ನಾರಾಯಣ ಎನ್ನಿ ನಾರದ ವರದನ ನಾರಾಯಣ ಎನ್ನಿರೋ ವೇದ ಪಾರಾಯಣನಾಗಿ ಕರಿಯ ಕಾಯ್ದಾತನ ನಾರಾಯಣ ಎನ್ನಿರೋ |ಪ|
ಶಿವನೊಳು ಕೂಡಿ ಶಿವವರ್ಣನಾದನ ನಾರಾಯಣ ಎನ್ನಿರೋ
ಶಿವನ ತುರುಬಿನೊಳು ಶಿವನ ಕಟ್ಟಿಸಿದನ - ನಾರಾಯಣ ಎನ್ನೀರೋ
ಶಿವನ ಹರಿಯ ಮಾಡಿದವನ ಸೊಸೆಯ ತಂದನ ನಾರಾಯಣ ಎನ್ನಿರೋ
ಶಿವ ದರುಶನವಾಗಿ ಶಿವನು ತಾನಾದನ ನಾರಾಯಣ ಎನ್ನಿರೋ |೧|
ಗರುಡವಾಹನನಾಗಿ ಗಜವನು ಸಲುಹಿದನ ನಾರಾಯಣ ಎನ್ನಿರೋ ಗರುಡನ ಗರಿಯೋಳು ಕಡಲ ತಂದಾತನ ನಾರಾಯಣ ಎನ್ನಿರೋ ಗರುಡನ ಮಾತೆಯಣ್ಣನ ಮುಖ ಪಡೆದನ ನಾರಾಯಣ ಎನ್ನಿರೋ ಗರುಡ ಗಂಧರ್ವ ನಗರಿಯ ಮೆರೆದಾತನ ನಾರಾಯಣ ಎನ್ನಿರೋ |೨|
ಸ್ವರ್ಣ ವಾಹನನಾಗಿ ಕರ್ಣ ಕುಂಡಲ ವಿಟ್ಟನ ನಾರಾಯಣ ಎನ್ನಿರೋ ಸ್ವರ್ಣ ಪಂಕದೊಳು ಶಿವನಪ್ಪಿಕೊಂಡನ ನಾರಾಯಣ ಎನ್ನಿರೋ ಸ್ವರ್ಣಖಚಿತವಾದ ರಥದೊಳು ಪೊಕ್ಕನ ನಾರಾಯಣ ಎನ್ನಿಇರೋ ನಿರ್ಣಯವಿದು ಕಾಗಿನೆಲೆ ಆದಿ ಕೇಶವನ - ನಾರಾಯಣ ಎನ್ನಿರೋ |೩|
***
meaning
ನಾರಾಯಣ ಎನ್ನಿ ನಾರದ ವರದನ ನಾರಾಯಣ ಎನ್ನಿರೋ ವೇದ ಪಾರಾಯಣನಾಗಿ ಕರಿಯ ಕಾಯ್ದಾತನ ನಾರಾಯಣ ಎನ್ನಿರೋ |ಪ|
ನಾರದ ಪ್ರಿಯ ನಾರದ ವಂದ್ಯ ನಾರಾಯಣನನ್ನು ಸ್ಮರಿಸಿ.
ಏನು ಲಾಭ?
ನೀವು ನಾರದರಂತೆ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗುವಿರಿ.
