Friday 4 June 2021

ಭವ ಭಯ ವಿನಾಶ ಭೋ ಭಕ್ತವಿಲಾಸ ankita neleyadikeshava ಮುಂಡಿಗೆ mundige

 ಭವಭಯವಿನಾಶ ಭೋ ಭಕ್ತವಿಲಾಸ ಭೋ ಪಾ-

ಪವಿನಾಶ ಭೋ ಬಾಡದ ರಂಗೇಶ ಭೋ | ಪ |

ಹರಿಯ ಸುತಗೆ ಅಭಯವಿತ್ತೆ

ಹರಿಯ ಮಗನ ಕೊಂದೆ

ಹರಿಯೆನಲು ಹರಿರೂಪ ತಾಳಿದೆ

ಹರಿಯೊಳಡಗಿದೆ ಮತ್ತೆ

ಹರಿಯನಗ್ರಜಕೋಟಿತೇಜನ

ಹರಿಯವದನವೆಂಬ         | 1 |


ಶಿವನ ಮಗಳೊಳಗೂಡಿ ಮತ್ತೆ

ಶಿವನಗರ ಮಯನಿಗಿತ್ತೆ

ಶಿವನ ಉಪಟಳಕಳುಕಿ ಗೋಕುಲ

ಶಿವನ ಕರದಲಿ ಪೊತ್ತೆ

ಶಿವನ ಧನುವನು ಖಂಡಿಸಿ ಮತ್ತೆ

ಶಿವನ ಜಿತವೇರಿ ನಿಂದೆ

ಶಿವನ ಭೋಜನದವನ ಸುತಗೆ

ಶಿವನ ಪ್ರತಿಪಾಲನೆಂಬ  | 2 |


ಕಮಲವನ್ನು ಈರಡಿಯ ಮಾಡಿದೆ

ಕಮಲ ಮೊರೆಯಿಡಲಂದು

ಕಮಲದಲ್ಲಿ ಬ್ರಹ್ಮಾಂಡ ತೋರಿದೆ

ಕಮಲಧರ ನೀನೆಂದು

ಕಮಲವನ್ನು ಕದ್ದೊಯ್ದು ಕಳ್ಳನ ಸದೆದು

ಕಮಲವನ್ನು ತಂದೆ

ಕಮಲಮುಖಿಯಳ ಕಾಯ್ದ ಕಾಗಿನೆಲೆ

ಆದಿಕೇಶವನೆಂಬ            | 3 |

***


***

 

Explanation


ಹರಿಯ ಸುತಗೆ ಅಭಯವಿತ್ತೆ – ಹರಿ ಎಂದರೆ ಇಂದ್ರ – ಅವನ ಸುತ ಅಂದರೆ ಇಂದ್ರಾಂಶ ಅರ್ಜುನ.

ಹರಿಯ ಮಗನಾ ಕೊಂದೆ – ಹರಿ ಎಂದರೆ ಸೂರ್ಯ. ಸೂರ್ಯಾಂಶನಾದ ಕರ್ಣನನ್ನು ಇಂದ್ರಾಂಶನಾದ ಅರ್ಜುನನಿಂದ ಕೊಲ್ಲಿಸಿದೆ. ನರ-ನಾರಾಯಣಾವತಾರದಲ್ಲಿ ಪೂರ್ಣವಾಗಿ ನಾಶವಾಗದ ಸಹಸ್ರಕವಚನು ಮಹಾಭಾರತ ಯುದ್ಧದಲ್ಲಿ ನರ-ನಾರಾಯಣಾವತಾರೆ ಶ್ರೀಕೃಷ್ಣಾರ್ಜುನರಿಂದ ಮೃತನಾದ.

ಹರಿಯೆನಲು ಹರಿರೂಪ ತಾಳಿದೆ – ಹರಿ ಎಂದರೆ ಸಿಂಹ. ಪ್ರಹ್ಲಾದನು ಶ್ರೀಹರಿಯನ್ನು ಕೂಗಿದಾಗ, ತನ್ನ ಭೃತ್ಯನ ಮಾತನ್ನು ಸತ್ಯಮಾಡಲು ಕಂಭದಿಂದ ಸಿಂಹರೂಪದಿಂದ ಹರಿ ಬಂದ.

