Showing posts with label ಪವಮಾನ ನಮ್ಮ ಗುರು jagannatha vittala ಪ್ರಾಣದೇವ ಸ್ತೋತ್ರ ಪದ PAVAMANA NAMMA GURU PRANADEVA STOTRA PADA. Show all posts
Showing posts with label ಪವಮಾನ ನಮ್ಮ ಗುರು jagannatha vittala ಪ್ರಾಣದೇವ ಸ್ತೋತ್ರ ಪದ PAVAMANA NAMMA GURU PRANADEVA STOTRA PADA. Show all posts

Saturday 14 December 2019

ಪವಮಾನ ನಮ್ಮ ಗುರು ankita jagannatha vittala ಪ್ರಾಣದೇವ ಸ್ತೋತ್ರ ಪದ PAVAMANA NAMMA GURU PRANADEVA STOTRA PADA

1st Audio by Mrs. Nandini Sripad




ಶ್ರೀ ಜಗನ್ನಾಥದಾಸರ ಕೃತಿ 

 ಶ್ರೀ ಪ್ರಾಣದೇವರ ಸ್ತೋತ್ರಪದ 
        (ಮೂಲರೂಪ) 

 ರಾಗ ಶಂಕರಾಭರಣ          ರೂಪಕತಾಳ 

ಪವಮಾನ ನಮ್ಮ ಗುರು ಪವಮಾನ ॥ ಪ ॥
ಪವಮಾನ ಪಾವನಚರಿತ । ಪದ್ಮ -
ಭವನ ಪದಾರ್ಹನೆ ನಿರತ ॥ ಆಹಾ ॥
ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ -
ರವತಾರಾತ್ಮಕ ತತ್ವ ದಿವಿಜನಿಯಾಮಕ ॥ ಅ.ಪ ॥

ಪ್ರಾಣಾಪಾನ ವ್ಯಾನೋದಾನ । ಹೇ ಸ -
ಮಾನ ರೂಪಕನೆ ವಿಜ್ಞಾನ । ತತ್ವ 
ಮಾನಿಯೆ ಅಮೃತಾಭಿಧಾನ । ಚತು
ರಾನನ ತನಯ ಗೀರ್ವಾಣ ॥ ಆಹಾ ॥
ಸೇನಾಧಿಪತೆ ನಿನ್ನಾಜ್ಞಾನುಸಾರದಲಿಪ್ಪ
ಮಾನವರನು ಕಾಯ್ವ ಮೌನಿಧ್ಯಾನಗಮ್ಯ ॥ 1 ॥

ನಾಗಕೂರ್ಮ ದೇವದತ್ತ । ಕೃಕಲ
ಯೋಗಿವರಿಯ ಮುಕ್ತಾಮುಕ್ತ । ಕ್ಲುಪ್ತ
ಭೋಗಂಗಳೀವ ಸುಶಕ್ತ । ತಲೆ
ಬಾಗಿ ಬೇಡುವೆ ಸರ್ವೋದ್ರಿಕ್ತ ॥ ಆಹಾ ॥
ಹೋಗುತಲಿದೆ ಹೊತ್ತು ಜಾಗುಮಾಡದೆ ನಿಜ -
ಭಾಗವತರೊಳಿಡೊ ಮೈಗಣ್ಣಪದವಾಳ್ದ ॥ 2 ॥

ಮೂರುಕೋಟಿ ರೂಪಧರನೆ । ಲೋಕಾ
ಧಾರಕ ಲಾವಣ್ಯಕರನೆ । ಸರ್ವ
ಪ್ರೇರಕ ಭಾರತಿವರನೆ । ತ್ರಿಪು
ರಾರಿಗೆ ವಜ್ರಪಂಜರನೆ ॥ ಆಹಾ ॥
ನೀರಜಜಾಂಡದಿ ಮೂರೇಳು ಸಾವಿರ -
ದಾರುನೂರು ಜಪ ಬೇರೆ ಬೇರೆ ಮಾಳ್ಪ ॥ 3 ॥

ಮೂಲೇಶನಂಘ್ರಿ ಸರೋಜ । ಭೃಂಗ
ಏಳೇಳು ಲೋಕಾಧಿರಾಜಾ । ಇಪ್ಪ
ತ್ತೇಳು ರೂಪನೆ ರವಿತೇಜ । ಲೋಕ
ಪಾಲಕರಾಳ್ದ ಮಹೋಜ ॥ ಆಹಾ ॥
ಕಾಳೀರಮಣ ನಿನ್ನ ಕಾಲಿಗೆರಗುವೆ ಕೃ -
ಪಾಳೋ ಭಕ್ತಿಜ್ಞಾನವಾಲಯ ಕರುಣಿಸೋ ॥ 4 ॥

ಶ್ರೀವಲ್ಲಭಗೆ ಪ್ರತಿಬಿಂಬ । ನಾಗಿ
ಜೀವವೇದ ಕಾಲಸ್ತಂಬ । ಗತ
ಆವಾಗ ಹರಿರೂಪ ಕಾಂಬ । ಶಕ್ತ 
ನೀನೊಬ್ಬನಹುದೊ ನಾನೆಂಬ ॥ ಆಹಾ ॥
ದೇವತೆಗಳಿಗುಂಟೆ ಈ ವಿಭವ ಜಗ -
ಜ್ಜೀವ ದಯಾಶೀಲ ನಾ ವಂದಿಪೆ ನಿತ್ಯ  ॥ 5 ॥

