Showing posts with label ಭಜಿಸಿ ಬದುಕಿರೊ ಅಜನ ankita tandegopala vittala ಗೋಪಾಲದಾಸರ ಚರಿತ್ರೆ ಪದ BHAJISI BADUKIRO AJANA GOPALADASA CHARITRE PADA. Show all posts
Showing posts with label ಭಜಿಸಿ ಬದುಕಿರೊ ಅಜನ ankita tandegopala vittala ಗೋಪಾಲದಾಸರ ಚರಿತ್ರೆ ಪದ BHAJISI BADUKIRO AJANA GOPALADASA CHARITRE PADA. Show all posts

Friday 5 February 2021

ಭಜಿಸಿ ಬದುಕಿರೊ ಅಜನ ankita tandegopala vittala ಗೋಪಾಲದಾಸರ ಚರಿತ್ರೆ ಪದ BHAJISI BADUKIRO AJANA GOPALADASA CHARITRE PADA


Audio by Mrs. Nandini Sripad


 

ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ, ಅಪರೋಕ್ಷಜ್ಞಾನಿಗಳೂ ಆದ 

 ಶ್ರೀ ತಂದೆಗೋಪಾಲವಿಠಲದಾಸಾರ್ಯ (ರಂಗಪ್ಪ ದಾಸರು) ವಿರಚಿತ 


 ಶ್ರೀ ಗೋಪಾಲದಾಸರ ಚರಿತ್ರೆ ಪದ 


 ರಾಗ ಆನಂದಭೈರವಿ                ಆದಿತಾಳ 


ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ ।

ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥ 


ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ ।

ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥ 


ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ ।

ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥ 


ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ ।

ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥ 


ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು ।

ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥ 


ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ ।

ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥ 


ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ ।

ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥ 


ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ ।

ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥ 


ಆಡುತಿರಲದು ಕಂಡು ಮಕ್ಕಳು ಓಡಿ ಪೇಳ್ದರು ಜನನಿಗೆ ।

ನೋಡಬಂದರು ಜನನಿ ಜನರು ಕೊಂಡಾಡಿದರು ಈ ಮಹಿಮಿಗೆ ॥ 8 ॥ 


ವೃಕ್ಷವೇರಲು ಸರ್ಪ ಚಿಂತಿಸಿ ರಕ್ಷಕತ್ವವು ಇವರನೆ ।

ಲಕ್ಷ್ಮಿರಮಣನೆ ರಕ್ಷಿಸುವನೆಂದೀಕ್ಷಿಸಿ ಉತ್ತನೂರಿಗೆ ॥ 9 ॥ 


ಬಂದು ದೇವರ ಗುಡಿಪ್ರವೇಶಿಸಿ ನಿಂದು ನಲಿನಲಿದಾಡುತಾ ।

ಮಂದಿಗಳು ನೋಡಲ್ಕೆ ಮೌನದಿ ಮಂದಮತಿಯಂತೆ ತೋರುತಾ ॥ 10 ॥ 


ನಿರುತ ಸೇವೆಯ ಮಾಡೆ ಪುರಜನ ಹರಿಯ ಮಂದಿರ ದ್ವಾರವ ।

ಭರದಿ ಬಂಧಿಸಿ ತೆರಳಲಾಕ್ಷಣ ಕರವ ಬಾರಿಸಿ ತುತಿಸುವಾ ॥ 11 ॥ 


ವೇಣುಗಾಯನಪ್ರಿಯನು ಎದುರಿಲಿ ಕುಣಿವ ನೂಪುರ ಶಬ್ದವು ।

ಮನಿಗಳಲ್ಲಿಹ ಮನುಜರಾಲಿಸೆ ಮನಕೆ ಕೇವಲ ಮೋದವು ॥ 12 ॥ 


ಮೌನ ವ್ರತವನು ಮಾಡುತಿರುವ ಮನುಜನಾ ಮಾತಾಳ್ಪೆನೊ ।

ಏನಿದಚ್ಚರವೆನುತ ಬಾಧಿಸೆ ನಾನಾ ಕ್ಲೇಶವ ಬಟ್ಟನು ॥ 13 ॥ 


ಶೈವ ಪಣವನ್ನು ಮಾಡಿ ಕೇಳುತ ಇವರ ಜಯಪತ್ರ ಕೇಳಿದಾ ।

ತವಕ ಲಿಖಿಸಿ ಕೊಡೆನಲು ಪ್ರಾರ್ಥಿಸೆ ಕವನ ಪೇಳಲು ತೆರಳಿದಾ ॥ 14 ॥ 


