Showing posts with label ರಥವೋಗದ ಮುನ್ನ ಗೋಕುಲಕೆ ಮನ್‍ಮನೋ shreeda vittala. Show all posts
Showing posts with label ರಥವೋಗದ ಮುನ್ನ ಗೋಕುಲಕೆ ಮನ್‍ಮನೋ shreeda vittala. Show all posts

Friday 27 December 2019

ರಥವೋಗದ ಮುನ್ನ ಗೋಕುಲಕೆ ಮನ್‍ಮನೋ ankita shreeda vittala

ರಾಗ : ಧನಶ್ರೀ  ತಾಳ : ಝಂಪೆ

ರಥವೋಗದ ಮುನ್ನ ಗೋಕುಲಕೆ ಮನ್‍ಮನೋ |
ರಥ ಪೋಗಿರುವುದೇನೆಂಬೆ ||ಪ||

ಅತಿಕೌತುಕವದಾಯ್ತು ಖಳರಾಯನೊಲಿದು ಯದು |
ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ||ಅನು||

ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ |
ಪತಿ ಸೇವೆ ತಾನಾಗಿ ದೊರೆತು |
ಶತಸಹಸ್ರಾನಂತಾನಂತ ಜನುಮಗಳ ಸು|
ಕೃತಕ್ಕೆ ಫಲವಾಯಿತೆಂದರಿದು|
ಗತಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ |
ಪಥದೊಳಗೆ ತಾವೆ ಮುಂದರಿದು ||
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ|
ಪ್ರತಿಯಿಲ್ಲವೀ ಶುಭೋದಯಕೆ-ಸೂರ್ಯೋದಯಕೆ ||೧||

ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು |
ನಾಪುಳಿನದಲಿ ಮೆರೆವ ಚರಣ |
ಗೋಪಿಯರ ಪೀನ ಕುಚಕುಂಕುಮಾಂಕಿತ ಚರಣ |
ತಾಪತ್ರಯವಳಿವ ಚರಣ |
ಗೋಪುರದ ಶಿಲ ತೃಣಾಂಕುರವ ತೋರುವ ಚರಣ |
ಆಪದ್ಬಾಂಧವ ಚರಣ ||
ನಾ ಪೇಳಲೇನು ಭಕುತರ ವತ್ಸಲನು
ಕರುಣಾಪೂರ್ಣ ಎನಗಭಯ ಕೊಡುವ-ಕರಪಿಡಿವ ||೨||

ನೋಡುವೆನು ನೀರದಶ್ಯಾಮ ಸುಂದರನ ಕೊಂ |
ಡಾಡುವೆನು ಕವಿಗೇಯನೆಂದು |
ಮಾಡುವೆನು ಸಾಷ್ಟಾಂಗ – ದಂಡಪ್ರಣಾಮ 
ಮಾತಾಡುವೆನು ಮೈಮರೆದು ನಿಂದು |
ಬೇಡುವೆನು ಭುವನೈಕ ದಾತನೆದುರಲಿ 
ಕರವ ಜೋಡಿಸಿ ದಾಸ್ಯಬೇಕೆಂದು |
ಈಡಿಲ್ಲದಿಂದಿನ ಮನಕೆನ್ನ
ಬಯಕೆ ಕೈ-ಗೂಡುವುದು ನಿಸ್ಸಂದೇಹ-ದೈವ ಸಹಾಯ ||೩||

ಇರುವನೋ ಏಕಾಂತದಲಿ ಬರವ ಕೇಳಿದಿರು |
ಬರುವನೋ ಬಂದವನ ಕಂಡು |
ತರುವನೋ ತನುಪುಳಕವಾನಂದ ಭಾಷ್ಪದಿಂ-| 
ದೆರೆವನೋ ಬಿಗಿದಪ್ಪಿಕೊಂಡು |
ಕರೆವನೋ ಕಿರಿಯಯ್ಯ ಬಾರೆಂದು ಬಣ್ಣಿಸುತ |
ಬೆರೆವನೋ ಬೆರೆಸಿ ತಾನುಂಡು |
ಒರೆವನೋ ಒಡಲಮರ್ಮವನೆಲ್ಲ ಒರಗಿಸಿ|
ಜರಿಯನೋ ಜಗದೀಶ ಹಗೆತನ ನೆನೆಯ-ಬಗೆಯ ||೪||

ಗೋಧೂಳಿ ಲಗ್ನಕ್ಕೆ ಗೋಕುಲಕೆ ಬಂದು ಬೆರ |
ಗಾದೆ ಹರಿ ಹೆಜ್ಜೆಗಳ ಕಂಡು | ಭೂದೇವಿಗಾಭರಣವೆನುತ
ತೇರಿಳಿದು ಶ್ರೀ ಪಾದರಜದೊಳಗೆ ಹೊರಳಾಡಿ |
ಗೋದೋಹನದೊಳಿದ್ದ ರಾಮಕೃಷ್ಣರ ಕಂಡು |
ನಾ ಧನ್ಯಧನ್ಯನೆಂದಾಡಿ ||
ಶ್ರೀದವಿಠಲಗೆರಗುವನಿತರೊಳು ಬಿಗಿದಪ್ಪಿ |
ಸಾದರಿಸಿದನು ಇದೇ ಸದನದಲಿ-ಸ್ವಪ್ನದಲಿ ||೫||
*********