ವೇದ ಪಾರಾಯಣನಾತ ಅರ್ಥಾತ್ ಸರ್ವ ವೇದಗಳಿಂದ ಪರಮ ಮುಖ್ಯತಯಾ ಪ್ರತಿಪಾದ್ಯ ಶ್ರೀ ಮನ್ನಾರಾಯಣ. ಇಂಥ ನಾರಾಯಣನನ್ನು ಮಕರಿಯ ಬಾಯಿಗೆ ಸಿಕ್ಕಿಬಿದ್ದ ಕರಿ ಆನೆ ಮನಸಾ ಸ್ಮರಿಸಿತು ಶ್ರೀಹರಿ ನಕ್ರನ ತನ್ನ ಚಕ್ರದಿ ತರಿದು ಪಾರು ಮಾಡಿದ. ಹೀಗೆ ಸರ್ವ ವೇದ ಪ್ರತಿಪಾದ್ಯ ನಾರಾಯಣನ ಸ್ಮರಿಸಲು ನಮ್ಮ ತಾಪತ್ರಯಗಳು ನಿವಾರಣೆಗೊಳ್ಳುತ್ತವೆ.|
ಶಿವನೊಳು ಕೂಡಿ ಶಿವವರ್ಣನಾದನ ನಾರಾಯಣ ಎನ್ನಿರೋ -
ಶಿವ ಎಂದರೆ ನೀರು. ನೀರಿನಲ್ಲಿ ಅಂದರೆ ಸಮುದ್ರದಲ್ಲಿ
ಸಮುದ್ರಶಾಯಿ ಶ್ರೀಹರಿ. ಇಂಥ ಸಮುದ್ರ ಶಾಯಿ ಆದ ವಿಷ್ಣುವಿನ ವರ್ಣವೂ ಸಮುದ್ರದಂತೆ ನೀಲ ವರ್ಣವೇ. ನೀಲ ಮೇಘ ಶಾಮ. ಇಂತಹ ಸಮುದ್ರ ವರ್ಣದ ನಾರಾಯಣನ ನನ್ನು ಸ್ಮರಿಸಿ. ಸಂಸಾರ ಸಮುದ್ರ ದಾಟಲು ಬಹು ಸುಲಭ.
ಶಿವನ ತುರುಬಿನೊಳು ಶಿವನ ಕಟ್ಟಿಸಿದನ - ನಾರಾಯಣ ಎನ್ನೀರೋ
ಎಂಥ ನಾರಾಯಣ ಎನ್ನಬೇಕು?
ಹರಿಯ ಪಾದದ ಬೆರಳಿನ ತುದಿಯಿಂದ ಜನಿಸಿದಳು ಗಂಗೆ. ಇಂಥ ಶಿವನ ಅಂದರೆ ನೀರು ಅಂದರೆ ಗಂಗೆಯನ್ನು, ಶಿವ ಅಂದರೆ ಮಹದೇವನ ಜಟೆಯೊಳು ಇರಿಸಿದ ಮಹಾತ್ಮೆಯ ನಾರಾಯಣನ ಸ್ಮರಿಸಿ.
ತಥ್ಯ - ಜಗವ ಪಾವನ ಮಾಡುವವಳು ಗಂಗೆ. ಗಂಗೆಗೆ ಪಾವನತ್ವ ಕೊಟ್ಟವ ಶ್ರೀಹರಿ. ಪಾವನತ್ವಧಿ ನೋಡೆ ಗಂಗಾಜನಕ.
ಆತ ಪಾವನಕೆ ಪಾವನ. ಮಂಗಳಕೆ ಮಂಗಳ.
ಇಂತಹ ಮಂಗಳಕರ ನಾರಾಯಣನ ಸ್ಮರಿಸಿ. ಜೀವನ ಮಂಗಳ ಮಯವಾಗುವುದು.
ಹರಿಯಪಾದದಿ ಜನಿಸಿದ ಗಂಗೆಯ, ಹರ, ಶಿರದಿ ಹೊತ್ತ. ಇದು ಹರಿಯಸರ್ವೋತ್ತಮತೆ ಸಾರುತ್ತದೆ ಸರ್ವೋತ್ತಮನಾದ ಶ್ರೀಹರಿಯ ಸ್ಮರಿಸಿ. ಅವನ ಅನುಗ್ರಹ ಪಡೆಯಿರಿ. ಎನ್ನುತ್ತಾರೆ ದಾಸರು
ಶಿವನ ಹರಿಯ ಮಾಡಿದವನ ಸೊಸೆಯ ತಂದನ ನಾರಾಯಣ ಎನ್ನಿರೋ
ಹರಿ ಎಂದರೆ ಬಾಣ. ಧನಸ್ಸು. ಶಿವ ಧನಸ್ಸು ಭೇದಿಸಿದ. ಸೀತೆಯ ವಿವಾಹವಾದ. ತಂದೆ ದಶರಥಗೆ ಸೊಸೆಯ ತಂದವ ಶ್ರೀರಾಮ. ಆತನೇ ನಾರಾಯಣ. ಆತನನ್ನು, ಸೀತಾ ಕಲ್ಯಾಣವನ್ನು ಸ್ಮರಿಸಿ. ಸಕಲ ಕಲ್ಯಾಣವಾಗುತ್ತದೆ.