ಸುತರ ಸ್ವಸ್ಥಿಯಗೋಸುಗದಿ ಭೂಪತಿಯ ಸೇವೆಯೊಳಿಟ್ಟರೆ ।

ಚತುರದಲಿ ಚೋರತ್ವ ಕಲ್ಪಿಸಿ ಅತಿದುರುಳ ಬಾಧಿಸುತಿರೆ ॥ 15 ॥ 


ಹರಿಯ ಧ್ಯಾನದೊಳಿರಲು ತರುಳರ ಘೋರ ಬಾಧೆಯ ತಿಳಿದನು ।

ಭರದಿ ಇಲ್ಲಿಂದತುಳ ಮಹಿಮೆಯ ತೋರಲವರನು ಬಿಟ್ಟನು ॥ 16 ॥ 


ಅಂದು ವೇಗದಿ ಮಂದಿರಕೆ ಬಂದು ನಿಂದು ಮಾತೆಯ ಕರೆದರು ।

ಮಂದಹಾಸದಿ ಅನುಜರೀರ್ವರು ಬಂದ ಸ್ಥಿತಿಯನು ಪೇಳಲು ॥ 17 ॥ 


ಇನಿತು ಪರಿದ್ವಯ ವತ್ಸರದೊಳು ಜನನಿಘರುಷವ ತೋರಿದಾ ।

ವನಜನಾಭನ ಕೃಪೆಯು ಇಂದಿನ ದಿನ ಪ್ರವೇಶೆಂದು ಪೇಳಿದಾ ॥ 18 ॥ 


ಹರಿಯ ಕರುಣ ಉಣಲಿ ಇಲ್ಲವು ನಿರುತ ಭಿಕ್ಷವ ಬೇಡಲು ।

ಎರಡು ವತ್ಸರ ಮೌನ ವೊಹಿಸಿ ಸರಸ ವಚನಗಳಾಡಲು ॥ 19 ॥ 


ಇಂದಿರೇಶನ ಕರುಣದಿಂದಲಿ ಬಂದ ಸಾಮಗ್ರಿ ನೋಡುತಾ ।

ಒಂದು ನಾಳಿಗೆ ಬೇಡವೆನ್ನಲು ಸುಂದರಾಂಗಿಯು ಲೋಭದಿ ॥ 20 ॥ 


ಗಡಿಗಿ ಏಳನು ತುಂಬಿ ಭೂಮಿಯೊಳಗಿಸೆರಡನೆ ದಿನದಲಿ ।

ನೋಡಿ ಕ್ರಿಮಿರಾಸಿಯನು ಇವರ ಬೇಡಿಕೊಂಡಳು ಕರುಣದಿ ॥ 21 ॥ 


ಮಂದಹಾಸದಿ ಮೂರು ಮ್ಯಾಲಕೆ ತಂದು ವಿಪ್ರರಿಗುಣಿಸಿದ ।

ಅಂದವಾದೀ ನಾಲ್ಕು ಘಟಗಳು ಮುಂದಕಿರಲೆಂದು ಪೇಳಿದಾ ॥ 22 ॥ 


ಭಾನು ಉದಯದಲೆದ್ದು ಶ್ರೀಹರಿ ಧ್ಯಾನದಲ್ಲಿರೆ ಜನರಿಗೆ ।

ಶ್ರೀನಿವಾಸನ ಕೃಪೆಯು ಪೇಳಿದ ನಾನಾ ಬಗೆ ಕೇಳ್ವವರಿಗೆ ॥ 23 ॥ 


ಈ ಮಹತ್ಮರ ಕೂಡ ವಿಪ್ರನು ಪ್ರೇಮವಚನಗಳಾಡುತಾ ।

ಯಾಮ ರಾತ್ರಿಯು ಗಮಿಸಿ ಪೋಗಲು ತಾ ಮನದಿ ಚಿಂತೆ ಮಾಡುತಾ ॥ 24 ॥ 


ಮರಳೆ ಸಂಧ್ಯಾವಂದನೆಯ ಮಾಡಿ ಕರದಿಂದರ್ಘ್ಯವ ಕೊಡುತಿರೆ ।

ತರಣಿಯನು ಅಸ್ತಾದ್ರಿಯಲಿ ಕಂಡು ಪರಮ ಹರುಷವ ಬಡುತಿರೆ ॥ 25 ॥ 


ಪರಿ ಪರೀ ಚರ್ಯ ಕಂಡು ರಾಜನು ದರ್ಶನಾದೀತೆಂದನು ।

