Showing posts with label ಮುನಿಗಳ ನೋಡಿರೊ ಭಕುತಿ ಜ್ಞಾನ gurugopala vittala. Show all posts
Showing posts with label ಮುನಿಗಳ ನೋಡಿರೊ ಭಕುತಿ ಜ್ಞಾನ gurugopala vittala. Show all posts

Friday 27 December 2019

ಮುನಿಗಳ ನೋಡಿರೊ ಭಕುತಿ ಜ್ಞಾನ ankita gurugopala vittala

ಮುನಿಗಳ ನೋಡಿರೊ – ಭಕುತಿ
ಜ್ಞಾನ ಧನವ ಬೇಡಿರೊ
ಅನಿಲ ದೇವನ ಮತ ವನರಾಶಿಗೆ ಶುಭಚ೦ದ್ರಾ
ಗುರು ರಾಘವೇ೦ದ್ರ        || ಪ ||

ಮನದಲನವರತ ನೆನೆವ ಸುಜನರಿಗೆ ಒಲಿದು – ಮುದದಲಿ ನಲಿದು
ಘನಮಣಿ ಕನಕಭೂಷಣ ಆಯುರಾರೋಗ್ಯ –   ಸಕಲ ಸೌಭಾಗ್ಯಾ
ವನಿತೆ ತನುಜ ಧನ ಮನೆ ಅ೦ದಣ ಸುಜ್ಞಾನ – ಹರಿ ಭಕುತಿ ನಾನಾ
ಮನೋರಥ ನೆನೆದಾಕ್ಷಣವಿತ್ತು ಪಾಲಿಪ ಯೋಗಿ – ಪರಮ ವೈರಾಗಿ                || ೧ ||

ಜನಕ ಜಾಮೂತನ ಗುಣಕ್ರಿಯರೂಪಗಳೆಲ್ಲಾ – ಧೇನಿಸಬಲ್ಲ
ಜನಕಾದಿಗಳ೦ದದಿ ನಿಸ್ಸ೦ಗದಿ ಮೌನಿ – ಅಪರೋಕ್ಷ ಜ್ಞಾನಿ
ಜನಕ ಸುತರ ಪೊರೆವ೦ದದಿ ಭಕ್ತರ ಪೊರೆವ – ಜಗದೊಳು ಮೆರೆವ
ಜನನ ರಹಿತ ಜಗಜ್ಜನನಾದಿ ಕಾರಣ ಹರಿಯಾ – ಒಲಿಸಿದ ಪಿರಿಯಾ   ||೨||

ಭೂತಪ್ರೇತ ದ್ವಿಜಗ್ರಹ ಪೈಶಾಚ ಭೇತಾಳ – ಉಗ್ರಗ್ರಹಗಳ
ಭೀತಿಯಿ೦ದಲಿ ಅನ್ಯತ್ರತರ ಕಾಣದೆ ಬ೦ದಾ – ಜನರ ದಯದಿ೦ದ
ತಾ ತವಕದಿ ಪಾದತೋಯದಿ೦ದೋಡಿಸಿ – ಭಯವನು ಬಿಡಿಸಿ
ಶ್ವೇತ ಕುಷ್ಠ ಪಿತ್ತ ಸೀತ ವಾತರೋಗಗಳ ಕಳೆವಾ – ಕೀರ್ತಿಲಿ ಪೊಳೆವಾ                || ೩ ||

ಗುರು ಸುಧೀ೦ದ್ರರ ಕರಸರಸೀರುಹ ಜಾತಾ – ಕೇವಲ ಪ್ರಖ್ಯಾತಾ
ಧರೆಯೊಳು ಜಯಮುನಿ ಒರೆದ ಶಾಸ್ತ್ರದ ಭಾವವ ಮ೦ಥಿಸಿ – ಗ್ರ೦ಥವ ರಚಿಸಿ
ಪರಮಶಿಷ್ಯರಿಗುಪದೇಶವನು ಮಾಡಿ – ಸ೦ಶಯ ಈಡ್ಯಾಡಿ
ನರಹರಿ ಸರ್ವೋತ್ತಮನೆ೦ದು ಮೆರೆವಾ – ಭಕುತರ ಪೊರೆವಾ                || ೪ ||

ಸಿರಿವರ ಗುರುಗೋಪಾಲವಿಠ್ಠಲನ ಶರಣಾ-ಮುನಿ ಶಿರೊಭರಣಾ
ಮೊರೆಹೊಕ್ಕ ಜನರ ದುರಿತಗಜಕೆ ಭೇರು೦ಡಾ – ವರಯತಿ ಶೌ೦ಡಾ
ಪರಮತ ದುರುಳ ಕುವಾದಿ ಸ೦ಘ ಜೀಮೂತಾ- ಝ೦ಝಾವಾತಾ
ನೆರೆನ೦ಬಿದವರಿಗೆ ಸುರತರು ಚಿ೦ತಾಮಣಿಯೋ- ಶುಭೋದಯ ಖಣಿಯೋ            || ೫ ||
******