Showing posts with label ನಿಷ್ಠೆಯಿಂದಲಿ ಮನ shyamasundara ankita suladi ವಿಜಯದಾಸ ಸ್ತೋತ್ರ ಸುಳಾದಿ NISHTEYINDALI MANA VIJAYADASA STOTRA SULADI. Show all posts
Showing posts with label ನಿಷ್ಠೆಯಿಂದಲಿ ಮನ shyamasundara ankita suladi ವಿಜಯದಾಸ ಸ್ತೋತ್ರ ಸುಳಾದಿ NISHTEYINDALI MANA VIJAYADASA STOTRA SULADI. Show all posts

Sunday 8 December 2019

ನಿಷ್ಠೆಯಿಂದಲಿ ಮನ shamasundara ankita suladi ವಿಜಯದಾಸ ಸ್ತೋತ್ರ ಸುಳಾದಿ NISHTEYINDALI MANA VIJAYADASA STOTRA SULADI

Audio by Mrs. Nandini Sripad

ಶ್ರೀ ಶ್ಯಾಮಸುಂದರದಾಸಾರ್ಯ ವಿರಚಿತ 

ಶ್ರೀ ವಿಜಯದಾಸರ ಸ್ತೋತ್ರ ಸುಳಾದಿ 

ರಾಗ ಹಂಸಧ್ವನಿ 

ಧ್ರುವತಾಳ

ನಿಷ್ಠೆಯಿಂದಲಿ ಮನಮುಟ್ಟಿ ಭಜಿಸು ವಿಜಯ - ।
ವಿಠ್ಠಲದಾಸರ ಮನವೇ ನಿತ್ಯ ।
ಎಷ್ಟು ಪೇಳಲಿ ಇವರ ಉತ್ಕೃಷ್ಟ ಮಹಿಮೆ ಕೃಪಾ - ।
ದೃಷ್ಟಿಯಿಂದಲಿ ನೋಡಿದಾಕ್ಷಣದಿ ।
ಭ್ರಷ್ಟ ಮನಸಿನಿಂದ ಬಿಟ್ಟು ಧರ್ಮಾಚರಣೆ ।
ದುಷ್ಟ ಕೃತ್ಯವಗೈದ ದೋಷದಿಂದ ।
ತಟ್ಟಿದ ದುರಿತೌಘ ಮೊಟ್ಟೆಗಳೆಲ್ಲವು ।
ಸುಟ್ಟು ಭಸ್ಮೀಭೂತವಾದ ಬಳಿಕ ।
ಪುಟ್ಟಿ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ ।
ಮೆಟ್ಟುವರೋ ಕೈವಲ್ಯ ಪಥವಾ ।
ಸೃಷ್ಟಿ ಸಂಹಾರ ಕರ್ತರಿದ್ದಲ್ಲಿಗೆ ಪೋಗಿ ।
ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು ।
ಥಟ್ಟನೆ ವೈಕುಂಠ ಪಟ್ಟಣಕ್ಕೆ ತೆರಳಿ ।
ಪಟ್ಟದರಸಿಯಾದ ಲಕುಮಿ ಸಹಿತಾ ।
ಸೃಷ್ಟಾಂಡಭಾರ ಶಿರದಿ ಇಟ್ಟಂಥ ಫಣಿಪತಿಯ ।
ಪಟ್ಟೆ ಪರ್ಯಂಕದಲ್ಲಿ ಪವಡಿಸಿಪ್ಪಾ ।
ಧಿಟ್ಟಮೂರುತಿ ಶ್ಯಾಮಸುಂದರವಿಠ್ಠಲಗೆ ।
ಪೆಟ್ಟು ಹಾಕಿದ ಪರಮ ಘಟ್ಟಿಗರಿವರು ॥ 1 ॥