ಆಖಣಾಶ್ಮ ಸಮಚರಣ । ಪದ್ಮ
ಲೇಖರ ಮಸ್ತಕಾಭರಣ । ಕಲ್ಪ
ಶಾಖೆಯಂತೆ ಅತಿಕರುಣಾ । ದಿಂದ
ಈ ಖಂಡದೊಳು ಮಿಥ್ಯಾವರಣ ॥ ಆಹಾ ॥
ನೀ ಖಂಡಿಸಿದೆ ದಂಡಮೇಖಲಭೂಷಣ
ಆಖುವಾಹನಪಿತ ಆಖಂಡಲಾರ್ಚಿತ ॥ 6 ॥

ದಕ್ಷಿಣಾಕ್ಷಿಗತವತ್ಸ । ರೂಪ
ದಕ್ಷನಹುದೊ ಪರಮೋತ್ಸ । ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷ । ಸರ್ವಾ
ಪೇಕ್ಷಾವರ್ಜಿತನೇ ಸ್ವೇಚ್ಛ ॥ ಆಹಾ ॥
ಮೋಕ್ಷದಿ ದ್ವಾತ್ರಿಂಶಲ್ಲಕ್ಷಣಪುರುಷ ನಿ -
ರೀಕ್ಷಿಸಿ ಕರುಣದಿ ರಕ್ಷಿಸು ಎನ್ನನು ॥ 7 ॥

ಅಧಿಭೂತ ಅಧ್ಯಾತ್ಮಗತನೆ । ವಿಮಲ
ಅಧಿದೈವರೊಳು ಪ್ರವಿತತನೆ । ಕಲಿ
ಹೃದಯ ವಿಭೇದನರತನೆ । ಎನ್ನ
ವದನದಿ ನೆಲೆಸೊ ಮಾರುತನೆ ॥ ಆಹಾ ॥
ಬದರಿಕಾಶ್ರಮದೊಳು ಹದಿನಾರು ಸಾವಿರ
ಸುದತೇರ ಕಾಯ್ದ ನಾರದಮುನಿಸನ್ನುತ ॥ 8 ॥

ಮಾತರಿಶ್ವ ಮಹಾಮಹಿಮ । ಸರ್ವ
ಚೇತನ ಹೃದ್ಗತ ಹನುಮ । ಭೀಮ
ಭೂತಳದೊಳು ಮಧ್ವನಾಮ । ದಿಂದ
ಜಾತನಾಗಿ ಜಿತಕಾಮ ॥ ಆಹಾ ॥
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ
ಸೀತಾರಮಣ ಜಗನ್ನಾಥವಿಠ್ಠಲ ದೂತ ॥ 9 ॥
*********

ಶ್ರೀ ಜಗನ್ನಾಥದಾಸರ ಕೃತಿ 

 ಶ್ರೀ ಪ್ರಾಣದೇವರ ಸ್ತೋತ್ರಪದ 
 (ಮೂಲರೂಪ) 

 ರಾಗ ಶಂಕರಾಭರಣ        ರೂಪಕತಾಳ 

 ಪವಮಾನ ನಮ್ಮ ಗುರು ಪವಮಾನ ॥ ಪ ॥ 
 ಪವಮಾನ ಪಾವನಚರಿತ । ಪದ್ಮ - 
 ಭವನ ಪದಾರ್ಹನೆ ನಿರತ ॥ ಆಹಾ ॥ 
 ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ - 
 ರವತಾರಾತ್ಮಕ ತತ್ವ ದಿವಿಜನಿಯಾಮಕ ॥ ಅ.ಪ ॥ 

 ವಿವರಣೆ : ನಮ್ಮ ಗುರು = ಮೋಕ್ಷಬಯಸುವ (ಮುಕ್ತಿಯೋಗ್ಯರ) ಸುಜನರ ಜ್ಞಾನೋಪದೇಶಕ ; ಪಾವನಚರಿತ = ನಿಷ್ಕಂಳಕ ನಡೆನುಡಿಗಳುಳ್ಳವ ; ಪದ್ಮಭವನ ಪದಾರ್ಹನೆ = ಬ್ರಹ್ಮಪದವಿಗೆ ಅರ್ಹವಾದ ಸ್ವರೂಪನೆ !
 ಶ್ರವಣಾದಿಭಕುತಿ = ಶ್ರವಣ ಮೊದಲಾದ ನವವಿಧಭಕುತಿ ; ಮೂರವತಾರಾತ್ಮಕ = ಹನುಮ , ಭೀಮ , ಮಧ್ವರೂಪದ ; ತತ್ವ ದಿವಿಜನಿಯಾಮಕ = ತತ್ವಾಭಿಮಾನಿ ದೇವತೆಗಳ ಒಡೆಯ ;

