Tuesday 24 November 2020

ನೆನೆಸಿದವರಘನಾಶನಾ ankita hayavadanavittala NENESIDAVARAGHANAASHANAA


 Audio by Mrs. Nandini Sripad

ಶ್ರೀ ವಿಜಯದಾಸರ ಅನುಜರಾದ  ಶ್ರೀ ಆನಂದದಾಸಾರ್ಯ ವಿರಚಿತ 

 (ಹಯವದನವಿಟ್ಠಲ ಅಂಕಿತ) 


 ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ 


 ರಾಗ ಭೌಳಿ                                ವಾರ್ಧಿಕ ಷಟ್ಪದಿ 


ನೆನೆಸಿದವರಘನಾಶನಾ ॥ ಪ ॥

ನೆನೆಸಿದವರಘನಾಶ ಅನುಮಾನವಿಲ್ಲದಕೆ

ವನಜನಾಭನು ಒಲಿದು ಘನವಾಗಿ ಪಾಲಿಸುವ

ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ

ಗುಣ ಕರ್ಮ ಕೊಂಡಾಡಿರೊ ॥ ಅ ಪ ॥ 


ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ

ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ

ಆ ದ್ವಾಪರದಿ ನಿಕಂಪನ ಎಂಬ ನಾಮದಲಿ 

ಶ್ರೀಧರನ ಸೇವಿಸುತಿದ್ದು ॥

ಕಾದಿದ್ದ ಕಲಿಯುಗದಿ ಪುರಂದರದಾಸರ

ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು

ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ

ಮೇದಿನೀಸುರ ಜನ್ಮದಿ ॥ 1 ॥ 


ವರತುಂಗಭದ್ರತೀರದ ಗ್ರಾಮ ಅಶ್ವತ್ಥ -

ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ

ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ

ಗುರುಸೇವೆ ಮಾಡಿ ಸತತ ॥

ವರವ ಪಡೆದಳೈ ಎರಡೊಂದು ಪುತ್ರರನು

ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ

ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ

ಇರುತಿರಲು ಕೆಲವು ಕಾಲ ॥ 2 ॥ 


ಲೋಕಜನರಂತೆ ಲೌಕಿಕದೊಳು ಸಂಚರಿಸಿ

ಈ ಕಾಯಗೋಸುಗಾನೇಕ ಜನರ ಸೇವೆ

ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗಿ

ಸಾಕುವಾರಿಲ್ಲೆನುತಲಿ ॥

ಬೇಕಾದ ದೇಶವನು ಚರಿಸುತಿರೆ ಒಂದುಕಡೆ

ತಾಕಿ ಚೋರರು ವಸ್ತ್ರಾದಿಗಳನಪಹರಿಸೆ ಯಿ -

ನ್ಯಾಕೆ ಬಂಧುಬಳಗವೆಂದೆನಿಸುತ ಅಲ್ಲಿಂದ

ನಾಕನದಿಮೀವೆನೆಂದು ॥ 3 ॥ 


ಹಿರಿಯರಿಗೆ ಪೇಳದಲೆ ತೆರಳಿ ಯಾತ್ರೆಗೆ ಪೋಗಿ

ಎರಡೆಂಟು ವತ್ಸರದ ತರುಳಪ್ರಾಯದಲಿಂದ

ಸರುವ ತೀರ್ಥಕ್ಷೇತ್ರದಲಿ ಮಿಂದು ವಿಂಶತಿ ವ -

ತ್ಸರಕೆ ತಿರುಗಿ ಬಂದು ॥ 

ವರ ಮಾತೃ ಪಿತೃ ಸಹೋದರರ ಸಹವಾಗಿ

ಬೆರತು ಮಾನವರಂತೆ ಸಂಸಾರವೃತ್ತಿಯಲಿ

ಎರಡೇಳು ವರುಷ ಇರುತಿರ್ದು ಮೆಲ್ಲನೆ ಹರಿ

ವರ ಕೃಪೆಯು ಆಗೆ ತಿಳಿದು ॥ 4 ॥ 


ಮತ್ತೆ ಪೊರಟರು ಶ್ರೀಉತ್ತಮಶ್ಲೋಕಹರಿ

