Showing posts with label ಇಂದಿರೇಶನು ಮಣಿನಂದಿನೀ ತೀರದಿ bheemesha krishna. Show all posts
Showing posts with label ಇಂದಿರೇಶನು ಮಣಿನಂದಿನೀ ತೀರದಿ bheemesha krishna. Show all posts

Tuesday 1 June 2021

ಇಂದಿರೇಶನು ಮಣಿನಂದಿನೀ ತೀರದಿ ankita bheemesha krishna

ಇಂದಿರೇಶನು ಮಣಿನಂದಿನೀ ತೀರದಿ

ಚೆಂದದಿ ಕೊಳಲೂದುತಿರಲು ಹರಿ ಆ-

ನಂದದಿ ಕೊಳಲೂದುತಿರಲು

ಅಂಬುಜಾಕ್ಷಿಯರು ಕೇಳತಿ ಮೋಹತನದಿ ಗೋ-

ವಿಂದನಿದ್ದಲ್ಲೆ ನಡೆದರು 1

ಕರೆವೊ ಕ್ಷೀರವು ಕರ ಸಡಿಲ ಬೀಳುತಲಿರೆ

ಪರವಶವಾಗಿ ನಾರಿಯರು ದೇಹ

ಪರವಶವಾಗಿ ನಾರಿಯರು

ಕರುಗಳ ತೊಟ್ಟಿಲೊಳಗೆಯಿಟ್ಟು ಪಾಡುತ

ಭರದಿಂದ ತೂಗಿ ನಡೆದರು 2

ಉಕ್ಕುವೊ ಹಾಲಿಗೆ ಉರಿ ಮಾಡಿ ಮತ್ತಿಷ್ಟು

ಮಕ್ಕಳ ಕಣ್ಣಿಗೆ ಬಿಗಿದು ಅಳುವೊ

ಮಕ್ಕಳ ಕಣ್ಣಿಗೆ ಬಿಗಿದು

ಬೆಕ್ಕಿನ ಬಗಲೊಳಗೆತ್ತಿ ಮುದ್ದಾಡುತ

ಕೃಷ್ಣನಿದ್ದಲ್ಲೆ ನಡೆದರು 3

ಕುಂಭಿಣಿಪತಿ ನೋಡೋ ಸಂಭ್ರಮದಿಂದಲಿ

ಅಂಬರವನೆ ಬಿಟ್ಟು ಕೆಲರು ತಾವು (ಉ)