 ಪ್ರಾಣಾಪಾನ ವ್ಯಾನೋದಾನ । ಹೇ ಸ - 
 ಮಾನ ರೂಪಕನೆ ವಿಜ್ಞಾನ । ತತ್ವ 
 ಮಾನಿಯೆ ಅಮೃತಾಭಿಧಾನ । ಚತು 
 ರಾನನ ತನಯ ಗೀರ್ವಾಣ ॥ ಆಹಾ ॥ 
 ಸೇನಾಧಿಪತೆ ನಿನ್ನಾಜ್ಞಾನುಸಾರದಲಿಪ್ಪ 
 ಮಾನವರನು ಕಾಯ್ವ ಮೌನಿಧ್ಯಾನಗಮ್ಯ ॥ 1 ॥ 

 ವಿವರಣೆ : ವಿಜ್ಞಾನತತ್ವಮಾನಿಯೆ = ಮಹತತ್ವದ ಪ್ರಭೇದವಾದುದು ವಿಜ್ಞಾನತತ್ವ (ಅಪರೋಕ್ಷಜ್ಞಾನ) , ಅದನ್ನು ಭಕ್ತರಿಗೆ ನಿಯಮಿಸುವ ಅಭಿಮಾನಿದೇವತೆ ; ಅಮೃತಾಭಿದಾನ = " ವಾಯೂರಪ್ಯಮೃತಸ್ಸ್ಮೃತಃ " ಇತ್ಯಾದಿ ಪ್ರಮಾಣಗಳು ಹೇಳುವಂತೆ " ಅಮೃತ " ನೆಂದು ಹೆಸರುಳ್ಳ ; ಚತುರಾನನತನಯ = ಚತುರ್ಮುಖನ ಪುತ್ರನಾಗಿ ಒಂದು ರೂಪದಿಂದ ಜನಿಸಿದವನು. (ದೇವತೆಗಳು ಬಹುಪರಿಯಿಂದ ಸೃಷ್ಟರಾಗುತ್ತಾರೆ - ಸರಸ್ವತಿಯು ಬ್ರಹ್ಮನ ಮಗಳಾಗಿದ್ದಂತೆ) ( ವಾಸುದೇವನು ತನ್ನ ಭಾರ್ಯಳಾದ ಮಾಯಾದೇವಿಯಲ್ಲಿ ಬ್ರಹ್ಮ , ವಿಷ್ಣು , ಮಹೇಶ್ವರನಾಮಕ ರೂಪಗಳಿಂದ ಅವತರಿಸಿದಂತೆ , ಬ್ರಹ್ಮಭಾರ್ಯರಾದ ಗಾಯತ್ರಿ ಮೊದಲಾದವರಲ್ಲಿ ಬ್ರಹ್ಮನು ವೀರ್ಯಾಧಾನ ಮಾಡಲು ಒಬ್ಬಳಿಂದ ವಿಧಿನಾಮಕನಾಗಿ ಬ್ರಹ್ಮನೂ , ಮತ್ತೊಬ್ಬಳಿಂದ ಸೂತ್ರನಾಮಕನಾಗಿ ವಾಯುದೇವನೂ ಹುಟ್ಟಿದ ವಿಷಯವು ' ವಿಷ್ಣುರಹಸ್ಯ ' ದಲ್ಲಿ ನಿರೂಪಿತವಾಗಿದೆ ) ; ಗೀರ್ವಾಣಸೇನಾಧಿಪತೆ = ದೇವಸಮೂಹದ ನಾಯಕ ; ನಿನ್ನಾಜ್ಞಾನುಸಾರದ = ನಿನ್ನ ಆಜ್ಞೆಯನ್ನು ಪಾಲಿಸುವ ; ಮೌಳಿಧ್ಯಾನಗಮ್ಯ = ಮುನಿಗಳ ಧ್ಯಾನಗೋಚರನಾಗುವವನು ; (ಧ್ಯಾನದಲ್ಲಿ ಮುಖ್ಯಪ್ರಾಣನ ದರ್ಶನವಾಗಿ ಒಡನೆಯೇ ಶ್ರೀಹರಿಸಾಕ್ಷಾತ್ಕಾರವೂ ಜ್ಞಾನಿಗಳಿಗೆ ಲಭಿಸುತ್ತದೆ ).

 ನಾಗಕೂರ್ಮ ದೇವದತ್ತ । ಕೃಕಲ 
 ಯೋಗಿವರಿಯ ಮುಕ್ತಾಮುಕ್ತ । ಕ್ಲುಪ್ತ 
 ಭೋಗಂಗಳೀವ ಸುಶಕ್ತ । ತಲೆ 
 ಬಾಗಿ ಬೇಡುವೆ ಸರ್ವೋದ್ರಿಕ್ತ ॥ ಆಹಾ ॥ 
 ಹೋಗುತಲಿದೆ ಹೊತ್ತು ಜಾಗುಮಾಡದೆ ನಿಜ - 
 ಭಾಗವತರೊಳಿಡೊ ಮೈಗಣ್ಣಪದವಾಳ್ದ ॥ 2 ॥ 

