Showing posts with label ಏನು ತೋಚದೋ ಮುಂದೇನು ಗತಿಯೋ ದೇವಾ uragadrivasa vittala. Show all posts
Showing posts with label ಏನು ತೋಚದೋ ಮುಂದೇನು ಗತಿಯೋ ದೇವಾ uragadrivasa vittala. Show all posts

Monday 2 August 2021

ಏನು ತೋಚದೋ ಮುಂದೇನು ಗತಿಯೋ ದೇವಾ ankita uragadrivasa vittala

ಏನೂ ತೋಚದೋ ಮುಂದೇನು ಗತಿಯೋ ದೇವಾ

ದೀನವತ್ಸಲ ಕಾಯೋ ಅಪ್ರಮೇಯ ಸದಾ ಪ


ನಾನು ನನ್ನದು ಎಂಬಭಿಮಾನದಿಂದನುದಿನ

ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ


ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ

ಬೋಧರ ಮತತತ್ತ್ವ ಸಾಧಿಸಲಿಲ್ಲವೋ

ಸಾಧುಸಜ್ಜನರೆಂದು ಆದರಿಸಲರಿಯೆನೋ

ಆಧಾರನಾಗೋ ನಿರಾಧಾರನಾಗಿಹೆ

ಬಾಧಿಪರೋ ಬಂಧುಗಳು ಪ್ರತಿದಿನ

ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ

ಉದಯಾಸ್ತ ಪರಿಯಂತರದಿ ಎನಗೆ

ಉದರದ ಯೋಚನೆ ಆದುದೀಪರಿ ಎನ್ನ ಜೀವನ

ಇದಕೆ ಸಾಧನಮಾಡಿ ಮೋಹದ

ಮುದದಿ ಮೈಮರೆದೆನನುದಿನ

ಪದುಮನಾಭನೆ ಮೊರೆಯಿಡುವೆ

ಮುಂದೇನು ಗತಿ ಪಥವಾವುದೋ ದೇವಾ 1

ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ

ಭಕುತಿಮಾತ್ರವು ಏನ್ನೊಳಿನಿತಿಲ್ಲವೋ

ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ

ಭಕುತಿ ಕೊಡದಿರುವೆಯಾ ಮುಕುತರೊಡೆಯಾ

ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ

ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ

ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ

ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ-

ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ

ನೀ ಕರುಣಿಸದಲಿರೆ ಇನ್ನು ಅವಿ-

ವೇಕಿ ನಾನಿನ್ನೆಂತುಗೈಯಲಿ 2

ನರಜನುಮದಿ ಬಂದು ಬರಿದೆ ಆಯುವ ಕಳೆದೆ

ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ

ಕರೆಕರೆಪಡುತಲಿ ಜರೆಯೊಳಾಡುತಿಹೆ

ಪರಿಹಾರ ತೋರೆನಗೆ ದುರಿತ ಹರೇ

ದಾರಿ ಎನಗೇನಿಹುದೋ ಇನ್ನು ಮುಂದೆ

ಪರಿಪರಿಯ ತನುಮನ ಕ್ಲೇಶ ಕೊಡದಲೆ

ಪಾರುಗಾಣಿಸೋ ತಂದೆ ಶರಣಜನರಿಗನವರತ

ಸುರಧೇನು ನೀನೆಂದೇ ಅರಿಯದವ ನಾ ನೀ

ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು

ಉರುತರ ಸಾಧನವು ಅದು

ತರವರಿತು ಧೃಢಭಕ್ತಿ ಪಾಲಿಸೊ

ಉರಗಗಿರಿ ಶ್ರೀ ವೇಂಕಟೇಶನೆ3

****