ಹರಿಯೊಳಡಗಿದೆ – ಹರಿ=ಸೂರ್ಯ. ಸೂರ್ಯನಿಗೆ ಕಾಂತಿನೀಡಲೆಂದು ಸೂರ್ಯನೊಳಡಗಿದೆ. ಸೂರ್ಯನಾರಾಯಣ ಎನಿಸಿದೆ.

ಹರಿಯನಗ್ರಜ ಕೋಟಿತೇಜಸ – ಇಲ್ಲಿ ಹರಿ = ವಾಮನ. ಅವನಿಗಿಂತ ಮುಂಚೆ ಅದಿತಿ ಕಶ್ಯಪರಲ್ಲಿ ಜನಿಸಿದ ಸೂರ್ಯನ ತೇಜಸ್ಸಿಗಿಂತ ಕೋಟಿಸೂರ್ಯನಂತೆ ಪ್ರಕಾಶಿಸುವವನು.

ಹರಿಯವದನನೆಂಬ – ಹರಿ = ಕುದುರೆ. ಕುದುರೆ ವದನ ಎಂದರೆ ಹಯಗ್ರೀವರೂಪ – ಅಂದರೆ ಜ್ಞಾನರೂಪ.

ಶಿವನ ಮಗಳೊಳಗೂಡಿ – ಶಿವ ಅಂದರೆ ಸಮುದ್ರ. ಸಮುದ್ರರಾಜನಾದ ವರುಣನ ಮಗಳಾದ ಶ್ರೀಲಕ್ಷ್ಮೀದೇವಿಯ ಜೊತೆಗೆ ಅವತರಿಸಿ;

ಶಿವನಗರ ಮಯನಿಗಿತ್ತೆ – ಖಾಂಡವದಹನ ಕಾಲದಲ್ಲಿ ಅಗ್ನಿಗಾಹುತಿಯಾಗದೆ ಉಳಿದವರಲ್ಲಿ ದನುಪುತ್ರನಾದ ಮಯನೂ ಒಬ್ಬನು. ಈ ಮಯನೇ ಶ್ರೀ ಕೃಷ್ಣನು ಪಾಂಡವರಿಗಾಗೆ ರಾಜಸೂಯಯಾಗ ಮಂಟಪವನ್ನು ನಿರ್ಮಾಣ ಮಾಡಿಸಿದನು. ಇದಕ್ಕಾಗಿ ಮಯನಿಗೆ ಶಿವನ ಲೋಕ ಅಂದರೆ ಉತ್ತಮ ಲೋಕ ಪ್ರಾಪ್ತಿಯಾಯಿತು.

ಶಿವನ ಉಪಟಳಕಳುಕಿ ಗೋಕುಲ – ಶಿವ = ಇಂದ್ರ. ಕೃಷ್ಣಾವತಾರ ಕಾಲದಲ್ಲಿ ಇಂದ್ರನಿಗೆ ತಲುಪಬೇಕಾದ ಆಹುತಿಯನ್ನು ತಪ್ಪಿಸಿದಾಗ, ಕೋಪದಿಂದ ಇಂದ್ರನು ನಿರಂತರ ಮಳೆ ಸುರಿಸಿದಾಗ, ಅವನ ಉಪಟಳಕ್ಕೆ ಗೋವರ್ಧನಬೆಟ್ಟವನ್ನು ಎತ್ತಿ ಎಲ್ಲರನ್ನೂ ರಕ್ಷಿಸಿದನು.

ಶಿವನ ಕರದಲ್ಲಿ ಪೊತ್ತ – ಗೋವರ್ಧನ ಪರ್ವತವನ್ನು ಒಂದು ಸಪ್ತಾಹ ಪರ್ಯಂತ ಎತ್ತಿ ಹಿಡಿದ ಕೃಷ್ಣ.

ಶಿವನ ಧನಸ್ಸನ್ನು ಖಂಡಿಸಿ – ಸೀತಾ ಸ್ವಯಂವರ ಸಂದರ್ಭದಲ್ಲಿ ಶಿವನ ಧನಸ್ಸನ್ನು ಮುರಿದೆ.