 ವಿವರಣೆ : ನಾಗಕೂರ್ಮ ದೇವದತ್ತ ಕೃಕಲ = ನಾಗ , ಕೂರ್ಮ , ದೇವದತ್ತ , ಕೃಕಲ ( ಮತ್ತು ಧನಂಜಯ )ಗಳೆಂಬ ಉಪಪ್ರಾಣರಲ್ಲಿ ಪ್ರತ್ಯೇಕವಾದ ಐದು ರೂಪಗಳಿಂದ ಸ್ಥಿತನಾದ , ಯೋಗಿವರಿಯ = ಜ್ಞಾನಿಶ್ರೇಷ್ಠ ( ಸರ್ವಜ್ಞ ) ; ಮುಕ್ತಾಮುಕ್ತ ಕ್ಲುಪ್ತಭೋಗಂಗಳೀವ ಸುಶಕ್ತ = ಮುಕ್ತ ಮತ್ತು ಅಮುಕ್ತ (ಸಂಸಾರಿ) ಜೀವರಿಗೆ ನಿಯತವಾದ (ಆಯಾ ಕಾಲದಲ್ಲಿ ದೊರೆಯಬೇಕಾದ) ಸುಖದುಃಖಾದಿ ಭೋಗಗಳನ್ನು ಕೊಡುವಲ್ಲಿ ಪೂರ್ಣಶಕ್ತನಾದ ; ಸರ್ವೋದ್ರಿಕ್ತ = ಭಕ್ತ್ಯಾದಿ ಗುಣಗಳ ನಿತ್ಯಾಭಿವೃದ್ಧಿಯುಳ್ಳ (ಜ್ಞಾನಾದಿಗುಣ ತಿರೋಧಾನವಿಲ್ಲದ - ನಿತ್ಯ ಪ್ರಕಟವಾಗಿರುವ ಗುಣಗಳುಳ್ಳ) ; ಜಾಗುಮಾಡದೆ = (ನೀನು) ನನ್ನ ವಿಚಾರದಲ್ಲಿ ಮೌನತಾಳದೆ ; ನಿಜಭಾಗವತರೊಳು = ನಿನ್ನಲ್ಲಿ ಮತ್ತು ಶ್ರೀಹರಿಯಲ್ಲಿ ಸ್ವಾಭಾವಿಕ ಭಕ್ತಿಯುಳ್ಳವರ ಸಹವಾಸದಲ್ಲಿ ; ಇಡೊ = (ನನ್ನನ್ನು) ನಿಲ್ಲಿಸು ; ಮೈಗಣ್ಣಪದವಾಳ್ದ = ಇಂದ್ರಪದವಿಯನ್ನು ಆಳ್ದ ( 2 ನೇ ಸ್ವಾರೋಚಿಷ ಮನ್ವಂತರದಲ್ಲಿ ವಾಯುದೇವನು , ರೋಚನ ನಾಮದಿಂದ ಇಂದ್ರಪದವಿ ಯನ್ನಾಳಿದನು ) ;

 ಮೂರುಕೋಟಿ ರೂಪಧರನೆ । ಲೋಕಾ 
 ಧಾರಕ ಲಾವಣ್ಯಕರನೆ । ಸರ್ವ 
 ಪ್ರೇರಕ ಭಾರತಿವರನೆ । ತ್ರಿಪು 
 ರಾರಿಗೆ ವಜ್ರಪಂಜರನೆ ॥ ಆಹಾ ॥ 
 ನೀರಜಜಾಂಡದಿ ಮೂರೇಳು ಸಾವಿರ - 
 ದಾರುನೂರು ಜಪ ಬೇರೆ ಬೇರೆ ಮಾಳ್ಪ ॥ 3 ॥ 