ಶಿವ ದರುಶನವಾಗಿ ಶಿವನು ತಾನಾದನ- ನಾರಾಯಣ ಎನ್ನಿರೋ|೧|
ಶಿವ ಎಂದರೆ ಪರಮೇಶ್ವರ. ಪರಮಾತ್ಮ. ಶಿವ ಎಂದರೆ ರುದ್ರ ದೇವರು. ರುದ್ರ ದೇವರಿಗೆ ಶ್ರೀಹರಿಯ ದರ್ಶನವಾಯಿತು. ಎಲ್ಲಿ? ಸಮುದ್ರ ಮಂಥನ ಕಾಲದಲ್ಲಿ ಶ್ರೀಹರಿ ತ್ರಿಲೋಕ ಮೋಹಕ ಮೋಹಿನಿ ರೂಪ ತಾಳಿದ ಎಂಬುದು ಕೇಳಿ ಶಿವ ಆ ಮೋಹಿನಿ ರೂಪ ತೋರಿಸು ಎಂದು ಹರಿಗೆ ಪ್ರಾರ್ಥಿಸಿದ ಶ್ರೀ ವಿಷ್ಣು ಮೋಹಿನಿಯಾದ. ಶಿವ ಮೋಹಿತನಾದ.
' ಯುವತಿ ವೇಷದಿ ಹಿಂದೆ ಗೌರಿಧವನ ಮೋಹಿಸಿ ಕೆಡಿಸಿ ಉಳಿಸಿದ.'
ಶ್ರೀಹರಿ ಮತ್ತೆ ತನ್ನ ವಿಷ್ಣು ರೂಪ ತೋರಿ ಶಿವನ ಭ್ರಮೆಯ ನಿವಾರಿಸಿದ. ಶಿವ ಮಹಾ ಮನೋ ನಿಗ್ರಹವುಳ್ಲ. ಶಿವ ಮತ್ತೆ ತಾನಾದ.
ತಥ್ಯ- ಮಾಮ ಮಾಯಾ ದುರತ್ಯಯಾ
ಹರಿಯ ಮಾಯವ ಗೆಲುವನಾವನು ಈ ಜಗತ್ರಿಯದಿ
ಗರುಡವಾಹನನಾಗಿ ಗಜವನು ಸಲುಹಿದನ ನಾರಾಯಣ ಎನ್ನಿರೋ
ಋಷಿಯ ಶಾಪದಿಂದ ಆನೆ ಹಾಗೂ ಮೊಸಳೆ ಆದ ಹಾಹಾ, ಹಾಗೂ
ಹೂಹೂ ಗಂಧರ್ವರು.
ಮೊಸಳೆ ಬಾಯಿಗೆ ಸಿಕ್ಕ ಗಜರಾಜ. ಪ್ರಾಣ ಸಂಕಟ. ಭಕ್ತಿಲಿ ನಾರಾಯಣನಿಗೆ ಮೊರೆ ಇಟ್ಟ. ತಕ್ಷಣದಿ ಗರುಡವಾಹನನಾಗಿ ವಿಷ್ಣು ಬಂದ. ಚಕ್ರದಿ ಮೊಸಳೆಯ ಸಂಹರಿಸಿದ. ಗಜರಾಜನ ಕಾಯ್ದ. ಆಪತ್ತಿಗೆ ಆಗುವ ಇಂತಹ ಮಹಿಮೆಯ ನಾರಾಯಣನ ಸ್ಮರಿಸಿ. ಆಪತ್ತು ವಿಪತ್ತು ನಿವಾರಿಸಿಕೊಳ್ಳಿ ಎನ್ನುತ್ತಾರೆ ದಾಸರು.