ಹರಿಯ ಸನ್ನಿಧಿ ಕ್ಲುಪ್ತ ದ್ರವ್ಯವು ಕರಿಯ ಕುದರಿಯ ಕೊಡುವನು ॥ 26 ॥ 


ಈ ಪರಿಂದಲಿ ಪೇಳಿ ಹವಿಕನ ಭೂಪ ತಾ ಕಂಡಾಕ್ಷಣ ।

ಈ ಪೃಥಿವಿಪತಿ ಪದವು ನಿನಗೆ ತಪ್ಪದೆಂದ ಸುಲಕ್ಷಣಾ ॥ 27 ॥ 


ಧಾತ್ರಿಯೊಳು ಯಾದವಗಿರಿಯ ಸತ್ಪಾತ್ರ ತಿಮ್ಮಣ್ಣನೆಂಬನಾ ।

ತೀರ್ಥಯಾತ್ರೆಯ ನೆವನದಿಂದಾ ಕ್ಷೇತ್ರದಲಿ ವಾಸ ಮಾಡ್ದನಾ ॥ 28 ॥ 


ದೇಶದೇಶದ ಜನರುಗಳು ಬಂದು ವಾಸವಾಗಿ ಇಪ್ಪರೋ ।

ಶ್ರೀಶನಾಜ್ಞದಿ ಅವರವರ ಅಭಿಲಾಷೆ ಪೊರೈಸುತಿಪ್ಪರೊ ॥ 29 ॥ 


ವೇಂಕಟಕೃಷ್ಣೆಂದು ಪದಗಳಿಗಂಕಿತವು ನೀಡುತಲಿರೆ ।

ವೇಂಕಟೇಶನ ದಾಸವರ್ಯರು ಸೋಂಕಿ ವಿಜಯದಿಂ ಬರುತಿರೆ ॥30॥ 


ದಾಸವರ್ಯರು ಕಂಡು ಇವರಿಗುಪದೇಶವನು ಕೊಡಲಾಕ್ಷಣ ।

ಏಸು ಜನ್ಮದ ಸುಕೃತವೆನುತಲಿ ಲೇಸುಲೇಸೆಂದು ಮೆರದನಾ ॥ 31 ॥ 


ಉಡುಪಿಕೃಷ್ಣನ ದರುಶನಕ್ಕೆ ಆಜ್ಞಾ ಕೊಡಬೇಕೆನುತಲಿ ಕೇಳ್ದನು ।

ತಡವ್ಯಾಕೆನುತಲಿ ಹರಿಸ್ತುತಿಯ ಮಾಡಿ ಕೊಡುತ ಪೋಗಿಬಾರೆಂದನು ॥ 32 ॥ 


ಮಂಡಗದ್ದಿಯ ಭೀಮನೆಂಬುವ ಕಂಡು ಪೂಜಿಸಿ ಕಳುಹಿದ ।

ಗಂಡಿ ತ್ರಯದಲಿ ಸುಲಿಯೆ ಶಿಗದಿರೆ ದಂಡ ನಮಿಸಲುದ್ಧರಿಸಿದ ॥ 33 ॥ 


ಗೋಪಬಾಲಕನಾದ ಕೃಷ್ಣನ ವ್ಯಾಪಾರಂಗಳ ಸ್ಮರಿಸಿದಾ ।

ತಾ ಪುರಕೆ ಬರುತೋರ್ವ ಮನುಜಗಪಾರ ಭಾಗ್ಯವ ತೋರಿದಾ ॥ 34 ॥ 


ಉದರ ಶೂಲಿಯು ಬಾಧಿಸಲು ಶ್ರೀಪದುಮನಾಭನ ಷಡ್ರಸಾ ।

ಐದು ತಾಸಿಗೆ ಭುಂಜಿಸುವದೆನೆ ಮುದದಿ ನಡೆಸಿದ ಮಾನಿಸಾ ॥ 35 ॥ 


ವಿಜಯರಾಯರ ಪಾದ ನಿರುತದಿ ತ್ಯಜಿಸದಲೆ ಭಜಿಸುವರೊ ।

ವಿಜಯವಿಟ್ಠಲ ಪ್ರತಿಮೆಯನು ಕೊಡೆ ಭಜಿಸಿ ಪೂಜಿಸಿ ನಲಿವರೊ ॥ 36 ॥ 


ರಾಜವಳಿಯ ಗ್ರಾಮದಲಿ ಹರಿ ಪೂಜೆ ಮಾಡುತ ಗಿರಿಯಲಿ ।

ಮೂಜಗತ್ಪತಿ ರಥದೊಳಿಹನೆಂದು ನೈಜದಲಿ ಪೇಳುತ್ತಲಿ ॥ 37 ॥ 


ಕ್ಷಾಮ ಪರಿಹರ ಮಾಳ್ಪದೆನುತಲಿ ಗ್ರಾಮಿಕರು ಕರ ಮುಗಿಯಲು ।