 ವಿವರಣೆ : ಮೂರುಕೋಟಿರೂಪಧರನೆ = ತ್ರಿಕೋಟಿರೂಪಗಳಿಂದ ಪೃಥ್ವಿಯಲ್ಲಿ ಸ್ಥಿತನಾದ ( ' ಅನಂತಾನ್ಯಸ್ಯ ರೂಪಾಣಿ ತ್ರಿಕೋಟೀನಿ ವಿಶೇಷತಃ ' - ಈ ಮೂರುಕೋಟಿ ರೂಪಗಳು , ' ವೈಷ್ಣವಕ್ಷೇತ್ರೇಷು ಸರ್ವೇಷು ದೇವಾದೀನಾಂ ದೃಶ್ಯತಯಾ ಅನ್ಯೇಷಾಮದೃಶ್ಯತಯಾ ಚ ಹರಿಸೇವಾರ್ಥಂ ಸಜ್ಜನರಕ್ಷಣಾರ್ಥಂ ಚ ಹನುಮತಃ ತ್ರಿಕೋಟಿರೂಪಧಾರಣಂ ' - ' ಸಕಲ ವೈಷ್ಣವಕ್ಷೇತ್ರಗಳಲ್ಲಿ ದೇವತೆಗಳಿಗೆ ದೃಶ್ಯನಾಗಿಯೂ , ಅನ್ಯರಿಗೆ ಅದೃಶ್ಯನಾಗಿಯೂ , ಹರಿಸೇವಾರ್ಥ ಮತ್ತು ಸಜ್ಜನರಕ್ಷಣಾರ್ಥವಾಗಿ ಶ್ರೀಹನುಮಂತನ ಮೂರುಕೋಟಿರೂಪಗಳು ' ಎಂದು ಶ್ರೀವಾದಿರಾಜರು ಭಾವಪ್ರಕಾಶಿಕೆಯಲ್ಲಿ ಹೇಳಿರುವರು. ) ಲಾವಣ್ಯಕರನೆ = ಸೌಂದರ್ಯಸಾರನೆ ! (ದ್ವಾತ್ರಿಂಶಲ್ಲಕ್ಷಣಶೋಭಿತ ಸುಂದರದೇಹವುಳ್ಳವನು ಶ್ರೀವಾಯುದೇವನು ) ; ಸರ್ವಪ್ರೇರಕ = (ಸಕಲತತ್ತ್ವಾಭಿಮಾನಿಗಳ ಅಂತರ್ಯಾಮಿಯೂ ಆಗಿದ್ದು ) ಸರ್ವರ ಸರ್ವಕ್ರಿಯೆಗಳ ಪ್ರೇರಕನಾಗಿರುವವ ; ತ್ರಿಪುರಾರಿಗೆ = ಶಿವನಿಗೆ ; ವಜ್ರಪಂಜರನೆ = ಭದ್ರವಾದ ರಕ್ಷಾಕವಚನು ; ನೀರಜಜಾಂಡದಿ = ಬ್ರಹ್ಮಾಂಡದಲ್ಲಿ ( ನೀರಿನಲ್ಲಿ ಹುಟ್ಟಿದ , ಪದ್ಮದಲ್ಲಿ ಹುಟ್ಟಿದ - ಬ್ರಹ್ಮ ) ಮೂರೇಳುಸಾವಿರದಾರುನೂರು = 21600 ಹಂಸಮಂತ್ರಜಪಗಳನ್ನು ; ಬೇರೆ ಬೇರೆ = ಪ್ರತಿಪ್ರತಿ ಜೇವರಲ್ಲಿ ; ( ದಿನ ಒಂದಕ್ಕೆ 21600 ಶ್ವಾಸೋಚ್ಛ್ವಾಸಗಳಾಗುತ್ತವೆ - ಶ್ವಾಸನಿಯಾಮಕನಾದ ಶ್ರೀಮುಖ್ಯಪ್ರಾಣನು ' ಹಂಸಃ ಸೋऽಹಂ ಸ್ವಾಹಾ ' ಎಂಬ ಹಂಸಮಂತ್ರವನ್ನು ಜಪಿಸುತ್ತಾನೆ );

 ಮೂಲೇಶನಂಘ್ರಿ ಸರೋಜ । ಭೃಂಗ 
 ಏಳೇಳು ಲೋಕಾಧಿರಾಜಾ । ಇಪ್ಪ 
 ತ್ತೇಳು ರೂಪನೆ ರವಿತೇಜ । ಲೋಕ 
 ಪಾಲಕರಾಳ್ದ ಮಹೋಜ ॥ ಆಹಾ ॥ 
 ಕಾಳೀರಮಣ ನಿನ್ನ ಕಾಲಿಗೆರಗುವೆ ಕೃ - 
 ಪಾಳೋ ಭಕ್ತಿಜ್ಞಾನವಾಲಯ ಕರುಣಿಸೋ ॥ 4 ॥ 

 ವಿವರಣೆ : ಮೂಲೇಶನಂಘ್ರಿಸರೋಜ = ಮೂಲೇಶನಾಮಕ ಹೃದಯಸ್ಥಿತ ಶ್ರೀಹರಿರೂಪದ ಪಾದಪದ್ಮ ; ಭೃಂಗ = ದುಂಬಿ ; ಏಳೇಳು ಲೋಕಾಧಿರಾಜ = 14 ಲೋಕಗಳ ಅಧಿಪತಿ (ಬ್ರಹ್ಮ- ವಾಯುದೇವನು ಭಾವಿಸತ್ಯಲೋಕಾಧಿಪತಿ) ; ಇಪ್ಪತ್ತೇಳು ರೂಪನೆ = 27 ತತ್ತ್ವಗಳಲ್ಲಿ ಅಷ್ಟುರೂಪದಿಂದ ಸ್ಥಿತನಾದ (5 ತನ್ಮಾತ್ರೆಗಳು , 5 ಭೂತಗಳು , 11 ಮನ ಆದಿ ಇಂದ್ರಿಯಗಳು , ಅಹಂಕಾರ , ಬುದ್ಧಿ , ವಿಜ್ಞಾನ , ಮಹತ್ , ಅವ್ಯಕ್ತ , ಜೀವ ಗಳೆಂಬ ಮಾನವಾದಿ ದೇಹಗತ ತತ್ತ್ವಗಳು ) ; ಲೋಕಪಾಲಕರಾಳ್ದ = ಅಷ್ಟದಿಕ್ಪಾಲಕರನ್ನಾಳುವ ; (ಇಂದ್ರ , ಅಗ್ನಿ ಮೊದಲಾದ ದೇವತೆಗಳು) ; ಮಹೋಜ = ಮಹಾಶಕ್ತಿವಂತ ; ಕಾಳೀರಮಣ = ( ಕಾಳೀ - ಕಾಶಿರಾಜನ ಪುತ್ರಿಯಾದ ಭಾರತೀ ಅವತಾರಳು ) ಭಾರತೀಪತಿಯ ಅವತಾರನಾದ ಭೀಮಸೇನನು ; ಭಕ್ತಿಜ್ಞಾನವಾಲಯ = ಭಕ್ತಿಜ್ಞಾನಗಳನ್ನು ಆಲಯ - ಮಹಾಪ್ರಲಯಪರ್ಯಂತರ - ಸಂಸಾರಾವಸ್ಥೆಯಲ್ಲಿಯೂ ;

