Showing posts with label ಬೆರಗಾದೆನಯ್ಯ ಎನ್ನೆರೆಯ ಕೇಶವನ ಬಿಟ್ಟನ್ಯಭಜನೆಯ ಕಂಡು vaikunta vittala. Show all posts
Showing posts with label ಬೆರಗಾದೆನಯ್ಯ ಎನ್ನೆರೆಯ ಕೇಶವನ ಬಿಟ್ಟನ್ಯಭಜನೆಯ ಕಂಡು vaikunta vittala. Show all posts

Sunday 1 August 2021

ಬೆರಗಾದೆನಯ್ಯ ಎನ್ನೆರೆಯ ಕೇಶವನ ಬಿಟ್ಟನ್ಯಭಜನೆಯ ಕಂಡು ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಬೆರಗಾದೆನಯ್ಯ ಎನ್ನೆರೆಯ ಕೇಶವನ

ಬಿಟ್ಟನ್ಯಭಜನೆಯ ಕಂಡು ಪ


ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ

ಬೆಚ್ಚಿ ಅರಗಿನ ಮನೆಯ ಹೊಗುವವನಂತೆ

ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ

ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1


ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು

ಹರಣವನುಳುಹಿಕೊಂಬೆನೆಂಬಂತೇ

ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ

ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2


ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ

ಮಿಗೆ ಬಾಳ್ವೆನೆಂಬ ಮರುಳನಂದದೀ

ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ

ತೆಗಳಮರೆಯೊಗುವ ಮನುಜರ ಕಂಡು 3


ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ

ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ

ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ

ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4


ಯಾತಮುಳಿದರೆ ಜಗದಲುಳಿದವರಾರು ಮ

ತ್ತೀತನುಳುಹಿದನನು ಕೊಂದವನಾವ ಇ

ದೇತಕರಿಯರೋ ನರರು ಅಕಟಕಟ ವೈಕುಂಠ

ನಾಥ ಪರಿಪೂತನ ಪದಕಮಲವ ಭಜಿಸರೆಂದು 5


ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ

ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು

ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ

ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ

ಕೃಪಾನಿಧಿಯಿರಲು 6

***