Showing posts with label ಭವ ಭಯ ವಿನಾಶ ಭೋ ಭಕ್ತವಿಲಾಸ ankita neleyadikeshava ಮುಂಡಿಗೆ mundige. Show all posts
Showing posts with label ಭವ ಭಯ ವಿನಾಶ ಭೋ ಭಕ್ತವಿಲಾಸ ankita neleyadikeshava ಮುಂಡಿಗೆ mundige. Show all posts

Friday 4 June 2021

ಭವ ಭಯ ವಿನಾಶ ಭೋ ಭಕ್ತವಿಲಾಸ ankita neleyadikeshava ಮುಂಡಿಗೆ mundige

 ಭವಭಯವಿನಾಶ ಭೋ ಭಕ್ತವಿಲಾಸ ಭೋ ಪಾ-

ಪವಿನಾಶ ಭೋ ಬಾಡದ ರಂಗೇಶ ಭೋ | ಪ |

ಹರಿಯ ಸುತಗೆ ಅಭಯವಿತ್ತೆ

ಹರಿಯ ಮಗನ ಕೊಂದೆ

ಹರಿಯೆನಲು ಹರಿರೂಪ ತಾಳಿದೆ

ಹರಿಯೊಳಡಗಿದೆ ಮತ್ತೆ

ಹರಿಯನಗ್ರಜಕೋಟಿತೇಜನ

ಹರಿಯವದನವೆಂಬ         | 1 |


ಶಿವನ ಮಗಳೊಳಗೂಡಿ ಮತ್ತೆ

ಶಿವನಗರ ಮಯನಿಗಿತ್ತೆ

ಶಿವನ ಉಪಟಳಕಳುಕಿ ಗೋಕುಲ

ಶಿವನ ಕರದಲಿ ಪೊತ್ತೆ

ಶಿವನ ಧನುವನು ಖಂಡಿಸಿ ಮತ್ತೆ

ಶಿವನ ಜಿತವೇರಿ ನಿಂದೆ

ಶಿವನ ಭೋಜನದವನ ಸುತಗೆ

ಶಿವನ ಪ್ರತಿಪಾಲನೆಂಬ  | 2 |


ಕಮಲವನ್ನು ಈರಡಿಯ ಮಾಡಿದೆ

ಕಮಲ ಮೊರೆಯಿಡಲಂದು

ಕಮಲದಲ್ಲಿ ಬ್ರಹ್ಮಾಂಡ ತೋರಿದೆ

ಕಮಲಧರ ನೀನೆಂದು

ಕಮಲವನ್ನು ಕದ್ದೊಯ್ದು ಕಳ್ಳನ ಸದೆದು

ಕಮಲವನ್ನು ತಂದೆ

ಕಮಲಮುಖಿಯಳ ಕಾಯ್ದ ಕಾಗಿನೆಲೆ

ಆದಿಕೇಶವನೆಂಬ            | 3 |

***


***

 

Explanation


ಹರಿಯ ಸುತಗೆ ಅಭಯವಿತ್ತೆ – ಹರಿ ಎಂದರೆ ಇಂದ್ರ – ಅವನ ಸುತ ಅಂದರೆ ಇಂದ್ರಾಂಶ ಅರ್ಜುನ.

ಹರಿಯ ಮಗನಾ ಕೊಂದೆ – ಹರಿ ಎಂದರೆ ಸೂರ್ಯ. ಸೂರ್ಯಾಂಶನಾದ ಕರ್ಣನನ್ನು ಇಂದ್ರಾಂಶನಾದ ಅರ್ಜುನನಿಂದ ಕೊಲ್ಲಿಸಿದೆ. ನರ-ನಾರಾಯಣಾವತಾರದಲ್ಲಿ ಪೂರ್ಣವಾಗಿ ನಾಶವಾಗದ ಸಹಸ್ರಕವಚನು ಮಹಾಭಾರತ ಯುದ್ಧದಲ್ಲಿ ನರ-ನಾರಾಯಣಾವತಾರೆ ಶ್ರೀಕೃಷ್ಣಾರ್ಜುನರಿಂದ ಮೃತನಾದ.