 ಶ್ರೀವಲ್ಲಭಗೆ ಪ್ರತಿಬಿಂಬ । ನಾಗಿ 
 ಜೀವವೇದ ಕಾಲಸ್ತಂಬ । ಗತ 
 ಆವಾಗ ಹರಿರೂಪ ಕಾಂಬ । ಶಕ್ತ 
 ನೀನೊಬ್ಬನಹುದೊ ನಾನೆಂಬ ॥ ಆಹಾ ॥ 
 ದೇವತೆಗಳಿಗುಂಟೆ ಈ ವಿಭವ ಜಗ - 
 ಜ್ಜೀವ ದಯಾಶೀಲ ನಾ ವಂದಿಪೆ ನಿತ್ಯ  ॥ 5 ॥ 

 ವಿವರಣೆ : ಶ್ರೀವಲ್ಲಭಗೆ = ಲಕ್ಷ್ಮೀಪತಿ ಶ್ರೀನಾರಾಯಣನ ; ಪ್ರತಿಬಿಂಬನಾಗಿ = ಮುಖ್ಯಪ್ರತಿಬಿಂಬನಾಗಿ ( ಶ್ರೀಹರಿಯೊಬ್ಬನಿಗೆ ಮಾತ್ರ ಅಧೀನನಾಗಿ , ಸರ್ವಜೀವರಕಿಂತ ಅಧಿಕವಾದ ಸಾದೃಶವುಳ್ಳವನಾದ ಶ್ರೀವಾಯುದೇವ ) ; ಜೀವವೇದ ಕಾಲಸ್ತಂಬಗತ ಆವಾಗ ಹರಿರೂಪ ಕಾಂಬ = ಜೀವ , ವೇದ , ಕಾಲ , ತೃಣಗಳಲ್ಲಿ ಸಹ ಸ್ಥಿತನಾಗಿ , ಅಲ್ಲಲ್ಲಿರುವ ಶ್ರೀಹರಿರೂಪಗಳನ್ನು ಸದಾ ಪ್ರತ್ಯಕ್ಷನಾಗಿ ಕಾಣುತ್ತಲಿರುವ (ಶ್ರೀವಾಯುದೇವನೂ ಆಬ್ರಹ್ಮಸ್ತಂಬ ಪರ್ಯಂತ ಜಗತ್ತಿನಲ್ಲಿ ವ್ಯಾಪ್ತನಾಗಿರುವನು ); ನಾನೆಂಬ ದೇವತೆಗಳಿಗುಂಟೆ = ಕರ್ತೃತ್ವಾಭಿಮಾನವುಳ್ಳ ರುದ್ರಾದಿದೇವತೆಗಳಿಗೆ ಇರುವುದೇ , ಈ ವಿಭವ = ಈ ವೈಭವ ; ಜಗಜ್ಜೀವ = ಸರ್ವಜಗಚ್ಚೇಷ್ಟಕ ;

 ಆಖಣಾಶ್ಮ ಸಮಚರಣ । ಪದ್ಮ 
 ಲೇಖರ ಮಸ್ತಕಾಭರಣ । ಕಲ್ಪ 
 ಶಾಖೆಯಂತೆ ಅತಿಕರುಣಾ । ದಿಂದ 
 ಈ ಖಂಡದೊಳು ಮಿಥ್ಯಾವರಣ ॥ ಆಹಾ ॥ 
 ನೀ ಖಂಡಿಸಿದೆ ದಂಡಮೇಖಲಭೂಷಣ 
 ಆಖುವಾಹನಪಿತ ಆಖಂಡಲಾರ್ಚಿತ ॥ 6 ॥ 

