Showing posts with label ಬಲವಾರು ಎನಗೆ vijaya vittala ankita suladi ಗುರುಮಂತ್ರ ಸುಳಾದಿ BALAVAARU ENAGE GURUMANTRA SULADI. Show all posts
Showing posts with label ಬಲವಾರು ಎನಗೆ vijaya vittala ankita suladi ಗುರುಮಂತ್ರ ಸುಳಾದಿ BALAVAARU ENAGE GURUMANTRA SULADI. Show all posts

Tuesday 22 December 2020

ಬಲವಾರು ಎನಗೆ vijaya vittala ankita suladi ಗುರುಮಂತ್ರ ಸುಳಾದಿ BALAVAARU ENAGE GURUMANTRA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಗುರುಮಂತ್ರ ಸುಳಾದಿ 

( ಪಾಪಪುರುಷ ವಿಸರ್ಜನಾದಿ ಕ್ರಮವು)


 ರಾಗ ಸಾವೇರಿ 


 ಧ್ರುವತಾಳ 


ಬಲವಾರು ಎನಗೆ ಪ್ರಬಲವಾಯಿತು ಕಲಿ

ಬಲ ಹೆಚ್ಚಿ ಬಿಡದೆ ದುಂಬಲ ಬಿದ್ದಿದೆ

ಬಲದಲ್ಲಿ ಉಳ್ಳ ಸುರರು ಬಲರು ನಿರ್ಬಲರಾಗಿ

ಬಲಗುಂದಿದಂತೆ ತೊಲಗಿ ನಿಂದಾರೆ

ಬಲವಂತ ನೀನು ಅಬಲೆ ಬಾಲಕರಿಗೆ ಬೆಂ -

ಬಲವಾಗಿ ಸಾಕಿದ ಸುಬಲಾನೆಂದು

ಬಲಗೊಂಡು ನಿನ್ನ ಹಂಬಲವ ಮಾಡಿದೆ ನಂ -

ಬಲು ಬಡವರಿಗೆ ಬಾಂಧವನೆ ದೇವ

ಬಲು ದಯಾದಿಂದೆಡಬಲದಲ್ಲಿ ಕಾಪಾಡು

ಬಲದೇವಾನನುಜಾ ಬಲಾರಾತಿ ದಾತ

ಬಲಿ ಭಂಜನೇಶ್ವರ ವಿಜಯವಿಠ್ಠಲ 

ಬಲು ದೀನ ನಾನು ತೊಂಬಲಿಗೆ ಬಪ್ಪಂತಿರಲೀ ॥ 1 ॥


ಮಟ್ಟತಾಳ 


ಕರಿಯ ರೂಪದ ಪಾಪಿ ಅರುಣ ನಯನ ಐ -

ದರಿಯಿಂದ ಉದುಭವಿಸಿ ಪರಿ ಪರಿಯ ಉಪ -

ದುರಿತಾಂಗ ರೋಮ ಕರವಾಳ ಹಲಿಗೆ

ಕರದಲ್ಲಿ ಪಿಡಿದು ಶಿರ ಕೆಳಗಾಗಿ ಈ -

ಪುರದೊಳು ಎಡದಲ್ಲಿ ಪರಿಶೋಭಿಸುತಿಪ್ಪ

ಕರಣಕೆ ಭೀತಿಯನು ಸುರಿದು ಕೆಂಗೆಡಿಸುವ ಅ -

ಸುರರಿಪು ನಾಮಾ ವಿಜಯವಿಠ್ಠಲ ನಿನ್ನ

ದೊರೆತನದ ಭೀತಿ ಅರಿಯದ ದುರುಳನು ॥ 2 ॥


ರೂಪಕತಾಳ 


ಮೂರು ಹುರಿಯಾನಿಟ್ಟಾ ಪಾಶದಲ್ಲಿ ಕಲಿಯಾ

ಆರು ಕೋಣಿಗೆ ಶಳದೆಳತಂದು ನಿಲ್ಲಿಸಿ

ಭೋರನೆ ಬೀಸುವ ಸಮೀರನಿಂದ ಅವನ

ಶರೀರ ಶೋಷಿಸಿ ಮೇಲಕ್ಕೆ ಎಳತಂದು

ಕ್ರೂರ ಪುರುಷನಾಕಾರವ ನೇಗಲಿ

ಧಾರನಾಕೃತಿಯಿಂದ ದಹಿಸಿ ಕಳೆಯೋ

ವಾರಣನಾಮ ಸಿರಿ  ವಿಜಯವಿಠ್ಠಲ ಸುಧಾ