ಆ ಮಹಾಮೂಢ ಮನುಜನಿಂದಲಿ ಕ್ಷೇಮವಾಗೆ ಕೊಂಡಾಡಲು ॥ 38 ॥ 


ಇವರ ಸ್ತುತಿಸಲು ಸೂತ ಶಾಖದಿ ಲವಣವಧಿಕ ಮಾಡಲು ।

ಲವಣಮಾನಿ ಜನಾರ್ದನನಿಗರ್ಪಿಸೆ ಸವಿದು ಭುಂಜಿಸಿ ಪೊಗಳಲು ॥ 39 ॥ 


ವೀರಗರ್ವದಲಿದ್ದ ಧೊರೆಗಳು ಘೋರಿಸಲು ತನ್ನನುಜರಾ ।

ವಾರಿ ನೋಟದಿ ನೋಡಿ ಪ್ರಾರ್ಥಿಸೆ ಸೇರಿದರು ಸ್ವಪುರವನಾ ॥ 40 ॥ 


ಪುನಹ ಕೃಷ್ಣನ ದರುಶನಕೆ ತಮ್ಮನುಜರಿಂದಲಿ ನಡೆದರು ।

ಜನನ ರಹಿತನು ವನುತೆ ಗರ್ಭದಿ ಜನಿಸೆ ದೃಶ್ಯನಾದನು ॥ 41 ॥ 


ಕ್ಷಿತಿಯೊಳಗೆ ತನಗಾದ ಅನುಭವ ಅತಿಶಯವನು ಪೇಳುತಾ ।

ರತಿಪತಿಪಿತನನ್ನು ತನ್ನಯ ಸುತನ ತೆರದಲಿ ಶೆಳವುತಾ ॥ 42 ॥ 


ಕ್ಷಿತಿಯೊಳಗೆ ಶ್ರೀರಂಗ ರಾಜನ ಅತಿ ವಿಭವ ನೋಡೂವರೊ ।

ಕೃತಿಪತಿ ನಿಂದಾ ಸ್ತುತಿಯ ಮಾಡುತತಿ ಮುದವ ಬಡುತಿಹರೊ ॥ 43 ॥ 


ಭೂಸುರರು ನದಿಯಲ್ಲಿ ಬರುತಿರೆ ಲೇಸು ಭೋಜನ ಬಯಸಲೂ ।

ದಾಸವರ್ಯರು ಅವರ ಮನೊ ಅಭಿಲಾಷೆಯಂತಲಿ ಸಲಿಸಲು ॥ 44 ॥ 


ವಸುಧಿಪತಿ ಕಂಚೀವರದರಾಜನ ವಸನಕೆ ದೀಪ ಸೋಂಕಲೂ ।

ಮುಸುಕು ತೊರದು ತುಂಗ ನದಿಯೊಳು ನಸುನಗುತ ಕರನೊರಸಲು ॥ 45 ॥ 


ಅರೆ ಮಾತುಗಳಾಡುತಲಿ ಹಯವೇರಿ ಬಂದನು ಬಳಿಯಲಿ ।

ಸೂರಿಜನ ಸಂಪ್ರೀಯನೆಂದು ಸಾರಿದನು ಸಜ್ಜನರಲಿ ॥ 46 ॥ 


ತರುಣಿ ಕ್ಷೀರವು ತಂದು ಕೊಡುತಿರೆ ಭರದಿ ಮರಳೊಳಗೆರದನು ।

ಮರಳಿ ಗುಡಿಯೊಳು ಕಂಡು ಬರುತಿರೆ ಕರುಣನಿಧಿಯನು ತೋರ್ದನು ॥ 47 ॥ 


ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯರಾಯರಾ ।

ದಂಡ ನಮನವ ಮಾಡಿ ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ॥ 48 ॥ 


ಹರುಷದಿಂದುತ್ತನೂರು ಸೇರಲು ಪರಿಹರಾಗುವದೆಂದನೂ ।