ಹರಿಯೆನಲು ಹರಿರೂಪ ತಾಳಿದೆ – ಹರಿ ಎಂದರೆ ಸಿಂಹ. ಪ್ರಹ್ಲಾದನು ಶ್ರೀಹರಿಯನ್ನು ಕೂಗಿದಾಗ, ತನ್ನ ಭೃತ್ಯನ ಮಾತನ್ನು ಸತ್ಯಮಾಡಲು ಕಂಭದಿಂದ ಸಿಂಹರೂಪದಿಂದ ಹರಿ ಬಂದ.

ಹರಿಯೊಳಡಗಿದೆ – ಹರಿ=ಸೂರ್ಯ. ಸೂರ್ಯನಿಗೆ ಕಾಂತಿನೀಡಲೆಂದು ಸೂರ್ಯನೊಳಡಗಿದೆ. ಸೂರ್ಯನಾರಾಯಣ ಎನಿಸಿದೆ.

ಹರಿಯನಗ್ರಜ ಕೋಟಿತೇಜಸ – ಇಲ್ಲಿ ಹರಿ = ವಾಮನ. ಅವನಿಗಿಂತ ಮುಂಚೆ ಅದಿತಿ ಕಶ್ಯಪರಲ್ಲಿ ಜನಿಸಿದ ಸೂರ್ಯನ ತೇಜಸ್ಸಿಗಿಂತ ಕೋಟಿಸೂರ್ಯನಂತೆ ಪ್ರಕಾಶಿಸುವವನು.

ಹರಿಯವದನನೆಂಬ – ಹರಿ = ಕುದುರೆ. ಕುದುರೆ ವದನ ಎಂದರೆ ಹಯಗ್ರೀವರೂಪ – ಅಂದರೆ ಜ್ಞಾನರೂಪ.

ಶಿವನ ಮಗಳೊಳಗೂಡಿ – ಶಿವ ಅಂದರೆ ಸಮುದ್ರ. ಸಮುದ್ರರಾಜನಾದ ವರುಣನ ಮಗಳಾದ ಶ್ರೀಲಕ್ಷ್ಮೀದೇವಿಯ ಜೊತೆಗೆ ಅವತರಿಸಿ;

ಶಿವನಗರ ಮಯನಿಗಿತ್ತೆ – ಖಾಂಡವದಹನ ಕಾಲದಲ್ಲಿ ಅಗ್ನಿಗಾಹುತಿಯಾಗದೆ ಉಳಿದವರಲ್ಲಿ ದನುಪುತ್ರನಾದ ಮಯನೂ ಒಬ್ಬನು. ಈ ಮಯನೇ ಶ್ರೀ ಕೃಷ್ಣನು ಪಾಂಡವರಿಗಾಗೆ ರಾಜಸೂಯಯಾಗ ಮಂಟಪವನ್ನು ನಿರ್ಮಾಣ ಮಾಡಿಸಿದನು. ಇದಕ್ಕಾಗಿ ಮಯನಿಗೆ ಶಿವನ ಲೋಕ ಅಂದರೆ ಉತ್ತಮ ಲೋಕ ಪ್ರಾಪ್ತಿಯಾಯಿತು.

ಶಿವನ ಉಪಟಳಕಳುಕಿ ಗೋಕುಲ – ಶಿವ = ಇಂದ್ರ. ಕೃಷ್ಣಾವತಾರ ಕಾಲದಲ್ಲಿ ಇಂದ್ರನಿಗೆ ತಲುಪಬೇಕಾದ ಆಹುತಿಯನ್ನು ತಪ್ಪಿಸಿದಾಗ, ಕೋಪದಿಂದ ಇಂದ್ರನು ನಿರಂತರ ಮಳೆ ಸುರಿಸಿದಾಗ, ಅವನ ಉಪಟಳಕ್ಕೆ ಗೋವರ್ಧನಬೆಟ್ಟವನ್ನು ಎತ್ತಿ ಎಲ್ಲರನ್ನೂ ರಕ್ಷಿಸಿದನು.

ಶಿವನ ಕರದಲ್ಲಿ ಪೊತ್ತ – ಗೋವರ್ಧನ ಪರ್ವತವನ್ನು ಒಂದು ಸಪ್ತಾಹ ಪರ್ಯಂತ ಎತ್ತಿ ಹಿಡಿದ ಕೃಷ್ಣ.

