Showing posts with label ಚಿಂತನೆ ಮಾಡು ಮನವೆ vijaya vittala suladi ಅಜಾದಿ ಸುಳಾದಿ CHINTANE MAADU MANAVE AAJAADI SULADI. Show all posts
Showing posts with label ಚಿಂತನೆ ಮಾಡು ಮನವೆ vijaya vittala suladi ಅಜಾದಿ ಸುಳಾದಿ CHINTANE MAADU MANAVE AAJAADI SULADI. Show all posts

Sunday 8 December 2019

ಚಿಂತನೆ ಮಾಡು ಮನವೆ vijaya vittala suladi ಅಜಾದಿ ಸುಳಾದಿ CHINTANE MAADU MANAVE AAJAADI SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ಅಜಾದಿ ಸುಳಾದಿ 
( 51 ಅಕ್ಷರಗಳ ವಿವರ , ಅಲ್ಲಿಪ್ಪ ಹರಿರೂಪ )

 ರಾಗ ರೇವಗುಪ್ತಿ 

 ಧ್ರುವತಾಳ 

ಚಿಂತನೆ ಮಾಡು ಮನವೆ ಚಿನ್ಮಯದೇವನ್ನ ಏ |
ಕಾಂತದಲಿಯಿದ್ದು ಎಲ್ಲಕಾಲ |
ಸಂತರ ಒಡಗೂಡಿ ಸಾರಿಸಾರಿಗೆ ನಿನ್ನ |
ಅಂತರಂಗದಲ್ಲಿ ಆಲೋಚಿಸಿ |
ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ |
ಚಿಂತಿಸು ಶ್ರೀಹರಿಯಾನಂತ ರೂಪ |
ಇಂತೆಂತು ನೋಡಿದರದರಂತೆ ತೊರುತಲಿಪ್ಪ |
ಮಂತ್ರ ತಂತ್ರಕ್ಕೆ ಶಿಲುಕನು ಭಕ್ತಿಗೊಶನೊ |
ಸಂತತ ನಿರ್ದೋಷ ಭಕ್ತವತ್ಸಲ ಕರುಣಿ |
ಅಂತಕನಂತಕವು ಉಭಯ ಜೀವಿಗಳಿಗೆ |
ಸಂತೋಷದಲಿ ಚರಿಯಾ ಮಾತ್ರ ಲೀಲಾ |
ಕಂತುಕೋಟಿ ಲಾವಣ್ಯಮಿಗೆ ಶೋಭಿಸುವ ಆ |
ದ್ಯಂತ ಕಾಲರಹಿತ ತ್ರಿಗುಣಾತೀತ |
ಸಂತಾಪನಾಶ ಒಂದಾರಂಭಿಸಿಕೊಂಡು |
ನಂತ ಸೂರ್ಯಪ್ರಕಾಶ ತರತಮ್ಯದಿ |
ತಂತುನಾಳದಿಂದ ದಿಗ್ದಂತಿ ಬಿಡಿಸಿಕೊಂಡು |
ನಿಂತಂತೆ ನಿಂತುಕೊಂಡಿಪ್ಪ ಮಹಿಮ |
ಎಂತು ಭಾವಿಸಲು ಉಪಾಸ್ತಿಯ ಕೊಡುವ ಶ್ರೀ |
ಕಾಂತನು ಪ್ರಸಿದ್ಧದಿಂದ ತಾನೆ |
ಚಿಂತಾಯಕ ನಮ್ಮ ವಿಜಯವಿಠ್ಠಲರೇಯ |
ಮುಂತಿ (ತೆ) ನಲಿದಾಡುವ ಭಾಗ್ಯವ ಬೇಡು ನೋಡು ॥ 1 ॥

