ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ
ಸುವಿನೋದವ ಪಡೆದರು ಸುರನರಜನರು ॥ ಪಲ್ಲವಿ ॥
ಪವನಸುತರ ಮತ ಭುವಿಯಲಿ ಸುಲಭದಿ
ವಿವರಿಸಿ ಜನರಿಗೆ ಪ್ರವಚನವೆಸಗಲು ॥ ಅನುಪಲ್ಲವಿ ॥
ಗುರು ಬ್ರಹ್ಮಣ್ಯರ ವರಪದಕಮಲಗಳ
ಪರತರಭಕುತಿಯಲಿ
ಪರಿಪರಿ ಸೇವಿಸಿ ಗುರುಕರುಣದಲಿ
ಹರುಷವ ಪೊಂದುತಲಿ
ವರವ ಪಡೆದ ಭೂಸುರ ರಾಮಾರ್ಯರ
ಪರಸತಿಯುದರದಿ ವಹ್ನಿಪುರದೊಳವ-
ತರಿಸುತ ಧರೆಯೊಳು ಸುಜನಗಣವನು-
ದ್ಧರಿಸಲು ಮುದದಲಿ ಸಿರಿಪತಿಭಕುತನು ॥ ೧ ॥
ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ
ಯತಿಯಾಶ್ರಮ ವಹಿಸಿ
ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು
ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ-
ಯತಿಯಲಿ ಶಾಸ್ತ್ರಾಮೃತ ಪಾನಮಾಡುತ
ಅತಿಸುಲಭದ ಶ್ರುತಿತತಿಗಳ ಸಾರವ
ಕ್ಷಿತಿಸುರರೊಳಗತಿ ಹಿತದಲಿ ಅರುಹಲು ॥ ೨ ॥
ಗಜಗಹ್ವರದೇಶದ ನರಪತಿಗಳಿಗೆ
ನಿಜವರಕರುಣದಲಿ
ವಿಜಯಾಭ್ಯುದಯಗಳನು ಸತತ ಪೊಂದಿಸುತ
ರಜತಕನಕ ನವಮಣಿಗಣಯುತ ವಾ-
ರಿಜವನು ಪೋಲುವ ಸಿಂಹಾಸನದಲಿ
ಬಿಜಯವ ಗೈಯ್ಯುತ ಸುಜನಸಮೂಹಕೆ
ನಿಜಪದಯುಗಳಾಂಬುಜ ಸೇವೆ ನೀಡಲು ॥ ೩ ॥
ನಂದಿತೀರ್ಥರ ವರಶಾಸ್ತ್ರಗಳನ್ನು
ಚಂದದಿ ವಿವರಿಸಲು
ಚಂದ್ರಿಕಾನ್ಯಾಯಾಮೃತ ಮೊದಲಾದ
ಗ್ರಂಥಗಳನು ರಚಿಸಿ
ಮಂದಜನಕೆ ಮುಚುಕುಂದನ ಶುಭಗುಣ
ವೃಂದಗಳನು ಸುಖದಿಂದ ಬೋಧಿಸಲು
ಅಂದಪದಗಳನು ರಚಿಸುತ ಶುಭಗುಣ-
ಸಾಂದ್ರನ ಭಜನಾನಂದ ಪೊಂದಿಸಲು ॥ ೪ ॥
ವಿಜಯೀಂದ್ರ ವಾದಿರಾಜ ಮೊದಲಾದ
ನಿಜವರಶಿಷ್ಯರುಗಳ
ವ್ರಜಕೆ ಶಾಸ್ತ್ರಾರ್ಥಗಳು ಬೋಧಿಸುತ
ದ್ವಿಜಕುಲಸಂಭವರಾದ ಪುರಂದರ
ಸುಜನಶಿರೋಮಣಿ ಕನಕಪ್ರಮುಖ
ಪೂಜಿತ ಪದಯುಗಳಾಂಬುಜ ಯತಿಶೇಖರ
ವಿಜಯಸಾರಥಿಯು ಪ್ರಸನ್ನ ನಾಗಲೆಂದು ॥ ೫ ॥
***