Showing posts with label ನೆನೆಸಿದವರಘನಾಶನಾ ankita hayavadanavittala NENESIDAVARAGHANAASHANAA. Show all posts
Showing posts with label ನೆನೆಸಿದವರಘನಾಶನಾ ankita hayavadanavittala NENESIDAVARAGHANAASHANAA. Show all posts

Tuesday 24 November 2020

ನೆನೆಸಿದವರಘನಾಶನಾ ankita hayavadanavittala NENESIDAVARAGHANAASHANAA


 Audio by Mrs. Nandini Sripad

ಶ್ರೀ ವಿಜಯದಾಸರ ಅನುಜರಾದ  ಶ್ರೀ ಆನಂದದಾಸಾರ್ಯ ವಿರಚಿತ 

 (ಹಯವದನವಿಟ್ಠಲ ಅಂಕಿತ) 


 ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ 


 ರಾಗ ಭೌಳಿ                                ವಾರ್ಧಿಕ ಷಟ್ಪದಿ 


ನೆನೆಸಿದವರಘನಾಶನಾ ॥ ಪ ॥

ನೆನೆಸಿದವರಘನಾಶ ಅನುಮಾನವಿಲ್ಲದಕೆ

ವನಜನಾಭನು ಒಲಿದು ಘನವಾಗಿ ಪಾಲಿಸುವ

ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ

ಗುಣ ಕರ್ಮ ಕೊಂಡಾಡಿರೊ ॥ ಅ ಪ ॥ 


ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ

ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ

ಆ ದ್ವಾಪರದಿ ನಿಕಂಪನ ಎಂಬ ನಾಮದಲಿ 

ಶ್ರೀಧರನ ಸೇವಿಸುತಿದ್ದು ॥

ಕಾದಿದ್ದ ಕಲಿಯುಗದಿ ಪುರಂದರದಾಸರ

ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು

ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ

ಮೇದಿನೀಸುರ ಜನ್ಮದಿ ॥ 1 ॥ 


ವರತುಂಗಭದ್ರತೀರದ ಗ್ರಾಮ ಅಶ್ವತ್ಥ -

ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ

ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ

ಗುರುಸೇವೆ ಮಾಡಿ ಸತತ ॥

ವರವ ಪಡೆದಳೈ ಎರಡೊಂದು ಪುತ್ರರನು

ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ

ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ

ಇರುತಿರಲು ಕೆಲವು ಕಾಲ ॥ 2 ॥ 


ಲೋಕಜನರಂತೆ ಲೌಕಿಕದೊಳು ಸಂಚರಿಸಿ

ಈ ಕಾಯಗೋಸುಗಾನೇಕ ಜನರ ಸೇವೆ

ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗಿ

ಸಾಕುವಾರಿಲ್ಲೆನುತಲಿ ॥

ಬೇಕಾದ ದೇಶವನು ಚರಿಸುತಿರೆ ಒಂದುಕಡೆ

ತಾಕಿ ಚೋರರು ವಸ್ತ್ರಾದಿಗಳನಪಹರಿಸೆ ಯಿ -

ನ್ಯಾಕೆ ಬಂಧುಬಳಗವೆಂದೆನಿಸುತ ಅಲ್ಲಿಂದ

ನಾಕನದಿಮೀವೆನೆಂದು ॥ 3 ॥ 


ಹಿರಿಯರಿಗೆ ಪೇಳದಲೆ ತೆರಳಿ ಯಾತ್ರೆಗೆ ಪೋಗಿ

ಎರಡೆಂಟು ವತ್ಸರದ ತರುಳಪ್ರಾಯದಲಿಂದ

ಸರುವ ತೀರ್ಥಕ್ಷೇತ್ರದಲಿ ಮಿಂದು ವಿಂಶತಿ ವ -

ತ್ಸರಕೆ ತಿರುಗಿ ಬಂದು ॥ 

ವರ ಮಾತೃ ಪಿತೃ ಸಹೋದರರ ಸಹವಾಗಿ