ಧಾರಿಯಾ ಮ್ಯಾಲಿಂದ ಗರೆದು ಶುದ್ಧನ ಮಾಡು ॥ 3 ॥


 ಝಂಪಿತಾಳ 


ಪತಿಯ ಮಗ್ಗಲವಳಗೆ ಪತಿವ್ರತೆ ಕುಳಿತಿರಲು

ಪತಿತನೊಬ್ಬನು ಬಂದು ಶರಗನೆಳಿಯೆ

ಮತಿವಂತಳಿಗೆಷ್ಟು ಖತಿಯಾಗುವದದಕೆ

ಶತಪಾಲು ಅಧಿಕವಾಗಿದೆ ದಾತಾರ

ಪತಿಗಳೈವರು ಇರಲು ಹಿತವಂತನಾಗಿ ದ್ರೌ -

ಪದಿಯ ಕಾಯ್ದಯ್ಯ ಕಾರುಣ್ಯ ಸಿಂಧು

ಶತ ಮೂರುತಿ ನಾಮ ವಿಜಯವಿಠ್ಠಲ ನೀನೆ

ಪತಿಯಾದ ಬಳಿಕೆನ್ನ ಪತಿತಗೊಪ್ಪಿಸುವರೇ ॥ 4 ॥


 ತ್ರಿವಿಡಿತಾಳ 


ಸ್ವಸ್ತಿ ಶ್ರೀಮತು ಎಂದು ನಿನಗೆ ನಾಚಿಕೆ ಸ -

ಮಸ್ತ ಲೋಕದ ಒಡತಿ ಶ್ರೀ ವಿರಂಚಿ ಮಗ

ಮಸ್ತಕದಲ್ಲಿ ನಿನ್ನ ಪಾದೋದಕವಿಟ್ಟ

ಹಸ್ತಿ ಚರ್ಮಾಂಬರ ಸುರರಾದ್ಯರು ನಿನಗೆ

ಹಸ್ತಿಯಂತೆ ಭಕ್ತರಿರಲಿಕ್ಕೆ ನೊಣದಿಂದ

ಆಸ್ತಿಯಾಗುವದೇನು ಎಂದೆಂಬೆಯಾ

ವಿಸ್ತರಿಸುವೆ ಸ್ವಸ್ತಿ  ವಿಜಯವಿಠ್ಠಲ ದೇವಾ

ಹಸ್ತವ ಮುಗಿದು ವಿಸ್ತರ ಬಿನ್ನಹವೂ ॥ 5 ॥


 ಅಟ್ಟತಾಳ 


ಸಾಧು ಭಾಗ್ಯದವನು ಸಮಾರಾಧನೆ ಮಾಡಲು

ಆದರದಿಂದ ಸಹೋದರ ಬಾಂಧವ

ಪೋದವರನೆ ಕಾಯಾದಿಗಳು ಬಲು

ಮಾಧುರ್ಯದಲಿ ಪಂಕ್ತಿ ಸಾಧಿಸಿ ಕುಳಿತಿರೆ

ಮಾಧುಕಾರದವ ಪೋದ ಕ್ಷಣದಲ್ಲಿ

ಮಾಧುಕಾರದವನ್ನ ಆದರಿಸಿ ಕೂಡಿಸಿ

ಸಾಧುಗಳುಣಿಸುವ ಗಾದೆಯಂತೆ ಎನಗೆ

ನೀ ದಯವನು ಮಾಡಿ ಬಾಧಿಪ ಪಾಪಿಯಾ

ಬಾಧಿಯ ಪರಿಹರಿಸು

ಆದಿತ್ಯ ವಿಜಯವಿಠ್ಠಲ ನಿನ್ನ ಪ್ರಸ್ತದ

ಮಾಧುಕಾರದವನೆಂದು ಅಭಯ ಕರವನೀಯೋ ॥ 6 ॥


 ಆದಿತಾಳ 


ಕೊಟ್ಟರೆ ಒಳ್ಳೇದು ಸುಖ ಬಟ್ಟು ನಿನ್ನ ನೆನೆವೆ ಮನ

ಮುಟ್ಟಿಯಿಲ್ಲದಿರೆ ಮುಂದೆ ಇಟ್ಟು ನೋಡು ಒಂದು ಹೆಜ್ಚೆ

ದಿಟ್ಟ ಗುರುವಿನ ಗೆರೆ ಇಟ್ಟು ಬಿಡುವೆ ದಾಟದಂತೆ

ಅಟ್ಟಿದವಗೆ ಉಂಟು ಮೂರು ಬಟ್ಟೆಯಲ್ಲದೆ ಕಡಿಮೆಯಿಲ್ಲ

ಇಟ್ಟ ತೊಟ್ಟ ಹೊದಿಕೆ ವಸ್ತ್ರ ಪೆಟ್ಟಿಗೆಯೊಳಗಿಟ್ಟರನ್ನ

ಮೆಟ್ಟುವ ಪಾಪೋಸು ದೂರ ಬಿಟ್ಟು ಬಿಡುವರೆ ರಂಗ

ಸೃಷ್ಟ ಅಕ್ಷರ ವಿಜಯವಿಠ್ಠಲ ಭಕ್ತರ ಪ್ರೀಯ

ಮೊಟ್ಟು ಮೊದಲಿಗಿಂದು ನಿನಗೆ ಕೊಟ್ಟ ಕೊನೆತನಕ ಬಿಡದು ॥ 7 ॥


 ಜತೆ 


ಸಂತತ ಕ್ರೂರನ್ನ ಕೊಂದು ನಿನ್ನ ನಾಮ

ಅಂತ್ಯ ಕಾಲಕೆ ನೀಯೋ ಶಾಂತ ವಿಜಯವಿಠ್ಠಲ ॥

*******