ಟ್ಟಂಬರವನೆ ಬಿಟ್ಟು ಕೆಲರು

ಕುಂಭಕುಚದ ಕೋಮಲಾಂಗೇರು ಕಂಚುಕ

ಕಬರಕ್ಕೆ ಸುತ್ತಿ ನಡೆದರು 4

ಪಂಚಭಕ್ಷ ಪರಮಾನ್ನ ಘೃತವು ಕ್ಷೀರ

ಪತಿಸುತರಿಗೆ ಉಣ ಬಡಿಸಿ ತಮ್ಮ

ಪತಿಸುತರಿಗೆ ಉಣ ಬಡಿಸಿ

ಮತಿಭ್ರಾಂತರಾಗಿ ಮ್ಯಾಲೆಡೆಗಳನಿಕ್ಕದೆ

ಸತಿಯರು ಸಾಗಿ ನಡೆದರು 5

ಪಂಚರತ್ನದ ಹಾರಪದಕ ಕಠಾಣಿಯ

ಟೊಂಕಕ್ಕೆ ಸುತ್ತಿ ನಾರಿಯರು ಸರವ

ಟೊಂಕಕ್ಕೆ ಸುತ್ತಿ ನಾರಿಯರು

ಪಂಚಮುಖದ ಪಟ್ಟಿ ಕಂಠದಲ್ಲಿಟ್ಟರು ವೈ-

ಕುಂಠಪತಿಯ ನೋಡೋ ಭರದಿ 6

ಕಂಕಣ ಬಳೆ(ಡೋ)ರ್ಯ ಕಾಲಿನಲ್ಲೇರಿಸಿ

ಕಿಂಕಿಣಿ ಕಿರುಗೆಜ್ಜೆ ರುಳಿಯು ಕಾಲ

ಕಿಂಕಿಣಿ ಕಿರುಗೆಜ್ಜೆ ರುಳಿಯು

ಪಂಕಜಾಕ್ಷೇರು ನಳಿತÉೂೀಳಿನಲ್ಲೇರಿಸಿ ಅ-

ಲಂಕಾರವಾಗಿ ನಡೆದರು 7

ಮುತ್ತಿನ ಬಟ್ಟರಳಲೆ ಚಂದ್ರರಾಗಟೆ

ಕಟ್ಟಿದರೊಂದೊಂದು ಕಿವಿಗೆ ಚೌರಿ

ಕಟ್ಟಿದರೊಂದೊಂದು ಕಿವಿಗೆ

ಅಚ್ಚಶಾವಂತಿಗೆ ಅರಳು ಮಲ್ಲಿಗೆ ಮಾಲೆ

ದಿಕ್ಕಿ ಗೊಂದೊಂದುದುರುತಲಿ 8

ವಾಲೆ ಮೂಗುತಿ ವೈಯಾರದ ಬಾವುಲಿ ಕೂ-

ದಲಿಗೊಂದೊಂದು ಸಿಗಿಸಿ ತಮ್ಮ ಕೂ-

ದಲಿಗೊಂದೊಂದು ಸಿಗಿಸಿ

ಮಾರನಯ್ಯನ ಮೋರೆ ನೋಡಲು ಮದ-

ವೇರಿದ ಗಜದಂತೆ ನಡೆದರು 9

ಹಲ್ಲಿಗೆ ಕುಂಕುಮ ಗಲ್ಲಕ್ಕೆ ಕಾಡಿಗೆ

ಚೆಲ್ವ ಹಣೆಗೆ ಅರಿಷಿಣವ ತೀಡಿ

ಚೆಲ್ವ ಹಣೆಗೆ ಅರಿಷಿಣವ

ಫುಲ್ಲಾಕ್ಷದಲ್ಲಿ ಕಸ್ತೂರಿ ತಿಲಕವನ್ನಿಟ್ಟು

ಗೊಲ್ಲ ಸತಿಯರು ನಡೆದರು 10

ಭಕ್ತಿಭಾವದಿ ಚಿತ್ತ ಪರವಶವಾಗಿದ್ದ

ಮಿತ್ರೆಯರನೆ ನೋಡಿ ನಗುತ ಬರುವೊ

ಮಿತ್ರೆಯರನೆ ನೋಡಿ ನಗುತ

ಕತ್ತಲೊಳಗೆ ದಿಟ್ಟತನದಿಂದ ಬರುವುದಿ-

ದಾಶ್ಚರ್ಯವೆಂದ ಶ್ರೀಕೃಷ್ಣ 11

ಏನು ಕಾರಣ ನೀವು ಬಂದಿರಿ ವನಕಿನ್ನು