ಬೆರತು ಮಾನವರಂತೆ ಸಂಸಾರವೃತ್ತಿಯಲಿ

ಎರಡೇಳು ವರುಷ ಇರುತಿರ್ದು ಮೆಲ್ಲನೆ ಹರಿ

ವರ ಕೃಪೆಯು ಆಗೆ ತಿಳಿದು ॥ 4 ॥ 


ಮತ್ತೆ ಪೊರಟರು ಶ್ರೀಉತ್ತಮಶ್ಲೋಕಹರಿ

ಪೆತ್ತ ಗಂಗೆಯ ಸ್ನಾನ ಗಯದಲ್ಲಿ ಪಿಂಡವ -

ನಿತ್ತು ಮರಳಿ ಬಂದು ವಾರಣಾಸಿಯಲ್ಲಿ

ಉತ್ತಮರ ಸಂಗದಿಂದ ॥

ನಿತ್ಯ ಸ್ನಾನ ಸಂಧ್ಯ ಶುಚಿಯಾಗಿ ಮಲಗಿರಲು

ಸತ್ಯವಾಗಿ ಸ್ವಾಪದಲಿ ನರಹರಿ ಪಡೆದ

ಪುತ್ರನೆಬ್ಬಿಸಿದಂತೆ ದಾಸರ ರೂಪಿನಲಿ

ಹತ್ತೆಗರೆದು ಕರುಣದಿ ॥ 5 ॥ 


ಸುರನದಿಯ ದಾಟಿಸಿ ಆಚೆಯಲಿ ಇರುತಿಪ್ಪ

ವರ ವ್ಯಾಸಕಾಶಿಯ ಪುರದ ದೊರೆಯಾದ 

ಸಿರಿವಾಸುದೇವ ಬಲು ಸುರರ ಸಂದಣಿಯೊಳಗೆ

ಮೆರೆವುತಲಿ ಕುಳಿತುಯಿರಲು ॥

ಭರದಿಂದ ತೋರಿಸಿ ಶಿರವಾಗಿ ತುತಿಸೆನುತ

ಕರದು ಪೇಳಿ ಅವರ ಕರದಿಂದ ಆದರಿಸಿ

ಸರಸದಿಂದಲಿ ನೀನು ಹರಿಚರಿತೆ ಪೇಳೆನುತ

ಕರುಣರಸದಿಂದರುಹಲು ॥ 6 ॥ 


ಎಚ್ಚೆತ್ತುನೋಡೆ ಸಿರಿ ಅಚ್ಯುತನ ಮಹಿಮೆಯನು

ಬಿಚ್ಚುವುದನರಿದೆನು ಹೆಚ್ಚು ಸಂತೋಷದಲಿ

ಕೊಚ್ಚಿಪೋದವು ಮನದಿ ಹೆಚ್ಚಿದ್ದ ಪಾಪಗಳು

ಸ್ವಚ್ಛಚಿತ್ತದಲಿ ಹರಿಯ ॥

ನಿಚ್ಚಮನ ಬಂದಂತೆ ಸಚ್ಚರಿತ ಸಿದ್ಧಾಂತ

ಅಚ್ಚಸುಖತೀರ್ಥಮತ ನೆಚ್ಚಿ ಕವನವ ಪೇಳಿ

ನುಚ್ಚುಮನವುಳ್ಳವರ ತಿದ್ದಿ ಜ್ಞಾನಭಕುತಿ

ಮುಚ್ಚುಗಾಣಿಕೆನಿತ್ತರು ॥ 7 ॥ 


ತೃತೀಯ ಕಾಶಿಯಾತ್ರೆ ಮಾಡಬಂದಾಗ ಉ -

ನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ

ಅತಿಶಯದಿ ಬಂದು ಮಚ್ಛೋದರಿಯ ನಾಮದಲಿ 

ಪ್ರತಿಯಿಲ್ಲದಂತೆ ತೋರೆ ॥

ನುತಿಸಿ ಅಲ್ಲಿಗೆ ಸೇತುಸ್ನಾನಗೈತಂದು

ರತಿಯಿಂದ ಮಾಡಿ ಸರ್ವರನ ಉದ್ಧರಿಸುತ್ತ

ಮಿತಿಯಿಲ್ಲದಲೆ ಕಾಶಿಸೇತು ಪರಿಯಂತರ

ಕಥೆಯಿಂದ ಕೀರ್ತಿಪಡೆದು ॥ 8 ॥ 


ಲೋಕೋಪಕಾರಕ್ಕೆ ಹದಿನೆಂಟುವತ್ಸರಾ -

ನೇಕ ತೀರ್ಥಯಾತ್ರೆ ತಿರುಗಿ ವೈರಾಗ್ಯದಲಿ

ಶ್ರೀಕಾಂತ ಹರಿಯ ಮನದೊಳಗೆ ಧೇನಿಸಿಕೊಳುತ

ಪ್ರಾಕೃತರ ಸಂಗ ತೊರೆದು ॥

ವೈಕುಂಠಯಾತ್ರೆ ಯುವಸಂವತ್ಸರದ ಶುದ್ಧ

ಆ ಕಾರ್ತಿಕದಶಮಿ ಗುರುವಾರ ಪ್ರಹರದಲಿ

ರಾಕೇಂದುಬಿಂಬ ಹಯವದನವಿಟ್ಠಲನಂಘ್ರಿ 

ಜೋಕೆಯಲಿ ಸೇರಿದವರು ॥ 9 ॥ 


~~~~~~~~~~ 


 ದಿವ್ಯ = ದೇವತೆಗಳ ಪ್ರೀತಿಗೆ ಪಾತ್ರವಾದ ;


ನುಡಿ 1 :  ಖೇದವಿಲ್ಲದೆ = ಗರ್ಭವಾಸಾದಿ ದುಃಖಗಳು ನಮ್ಮಂತೆ ಇಲ್ಲದೆ ;


ನುಡಿ 5 : ಹತ್ತೆಗರೆದು = ಹತ್ತಿರ ಕರೆದು ;


ನುಡಿ 6 : ಅವರ ಕಂಠದಿಂದ ಆದರಿಸಿ = ಶ್ರೀಪುರಂದರದಾಸರು ತಮ್ಮ ಕೊನೆಯ ಮಗನಾದ ಶ್ರೀಗುರುಮಧ್ವಪತಿಯನ್ನು ಹೇಗೆ ಆದರಿಸುತ್ತಿದ್ದರೋ ಹಾಗೆಯೇ ;


ನುಡಿ 7 : ಮುಚ್ಚುಗಾಣಿಕೆ = ಶಾಸ್ತ್ರಾರ್ಥ ರಹಸ್ಯ ಕಾಣಿಕೆ ;


ನುಡಿ 9 : ರಾಕೇಂದುಬಿಂಬ = ಪೂರ್ಣಚಂದ್ರನಲ್ಲಿ ಇರುವ ; 


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

*******