Showing posts with label ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ karigirisha. Show all posts
Showing posts with label ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ karigirisha. Show all posts

Monday 6 September 2021

ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ ankita karigirisha

 ರಾಗ: ಪೂರ್ವಿ ಕಲ್ಯಾಣಿ ತಾಳ: ಆದಿ

ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ

ಗುರುರಾಜರು ಪೊರಟರು ಪರ್ಯಟನಕ್ಕೆ


ಪರಿಪರಿದೇಶ ಸಂಚರಿಸುತ ಜನರನು-

ದ್ಧರಿಸುತ ಹರಿಮತಸ್ಥಿರಗೊಳಿಸುವುದಕೆ ಅ.ಪ


ರಾಮೇಶ್ವರ ಕಂಚಿ ತಿರುಪತಿ ಉಡುಪಿಯು

ಆಮಹಾಕ್ಷೇತ್ರಗಳಲಿ ಚರಿಸಿದರು 1

ಗದಗು ಪ್ರಾಂತ್ಯದಲಿ ಕಿರೀಟಗಿರಿ ಗ್ರಾಮ-

ದಧಿಪತಿ ಭಿಕ್ಷಕೆಕರೆಯೆ ಪೋದರು 2

ಸಂಭ್ರಮದಲಿ ಪೂಜೆ ನಡೆಯುತಿರಲು ಏ-

ನೆಂಬೆನು ನಡೆದಿಹ ದೈವವ್ಯಾಪಾರವ 3

ದೇಸಾಯಿಯ ಬಲು ಮುದ್ದುಕುವರನು

ಆ ಸದನದಲೊಂದೆಡೆ ಆಡುತ್ತಿದ್ದನು 4

ಇಟ್ಟಿರಲಲ್ಲಿ ಸೀಕರಣೆಯ ಪಾತ್ರೆಯು

ಮೆಟ್ಟಿನೋಡಿ ಅದರಲ್ಲಿ ಬಿದ್ದನು 5

ಕೂಸನುಕಾಣದೆ ಅಲ್ಲಲ್ಲರಸುತ 

ದೇಸಾಯಿ ನೋಡಲು ಮೃತಶಿಶು ಕಂಡನು 6

ಉಕ್ಕೇರಲು ಬಲು ದುಃಖವ ತಡೆದನು

ಪಕ್ಕದಲಿಹ ಯತಿಗಳಿಗೆ ತಿಳಿಸದೆಲೆ 7

ತೀರ್ಥಪ್ರಸಾದಕಾಲಕೆ ಗುರುಗಳು

ಸುತ್ತನೋಡೆ ಯಜಮಾನ ಕಾಣದಿರೆ 8

ಮೆತ್ತನೆಕರೆಸಿ ವೃತ್ತಾಂತವೇನೆನ್ನಲು

ಪುತ್ರನಸ್ಥಿತಿಯನು ಪೇಳಿದನಾತನು 9

ಆಗ ತರಿಸಿ ಬಾಲಕನ ಕಳೇಬರ

ಬೇಗನೆ ಕಮಂಡಲಜಲ ಪ್ರೋಕ್ಷಿಸಿದರು 10

ಬಾಲಕನಾಗಲೇ ಜೀವಿಸಿ ಎದ್ದನು

ಪೇಳಲೇನು ದಂಪತಿಗಳ ಹರುಷವ 11

ಗುರುರಾಜರ ವರ ಅಮೃತಹಸ್ತದ

ಗುರುತರ ಮಹಿಮೆಯನರಿಯಲು ವಶವೇ 12

ಕರಿಗಿರೀಶ ತನ್ನ ಕರುಣಾಪಾತ್ರರ

ಮೆರೆಸುವ ಧರೆಯೊಳು ಪರಮಾನಂದದಿ 13

***