 ವಿವರಣೆ : ಆಖಣಾಶ್ಮ ಸಮಚರಣಪದ್ಮ = ವಾಯುದೇವನ (ವಜ್ರದೇಹಿ) ಪಾದಪದ್ಮವು ; ಲೇಖರ = ದೇವತೆಗಳ ; ಮಸ್ತಕಾಭರಣ = ಶಿರೋಭರಣ (ತಲೆಯಲ್ಲಿ ದೇವತೆಗಳು ಹೊತ್ತು ತಿರುಗುವ ಪಾದ ); ಕಲ್ಪಶಾಖೆಯಂತೆ = ಕಲ್ಪವೃಕ್ಷದಂತೆ ; ಅತಿಕರುಣದಿಂದ = ಅತಿಶಯ ದಯೆಯಿಂದ ; ಈ ಖಂಡದೊಳು = ಈ ಭರತಖಂಡದಲ್ಲಿ ; ಮಿಥ್ಯಾವರಣ ನೀ ಖಂಡಿಸಿದೆ = ಜಗತ್ತಿನ ಮಿಥ್ಯತ್ವವನ್ನು ಬೋಧಿಸುವ ಅಜ್ಞಾನವನ್ನು ನಿರಾಕರಿಸಿದೆ ; ದಂಡಮೇಖಲಭೂಷಣ = ದಂಡ ಉಡಿದಾರಗಳೇ ಅಲಂಕಾರವಾಗಿರುವ ಯತಿರೂಪನಾದ ಶ್ರೀಮಧ್ವಾಚಾರ್ಯ ; ಆಖುವಾಹನಪಿತ = ಮೂಷಕವಾಹನನ ( ಗಣಪತಿಯ ) ತಂದೆ ಮತ್ತು ; ಆಖಂಡಲಾರ್ಚಿತ = ಇಂದ್ರನಿಂದಲೂ ಪೂಜಿತನಾದ (ರುದ್ರೇಂದ್ರಾದಿಪೂಜಿತ ಶ್ರೀವಾಯುದೇವ) ;

 ದಕ್ಷಿಣಾಕ್ಷಿಗತವತ್ಸ । ರೂಪ 
 ದಕ್ಷನಹುದೊ ಪರಮೋತ್ಸ । ಚಾರು 
 ತ್ರ್ಯಕ್ಷಾದಿ ಸುರರೊಳಧ್ಯಕ್ಷ । ಸರ್ವಾ 
 ಪೇಕ್ಷಾವರ್ಜಿತನೇ ಸ್ವೇಚ್ಛ ॥ ಆಹಾ ॥ 
 ಮೋಕ್ಷದಿ ದ್ವಾತ್ರಿಂಶಲ್ಲಕ್ಷಣಪುರುಷ ನಿ - 
 ರೀಕ್ಷಿಸಿ ಕರುಣದಿ ರಕ್ಷಿಸು ಎನ್ನನು ॥ 7 ॥ 

 ವಿವರಣೆ : ದಕ್ಷಿಣಾಕ್ಷಿಗತವತ್ಸರೂಪ = ಬಲಗಣ್ಣಿನಲ್ಲಿರುವ ( ಜಾಗ್ರದವಸ್ಥಾಪ್ರೇರಕ ವಿಶ್ವನಾಮಕ ) ಶ್ರೀಹರಿಯೊಂದಿಗೆ ಗೋವತ್ಸರೂಪದಿಂದಿರುವ , ( ಜಾಗ್ರದವಸ್ಥಾ ಮತ್ತು ಉಪಲಕ್ಷಣದಿಂದ ಜೀವರ ಸರ್ವಾವಸ್ಥಾಪ್ರೇರಕನಾದ ಶ್ರೀವಾಯುದೇವನ ಗೋವತ್ಸರೂಪದ ನಿರೂಪಣೆಯನ್ನು ಬೃಹದಾರಣ್ಯ ಉಪನಿಷತ್ತಿನಲ್ಲಿ ಕಾಣಬಹುದು) ; ದಕ್ಷನಹುದೊ = ಹೇ ವಾಯುದೇವ ! ಶ್ರೀಹರಿಯೊಂದಿಗೆ ಸರ್ವಚೇಷ್ಟಾಪ್ರವರ್ತಕನಾಗಿರಲು ಸಮರ್ಥನಾಗಿರುವಿ (ಸ್ವರೂಪದಿಂದ ಶಕ್ತನಾಗಿರುವಿ) ; ಪರಮೋತ್ಸಾಹ = ನಿತ್ಯ ಉತ್ಸಾಹಶಾಲಿಯು ; (ಆಲಸ್ಯಾದಿ ರಹಿತನು) ; ಚಾರು = ಸುಂದರ ! ತ್ರ್ಯಕ್ಷಾದಿ ಸುರರೊಳು = ರುದ್ರಾದಿ ದೇವತೆಗಳ ಮಧ್ಯದಲ್ಲಿ ; ಅಧ್ಯಕ್ಷ = ಪ್ರಧಾನನಾದ ; ಸರ್ವಾಪೇಕ್ಷಾವರ್ಜಿತನೇ = ಯಾವ ಫಲವನ್ನೂ ( ಮೋಕ್ಷವನ್ನೂ ತನ್ನ ಸೇವಾಫಲ ರೂಪವಾಗಿ ) ಶ್ರೀಹರಿಯಿಂದ ಅಪೇಕ್ಷಿಸದವನು ; ಸ್ವೇಚ್ಛಾ = ಸ್ವತಂತ್ರನಾದ ( ಸ್ವತಂತ್ರತ್ವಾತ್ ಸ್ವಃ - ಶ್ರೀಹರಿ ) ಶ್ರೀಹರಿಯ ಆಜ್ಞೆಯಂತೆ ವರ್ತಿಸುವವ ; ದ್ವಾತ್ರಿಂಶಲ್ಲಕ್ಷಣಪುರುಷ = ಲಕ್ಷಣ ಶಾಸ್ತ್ರೋಕ್ತ 32 ಸಲ್ಲಕ್ಷಣಗಳಿಂದಶೋಭಿಸುವ ದೇಹವುಳ್ಳ ಶ್ರೀವಾಯುದೇವ ! ಮೋಕ್ಷದಿ = ಮೋಕ್ಷ ವಿಷಯದಲ್ಲಿ ; ಎನ್ನನು = ನನ್ನನ್ನು ; ನಿರೀಕ್ಷಿಸಿ = ಸಂಪೂರ್ಣ ಲಕ್ಷಿಸಿ ; ಕರುಣಿಸು = ಕಾಪಾಡು ;