ಗರುಡನ ಗರಿಯೋಳು ಕಡಲ ತಂದಾತನ ನಾರಾಯಣ ಎನ್ನಿರೋ
ವಿನುತೆ ಮತ್ತು ಕದ್ರು ಇವರು ಕಶ್ಯಪನ ಹೆಂಡತಿಯರು. ಸರ್ಪಗಳು ಕದ್ರುವಿನ ಮಕ್ಕಳು. ಗರುಡ ವಿನುತೆಯ ಮಗ. ಶಾಪದಿಂದ ತಾಯಿ ವಿನುತೆ ಕದ್ರುವಿನ ಸೇವಕಿಯಾಗಿದ್ದಳು. ಆ ಸೇವಕತ್ವ ಬಿಡಿಸಲು ಗರುಡ, ದೇವಲೋಕ ದಿಂದ ಅಮೃತ ತಂದು ಸರ್ಪಗಳಿಗೆ ಕೊಡಬೇಕಾಗಿತ್ತು. ಕಠಿಣ ಕೆಲಸ. ಗರುಡ ಸ್ವರ್ಗಕ್ಕೆ ಹಾರಿದ. ಬಂದ ಸಕಲ ಅಡೆತಡೆಗಳನ್ನು ನಿವಾರಿಸಿದ. ದೇವತೆಗಳ ಜೊತೆ ಪೈಪೋಟಿ ಮಾಡಿದ. ಅಮೃತಕಲಶ ತಂದ. ತಾಯಿಯ ದಾಸ್ಯವ ಬಿಡಿಸಿದ. ವಿಷ್ಣುವಿನ ಮೆಚ್ಚುಗೆ ಪಡೆದ .ವಿಷ್ಣು ವರ ಕೊಟ್ಟ. ಗರುಡ ವಿಷ್ಣುವಿಗೆ ವಾಹನನಾದ.
ಈ ಅಮೃತ ಕಲಶ ಗರುಡ ತಂದ ಭಾಗವತದ ಪ್ರಸಂಗ. ಇಂತಹ ಗರುಡನೇ ವಾಹನವಾಗಿರುವ ಗರುಡವಾಹನ ಶ್ರೀಮನ್ನಾರಾಯಣನ ಸ್ಮರಣೆ ಮಾಡಿ.
ಜೀವನ ಅಮೃತ ಮಯವಾಗುತ್ತದೆ. ಎಂಬ ಸಂದೇಶ.
ಗರುಡನ ಮಾತೆಯಣ್ಣನ ಮುಖ ಪಡೆದನ ನಾರಾಯಣ ಎನ್ನಿರೋ
ಗರುಡನ ಮಾತೆ ವಿನುತೆ. ಅವಳ ಅಣ್ಣ ಹರಿಯಾಶ್ವ. ಅವನ ಮುಖ ಕುದುರೆಯ ಮುಖ. ಇಂತಹ ಕುದುರೆಯ ಮುಖ ಉಳ್ಳ ನಾರಾಯಣ ಅಂದರೆ ಹಯಗ್ರೀವ ದೇವರು. ಹಯಗ್ರೀವ ಮುಖವುಳ್ಳ ನಾರಾಯಣನ ನೆನೆಸಿರಿ. ಅಶ್ವವೇಗದಿ ಸಂಸಾರ ದಾಟಿರಿ.
ಗರುಡ ಗಂಧರ್ವ ನಗರಿಯ ಮೆರೆದಾತನ ನಾರಾಯಣ ಎನ್ನಿರೋ
ವಿಷ್ಣು ಗರುಡ ವಾಹನನಾದ. ಗಂಧರ್ವ ನಗರ ಸಕಲ ತ್ರಿಲೋಕಗಳಲ್ಲಿ ಗರುಡವಾಹನನಾಗಿ ಮೆರೆಯುವ ಈ ಪರಿಯ ಸೊಬಗು ಇನ್ನಾವ ದೇವರಲ್ಲಿ ಇಲ್ಲ. ಶ್ರೀಮನ್ನಾರಾಯಣನಲ್ಲಿ ಮಾತ್ರ. ಇಂತಹ ನಾರಾಯಣನ ಸ್ಮರಣೆ ಸದಾ ನಾಲಿಗೆಯ ಮೇಲೆ ಇರಲಿ. |೨|*
ಸ್ವರ್ಣ ವಾಹನನಾಗಿ ಕರ್ಣ ಕುಂಡಲ ವಿಟ್ಟನ ನಾರಾಯಣ ಎನ್ನಿರೋ
ಪರಮಾತ್ಮ ಸ್ವರ್ಣ ವಾಹನ. ಪೊಂಬಕ್ಕಿತೇರನ.