ಮಟ್ಟತಾಳ

ಎರಡನೆ ಯುಗದಲ್ಲಿ ಸುರಲೀಲನು ಎಂಬ ।
ತರುಚರ ರೂಪದಲಿ ತರಣಿ ಕುಲೋದ್ಭವನಾ ।
ಚರಣವ ಸೇವಿಸಿ ಕರುಣ ಸಂಪಾದಿಸಿದಾ ।
ಮರಳಿ ನಿಕಂಪ ನಾಮದಲಿ ದ್ವಾ - ।
ಪರದಲಿ ಪುಟ್ಟಿ ಯಾದವನೆನಿಸಿದಾ ।
ಅರುಹಲೇನು ಮತ್ತೆ ಚರಣಜ ಕುಲದಲ್ಲಿ ।
ಧರಿಸುತ ಜನ್ಮವನು ।
ಸಿರಿ ಶ್ಯಾಮಸುಂದರವಿಠ್ಠಲ ನಂಘ್ರಿಗೆ ।
ಶರಧನುವಿಗೆ ಹೂಡಿ ಗುರಿ ನೋಡಿ ಎಸೆದಾ ॥ 2 ॥

ತ್ರಿವಿಡಿತಾಳ

ಪುನಃ ಕಲಿಯುಗದಲ್ಲಿ ಅನುಪಮ ಸನ್ಮಹಿಮ ।
ಅನಿಮಿಷನಾಥಾಖ್ಯ ದಾಸಾರ್ಯರಾ ।
ಮನೆಯಲ್ಲಿ ಗೋವತ್ಸನೆನಿಸಿ ವಾಸಿಸಿ ಹರಿಯ ।
ಗುಣನಾಮಕೀರ್ತನೆ ಶ್ರವಣಗೈದಾ ।
ಘನಪುಣ್ಯದಿಂ ಪಶು ತನವು ಪೋಗಾಡುತ್ತ ।
ತನಯರಾಗಿ ಅವರ ಬಳಿಯಲಿದ್ದು ।
ಮುನಿ ಮಧ್ವಪತಿ ಎಂಬೊ ಪೆಸರಿನಿಂದಲಿ ಸದಾ ।
ಮಿನಗುವರೊಡಗೂಡಿ ಕವನದಿಂದಾ ।
ಅನನುತ ಶ್ರೀಶ್ಯಾಮಸುಂದರವಿಠಲನ್ನ ।
ಮನದಿ ಕೊಂಡಾಡುತಾ ಅನುಗ್ರಹ ಪಡೆದರೂ ॥ 3 ॥