 ಮಟ್ಟತಾಳ 

ಕಾ ಮೊದಲು ಕ್ಷಾ ಕಡೆ ಮೂವತ್ತೈದು |
ಈ ಮಹವರ್ಣಗಳು ಇದರ ವಿವರ ತಿಳಿವದು |
ಆ ಮರಿಯಾದಿಗಳು ಪದಿನಾರು ಉಂಟು |
ವ್ಯೋಮ ವ್ಯಾಪಿಸಿದಂತೆ ಸರ್ವದ ವರ್ಣಗಳು |
ಸಾಮಸ್ತ ಬಗೆಯಿಂದ ವ್ಯಾಪ್ತವಾಗಿವೆ ನೋಡಿ |
ಸಾಮ ಮಿಗಿಲಾದ ಶಾಸ್ತ್ರ ವೈದಿಕ ಶಬ್ದ |
ಭೂಮಿಯೊಳಗಾಡುವ ಲೌಕಿಕ ಶಬ್ದಗಳು |
ಈ ಮಹವರ್ಣದಲಿ ಪ್ರವರ್ತಕವಲ್ಲದಲೆ |
ಕಾಮಿಸಿದರೆ ಒಂದು ಪ್ರಯೋಗ(ಜನ) ವಿನ್ನಿಲ್ಲ |
ಭೂಮ ಭೂತೇಶ್ವೇರ ವಿಜಯವಿಠಲರೇಯನ 
ನಾಮಮೂರ್ತಿಗಳೆಂದು ಚಿಂತಿಸು ಪ್ರಣವದಲ್ಲಿ ॥ 2 ॥

 ತ್ರಿವಿಡಿತಾಳ 

ಕಾ ವಂದು ಗುಣಿಸಿದರೆ ಹದಿನಾರು ಬಗೆವುಂಟು |
ಆವಾವ ಕಾಲಕ್ಕೆ ನೋಡಿದರು |
ಭಾವಿಸು ಕ ಕಿ ಕು ಕೆ ಕೈ ಕೊ ಕೌ ಕಂ |
ಈ ವಿಧ ಹ್ರಸ್ವ ಯಿದರಂತೆ ದೀರ್ಘ |
ಯಾವತ್ತು ಈ ಪರಿ ಯಿದರಂತೆ ನಿಜವೆಂದು
ಕೋವಿದನಾಗಿ ನೀ ತಿಳಿಯಬೇಕು |
ಕಾ ವರಣದ ರೂಪದಿ ಕಪಿಲಾದಿ ಹದಿನಾರು |
ಈ ಒಳಗಿನ ಹದಿನಾರು ರೂಪ |
ದೇವನ್ನ ನಾಮಗಳು ಅಜಾದಿಗಳ ಸಂಖ್ಯ |
ಮೂವತ್ತೆರೆಡು ಭಗವದ್ರೂಪಗಳು |
ಪಾವನ ಮೂರುತಿ ವಿಜಯವಿಠ್ಠಲರೇಯ |
ಆವಾಗ ವರ್ಣಾಧಿಷ್ಟಾನದಲ್ಲಿಯಿಪ್ಪ ॥ 3 ॥