ಅಂದರೆ ಗರುಡ ಸುವರ್ಣ ಪಕ್ಷಿ. ಅದು ವಿಷ್ಣುವಿನ ವಾಹನ.
ವಿಷ್ಣುವೇ ಶ್ರೀ ಕೃಷ್ಣ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನಿಗೆ ಅರ್ಜುನನ
ಬಾಣ ಇಡಿಸಿದ ಕರ್ಣನ ಕಥೆ ಮುಗಿಸಿದ.
ಇಂಥ ನಾರಾಯಣನ ಸ್ಮರಿಸಿ.
ಸ್ವರ್ಣ ಪಂಕದೊಳು ಶಿವನಪ್ಪಿಕೊಂಡನ ನಾರಾಯಣ ಎನ್ನಿರೋ ಸ್ವರ್ಣಖಚಿತವಾದ ರಥದೊಳು ಪೊಕ್ಕನ ನಾರಾಯಣ ಎನ್ನಿಇರೋ ನಿರ್ಣಯವಿದು ಕಾಗಿನೆಲೆ ಆದಿ ಕೇಶವನ - ನಾರಾಯಣ ಎನ್ನಿರೋ
|೩|
ಕಮಲದಲ್ಲಿ ಜನಿಸಿದ ಬ್ರಹ್ಮನಿಂದ ಶಿವನಿಂದ ಸೇವ್ಯನಾದ ಮತ್ತು ಅವರನ್ನು ಮೆಚ್ಚಿದ ಸರ್ವೋತ್ತಮನಾದ ನಾರಾಯಣನನ್ನು ಸ್ಮರಿಸಿ.
ದೇವೇಂದ್ರ ಕಳಿಸಿದ ಚಿನ್ನದ ರಥವೇರಿತು ರಾವಣನನ್ನು ಸಂಹರಿಸಿದ ಶ್ರೀರಾಮ. ಅವನೇ ಶ್ರೀಮನ್ನಾರಾಯಣ ಅವನನ್ನು ಸ್ಮರಿಸಿ. ರಾಮ ನಾಮ ಜಪಿಸಿ. ಕಾಗಿನೆಲೆ ಆದಿಕೇಶವ ಅಂದರೆ ಕೇಶವ ದೇವರು ಶ್ರೀಮನ್ನಾರಾಯಣನಿಂದ ಅಭಿನ್ನರು. ಪರಮಾತ್ಮ ಸ್ವಗತ ಭೇದ ವ ವಿವರ್ಜಿತ. ಅವನ ಗುಣ ರೂಪ ಕ್ರಿಯೆಗಳಲ್ಲಿ, ಅವನ ಅವತಾರಗಳಲ್ಲಿ ಕೆಂಚಿತು ಭೇದವಿಲ್ಲ. ಇದು ಪರತತ್ವ. ಇಂತಹ ನಾರಾಯಣನನ್ನು ಸದಾ ಸ್ಮರಿಸಿ. ಅವನ ಅನುಗ್ರಹ ಹೊಂದಿರಿ. ಇದು ಮುಕ್ತಿಗೆ ಸೋಪಾನ ಎನ್ನುತ್ತಾರೆ ದಾಸ ವರೇಣ್ಯ ಕನಕದಾಸರು.
ಡಾ.ವಿಜಯೇಂದ್ರ ದೇಸಾಯಿ.
ಶ್ರೀ ಕೃಷ್ಣಾರ್ಪಣೋಸ್ತು
***