ಅಟ್ಟತಾಳ

ಕ್ಷಿತಿಯೊಳು ಮಾನವಿ ಸೀಮಗೆ ಸೇರಿದ ।
ಕ್ಷಿತಿಧರ ದೇವನ ಸುತೆಯ ಸುತೀರದಿ ।
ಕ್ಷಿತಿರುಹ ವರನರಹರಿಯ ಸಾನ್ನಿಧ್ಯದಿ ।
ಅತಿಪುಣ್ಯಕರ ಪುಟ್ಟಬದರಿ ಸುಕ್ಷೇತ್ರದಿ ।
ಸತಿ ಶಿರೋಮಣಿಯಾದ ಕೂಸಮ್ಮನುದರದಿ ।
ಸುತನಾಗಿ ಪ್ರತಿದಿನ ಶಶಿಯಂತೆ ಬೆಳೆಯುತ್ತ ।
ಅತಿಶಯ ದಾರಿದ್ರ ವ್ಯಥೆಯು ಆವರಿಸಲು ।
ಖತಿ ಲೇಶವಾಗದೆ ಸಹಿಸುತ್ತ ಶಾಂತದಿ ।
ಮತಿಯಿಂದ ಮನದೊಳು ಯೋಚಿಸಿ ಮುಂದಣ ।
ಗತಿಗಾಗಿ ತಾ ಪೋಗಿ ವಾರಣಾಶಿಯಲ್ಲಿ ।
ಪತಿತರುದ್ಧರಿಸುವ ಸುರನದಿಯಲಿ ಮಿಂದು ।
ಶಿತಮನದವರಾಗಿರುತಿರಲೊಂದಿನ ।
ಸ್ತುತಿಸುತ್ತ ಹರಿಪಾದ ಮಲಗಿರೆ ಸ್ವಪ್ನದಿ ।
ಶತಧೃತಿನಂದನ ಕರೆದೊಯ್ದಾಚೆಗೆ ಇಪ್ಪ ।
ಕ್ರತುಭುಜ ತತಿಯಿಂದ ಸುತನಾದ ಶ್ರೀ ಶುಕ - ।
ಪಿತನಂಘ್ರಿ ಕಮಲಕ್ಕೆ ನುತಿಸಿ ಬಿನ್ನೈಸಿದಾ ।
ಹಿತದ ಸಹೋದರ ಇವನ ರಕ್ಷಿಸೆನೆ ।
ಶೃತಿಗೆ ಸಮ್ಮತ ಮಧ್ವಮತದ ರಹಸ್ಯದ ।
ಕೃತಿಗಳ ರಚಿಸು ಪ್ರಾಕೃತ ಸುಭಾಷೆಯಲ್ಲಿ ।
ಸತತ ಶ್ರವಣದಿಂದ ಮತಿಮಂದ ಜನರು ಉ - ।
ಧೃತರಾಗುವಂದದಿ ಕಥೆಸುತಗರುಹಿದ ।
ಅಂಕಿತವನು ಕೃಪೆಯಿಂದಾ ಯತಿಗಳ ಮನೋಹರ ।
ಕೃತಿದೇವಿಪತಿ ಶ್ಯಾಮಸುಂದರವಿಠ್ಠಲ ॥ 4 ॥

ಆದಿತಾಳ

ಮೌನಿ ಸನ್ಮಾನಿ ಸುಜ್ಞಾನಿವರ್ಯರಾದ ಇವರ ಅ - ।
ಮಾನುಷ ಮಹಿಮೆಗಳು ಭಾನುವಿನ ಕಿರಣದಂತೆ ।
ಕ್ಷೋಣಿಯಲ್ಲಿ ತುಂಬಿರಲು ಹೀನಮತಿ ಮನುಜನಾದ ।
ನಾನೆಂತು ಪೇಳ್ವೆನಯ್ಯಾ ನೀನೇವೆ ಗತಿಯೆಂದು ।
ಮೊರೆ ಹೊಕ್ಕ ದೀನರಿಗೆ ಸಾನುರಾಗದಿಂದ ಒಲಿದು ।
ಪ್ರಾಣವನ್ನು ಜ್ಞಾನವನ್ನು ದಾನವನ್ನು ಮಾಡಿದರು ।
ವೇಣುಧೇನುಪಾಲ ತುರಗಾನನ ಮೋಹನ ।
ಜಾಣ ಜಗನ್ನಾಥದಾಸ ಶ್ರೇಣಿಯೇ ಸಾಕ್ಷಿ ಕೇಳು ।
ಈ ನುಡಿ ನಿಜವೆಂದು ಮಾನಸದೊಳಗನುಮಾನವಿಲ್ಲದೆ ಸದಾ । 
ಮಾಣದೆ ಇವರ ಪದ ಧ್ಯಾನಿಪರಿಗೆ ಪವ - ।
ಮಾನ ಜನಕ ಶ್ಯಾಮಸುಂದರವಿಠಲನು ।
ಪಾಣಿ ಪಿಡಿದು ಪರಿಪಾಲಿಸುವ ಸತತಾ ॥ 5 ॥

ಜತೆ

ಚಿಪ್ಪಶೈಲದೊಳಿಪ್ಪಾ ಅಪ್ಪನ್ನ ಭಜಿಪರಾ ।
ತಪ್ಪು ಮನ್ನಿಸಿ ಕಾಯ್ವಾ ಶ್ಯಾಮಸುಂದರವಿಠ್ಠಲ ॥
*******