 ಅಟ್ಟತಾಳ 

ಇದರ ವಿಹಿತವೊಂದು ವರಣಕ್ಕೆ |
ಅದರಂತೆ ಕ ಚ ಟ ತ ಪ ಯ ಶ ವ |
ರ್ಗದಲಿ ಯೆಣಿಸಿ ಕ ಷ ಮಿಳಿತವಾದ |
ಇದನ್ನೆಲ್ಲ ಕೂಡಿಸಿ ಪಂಚತ್ರಿಂಶತಿ ಯಾ -
ದದು ಕಾಣೊ ಇದರೊಳು ಅ ಆ ಇ ವುಂ ಎಂಬ |
ಹದಿನಾರು ಇಡಲಾಗಿ ಕ ಅಃ ವಾಹೆದು |
ಇದನ್ನೆಲ್ಲ ವೊಂದೊಂದು ಏಕಾಕ್ಷರದಿಂದ |
ಪದುಮನಾಭನು ಕರಸಿಕೊಂಬನು ಕೇಳಿ |
ಆದೆ ಆದೆ ನಾಮ ಮತ್ತದೆ ಅದೆ ರೂಪದಿ |
ಒದಗಿ ಎಣಿಸಲಾಗಿ ಮೂವತ್ತೆರೆಡು ನಾಮ |
ಸದಮಲವಾಗಿವೆ ಅರವತ್ತು ನಾಲಕು |
ಮೊದಲಾರಂಭಿಸಿ ಮೂವತ್ತೈದಕ್ಕೆ ನೋಡು |
ಮುದದಿಂದ ಗುಣಿಸಲು ವೊಂದೊಂದು ವರ್ಣಕ್ಕೆ 
ಅದೆ ಪ್ರಕಾರದಲಿ ಅರವತ್ತು ನಾಲ್ಕುವುಂಟು |
ಅಧಿಕಾರತನ ಭೇದ ಧ್ಯಾನ ಮಾಡುವುದಕ್ಕೆ |
ಪದುಮಗರ್ಭನಯ್ಯ ವಿಜಯವಿಠ್ಠಲರೇಯ |
ಪದವಿಯ ಕೊಡುವನು ಈ ಪರಿ ಕೊಂಡಾಡೆ ॥ 4 ॥

 ಆದಿತಾಳ 

ಆವನಾದರು ಹಳಿಯಲಿ ಉಗುಳಲಿ |
ಆವನಾದರು ಬೈಯ್ಯಲಿ ಕಾಯಲಿ |
ಆವನಾದರು ಹೊಡೆಯಲಿ ತಡೆಯಲಿ |
ಆವನಾದರು ಪೊಗಳಲಿ ಅಟ್ಟಲಿ |
ಆವನಾದರು ಉಣಿಸಲಿ ಉಡಿಸಲಿ |
ಆವನಾದರು ಛೀ ಛೀ ಎನಲಿ |
ಆವನಾದರು ಥೂ ಥೂ ಯೆನಲಿ ಆವನಾದರು ಭಂಗಿಸಲಿ ಮ |
ತ್ತಾವನಾದರು ಹಂಗಿಸಲಿ |
ಆವನಾದರು ಯೇನೇನಲಿ |
ಆವನಾದರೋ ಈ ವರ್ಣಗಳು ಭಗವನ್ನಾಮಗಳೊ |
ಜೀವನ ಮುಕ್ತನು ಈ ವಿಧದಿ ತಿಳಿದವನು |
ನೋವು ನೋವುಗಳಲ್ಲಿ ಪಾವನವಾದ ಭಕುತಿಯಲಿ ಸ್ವ |
ಭಾವಿತ ನೀನಾಗೊ ಜ್ಞಾನಿ ನೀನಾಗೊ |
ಯಾವತ್ತು ಇಂದ್ರಿಯಗಳ ವ್ಯಾಪಾರ ಸೇವೆ ಶ್ರೀಹರಿಗೆನ್ನು |
ತ್ರೈವಿಧ ಜೀವರು ಇದನೆ ತೊರೆದು ಮ |
ತ್ತಾವದು ಆಡುವರೊ ವರ್ಣಗಳಿಲ್ಲದಲೆ |
ದೇವ ದೇವೇಶನ್ನ ಒಲಿಸಬೇಕಾದರೆ |
ಈ ಉಪಾಯವ ಬೇಕು ಎಲ್ಲಿದ್ದರು ಕೇಳು |
ಕಾವ ಜನಕ ನಮ್ಮ ವಿಜಯವಿಠ್ಠಲರೇಯ |
ಆವಾವ ವರ್ಣಗಳಂತೆ ಒಳಗಿದ್ದು |
ಕಾವನು ಶರಣರನು ಒಡನೊಡನೆ ಬರುವ ॥ 5 ॥

 ಜತೆ 

ಅಕ್ಷರಾಕ್ಷರದಿಂದ ಭಗವನ್ನಾಮವೆ ಚಿಂತಿಸು |
ಅಕ್ಷರ ಕ್ಷರ ಪುರುಷ ವಿಜಯವಿಠ್ಠಲ ಸುಳಿವ ॥
************