ಬರಲು ಭಕ್ರಿಯ ವೊಳಗೆ ನಾಲ್ವತ್ತೊರುಷ ಆಯುವನಿತ್ತನು ॥ 49 ॥ 


ಸುಧೆ ಸುಪಾತ್ರದಿ ಪಿಡಿದ ಹರಿಯನು ಮುದದಿ ಸ್ಮರಿಸುತ ಕೊಟ್ಟನು ।

ಪದುಮನಾಭನು ಕೋಪದಿಂದಿರೆ ಶ್ರೀದಬಾರೆಂದು ಕರೆದನು ॥ 50 ॥ 


ಕರವೀರಪುರನಿಲಯ ಲಕುಮಿಯ ಪರಮ ಹರುಷದಿ ತುತಿಸಿದಾ ।

ಶರಣರಿಗೆ ಆ ಪದವನೊದಗಲು ಗುರುದಯದಿ ಪರಿಹರಿಸಿದಾ ॥ 51 ॥ 


ಮಂದಹಾಸದಿ ರಾಘವೇಂದ್ರರ ವೃಂದಾವನಕಭಿನಮಿಸಿದಾ ।

ಮುಂದೆ ನಡೆವ ವಿಚಿತ್ರಚರ್ಯಾನಂದದಲಿ ಸಂಸ್ತುತಿಸಿದಾ ॥ 52 ॥ 


ಅನುಜ ಹರಿಯನು ಕಾಣದಲೆ ತನ ಮನದಿ ಸ್ಮರಿಸುತ ನಿಲ್ಲಲು ।

ಕನಕಗಿರೀಶನ ಪ್ರಾರ್ಥಿಸುತ ಶ್ರೀವನಿತೆಯರಸನ ತೋರಲು ॥ 53 ॥ 


ತೇರಿನುತ್ಸಹ ನೋಡಿ ಹರುಷದಿ ಬಾರೊ ಮನಕೆಂದು ಸ್ತುತಿಸಿದ ।

ಪುರಕೆ ಬರುವ ಕಾಲದಲಿ ಹರಿ ಕರುಣವಿರಲೆಂದು ಪೇಳಿದಾ ॥ 54 ॥ 


ಪ್ರಾಣಸಖಗಪಮೃತ್ಯು ವೊದಗಿರೆ ವೇಣುಗೋಪಾಲ ಕೃಷ್ಣನಾ ।

ನಾನಾ ಪರಿಯಲಿ ಪ್ರಾರ್ಥಿಸಿನ್ನು ಹಾನಿ ಹಿಂದಕೆ ಮಾಡ್ದನಾ ॥ 55 ॥ 


ದುರುಳ ಮಾಯ್ಗಳ ಪುರಕೆ ಪೋಗಿ ಹರಿಯೆ ಪರನೆಂದು ಪೊಗಳುವ ।

ಭರದಿ ಬಂದವರೆಲ್ಲ ವಾದಿಸೆ ಹರುಷದಿಂದಲಿ ಜೈಸುವಾ ॥ 56 ॥ 


ದ್ವಿಜನು ವಿಜಯರಾಯರನು ತನ್ನ ನಿಜಸ್ವರೂಪವ ಕೇಳ್ದನು ।

ಸುಜನ ಶಿರೋಮಣಿ ಮುಕ್ತಿಯಲಿ ಕಾಕ ನಿಜವೆನುತ ಸ್ತುತಿ ಮಾಡ್ದನು ॥ 57 ॥ 


ನುಡಿದ ವಚನವ ಕೇಳಿ ವಿಪ್ರನು ಮಿಡುಕಿದನು ಬಲು ಮನದಲಿ ।

ಸಡಗರದಿ ಗುರು ವಿಜಯರಾಯರು ದೃಢ ಪೇಳಿಹೆ ನಿಜವೆನುತಲಿ ॥ 58 ॥ 


ಭವ ವಿಮೋಚನ ಮಾಳ್ಪ ನದಿಯೊಳು ಅವಗಹನ ಸ್ನಾನ ಮಾಡುತಾ ।

ಪವನಪಿತ ಅಹೋಬಲ ನೃಸಿಂಹನ ಕವನರೂಪದಿ ಸ್ಮರಿಸುತ ॥ 59 ॥ 


ಹರುಷದಲಿ ಸತ್ಯಬೋಧರಾಯರ ದರುಶನಕೆ ಪೋಗಿ ನಿಲ್ಲಲು ।

ತ್ವರದಿ ಮೂವರು ಸ್ತುತಿಯ ಮಾಡೆನೆ ಸರಸದಿಂದಲಿ ಪಾಡಲು ॥ 60 ॥ 


