Showing posts with label ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ prasanna. Show all posts
Showing posts with label ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ prasanna. Show all posts

Tuesday, 18 May 2021

ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ankita prasanna

 ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ

ಸುವಿನೋದವ ಪಡೆದರು ಸುರನರಜನರು ॥ ಪಲ್ಲವಿ ॥


ಪವನಸುತರ ಮತ ಭುವಿಯಲಿ ಸುಲಭದಿ

ವಿವರಿಸಿ ಜನರಿಗೆ ಪ್ರವಚನವೆಸಗಲು ॥ ಅನುಪಲ್ಲವಿ ॥


ಗುರು ಬ್ರಹ್ಮಣ್ಯರ ವರಪದಕಮಲಗಳ

ಪರತರಭಕುತಿಯಲಿ

ಪರಿಪರಿ ಸೇವಿಸಿ ಗುರುಕರುಣದಲಿ

ಹರುಷವ ಪೊಂದುತಲಿ

ವರವ ಪಡೆದ ಭೂಸುರ ರಾಮಾರ್ಯರ

ಪರಸತಿಯುದರದಿ ವಹ್ನಿಪುರದೊಳವ-

ತರಿಸುತ ಧರೆಯೊಳು ಸುಜನಗಣವನು-

ದ್ಧರಿಸಲು ಮುದದಲಿ ಸಿರಿಪತಿಭಕುತನು ॥ ೧ ॥


ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ

ಯತಿಯಾಶ್ರಮ ವಹಿಸಿ

ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು

ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ-

ಯತಿಯಲಿ ಶಾಸ್ತ್ರಾಮೃತ ಪಾನಮಾಡುತ

ಅತಿಸುಲಭದ ಶ್ರುತಿತತಿಗಳ ಸಾರವ

ಕ್ಷಿತಿಸುರರೊಳಗತಿ ಹಿತದಲಿ ಅರುಹಲು ॥ ೨ ॥


ಗಜಗಹ್ವರದೇಶದ ನರಪತಿಗಳಿಗೆ

ನಿಜವರಕರುಣದಲಿ

ವಿಜಯಾಭ್ಯುದಯಗಳನು ಸತತ ಪೊಂದಿಸುತ

ರಜತಕನಕ ನವಮಣಿಗಣಯುತ ವಾ-

ರಿಜವನು ಪೋಲುವ ಸಿಂಹಾಸನದಲಿ

ಬಿಜಯವ ಗೈಯ್ಯುತ ಸುಜನಸಮೂಹಕೆ

ನಿಜಪದಯುಗಳಾಂಬುಜ ಸೇವೆ ನೀಡಲು ॥ ೩ ॥


ನಂದಿತೀರ್ಥರ ವರಶಾಸ್ತ್ರಗಳನ್ನು

ಚಂದದಿ ವಿವರಿಸಲು

ಚಂದ್ರಿಕಾನ್ಯಾಯಾಮೃತ ಮೊದಲಾದ

ಗ್ರಂಥಗಳನು ರಚಿಸಿ

ಮಂದಜನಕೆ ಮುಚುಕುಂದನ ಶುಭಗುಣ

ವೃಂದಗಳನು ಸುಖದಿಂದ ಬೋಧಿಸಲು

ಅಂದಪದಗಳನು ರಚಿಸುತ ಶುಭಗುಣ-

ಸಾಂದ್ರನ ಭಜನಾನಂದ ಪೊಂದಿಸಲು ॥ ೪ ॥


ವಿಜಯೀಂದ್ರ ವಾದಿರಾಜ ಮೊದಲಾದ

ನಿಜವರಶಿಷ್ಯರುಗಳ

ವ್ರಜಕೆ ಶಾಸ್ತ್ರಾರ್ಥಗಳು ಬೋಧಿಸುತ

ದ್ವಿಜಕುಲಸಂಭವರಾದ ಪುರಂದರ

ಸುಜನಶಿರೋಮಣಿ ಕನಕಪ್ರಮುಖ

ಪೂಜಿತ ಪದಯುಗಳಾಂಬುಜ ಯತಿಶೇಖರ

ವಿಜಯಸಾರಥಿಯು ಪ್ರಸನ್ನ ನಾಗಲೆಂದು ॥ ೫ ॥

***