ಭಾನು ತಾ ಉದಿಸದ ಮುಂದೆ ಅರುಣ

ಭಾನು ತಾ ಉದಿಸದ ಮುಂದೆ

ಮಾನದಿಂದಲಿ ಮನೆಗಳಿಗೆ ಹೋಗಿರಿ ಎಂದು

ದಾನವಾಂತಕ ಕೃಷ್ಣ ನುಡಿದ 12

ದೇವಾಧಿದೇವ ದೇವಕ್ಕಿ ಸುತನೆ ಕೃಷ್ಣ

ತ್ರಿಲೋಕ್ಯಾಧಿಪತಿ ನಿನ್ನ ಬಿಟ್ಟು ಕೇಳೊ

ತ್ರಿಲೋಕ್ಯಾಧಿಪತಿ ನಿನ್ನ ಬಿಟ್ಟು

ಮಾನವೆಲ್ಲಿಹುದ್ಹೇಳೊ ಮಾವನಾಂತಕನಾದ

ಶ್ರೀನಾಥ ರಕ್ಷಿಸೊ ನಮ್ಮ 13

ರಂಗನೆ ನಿನ್ನಂಗಸಂಗವ ಬೇಡುವ

ಅಂಗನೇರಿಗೆ ದಯ ಮಾಡೊ ನೀ ಗೋ-

ಪಾಂಗನೇರಿಗೆ ದಯ ಮಾಡೊ

ಕಂಗಳ ತೆರೆದು ಕಟಾಕ್ಷದಿ ನೋಡುತ

ಇಂದೀ ಜಲಕ್ರೀಡೆನಾಡೊ 14

ಭಂಗಾರಾಭರಣದಿ ಕುಂದಣವಿಟ್ಟಂತೆ

ಚಂದ್ರ ತಾರದಲ್ಲಿದ್ದಂತೆ ಹರಿ ತಾ

ಚಂದ್ರ ತಾರದಲ್ಲಿದ್ದಂತೆ

ಮಂದಗಮನೆಯರ ಮಧ್ಯ ಆಡುತ ಗೋಪೀ

ಕಂದ ದೃಷ್ಟಿಗೆ ಮರೆಯಾದ 15

ಜಾಜಿ ಮಲ್ಲಿಗೆ ಸಂಪಿಗೆ ಶಾವಂತಿಗೆ

ಕಲ್ಲಾ ್ಹರ ಕಮಲ ಕ್ಯಾದಿಗೆಯೆ

ಕಲ್ಲಾ ್ಹರ ಕಮಲ ಕ್ಯಾದಿಗೆಯೆ

ನೀವಿಲ್ಲೆ ಕಂಡಿರ ಯಾದವ ಕೃಷ್ಣನ

ತೋರೆ ತೋರೆಂದ್ವೊದರುತಲಿ 16

ಕೆಂದಾವರೆ ಕೆಲದಲ್ಲಿದ್ದ ತಾವರೆ

ಕುಂದಕುಸುಮ ಎಳೆ ತುಳಸಿ ತೋರೆ

ಕುಂದಕುಸುಮ ಎಳೆ ತುಳಸಿ

ಅಂಬುಜನಾಭನಾಲ್ಪರಿದುಡುಕುತಲಿರೆ

ಕಂಡರ್ವೊಂದರವಿಂದ ನಖವ 17

ವಂಚಿತಳಾಗಿದ್ದ ವನಿತೆಯ ಮುಖ ನೋಡಿ

ಚಂಚಲಾಕ್ಷನ ಸುದ್ದಿ ಕೇಳಿ ತಾವು

ಚಂಚಲಾಕ್ಷನ ಸುದ್ದಿ ಕೇಳಿ

ಭ್ರಾಂತರಾಗ್ವನದಿ ಶ್ರೀಕಾಂತನ ಸ್ತುತಿಸಲು

ನಿಂತ ಮನ್ಮಥನಂತೆ ಬಂದು 18

ಮಿಂಚು ಸೂರ್ಯ ಮಧ್ಯ ಮೇಘವು ಪೊಳೆದಂತೆ

ಕಾಂತೆಯರನೆ ಕೂಡ್ಯಾಡಿ ಹರಿ ತಾ

ಕಾಂತೆಯರನೆ ಕೂಡ್ಯಾಡಿ

ಅಂತರಂಗದಿ ನಿಶ್ಚಂಚಲ ಭಕ್ತಿಗೆ

ಸಂತೋಷ ಬಡಿಸಿದ ಕೃಷ್ಣ&ಟಿb

last lines may be missing

****