ಶಿವನ ಧನಸ್ಸನ್ನು ಖಂಡಿಸಿ – ಸೀತಾ ಸ್ವಯಂವರ ಸಂದರ್ಭದಲ್ಲಿ ಶಿವನ ಧನಸ್ಸನ್ನು ಮುರಿದೆ.

ಮತ್ತೆ ಶಿವನ ಜಿತವೇರಿ ನಿಂದೆ – ಸೀತಾ ಸ್ವಯಂವರ ನಂತರ ಅಯೋಧ್ಯೆಗೆ ಹಿಂತಿರುಗುವಾಗ ತನ್ನದೇ ರೂಪವಾದ ಪರಶುರಾಮನಲ್ಲಿದ್ದ ಶಿವಧನಸ್ಸನ್ನು ನಿಗ್ರಹಿಸಿ ಅತುಲನೆಂಬ ರಾಕ್ಷಸನನ್ನು ಕೊಂದೆ.

ಶಿವನ ಭೋಜನದವನ ಸುತನಿಗೆ ಶಿವನ ಪ್ರತಿಪಾಲನೆಂಬ – ಶಿವ ಎಂದರೆ ಸುಖ. ಸುಖಭೋಜನ ಎಂದರೆ ಸುಖವನ್ನೇ ಅನುಭವಿಸುವ ಸುಖಪ್ರಾರಬ್ಚಿಯಾದ ಬ್ರಹ್ಮದೇವ. ಬ್ರಹ್ಮದೇವನ ಸುತ – ಶಿವ. ಆ ಶಿವನಿಗೆ ಪ್ರತಿಪಾಲ, ಪ್ರತಿಪಾಲಕ, ರಕ್ಷಕನೆಂದರ್ಥ. ವೃಕಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಭಸ್ಮಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಯೋಗಿನಿಯರಿಂದ ಬಂದ ಆಪತ್ತಿನಿಂದ ಭಗವಂತನು ರಕ್ಷಿಸಿದನು.

ಕಮಲವನ್ನು ಈರಡಿಯ ಮಾಡಿದೆ – ಕಮಲವೆಂದರೆ ಭೂಮಿ ಮತ್ತು ಆಕಾಶ ಇವೆರೆಡನ್ನೂ ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಿಂದಲೇ ಅಳೆದವನು.

ಕಮಲ ಮೊರೆಯಿಂಡಲಂದು – ಕಮಲ = ಭೂಮಿ. ಭೂಭಾರರಾದ ದೈತ್ಯರ ಉಪಟಳದಿಂದ ಭೂಮಿ ಶ್ರೀಹರಿಯ ಮೊರೆಯಿಡಲು.

ಕಮಲದಲ್ಲಿ ಬ್ರಹ್ಮಾಂಡ ತೋರಿದೆ – ಮಣ್ಣು ತಿಂದನೆಂದು ಪರೀಕ್ಷಿಸಲು ಬಂದಾಗ ಯಶೋಧೆಗೆ ಇಡೀ ಬ್ರಹ್ಮಾಂಡ ತೋರಿದ.

ಕಮಲಧರ ನೀನೆಂದು – ಭೂಮಿಯು ಮೊರೆಯಿಟ್ಟಾಗ ಹಿರಣ್ಯಾಕ್ಷನನ್ನು ಸದೆಬಡಿದು, ಭೂಮಿಯನ್ನು ವರಾಹನಾಗಿಧರಿಸಿ, ಕಮಲಧರನೆನಿಸಿದ ವರಾಹ.

ಕಮಲಮುಖಿಯಳಕಾಯ್ದ – ಕಮಲಮುಖಿಯಾಯ ದ್ರೌಪದಿಯು ಕ್ರೂರಿಯಾದ ದುಶ್ಯಾಸನನ ಹಿಡಿತಕ್ಕೆ ಸಿಕ್ಕಿ ಅವಮಾನಗೊಂಡಾಗ ಅಕ್ಷಯವಸನವಿತ್ತು ಸಲಹಿದೆ. ಇಂತಹ ಶ್ರೀಕೃಷ್ಣನೇ ನಮ್ಮ ಕಾಗಿನೆಲೆಯಾದಿಕೇಶವ.


ಆಧಾರ

ಲೇಖಕರು – ಚತುರ್ವೇದಿ ವೇದವ್ಯಾಸಾಚಾರ್ಯರು

***