಇಂದು ಸಲಿಸುವೆನು ಎಂದು

ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ

ಕಂದನಿಗೆ ಮುಂಜಿಯೆಂದು

ಇಂದಿರಾಪತಿ ತಾನು ಮಂದ ಭಾಗ್ಯನ ತೆರದಿ

ಪೊಂದಿ ಯಾಚಿಸಲು ನಿಂದು

ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು

ಮುಂದರಿಯದ ಕರುಣ ಸಿಂಧು 4

ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ

ಪತ್ನಿಯನು ಯಾಚಿಸಿದನು

ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು

ಇತ್ತ ಬಂದಿಹೆನೆಂದನು

ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ

ನಿತ್ತು ಕಳುಹೆನು ಏನನೂ

ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ

ನತ್ತನ್ನು ಕೊಡು ಎಂದನು 5

ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ

ಮೂಗುತಿಯ ತೆಗೆದಿತ್ತಳು

ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ

ಸಾಗಿ ಬಂದನು ಇತ್ತಲು

ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು

ಮೂಗುತಿಯ ಕ್ರಯಕೆ ಕೊಡಲು

ಈಗ ಬಂದಿಹೆನೆಂದು ನಿಮಗದನು ತೋರಲು

ಹೇಗೆ ಬಂದಿತು ಎನ್ನಲು 6

ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ

ವನಜನಾಭನು ಪೇಳ್ದನು

ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ

ಅನುವರಿತು ಬಹೆನೆಂದನು

ಸನುಮತಿಸಿ ವಿಪ್ರನನು ಸಂತೈಸಿ ಪೊರಮಡಿಸಿ

ನಿನಗೆ ನಾಮವನಿಡುವೆನು

ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ

ವನಿತೆಯಾ ಬರಿ ಮೂಗನು 7

ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು

ಮುತ್ತೈದೆ ಮನದಿ ನೊಂದು

ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು

ಇತ್ತ ತಾರೆನಲು ನಿಂದು

ಎತ್ತ ಪೋದನೊ ವಿಪ್ರ ಮತ್ತೇನು ಮಾಡುವರೊ

ಕತ್ತಲೆಯು ಮುತ್ತಿ ತಿಂದು

ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು

ಕುತ್ತು ಪಾರಾಹುದೆಂದು 8

ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು

ಕರದಿ ಬಟ್ಟಲನು ಹಿಡಿದು

ಹರಣದಾಸೆಯ ತೊರೆದು ಸಿರಿವರನ ಪದನೆನೆದು

ಕುಡಿಯುವನಿತರೊಳು ತಿಳಿದು

ಕರುಣದಿಂ ಮೂಗುತಿಯ ಗರಳದಲು ಕೆಡಹಲಾ

ತರುಣಿ ಮಣಿ ಹರುಷದಳೆದು

ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು

ಭರದಿ ಅಂಗಡಿಗೆ ಬಂದು 9

ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ

ಮೂಗುತಿಯು ಕಾಣದಿರಲು

ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು

ಬೇಗನೆ ಮನೆಗೆ ಬರಲು

ಕೂಗಿ ಪತ್ನಿಯ ಕರೆದು ಮೂಗುತಿಯು ಬಂದ ಬಗೆ

ಹೇಗೆಂದು ತಿಳಿಸದಿರಲು

ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ

ಬಾಗಿ ವಂದಿಸಿ ನುಡಿದಳು 10

ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು

ಪೊದ್ದಿಯಾಚಿಸಲು ಜರಿದೆ

ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ

ವೃದ್ಧಿಗೋಸುಗವೆ ಬರಿದೆ

ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ

ಉದ್ಧಾರವಿಲ್ಲೆಂದು ತಿಳಿದೆ

ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು

ಹೆದ್ದಾರಿ ಹಿಡಿದು ನಡೆದೆ 11

ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ-

ಶಿಷ್ಟವನು ದಾನಗೈದು

ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು

ವಿಠ್ಠಲನ ಪುರಕೆ ನಡೆದು

ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ

ಇಷ್ಟಾರ್ಥ ಸಿದ್ಧಿಗೈದು

ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ

ಶ್ರೇಷ್ಠರಿಂದುಪದೇಶ ಪಡೆದು 12

ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ

ಗದ್ಯಪದ್ಯಗಳಿಂದಲಿ

ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು

ಮುದ್ದಾಗಿ ವರ್ಣಿಸುತಲಿ

ಮದ್ದಳೆಯ ತಾಳ ವೀಣೆಗಳ ಗತಿಹಿಡಿದು

ಶುದ್ಧರಾಗಗಳಿಂದಲಿ

ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು

ಪೊದ್ದಿ ಕುಣಿಯುವ ತೆರದಲಿ 13

ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ-

ವಿರ ಗ್ರಂಥ ರಚಿಸಿ

ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ

ಸಾರ ಮಹಿಮೆಗಳ ತುತಿಸಿ

ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ

ಪಾರಣೆಯ ವಿಧಿಯ ತಿಳಿಸಿ

ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು

ಸಾರಿ ಡಂಗುರವ ಹೊಯಿಸಿ 14

ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ

ಧರೆಯನೆಲ್ಲವ ತಿರುಗುತ

ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ

ಕೊರಳುಬ್ಬಿ ಶಿರ ಬಿಗಿಯುತ

ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ

ಹರಿ ಮಹಿಮೆ ಕೊಂಡಾಡುತ

ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ

ಹರುಷದಿಂದಲಿ ಉಣಿಸುತ 15

ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು

ಶಕ್ತನಹ ದೇವ ಬಂದ

ಘೃತದ ಬಿಂದಿಗೆ ತಂದ ತಿಥಿಯ ಓಗರ ಉಂಡ

ಸುತನಾಗಿ ನೀರ ತಂದ

ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ

ಕ್ಷಿತಿಪತಿಗೆ ದೃಢ ತೋರಿದ

ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು

ಪಥದಲ್ಲಿ ತಲೆಗಾಯಿದ 16

***