 ಅಧಿಭೂತ ಅಧ್ಯಾತ್ಮಗತನೆ । ವಿಮಲ 
 ಅಧಿದೈವರೊಳು ಪ್ರವಿತತನೆ । ಕಲಿ 
 ಹೃದಯ ವಿಭೇದನರತನೆ । ಎನ್ನ 
 ವದನದಿ ನೆಲೆಸೊ ಮಾರುತನೆ ॥ ಆಹಾ ॥ 
 ಬದರಿಕಾಶ್ರಮದೊಳು ಹದಿನಾರು ಸಾವಿರ 
 ಸುದತೇರ ಕಾಯ್ದ ನಾರದಮುನಿಸನ್ನುತ ॥ 8 ॥ 

 ವಿವರಣೆ : ಅಧಿಭೂತ = ಪಂಚಭೂತಗಳು ; ಅಧ್ಯಾತ್ಮ = ಇಂದ್ರಿಯಗಳು ಮತ್ತು ಮನಸ್ಸು ; ವಿಮಲ = ಶುದ್ಧನಾದವ ; ಅಧಿದೈವರೊಳು = ತತ್ತ್ವಾಭಿಮಾನಿದೇವತೆಗಳಲ್ಲಿ ಸಹ ; ಪ್ರವಿತತನೆ = ವ್ಯಾಪಿಸಿ (ಅಂತರ್ಯಾಮಿರೂಪಗಳಿಂದ ) ಸ್ಥಿತನಾದ ; ಕಲಿಹೃದಯ ವಿಭೇದನರತನೆ = ಕಲಿಯ ಎದೆಯನ್ನು (ಧೈರ್ಯವನ್ನು) ಮುರಿದುಹಾಕುವುದರಲ್ಲಿ ನಿರತನಾದ (ಅಥವಾ ಕಲಿಕಲ್ಮಷದಿಂದ ಯುಕ್ತವಾದ ಭಕ್ತರ ಮನಸ್ಸನ್ನು ತೊಳೆದು ಶುದ್ಧಗೊಳಿಸುವುದರಲ್ಲಿ ನಿರತ ); ಸುದತೇರ = ಸುದತಿಯರ (ಸ್ತ್ರೀಯರನ್ನು) ; ಕಾಯ್ದ = ರಕ್ಷಿಸಿದ ; 

 ಮಾತರಿಶ್ವ ಮಹಾಮಹಿಮ । ಸರ್ವ 
 ಚೇತನ ಹೃದ್ಗತ ಹನುಮ । ಭೀಮ 
 ಭೂತಳದೊಳು ಮಧ್ವನಾಮ । ದಿಂದ 
 ಜಾತನಾಗಿ ಜಿತಕಾಮ ॥ ಆಹಾ ॥ 
 ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ 
 ಸೀತಾರಮಣ ಜಗನ್ನಾಥವಿಠ್ಠಲದೂತ ॥ 9 ॥ 

 ವಿವರಣೆ : ಮಾತರಿಶ್ವ = ವಾಯುದೇವ ; ಸರ್ವಚೇತನ ಹೃದ್ಗತ = ಸಕಲ ಜೀವರ ಹೃದಯದಲ್ಲಿರುವ ; ಹನುಮ , ಭೀಮ , ಮಧ್ವ ನಾಮದಿಂದ ; ಭೂತಳದೊಳು = ಭೂಮಿಯಲ್ಲಿ ; ಜಾತನಾಗಿ = ಅವತರಿಸಿ ; ಜಿತಕಾಮ = ಅನಪೇಕ್ಷ (ಫಲಾಪೇಕ್ಷರಹಿತ) ; ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ = ತಿಪ್ಪಣ್ಣ ಮೊದಲಾದ ಪ್ರಸಿದ್ಧ ಮಾಯಾವಾದಿಗಳನ್ನು ಜಯಿಸಿದ ; ಜಗನ್ನಾಥವಿಟ್ಠಲದೂತ = ಶ್ರೀಹರಿಯ ಪ್ರಧಾನ ಭೃತ್ಯ .

 ವಿವರಣೆಕಾರರು : 
 ಹರಿದಾಸರತ್ನಂ ಶ್ರೀಗೋಪಾಲದಾಸರು
***********