ಭರದಿ ವೇಂಕಟನೃಸಿಂಹಾರ್ಯರು ಬರಲು ಚರಣಕೆ ನಮಿಸುತಾ ।

ಅರಸಿ ಆಜ್ಞವೆ ಮುಖ್ಯ ನಿಮಗೆಂದು ಸರಸ ವಚನಗಳಾಡುತಾ ॥ 61 ॥ 


ಬಂದ ಬಗಿಯನು ತಿಳಿದು ನಿಮಗಿಷ್ಟೊಂದು ಚಿಂತ್ಯಾಕೆಂದನು ।

ಮುಂದೆ ತರುಳನು ಮಾಳ್ಪ ಚರಿತೆಯ ಮಂದಹಾಸದಿ ಪೇಳ್ದನು ॥ 62 ॥ 


ಮಂಗಳಪ್ರದವಾದ ನಿವೃತ್ತಿಸಂಗಮದಿ ಸ್ನಾನ ಮಾಡಿದ ।

ಗಂಗೆ ಮೊದಲಾದಖಿಳ ನದಿಗುತ್ತುಂಗ ಸ್ಥಳಯೆಂದು ಪೇಳಿದ ॥ 63 ॥ 


ಮೋದದಲಿ ತತ್ವಸಾರ ಪದ ಸುಳಾದಿಗಳು ಉಗಭೋಗವಾ ।

ಬೋಧಪೂರ್ಣರ ಶಾಸ್ತ್ರಸಮ್ಮತವಾದ ಕವನವ ಪೇಳುವಾ ॥ 64 ॥ 


ತನಯ ಅನುಜರ ಧನದಗೋಸುಗ ವಿನಯದಿಂದಲಿ ಕಳುಹಿದಾ ।

ಅನುಜನೋರ್ವಗೆ ಮುಂದಿನಾ ಸ್ಥಿತಿ ಕನಸಿನಂದದಿ ಪೇಳಿದಾ ॥ 65 ॥ 


ಸಣ್ಣವರ ಉದುಸಾಗಿ ಶ್ರೀಹರಿಯನ್ನು ಬಿನ್ನೈಸೀದನೂ ।

ಎನ್ನ ಸ್ವಾಮಿಯ ಮಹಿಮೆ ಧರೆಯೊಳಗಿನ್ನೂರೊರುಷೆಂದು ಪೇಳ್ದನು ॥ 66 ॥ 


ಹಿಂದೆ ಅನುಭವ ಜನ್ಮ ಚತುರ್ದಶ ಇಂದು ಈ ಜನುಮೆಂದನು ।

ಮುಂದೆರಡು ಜನ್ಮದ ಸುಚರಿಯಾನಂದದಲಿ ಕೇಳೆಂದನು ॥ 67 ॥ 


ಕ್ಷಿತಿಯೊಳಗೆ ಗುರುವ್ಯಾಸತತ್ವಜ್ಞರ ಸುತನೆನಿಸಿ ಸಚ್ಛಾಸ್ತ್ರವಾ ।

ಪ್ರತಿದಿನದಿ ಪ್ರವಚನ ಮಾಡುತ ಹುತಭುಜನ ಮುದ ಬಡಿಸುವಾ ॥ 68 ॥ 


ಎನ್ನ ಸ್ಥಾನಕೆ ಸೇರುವೆಯೋ ನೀ ನಿನ್ನ ವಂಶವು ಎನ್ನದು ।

ನಿನ್ನ ವಂಶದಿ ಘನ್ನನೆನಿಸುವೆ ಇನ್ನು ಸಂಶಯ ಸಲ್ಲದು ॥ 69 ॥ 


ಅನುಜ ಕೇಳ ಪಾಚಕನು ಜಲಧರ ಗಣಿಕಜ್ಞಾನಿ ಚಿಕಿತ್ಸಕಾ ।

ಮುನಿಯ ಪ್ರಮುಖರು ನಿನ್ನ ವಂಶದಿ ಜನಿಸಲು ಘನ ಬಾಲಕಾ ॥ 70 ॥ 


ಮಾತೃಗರ್ಭದೊಳಿರಲು ಮೃಣ್ಮಯ ಪಾತ್ರಿಯಲಿ ಜಲಪಾನವ ।

ಧಾತ್ರಿಯೊಳು ಇಚ್ಛೈಸುವವಳಾ ಪುತ್ರ ಭಾವವನೈದುವಾ ॥ 71 ॥ 


ಪುಟ್ಟಿ ದ್ವಾದಶ ವತ್ಸರದೊಳುತ್ಕೃಷ್ಟ ಮಹದಾರಿದ್ರವಾ ।

ಅಟ್ಟುಳಿಗೆ ಬಾಯ್ಬಿಡುವ ಜನಕನ ಕಷ್ಟ ಪರಿಹರ ಮಾಡುವಾ ॥ 72 ॥ 