ಮತ್ತೆ ಶಿವನ ಜಿತವೇರಿ ನಿಂದೆ – ಸೀತಾ ಸ್ವಯಂವರ ನಂತರ ಅಯೋಧ್ಯೆಗೆ ಹಿಂತಿರುಗುವಾಗ ತನ್ನದೇ ರೂಪವಾದ ಪರಶುರಾಮನಲ್ಲಿದ್ದ ಶಿವಧನಸ್ಸನ್ನು ನಿಗ್ರಹಿಸಿ ಅತುಲನೆಂಬ ರಾಕ್ಷಸನನ್ನು ಕೊಂದೆ.

ಶಿವನ ಭೋಜನದವನ ಸುತನಿಗೆ ಶಿವನ ಪ್ರತಿಪಾಲನೆಂಬ – ಶಿವ ಎಂದರೆ ಸುಖ. ಸುಖಭೋಜನ ಎಂದರೆ ಸುಖವನ್ನೇ ಅನುಭವಿಸುವ ಸುಖಪ್ರಾರಬ್ಚಿಯಾದ ಬ್ರಹ್ಮದೇವ. ಬ್ರಹ್ಮದೇವನ ಸುತ – ಶಿವ. ಆ ಶಿವನಿಗೆ ಪ್ರತಿಪಾಲ, ಪ್ರತಿಪಾಲಕ, ರಕ್ಷಕನೆಂದರ್ಥ. ವೃಕಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಭಸ್ಮಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಯೋಗಿನಿಯರಿಂದ ಬಂದ ಆಪತ್ತಿನಿಂದ ಭಗವಂತನು ರಕ್ಷಿಸಿದನು.

ಕಮಲವನ್ನು ಈರಡಿಯ ಮಾಡಿದೆ – ಕಮಲವೆಂದರೆ ಭೂಮಿ ಮತ್ತು ಆಕಾಶ ಇವೆರೆಡನ್ನೂ ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಿಂದಲೇ ಅಳೆದವನು.

ಕಮಲ ಮೊರೆಯಿಂಡಲಂದು – ಕಮಲ = ಭೂಮಿ. ಭೂಭಾರರಾದ ದೈತ್ಯರ ಉಪಟಳದಿಂದ ಭೂಮಿ ಶ್ರೀಹರಿಯ ಮೊರೆಯಿಡಲು.

ಕಮಲದಲ್ಲಿ ಬ್ರಹ್ಮಾಂಡ ತೋರಿದೆ – ಮಣ್ಣು ತಿಂದನೆಂದು ಪರೀಕ್ಷಿಸಲು ಬಂದಾಗ ಯಶೋಧೆಗೆ ಇಡೀ ಬ್ರಹ್ಮಾಂಡ ತೋರಿದ.

ಕಮಲಧರ ನೀನೆಂದು – ಭೂಮಿಯು ಮೊರೆಯಿಟ್ಟಾಗ ಹಿರಣ್ಯಾಕ್ಷನನ್ನು ಸದೆಬಡಿದು, ಭೂಮಿಯನ್ನು ವರಾಹನಾಗಿಧರಿಸಿ, ಕಮಲಧರನೆನಿಸಿದ ವರಾಹ.

ಕಮಲಮುಖಿಯಳಕಾಯ್ದ – ಕಮಲಮುಖಿಯಾಯ ದ್ರೌಪದಿಯು ಕ್ರೂರಿಯಾದ ದುಶ್ಯಾಸನನ ಹಿಡಿತಕ್ಕೆ ಸಿಕ್ಕಿ ಅವಮಾನಗೊಂಡಾಗ ಅಕ್ಷಯವಸನವಿತ್ತು ಸಲಹಿದೆ. ಇಂತಹ ಶ್ರೀಕೃಷ್ಣನೇ ನಮ್ಮ ಕಾಗಿನೆಲೆಯಾದಿಕೇಶವ.


ಆಧಾರ

ಲೇಖಕರು – ಚತುರ್ವೇದಿ ವೇದವ್ಯಾಸಾಚಾರ್ಯರು

***


No comments:

Post a Comment