ಪೆತ್ತ ಗಂಗೆಯ ಸ್ನಾನ ಗಯದಲ್ಲಿ ಪಿಂಡವ -

ನಿತ್ತು ಮರಳಿ ಬಂದು ವಾರಣಾಸಿಯಲ್ಲಿ

ಉತ್ತಮರ ಸಂಗದಿಂದ ॥

ನಿತ್ಯ ಸ್ನಾನ ಸಂಧ್ಯ ಶುಚಿಯಾಗಿ ಮಲಗಿರಲು

ಸತ್ಯವಾಗಿ ಸ್ವಾಪದಲಿ ನರಹರಿ ಪಡೆದ

ಪುತ್ರನೆಬ್ಬಿಸಿದಂತೆ ದಾಸರ ರೂಪಿನಲಿ

ಹತ್ತೆಗರೆದು ಕರುಣದಿ ॥ 5 ॥ 


ಸುರನದಿಯ ದಾಟಿಸಿ ಆಚೆಯಲಿ ಇರುತಿಪ್ಪ

ವರ ವ್ಯಾಸಕಾಶಿಯ ಪುರದ ದೊರೆಯಾದ 

ಸಿರಿವಾಸುದೇವ ಬಲು ಸುರರ ಸಂದಣಿಯೊಳಗೆ

ಮೆರೆವುತಲಿ ಕುಳಿತುಯಿರಲು ॥

ಭರದಿಂದ ತೋರಿಸಿ ಶಿರವಾಗಿ ತುತಿಸೆನುತ

ಕರದು ಪೇಳಿ ಅವರ ಕರದಿಂದ ಆದರಿಸಿ

ಸರಸದಿಂದಲಿ ನೀನು ಹರಿಚರಿತೆ ಪೇಳೆನುತ

ಕರುಣರಸದಿಂದರುಹಲು ॥ 6 ॥ 


ಎಚ್ಚೆತ್ತುನೋಡೆ ಸಿರಿ ಅಚ್ಯುತನ ಮಹಿಮೆಯನು

ಬಿಚ್ಚುವುದನರಿದೆನು ಹೆಚ್ಚು ಸಂತೋಷದಲಿ

ಕೊಚ್ಚಿಪೋದವು ಮನದಿ ಹೆಚ್ಚಿದ್ದ ಪಾಪಗಳು

ಸ್ವಚ್ಛಚಿತ್ತದಲಿ ಹರಿಯ ॥

ನಿಚ್ಚಮನ ಬಂದಂತೆ ಸಚ್ಚರಿತ ಸಿದ್ಧಾಂತ

ಅಚ್ಚಸುಖತೀರ್ಥಮತ ನೆಚ್ಚಿ ಕವನವ ಪೇಳಿ

ನುಚ್ಚುಮನವುಳ್ಳವರ ತಿದ್ದಿ ಜ್ಞಾನಭಕುತಿ

ಮುಚ್ಚುಗಾಣಿಕೆನಿತ್ತರು ॥ 7 ॥ 


ತೃತೀಯ ಕಾಶಿಯಾತ್ರೆ ಮಾಡಬಂದಾಗ ಉ -

ನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ

ಅತಿಶಯದಿ ಬಂದು ಮಚ್ಛೋದರಿಯ ನಾಮದಲಿ 

ಪ್ರತಿಯಿಲ್ಲದಂತೆ ತೋರೆ ॥

ನುತಿಸಿ ಅಲ್ಲಿಗೆ ಸೇತುಸ್ನಾನಗೈತಂದು

ರತಿಯಿಂದ ಮಾಡಿ ಸರ್ವರನ ಉದ್ಧರಿಸುತ್ತ

ಮಿತಿಯಿಲ್ಲದಲೆ ಕಾಶಿಸೇತು ಪರಿಯಂತರ

ಕಥೆಯಿಂದ ಕೀರ್ತಿಪಡೆದು ॥ 8 ॥ 


ಲೋಕೋಪಕಾರಕ್ಕೆ ಹದಿನೆಂಟುವತ್ಸರಾ -

ನೇಕ ತೀರ್ಥಯಾತ್ರೆ ತಿರುಗಿ ವೈರಾಗ್ಯದಲಿ

ಶ್ರೀಕಾಂತ ಹರಿಯ ಮನದೊಳಗೆ ಧೇನಿಸಿಕೊಳುತ

ಪ್ರಾಕೃತರ ಸಂಗ ತೊರೆದು ॥

ವೈಕುಂಠಯಾತ್ರೆ ಯುವಸಂವತ್ಸರದ ಶುದ್ಧ

ಆ ಕಾರ್ತಿಕದಶಮಿ ಗುರುವಾರ ಪ್ರಹರದಲಿ

ರಾಕೇಂದುಬಿಂಬ ಹಯವದನವಿಟ್ಠಲನಂಘ್ರಿ 

ಜೋಕೆಯಲಿ ಸೇರಿದವರು ॥ 9 ॥ 


~~~~~~~~~~ 


 ದಿವ್ಯ = ದೇವತೆಗಳ ಪ್ರೀತಿಗೆ ಪಾತ್ರವಾದ ;


ನುಡಿ 1 :  ಖೇದವಿಲ್ಲದೆ = ಗರ್ಭವಾಸಾದಿ ದುಃಖಗಳು ನಮ್ಮಂತೆ ಇಲ್ಲದೆ ;


ನುಡಿ 5 : ಹತ್ತೆಗರೆದು = ಹತ್ತಿರ ಕರೆದು ;


ನುಡಿ 6 : ಅವರ ಕಂಠದಿಂದ ಆದರಿಸಿ = ಶ್ರೀಪುರಂದರದಾಸರು ತಮ್ಮ ಕೊನೆಯ ಮಗನಾದ ಶ್ರೀಗುರುಮಧ್ವಪತಿಯನ್ನು ಹೇಗೆ ಆದರಿಸುತ್ತಿದ್ದರೋ ಹಾಗೆಯೇ ;


ನುಡಿ 7 : ಮುಚ್ಚುಗಾಣಿಕೆ = ಶಾಸ್ತ್ರಾರ್ಥ ರಹಸ್ಯ ಕಾಣಿಕೆ ;


ನುಡಿ 9 : ರಾಕೇಂದುಬಿಂಬ = ಪೂರ್ಣಚಂದ್ರನಲ್ಲಿ ಇರುವ ; 


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

*******

No comments:

Post a Comment