ಊರ್ವಿಯೊಳು ನಾನಿಟ್ಟ ನಾಲಕು ಉರ್ವರಿತ ಭಾಂಡಗಳನು ।

ಗುರ್ವನುಗ್ರಹದಿಂದ ತೆಗೆದು ಸರ್ವರಿಗೆ ಸುಖ ಕೊಡುವನು ॥ 73 ॥ 


ಅವನೆ ಧನ್ಯನು ಎನ್ನ ಧನ ತೆಗದವನೆ ವೆಚ್ಚ ಮಾಳ್ಪನು ।

ಅವನೆ ಎನ್ನಸ್ಥಿಗಳನೊಯಿದು ದೇವನದಿಗರ್ಪಿಸುವನು ॥ 74 ॥ 


ಎಷ್ಟು ಪೇಳಲಿ ಎನ್ನ ವಂಶದಿ ಪುಟ್ಟಿದವರಿಗೆ ಪೇಳ್ವದು ।

ಧಿಟ್ಟ ಗುರುಗಳು ಕೊಟ್ಟ ಅಂಕಿತವಿಟ್ಟು ಪದಗಳ ಮಾಳ್ಪದು ॥ 75 ॥ 


ಭಕ್ತಿಯಲಿ ಇವಗ್ಯಾರು ಸರಿಯೆಂಬ ಉಕ್ತಿ ಗುರುಗಳ ವಾಕ್ಯವು ।

ಮುಕ್ತಿಸುಖ ವಿಚಿತ್ರ ಪೇಳ್ವೆ ವಿರಕ್ತರಾ ಯುಕ್ತಿ ದ್ವಾರವು ॥ 76 ॥ 


ಮಂದಮತಿ ನಾನಿವರ ಗುಣಗಳ ಒಂದನಾದರು ಅರಿಯೆನು ।

ಇಂದಿರೇಶನು ನುಡಿಸಿದದು ಆನಂದದಲಿ ಸಂಸ್ತುತಿಪೆನು ॥ 77 ॥ 


 ಭಾ ಎನಲು ಭಕುತಿಯನು ಪುಟ್ಟಿಸಿ ಕಾಯಕ್ಲೇಶವ ಕಳವನೂ ।

 ಗ ಎನಲು ಭವದೂರ ಮಾಳ್ಪನು ಣ್ಣಾ ಎನಲು ಮುಕ್ತಿ ಕೊಡುವನು॥78॥ 


ಇವರ ನಾಮ ಓಂಕಾರ ಪೂರ್ವಕ ಸ್ತವನ ಮಾಡಲು ಪವನನು ।

ತ್ರಿವಿಧ ಲಿಂಗವ ವಿರಜೆಯಲಿ ಕಳೆದವರ ಮುಕ್ತರೊಳಿಡುವನು ॥ 79 ॥ 


ಉದಯಕಾಲದಿ ಪದವ ಪಠಿಸಲು ಮದಡಗಾದರು ಜ್ಞಾನವ ।

ಒದಗುವದು ಸಂದೇಹವಿಲ್ಲದು ಪದುಮನಾಭನ ಕರುಣವಾ ॥ 80 ॥ 


ಏಕದಂತನೆ ಅಂಶದಲಿ ಭೂಲೋಕದಲಿ ಅವತರಿಸಿದಾ ।

ತಾ ಕಳೇವರವನ್ನು ಧರಿಸಿ ಶ್ರೀಕಳತ್ರನ ತುತಿಸಿದಾ ॥ 81 ॥ 


ಎರಡು ವಿಂಶತಿ ವರುಷಕೆ ಈ ಚರಿಯವ ಮಾಡಿದಾ ।

ಪರಮ ಹರುಷದಿ ಶ್ವಾಸ ಬಂಧಿಸಿ ಕರಣ ಮಾರ್ಗದಿ ತೆರಳಿದಾ ॥ 82 ॥ 


ಸೃಷ್ಟಿಯೊಳು ಚಿತ್ರಭಾನು ಪುಷ್ಯ ಕೃಷ್ಣಾಷ್ಟಮಿ ರವಿವಾರದಿ ।

ಬಿಟ್ಟು ದೇಹವ ತಂದೆಗೋಪಾಲವಿಟ್ಠಲನ ಪದಧ್ಯಾನದಿ ॥ 83 ॥

*******

FOR SAHITYA

CLICK  ಶ್ರೀಗೋಪಾಲದಾಸರ ಚರಿತ್ರೆ ಪದ.pdf